ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನನ್ನ ಆಡಳಿತ ಅವಧಿಯಲ್ಲಿ ಶಂಕು ಸ್ಥಾಪನೆಗೊಂಡಿರುವ ಶಿಕ್ಷಕರ ಭವನಕ್ಕೆ ಹಾಲಿ ಶಾಸಕರು ಮತ್ತೊಮ್ಮೆ ಭೂಮಿ ಪೂಜೆ ಮಾಡುವ ಮೂಲಕ ವಿಡಂಬನೆಯ ಸುಳ್ಳು ಪ್ರಚಾರ ಪಡೆಯಲು ಸಿದ್ದರಾಗಿದ್ದಾರೆ ಎಂದು ಮಾಜಿ ಶಾಸಕ ರಮೇಶ ಭೂಸನೂರ ಆರೋಪಿಸಿದರು.
ಜ.೦೭ರಂದು ನಡೆಯಲಿರುವ ಶಿಕ್ಷಕರ ಭವನದ ಕಾಮಗಾರಿ ಭೂಮಿ ಪೂಜೆಯ ಕುರಿತು ಮಂಗಳವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು ಹಂದಿಗನೂರ ಸಿದ್ರಾಮಪ್ಪ ಭವನ ಹಾಗೂ ಶಿಕ್ಷಕರಿಗಾಗಿ ಗುರು ಭವನದ ಕಾಮಗಾರಿಗೆ ನನ್ನ ಅಧಿಕಾರವಧಿಯಲ್ಲಿ ಅನುದಾನ ತಂದು ಭೂಮಿ ಪೂಜೆ ಮಾಡಿರುವೆ. ಈ ಕೆಲಸವನ್ನು ಗುತ್ತಿಗೆದಾರ ತೆಗ್ಗೆಳ್ಳಿ ಬಸವರಾಜ ಅವರಿಗೆ ಟೆಂಡರ್ ಮಾಡಲಾಗಿತ್ತು. ಸೇಡಿನ ಮನೋಭಾವನೆ ಇರುವ ಶಾಸಕರು ಈ ಟೆಂಡರ್ನ್ನು ರದ್ದುಗೊಳಿಸಿ ಮರು ಟೆಂಡರ್ ಮಾಡಿ ಸುಳ್ಳು ಪ್ರಚಾರ ಪಡೆಯುತ್ತಿದ್ದಾರೆ. ಮತಕ್ಷೇತ್ರದ ಜನರ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಹಾಲಿ ಶಾಸಕ ಅವಧಿಯಲ್ಲಿ ಯಾವುದೇ ಹೊಸ ಕಾಮಗಾರಿಗಳಾಗಿಲ್ಲ ಎಂದು ಕಿಡಿಕಾರಿದರು.

