ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹಿರಿಯ ಸಿವ್ಹಿಲ್ ನ್ಯಾಯಾಧೀಶ ಅರವಿಂದ ಹಾಗರಗಿ ಸಲಹೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಾನಸಿಕ ಆರೋಗ್ಯದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದ ಅತ್ಯವಶ್ಯಕವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹಿರಿಯ ಸಿವ್ಹಿಲ್ ನ್ಯಾಯಾಧೀಶ ಅರವಿಂದ ಹಾಗರಗಿ ಅವರು ಹೇಳಿದರು.
ಜಿಲ್ಲಾ ಆಡಳಿತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಘಟಕ ವಿಜಯಪುರ ಹಾಗೂ ವಿವಿದ ನರ್ಸಿಂಗ್ ಕಾಲೇಜು ಹಾಗೂ ಮನೋಜ್ಯೋತಿ ಫೌಂಡೇಶನ್ ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಜನಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಪದ್ಮಶ್ರೀ ಪ್ರಶಸ್ತಿ ವಿಜೇತರರು ಹಾಗೂ ಹಿರಿಯ ಮನೋರೋಗ ತಜ್ಞ ಡಾ|| ಸಿ.ಆರ್. ಚಂದ್ರಶೇಖರ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಸಂಪತ್ತ ಗುಣಾರಿ ಅವರೊಂದಿಗೆ ಜಂಟಿಯಾಗಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾನಸಿಕ ಕಾಯಿಲೆಯು ಪುರಾತನ ಕಾಲದಿಂದ ಮನುಷ್ಯನನ್ನು ಕಾಡುತ್ತಾ ಬಂದಿದೆ ಇದಕ್ಕೆ ಸರಳವಾದ ಚಿಕಿತ್ಸೆ ಇರಲಿಲ್ಲ ಈಗ ಆ ಕಾಲ ಬದಲಾಗಿದೆ. ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮ ಬಂದ ನಂತರ ಸಮುದಾಯಕ್ಕೆ ಆರೋಗ್ಯದ ಅರಿವು ಮತ್ತು ಜ್ಞಾನವನ್ನು ಕೊಡಲಾಗುತ್ತಿದ್ದು, ಅಲ್ಲದೇ ಮಾನಸಿಕ ಖಾಯಿಲೆಗಳಿಗೆ ಉಚಿತ ಚಿಕಿತ್ಸೆ ಹಾಗೂ ಆಪ್ತಸಮಾಲೋಚನೆ ಮೂಲಕ ಮಾನಸಿಕ ಸಮಸ್ಯೆಗಳಿಗೆ ಪರಿಹಾರ ನೀಡಲಾಗುತ್ತಿದೆ. ಸಾರ್ವಜನಿಕರು ಇದರ ಸೌಲಭ್ಯಗಳನ್ನು ಪಡೆದುಕೊಂಡು ತಮ್ಮ ಜೀವನ ಶೈಲಿಯ ಬದಲಾವಣೆಯಿಂದ ಮಾನಸಿಕವಾಗಿ ಆರೋಗ್ಯವಂತರಾಬೇಕು ಎಂದು ಅವರು ಹೇಳಿದರು.
ಡಾ|| ಸಿ.ಆರ್. ಚಂದ್ರಶೇಖರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಹಾಗೂ ಹಿರಿಯ ಮನೋರೋಗ ತಜ್ಞರು ಮಾತನಾಡುತ್ತಾ, ದೈಹಿಕ ರೋಗಗಳನ್ನು ಗುಣಪಡಿಸಲು ಚಿಕಿತ್ಸೆ ನೀಡುವಂತೆ ಮಾನಸಿಕ ರೋಗಗಳನ್ನು ಚಿಕಿತ್ಸೆ ನೀಡಿ ಗುಣಪಡಿಸಬಹುದು ಇದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಕೇಂದ್ರಗಳನ್ನು ಪ್ರಾರಂಭಿಸಿ ಚಿಕಿತ್ಸಾ ಸೌಲಭ್ಯಗಳನ್ನು ನೀಡುತ್ತಿದೆ. ಈ ಸೌಲಭ್ಯದ ಅರಿವು ರೋಗಿಗಳಿಗೆ ಮೂಡಿಸುವುದು ದಿನಾಚರಣೆಯ ಉದ್ದೇಶವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮನೋರೋಗ ತಜ್ಞ ಡಾ|| ಮಂಜುನಾಥ ಮಸಳಿ ಪ್ರಾಸ್ತಾವಿಕವಾಗಿ ಮಾತನಾಡಿ, ತಂಬಾಕು ಹಾಗೂ ದೂಮಪಾನ ಸೇವನೆಯಿಂದ ಮಾನಸಿಕ ಖಿನ್ನತೆಯಿಂದ ಹೆಚ್ಚು ಜನರು ಬಳಲುತ್ತಿದ್ದು. ಅದರಲ್ಲಿ ಮಹಿಳೆಯರು ಶೇ ೩ರಷ್ಟು ಮಾನಸಿಕ ರೋಗಕ್ಕೆ ತುತ್ತಾಗುತ್ತಿದ್ದಾರೆ. ಹಾಗೂ ವಿವಿದ ರೀತಿಯ ಮಾನಸಿಕ ರೋಗಗಳ ಕುರಿತು ಮತ್ತು ಅದರ ಚಿಕಿತ್ಸೆಯ ಬಗ್ಗೆ ಮಾತನಾಡಿದರು.
ಜಾಥಾ ಹಾಗೂ ವೇಧಿಕೆ ಕಾರ್ಯಕ್ರಮದಲ್ಲಿ ಜಿಲ್ಲಾ ಕುಷ್ಠರೋಗ ನಿಮೂಲನಾ ಅಧಿಕಾರಿ ಡಾ|| ಅರ್ಚನಾ ಕುಲಕರ್ಣಿ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಪರಶುರಾಮ ಹಿಟ್ನಳ್ಳಿ, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಜಾನ್ ಕಟವಟೆ, ಮನೋರೋಗ ತಜ್ಞ ಡಾ.ಚೌಕಿಮಠ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಿ.ಎಂ.ಕೋಲೂರ, ಸುರೇಶ ಹೊಸಮನಿ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರೇಖಾ ದಶವಂತ, ಕೆ.ಬಿ ಬಾಗವಾನ ಕ್ಲಿನಿಕ್ ಸೈಕಾಲೋಜಿಸ್ಟ್, ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು, ವಿವಿಧ ನರ್ಸಿಂಗ ಕಾಲೇಜಿನ ಭೋದಕ ಸಿಬ್ಬಂದಿ ವರ್ಗದವರು ಮತ್ತು ವಿಧ್ಯಾರ್ಥಿ/ವಿಧ್ಯಾರ್ಥಿನಿಯರು ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಆರ್ ಭಾಗವಾನ ಸ್ವಾಗತಿಸಿದರು. ರವಿ ಕಿತ್ತೂರ ನಿರೂಪಿಸಿದರು.
” ರಾಜ್ಯ ಸರ್ಕಾರ ೨೦೧೪ರಲ್ಲಿ “ಮನೋಚೈತನ್ಯ ಕ್ಲಿನಿಕ” ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಿತ್ತು. ಈ ಕಾರ್ಯಕ್ರಮದಡಿಯಲ್ಲಿ ಪ್ರತಿ ಮಂಗಳವಾರ ತಾಲೂಕು ಆಸ್ಪತ್ರೆಗಳಲ್ಲಿ ಮಾನಸಿಕ ಆರೋಗ್ಯ ತಪಾಸಣೆ ಮತ್ತು ಆರೈಕೆ ಕುರಿತಾಗಿ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ಗರ್ಭಿಣಿ ಮತ್ತು ಬಾಣಂತಿಯರ ಮಾನಸಿಕ ಸಮಸ್ಯೆಗಳನ್ನು ಗುರುತಿಸಿ ಅವರುಗಳಿಗೆ ಸೂಕ್ತ ಮಾನಸಿಕ ಚಿಕಿತ್ಸೆ ಮತ್ತು ಆಪ್ತ ಸಮಾಲೋಚನಾ ಸೇವಾ ಸೌಲಭ್ಯಗಳನ್ನು ಒದಗಿಸುವ ಉದ್ದೇಶವಾಗಿದೆ. ರಾಷ್ಟ್ರೀಯ ಟೆಲಿಮಾನಸಿಕ ಆರೋಗ್ಯ ಕಾರ್ಯಕ್ರಮವಾಗಿದ್ದು ಇದು ಮಾನಸಿಕ ಆರೋಗ್ಯ ಸೇವಾ ಸೌಲಭ್ಯವನ್ನು ಉಚಿತವಾಗಿ ದಿನದ ೨೪ ಗಂಟೆಗಳು ಒದಗಿಸುವ ಮಾನಸಿಕ ಆರೋಗ್ಯ ಸಹಾಯವಾಣಿಯಾಗಿದೆ (ಸಹಾಯವಾಣಿ ಸಂಖ್ಯೆ:೧೪೪೧೬) ಪರೀಕ್ಷೆ ಒತ್ತಡ, ಮಾದಕ ಮತ್ತು ಮಧ್ಯವ್ಯಸನಿಗಳು, ಕೌಟುಂಬಿಕ ಸಮಸ್ಯೆ, ಖಿನ್ನತೆ ಮುಂತಾದ ಮಾನಸಿಕ ರೋಗಗಳಿಂದ ಬಳಲುವವರಿಗೆ ಮಾನಸಿಕ ಆರೋಗ್ಯ ವಿಷಯ ಪರಿಣಿತರು ಆಪ್ತಸಲಹೆ ಸೇವೆಯನ್ನು ಒದಗಿಸುವರು. ಮಾನಸಿಕ ರೋಗಿಗಳ ಗೌಷ್ಯತೆಯನ್ನು ಕಾಪಾಡಲಾಗುವುದು.”
– ಡಾ.ಸಂಪತ್ತ ಗುಣಾರಿ
ವಿಜಯಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ