ರೈತರಿಗೆ ಸೌಜನ್ಯಕ್ಕೂ ಭೇಟಿ ಮಾಡದ ಸಿಎಂ | ರೈತರಿಗೆ ನೀಡುವ ಅನುದಾನಕ್ಕೆ ಕತ್ತರಿ | ೧೦ ವಾರದಲ್ಲಿ ಸರ್ಕಾರ ಪತನ!
ಜೆಡಿಎಸ್ ಕೋರ್ ಕಮೀಟಿ ಸಭೆಯಲ್ಲಿ ನಾಯಕರ ಅಭಿಮತ
ವಿಜಯಪುರ: ಮುಖ್ಯಮಂತ್ರಿ ಸಿದ್ಧರಾಮಯ್ಯ ರೈತರಿಗಾಗಿ ಏನೂ ಮಾಡಿಲ್ಲ, ಬರಗಾಲ ಪರಿಸ್ಥಿತಿಯ ನೋವು ಎದುರಿಸುತ್ತಿರುವ ರೈತರಿಗೆ ಸೌಜನ್ಯಕ್ಕೂ ಭೇಟಿ ಮಾಡಿಲ್ಲ, ಅವರ ಜಮೀನುಗಳಿಗೆ ಹೋಗಿ ಪರಿಸ್ಥಿತಿಯನ್ನು ಅವಲೋಕಿಸಿಲ್ಲ ಎಂದು ಮಾಜಿ ಸಚಿವ ಜಿ.ಟಿ. ದೇವೆಗೌಡ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದರು.
ವಿಜಯಪುರದ ಕಿತ್ತೂರ ರಾಣಿ ಚೆನ್ನಮ್ಮ ಮಂಗಲ ಕಾರ್ಯಾಲಯದಲ್ಲಿ ಬುಧವಾರ ನಡೆದ ಜೆಡಿಎಸ್ ಕೋರ್ ಕಮೀಟಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೈತಪರ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರೈತರಿಗಾಗಿ ಏನೂ ಮಾಡಿಲ್ಲ, ಒಂದೇ ಒಂದು ಗ್ಯಾರಂಟಿ ರೈತರಿಗಾಗಿ ಮೀಸಲಾಗಿ ಇದೆಯೇ? ಇನ್ನು ರೈತರಿಗೆ ನೀಡುವ ಅನುದಾನವನ್ನೇ ಕತ್ತರಿಸಿದ್ದಾರೆ. ರೈತಪರ ಎಂದು ಹೇಳುವುದು ಕೇವಲ ಅವರ ಮಾತಿಗೆ ಸೀಮಿತವಾಗಿದೆ ಹೊರತು ಕೃತಿಯಲ್ಲಿ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಯನ್ನು ಶೇ.೪೦ ಕಮೀಷನ್ ಎಂದು ಜರಿದ ಕಾಂಗ್ರೆಸ್ ಈಗ ಅಧಿಕಾರಕ್ಕೆ ಬಂದಿದೆ, ಆದರೆ ಬಿಜೆಪಿ ಅವಧಿಯಲ್ಲಿನ ಎಲ್ಲ ಕಾಮಗಾರಿಗಳನ್ನು ನಿಲ್ಲಿಸಿದೆ, ಅನುದಾನ ಸ್ಥಗಿತಗೊಳಿಸಿದೆ, ಇದು ಅಭಿವೃದ್ಧಿ ವಿರೋಧಿಯಲ್ಲವೇ? ಎಂದು ಪ್ರಶ್ನಿಸಿದ ಜಿಟಿಡಿ,
ನಮ್ಮ ಸಿದ್ಧಾಂತವನ್ನು ಉಳಿಸಿಕೊಂಡು ನಮ್ಮ ರಾಜ್ಯ ಹಾಗೂ ದೇಶವನ್ನು ಉಳಿಸಬೇಕಾದ ಅನಿವಾರ್ಯತೆ ಸೃಜಿಸಿದೆ. ಈ ಕಾರಣಕ್ಕಾಗಿಯೇ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲಾಗಿದೆ ಎಂದರು.
ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಆವರಿಸಿದೆ, ೪೦ ಲಕ್ಷ ಹೆಕ್ಟೇರ್ಗೂ ಅಧಿಕ ಪ್ರದೇಶದಲ್ಲಿ ಬೆಳೆದ ಬೆಳೆ ನಾಶವಾಗಿದೆ, ರೈತ ವಲಯದಲ್ಲಿ ೪೮೦೦ ಕೋಟಿ ರೂ.ಗೂ ಅಧಿಕ ನಷ್ಟವಾಗಿದೆ, ಗ್ಯಾರಂಟಿ ಗ್ಯಾರಂಟಿ ಎಂದು ಬೀಗುವ ಕಾಂಗ್ರೆಸ್ ನಾಯಕರು ಈ ಗ್ಯಾರಂಟಿಗೆ ವಿಧಿಸಿದ ನಿಬಂಧನೆಗಳು ಎಷ್ಟು ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕಿದೆ ಎಂದರು.
ಮಾಜಿ ಸಚಿವ ಬಂಡೆಪ್ಪ ಕಾಶಂಪೂರ ಮಾತನಾಡಿ, ಇನ್ನೂ ೧೦ ವಾರದಲ್ಲಿಯೇ ಈ ರಾಜ್ಯ ಸರ್ಕಾರ ಪತನವಾಗಲಿದೆ ಎಂಬ ಬಾಂಬ್ ಸಿಡಿಸಿದ ಅವರು, ಬಿಜೆಪಿ-ಜೆಡಿಎಸ್ ಮೈತ್ರಿಗೆ ಜೆಡಿಎಸ್ ಅಲ್ಪಸಂಖ್ಯಾತ ವಲಯ ಸಹ ಬೆಂಬಲ ಸೂಚಿಸಿದೆ ಎಂದರು. ರಾಜ್ಯದಲ್ಲಿ ಜೆಡಿಎಸ್ ಆಡಳಿತದ ಕಾಲಘಟ್ಟದಲ್ಲಿ ರೈತರ ಬದುಕು ಸಮೃದ್ಧವಾಗಿದೆ, ಜೆಡಿಎಸ್ ಸದಾ ರೈತ, ದುಡಿಯುವ ವರ್ಗದ ಪರವಾದ ಪಕ್ಷ, ಕಾರ್ಯಕರ್ತರ ಹುಮ್ಮಸ್ಸು ನೋಡಿದರೆ ವಿಜಯಪುರ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಸ್ಪರ್ಧೆ ಹಾಗೂ ಗೆಲುವಿಗೆ ಪೂರಕ ವಾತಾವರಣವಿದೆ, ಹೀಗಾಗಿ ವಿಜಯಪುರದಿಂದ ಜೆಡಿಎಸ್ ಟಿಕೇಟ್ ಕೇಳುತ್ತೇವೆ. ಆದರೆ ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡರ ಹಾಗೂ ಪ್ರಧಾನಿ ಮೋದಿಜಿ ಅವರ ನಿರ್ಣಯಕ್ಕೆ ನಾನು ಬದ್ಧ. ಬಿಜೆಪಿ-ಜೆಡಿಎಸ್ ಮೈತ್ರಿ ರಾಜ್ಯ ರಾಜಕಾರಣದಲ್ಲಿ ಹೊಸ ಭಾಷ್ಯ ಬರೆಯಲಿದೆ ಎಂದು ಭವಿಷ್ಯ ನುಡಿದರು.
ಮಾಜಿ ಶಾಸಕ ವೈಎಸ್ವಿ ದತ್ತಾ ಮಾತನಾಡಿ, ಜೆಡಿಎಸ್ ಪಕ್ಷದಲ್ಲಿ ಹೈಕಮಾಂಡ್ ಸಂಸ್ಕೃತಿ ಇಲ್ಲ, ಜನರೇ ಈ ಪಕ್ಷದ ಹೈಕಮಾಂಡ್, ಈ ಪಕ್ಷದ ಅಸ್ಮಿತೆ ಉಳಿಸಿಕೊಳ್ಳಬೇಕು. ಕರ್ನಾಟಕ ಜನರ ಪರವಾಗಿರುವ ಒಂದೆ ಪಕ್ಷ ಜೆ.ಡಿ.ಎಸ್. ಉಳಿದ ಎಲ್ಲ ಪಕ್ಷಕ್ಕೆ ಹೈಕಮಾಂಡ್ ಇದೆ. ನಮಗೆ ಜನರೇ ನೇರವಾಗಿ ಹೈಕಮಾಂಡ್ ಎಂದರು.
ಪಕ್ಷದ ಕಾರ್ಯಕರ್ತರು ಹೊಸ ಹುಮ್ಮಸ್ಸಿನೊಂದಿಗೆ ಪಕ್ಷ ಚಟುವಟಿಕೆಗಳಲ್ಲಿ ಸಕ್ರೀಯವಾಗಬೇಕು. ವಿಜಯಪುರ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಖಾತೆ ತೆರೆಯುವ ನಿಟ್ಟಿನಲ್ಲಿ ಸಂಕಲ್ಪ ಮಾಡಬೇಕು ಎಂದರು.
ನಾಗಠಾಣ ಮಾಜಿ ಶಾಸಕ ಡಾ.ದೇವಾನಂದ ಚವ್ಹಾಣ, ಜೆಡಿಎಸ್ ಧುರಿಣೆ ಡಾ.ಸುನೀತಾ ಚವ್ಹಾಣ, ಮುಖಂಡರಾದ ಅಪ್ಪುಗೌಡ ಪಾಟೀಲ ಮನಗೂಳಿ, ಬಿ.ಡಿ. ಪಾಟೀಲ, ಬಸವರಾಜ ಹೊನವಾಡ, ಜೆಡಿಎಸ್ ಜಿಲ್ಲಾಧ್ಯಕ್ಷ ಬಸವರಾಜ ಮಾಡಗಿ, ಪೀರಪಾಷಾ ಗಚ್ಚಿನಮಹಲ್ ಮೊದಲಾದವರು ಪಾಲ್ಗೊಂಡಿದ್ದರು
*ಜೆಡಿಎಸ್ ಅಲ್ಪಸಂಖ್ಯಾತರ ಹಿತ ಬಯಸುವ ಪಕ್ಷ*
ಜೆಡಿಎಸ್ ಅಲ್ಪಸಂಖ್ಯಾತರ ಹಿತ ಬಯಸುವ ಪಕ್ಷವಾಗಿದೆ, ಅಲ್ಪಸಂಖ್ಯಾತರಿಗೆ ಮೀಸಲಾತಿ ಕಲಿಸಿದ್ದು ಜೆಡಿಎಸ್, ತತ್ವ-ಸಿದ್ಧಾಂತ ಉಳಿಸಿಕೊಂಡು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲಾಗಿದೆ, ನಮ್ಮ ಪಕ್ಷದಿಂದ ಅಲ್ಪಸಂಖ್ಯಾತರಿಗೆ ಯಾವುದೇ ತೊಂದರೆಯಾಗಿಲ್ಲ. ಮುಂದೆ ಆಗುವುದು ಇಲ್ಲ ಎಂದು ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ, ಕುದರಿಸಾಲೋಡಗಿ ಹೇಳಿದರು.
ವಿಜಯಪುರದಲ್ಲಿ ನಡೆದ ಜೆಡಿಎಸ್ ಕೋರ್ ಕಮೀಟಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯಕ್ಕೆ ನ್ಯಾಯ ದೊರಕಿಸಲು ಪದವಿ ಬಿಡುತ್ತೆನೆ ಎಂದು ರೈತರ ಪರ ನಿಂತವರು ದೇವೆಗೌಡರು. ಜೆಡಿಎಸ್ ಪಕ್ಷಕ್ಕೆ ಈ ರೀತಿಯ ಶ್ರೇಷ್ಠ ನಾಯಕನ ನಾಯಕತ್ವವಿದೆ, ರಾಜ್ಯದಲ್ಲಿರುವ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಕೇವಲ ಗ್ಯಾರಂಟಿ ಮೂಲಕ ಕಣ್ಣೋರೆಸುವ ತಂತ್ರ ಮಾಡುತ್ತಿದೆ, ರೈತರಿಗೆ ನಿತ್ಯ ಅನ್ಯಾಯವಾಗುತ್ತಿದ್ದು, ರೈತರು ಹಿಡಿಶಾಪ ಹಾಕುತ್ತಿದ್ದಾರೆ, ಕಾಂಗ್ರೆಸ್ ಬಂದಾಗ ಬರಗಾಲ ಬರುತ್ತದೆ. ಜೆಡಿಎಸ್ ಬಂದಾಗ ಸಮೃದ್ಧಿ ಇರುತ್ತದೆ ಎಂದು ಜನತೆ ಮಾತನಾಡಿಕೊಳ್ಳುತ್ತಿದ್ದಾರೆ ಎಂದರು.