ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದಲ್ಲಿ ಬಸವನಬಾಗೇವಾಡಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ಮಸಬಿನಾಳ ವಿರಕ್ತಮಠದ ಸಿದ್ದರಾಮ ಸ್ವಾಮೀಜಿ, ಯಲ್ಲಾಲಿಂಗಮಠದ ಬಸವರಾಜ ಮಹಾರಾಜರ ನೇತೃತ್ವದಲ್ಲಿ ವಿವಿಧ ಬಸವ ಪರ ಸಂಘಟನೆಗಳಿಂದ ಗುರುವಾರ ಬಸವೇಶ್ವರ ವೃತ್ತದಲ್ಲಿ ಬಸವ ಸಂಸ್ಕೃತಿ ಅಭಿಯಾನ, ಲಿಂಗಾಯತ ಮಠಾಧೀಶರ ಒಕ್ಕೂಟದ ವಿರುದ್ಧ ಕನ್ಹೇರಿಯ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಹೇಳನಕಾರಿಯಾಗಿ ಮಾತನಾಡಿರುವ ಹಿನ್ನೆಲೆ ಕನ್ಹೇರಿ ಸ್ವಾಮೀಜಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಸಿಎಂ ಅವರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ ಮೂಲಕ ಸಲ್ಲಿಸಲಾಯಿತು.
ಪಟ್ಟಣದ ವಿರಕ್ತಮಠದ ಕನ್ಹೇರಿಯ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ಮೆರವಣಿಗೆ ಮೂಲಕ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ನಂತರ ಕೆಲ ಹೊತ್ತು ಪ್ರತಿಭಟನೆ ನಡೆಸಿ ತಹಸೀಲ್ದಾರ ಅವರಿಗೆ ಮನವಿ ಸಲ್ಲಿಸಿದ ನಂತರ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರ ಭಾವಚಿತ್ರಕ್ಕೆ ಚಪ್ಪಲಿ ಹಾರಹಾಕಿ ಬೆಂಕಿ ಹಚ್ಚಿ ದಹಿಸಿ ಪ್ರತಿಭಟನೆಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಸಬಿನಾಳದ ಸಿದ್ದರಾಮ ಸ್ವಾಮೀಜಿ ಮಾತನಾಡಿ, ವಿಶ್ವಗುರು ಬಸವೇಶ್ವರರು ನುಡಿದರೆ ಮುತ್ತಿನ ಹಾರದಂತಿರಬೇಕು. ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು. ನುಡಿದರೆ ಹೌದು ಹೌದು ಎನ್ನುತ್ತಿರಬೇಕು ಎಂದು ಹೇಳಿದ್ದಾರೆ. ಇದನ್ನು ಅರಿಯದೇ ಸ್ವಾಮೀಜಿಯವರಾದ ಕನ್ಹೇರಿ ಮಠದ ಶ್ರೀಗಳು ಮಾತನಾಡಿದ್ದಾರೆ. ಕನ್ಹೇರಿ ಶ್ರೀಗಳು ಅವಹೇಳನಕಾರಿಯಾಗಿ ಮಾತನಾಡಿದ್ದರಿಂದಲೇ ಬಸವ ಭಕ್ತರು ಬೀದಿಗಿಳಿಯಬೇಕಾಗಿದೆ. ಬಸವ ಸಂಸ್ಕ್ರತಿಯ ಕುರಿತು ಅರಿಯದೇ ಈ ರೀತಿಯಾಗಿ ಮಾತನಾಡುವದು ಸರಿಯಲ್ಲ. ಅವರು ಮಾತನಾಡಿದ ಶಬ್ದಗಳನ್ನು ಕೇಳಿದರೆ ಅವರಿಗೆ ಸಂಸ್ಕಾರ ಇಲ್ಲ ಎಂಬುವದು ಗೊತ್ತಾಗುತ್ತದೆ. ಇವರ ವಿರುದ್ಧ ಉಗ್ರವಾದ ಹೋರಾಟ ನಿರಂತರವಾಗಿ ನಡೆಯುವಂತಾಗಲೆಂದರು.
ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಬಸವಜನ್ಮ ಸ್ಥಳ ಬಸವನಬಾಗೇವಾಡಿಯಿಂದ ಮಠಾಧೀಶರ ಒಕ್ಕೂಟದಿಂದ ಬಸವ ಸಂಸ್ಕ್ರತಿ ಅಭಿಯಾನ ಆರಂಭಗೊಂಡು ರಾಜ್ಯದ ಎಲ್ಲ ಜಿಲ್ಲೆಗಳಿಗೆ ತೆರಳಿ ಜನರಲ್ಲಿ ಬಸವ ಸಂಸ್ಕ್ರತಿಯ ಕುರಿತು ಜಾಗೃತಿ ಮೂಡಿಸಲಾಗಿದೆ. ಈ ಅಭಿಯಾನದ ಯಶಸ್ವಿಗೆ ನಾಡಿನ ತುಮಕೂರು, ಗದಗ, ಬಾಲ್ಕಿ, ಇಲಕಲ್ಲ ಶ್ರೀಗಳು ಸೇರಿದಂತೆ ನಾಡಿನ ನೂರಾರು ಶ್ರೀಗಳು ಹಗಲಿರುಳು ಶ್ರಮಿಸಿದ್ದಾರೆ. ಈ ಅಭಿಯಾನದ ಕುರಿತು ಕನ್ಹೇರಿ ಶ್ರೀಗಳು ಅವಹೇಳನಕಾರಿಯಾಗಿ ಮಾತನಾಡಿರುವುದು ಅವರಿಗೆ ಶೋಭೆ ತರುವಂತದಲ್ಲ. ಅವರು ಹೇಳಿದ ಮಾತುಗಳಿಂದ ಇಡೀ ಬಸವ ಭಕ್ತರಿಗೆ ನೋವಾಗಿದೆ. ಅಭಿಯಾನದಲ್ಲಿ ಯಾವ ವಿಷಯಗಳು ಚರ್ಚೆಯಾಗಿವೆ ಎಂಬುವದನ್ನು ಅವರು ಸರಿಯಾಗಿ ಅರ್ಥೈಸಿಕೊಳ್ಳಬೇಕಿದೆ. ಇದರ ಬಗ್ಗೆ ಅವರಿಗೆ ಏನಾದರೂ ಗೊಂದಲವಿದ್ದರೆ ಬಹಿರಂಗವಾಗಿ ಅವರು ಚರ್ಚೆ ಬಂದು ಅವರ ಗೊಂದಲ ನಿವಾರಿಸಿಕೊಳ್ಳಬಹುದು. ಇದನ್ನು ಅರಿತುಕೊಳ್ಳದೇ ಈ ರೀತಿಯಾಗಿ ಅಭಿಯಾನ, ಮಠಾಧೀಶರ ಒಕ್ಕೂಟದ ಶ್ರೀಗಳ ಕುರಿತು ಮಾತನಾಡಿರುವದು ಅವರ ಸ್ಥಾನಕ್ಕೆ ಗೌರವ ತರುವ ಸಂಗತಿಯಲ್ಲ. ಇವರು ಬಸವನಬಾಗೇವಾಡಿಯಲ್ಲಿ ಒಂದು ಮಠವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅವರು ಬಸವ ಸಂಸ್ಕ್ರತಿಯನ್ನನು ಅಳವಡಿಸಿಕೊಳ್ಳುವಂತಾಗಬೇಕು. ಅವರ ಮಾತನಾಡುವದು ಅವರ ಸಂಸ್ಕ್ರತಿ, ಸಂಸ್ಕಾರ ತೋರಿಸುತ್ತದೆ. ಅವರ ಬಸವ ಭಕ್ತರ ಕ್ಷಮೆ ಕೋರಬೇಕೆಂದರು.
ಪ್ರತಿಭಟನೆ ಉದ್ದೇಶಿಸಿ ಪಿಕೆಪಿಎಸ್ ಬ್ಯಾಂಕಿನ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ, ಸಾಹಿತಿ ಲ.ರು.ಗೊಳಸಂಗಿ, ರಾಷ್ಟ್ರೀಯ ಬಸವಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ, ಹಾಲುಮತ ಸಮಾಜದ ಮುಖಂಡ ಸಂಗಮೇಶ ಓಲೇಕಾರ,ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಣ್ಣ ಮರ್ತುರ ಮಾತನಾಡಿ, ಶ್ರೀಗಳು ರಾಜ್ಯದ ಬಸವ ಭಕ್ತರ ಕ್ಷಮೆ ಕೋರಬೇಕು. ಸಿಎಂ ಸಿದ್ದರಾಮಯ್ಯನವರು ಶ್ರೀಗಳ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ ಅವರು, ಅವರಿಗೆ ಕ್ರಮ ತೆಗೆದುಕೊಳ್ಳುವವರೆಗೂ ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತದೆ ಎಂದರು.
ಮನವಿ ಪತ್ರವನ್ನು ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ ಓದಿ ತಹಸೀಲ್ದಾರ ಕಚೇರಿಯ ಸಿಬ್ಬಂದಿಗೆ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕಾಧ್ಯಕ್ಷ ಎಫ್.ಡಿ.ಮೇಟಿ, ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಣ್ಣ ಮರ್ತುರ, ಮುಖಂಡರಾದ ಎಂ.ಜಿ.ಆದಿಗೊಂಡ, ಎಸ್.ಎಸ್.ಝಳಕಿ, ಆರ್.ಜಿ.ಅಳ್ಳಗಿ, ಸಿ.ಎಲ್.ಮುರಾಳ, ಎಸ್.ಎ.ದೇಗಿನಾಳ, ಮಹಾಂತೇಶ ಮಡಿಕೇಶ್ವರ, ಎಚ್.ಎಸ್.ಬಿರಾದಾರ, ಬಸವರಾಜ ಹಾರಿವಾಳ, ಶ್ರೀಕಾಂತ ಕೊಟ್ರಶೆಟ್ಟಿ, ಪ್ರವೀಮ ಪೂಜಾರಿ, ಮಲ್ಲಿಕಾರ್ಜುನ ಹಡಪದ, ಬಸವರಾಜ ಏವೂರ, ಶೇಖರಗೌಡ ಪಾಟೀಲ, ಶೇಖರ ಗೊಳಸಂಗಿ, ಎಸ್.ಜಿ.ಮೊಕಾಶಿ, ಮುರುಗೆಪ್ಪ ಚಿಂಚೋಳಿ, ರುದ್ರಗೌಡ ಬಿರಾದಾರ, ಮಹಾಂತೇಶ ಹಂಜಗಿ, ಹಣಮಂತ್ರಾಯ ಬಿರಾದಾರ, ಪ್ರಭಾಕರ ಖೇಡದ, ಶಿವಯೋಗಿ ಒಣರೊಟ್ಟಿ, ಸಂಗಪ್ಪ ಬಶೆಟ್ಟಿ, ಸಂಕನಗೌಡ ಪಾಟೀಲ, ಸುರೇಶಗೌಡ ಪಾಟೀಲ, ಡಾ.ಮಲ್ಲಿಕಾರ್ಜುನ ಹಳ್ಳಿ, ಪ್ರಭಾವತಿ ಹಳ್ಳಿ, ಎಚ್.ಎಸ್.ಹತ್ತಿ, ಕಸ್ತೂರಿ ಬಿರಾದಾರ, ಎಸ್.ಕೆ.ಸೋಮನಕಟ್ಟಿ, ಎಂ.ಎಸ್.ತಳವಾರ, ಸಿದ್ದಲಿಂಗಪ್ಪ ಪಾಟೀಲ, ಬಸಮ್ಮ ಪಡಶೆಟ್ಟಿ, ಕಸ್ತೂರಿ ಅಪ್ಪಣ್ಣನವರ, ಶೋಭಾ ರೇವಡಕರ, ಸಾವಿತ್ರಿ ಅರಸನಾಳ, ಕಮಲಾ ಸಜ್ಜನ, ಶಾಂತಾ ಬಸರಕೋಡ, ಯಮನಕ್ಕ ಅಂಬಳೂರ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.