ಲೇಖನ
– ಜಯಶ್ರೀ.ಜೆ.ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
‘ಸಮಯ ಮತ್ತು ಸಮುದ್ರದ ಅಲೆಗಳು ಯಾರಿಗಾಗಿ ಕಾಯುವುದಿಲ್ಲ.’ ಎನ್ನುವ ಇಂಗ್ಲೀಷ್ ನುಡಿಯಂತೆ ನಾವು ಸಿದ್ಧವಾಗುವವರೆಗೂ ಪ್ರಪಂಚವು ನಮಗಾಗಿ ಕಾಯುವುದಿಲ್ಲ. ಅದು ಬಾಗಿಲು ಬಡೆಯುವದರೊಳಗಾಗಿ ನಾವು ಸಿದ್ಧರಾಗಿರಬೇಕು. ನಾವು ಓದಿದ ಡಿಗ್ರಿಗಳು ಏನೇ ಆಗಿರಬಹುದು. ಅವು ನಮ್ಮನ್ನು ಉಳಿಸುವುದಿಲ್ಲ. ಆದರೆ ನಮಗೆ ನಮ್ಮ ಬಗ್ಗೆ ಇರುವ ಅರಿವು ನಮ್ಮನ್ನು ಮೇಲಕ್ಕೆತ್ತರಿಸುತ್ತದೆ. ಗಾಳಿಯನ್ನು ತಡೆಯೋರು ಯಾರೂ ಇಲ್ಲ. ಹಾಗೆಯೇ ಸ್ವ ಅರಿವನ್ನು ಚೆನ್ನಾಗಿ ತಿದ್ದಿ ತೀಡಿ ಟ್ರಿಮ್ ಮಾಡಿದರೆ ನಮ್ಮನ್ನು ತಡೆಯೋರು ಯಾರೂ ಇಲ್ಲ. ಜಗದ ಯಾವ ಶಕ್ತಿಯೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಸ್ವ ಅರಿವಿಗೆ ಯಾವುದೇ ತರಗತಿಗಳು ಬೇಕಿಲ್ಲ. ಇದನ್ನು ಶಾಲೆ ಕಾಲೇಜುಗಳಲ್ಲಿ ಕಲಿಸಲಾಗುವುದಿಲ್ಲ. ಇದಕ್ಕೆ ಬೇಕಿರುವುದು ನಂದಾದೀಪದಂತೆ ಉರಿಯುವ ತುಡಿತ. ಜೋರಾಗಿ ಮಾತನಾಡುವವನು ಇತರರ ಮೇಲೆ ದಬ್ಬಾಳಿಕೆ ಮಾಡುವವನು ಬಲಿಷ್ಢನಲ್ಲ. ಮೌನವಾಗಿದ್ದು ತನ್ನ ಬಗ್ಗೆ ತಾನು ತಿಳಿದು ತನ್ನನ್ನು ತಾನೇ ತಿದ್ದಿಕೊಳ್ಳುವವನು ಬಲಿಷ್ಠ. ನಿನ್ನ ಬಿಟ್ಟು ನಿನ್ನ ಏಳ್ಗೆಯನ್ನು ತಡೆಯುವವರು ಯಾರೂ ಇಲ್ಲ. ನೀನು ಒಮ್ಮೆ ದೃಢವಾಗಿ ನಿರ್ಧರಿಸದರೆ ಯಾವ ಶಕ್ತಿಯೂ ನಿಮ್ಮನ್ನು ಅಡ್ಡಗಟ್ಟದು. ನಿನ್ನನ್ನು ನೀನು ತಿಳಿಯುವುದೇ ದೊಡ್ಡ ಅರಿವು. ಸ್ವಯಂ ಅರಿವು ಅತ್ಯದ್ಭುತ ಜೀವನಕ್ಕೆ ದಾರಿ ಮಾಡಿಕೊಡುತ್ತದೆ.
ಇಷ್ಟೊಂದು ಶಕ್ತಿಶಾಲಿಯಾಗಿರುವ ಸ್ವ ಅರಿವನ್ನು ಹೆಚ್ಚಿಸುವ ಬಗೆಗಳಾದರೂ ಏನು ನೋಡೋಣ ಬನ್ನಿ.
ಓದಿರಿ
‘ಓದು ಒಕ್ಕಾಲು ಬುದ್ಧಿ ಮುಕ್ಕಾಲು’ ಎನ್ನುವ ಮಾತು ಓದಿನ ಪ್ರಾಮುಖ್ಯತೆಯನ್ನು ತಿಳಿಸುತ್ತದೆ. ಜಗತ್ತು ಯಾವಾಗಲೂ ಬದಲಾಗುತ್ತಲೇ ಇರುತ್ತದೆೆ. ‘ಜೀವನ ತಾನಾಗಿಯೆ ಬದಲಾಗುವುದಿಲ್ಲ. ಅದನ್ನು ನಾವೇ ಉದ್ದೇಶಪೂರ್ವಕವಾಗಿ ಬದಲಿಸಿಕೊಳ್ಳಬೇಕು.’ ಓದುವ ಹವ್ಯಾಸವೂ ಸಹ ಉದ್ದೇಶಪೂರ್ವಕವಾಗಿಯೇ ಬೆಳೆಸಿಕೊಳ್ಳುವಂತಹದು. ಬಹಳ ಜನ ಓದುವುದೇ ಇಲ್ಲ ಏಕೆಂದರೆ ಅವರಿಗೆ ಸಮಯದ ಅಭಾವವಿದೆಯಂತೆ. ಸಾಮಾಜಿಕ ಜಾಲತಾಣಗಳಲ್ಲಿ ವ್ಯರ್ಥ ಮಾಡಲು ಬಹಳಷ್ಟು ಸಮಯವಿದೆ. ನಾವು ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿಕೊಳ್ಳುವುದಕ್ಕೂ ಅವುಗಳೇ ನಮ್ಮನ್ನು ಉಪಯೋಗಿಸುವುದಕ್ಕೂ ಸಾಕಷ್ಟು ವ್ಯತಾಸವಿದೆ. ನಾವೇ ಅವುಗಳನ್ನು ಉಪಯೋಗಿಸುವಂತಾಗಬೇಕು. ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಗಳಾದ ಬಿಲ್ ಗೇಟ್ಸ್ ವಾರೆನ್ ಬಫೆಟ್ ನಿತ್ಯ ಇಂತಿಷ್ಟು ಪುಟಗಳು, ವರ್ಷದಲ್ಲಿ ಇಂತಿಷ್ಟು ಪುಸ್ತಕಗಳನ್ನು ಓದಲೇಬೇಕೆಂಬ ಬದ್ಧತೆಗೆ ತಮ್ಮನ್ನು ತಾವು ಒಳಪಡಿಸಿಕೊಂಡಿದ್ದಾರೆ. ನಾವೆಷ್ಟೇ ಬ್ಯುಸಿ ಇದ್ದರೂ ಓದಿಗೆ ಸಮಯವನ್ನು ಮಿಸಲಿರಸಲೇಬೇಕು. ಉತ್ತಮ ಪುಸ್ತಕಗಳನ್ನು ಓದುವುದರಿಂದ ಜ್ಞಾನದ ಹರಿವು ಹೆಚ್ಚಾಗುತ್ತದೆ. ನನ್ನೊಳಗಿನ ನಾನು ಹೆಚ್ಚು ಹೆಚ್ಚು ತಿಳಿಯಾಗುತ್ತ ಹೋಗುತ್ತದೆ.

ಜ್ಞಾನದ ಹಸಿವು
ಪುಸ್ತಕಗಳು ಕೇವಲ ಜ್ಞಾನವನ್ನು ಹೆಚ್ಚಿಸುವುದಿಲ್ಲ ಅವು ನಮ್ಮಲ್ಲಿ ಶಕ್ತಿಯನ್ನು ಉತ್ಪಾದಿಸುತ್ತವೆ. ಓದದವರು ಕನಸು ನನಸಾಗಿಸಲು ನೆಪ ಹೇಳುತ್ತಾರೆ. ಓದುವ ಹವ್ಯಾಸ ಬೆಳೆಸಿಕೊಂಡವರು ಸುಂದರ ಕನಸುಗಳನ್ನು ನನಸಾಗಿಸಿಕೊಳ್ಳುತ್ತಾರೆ. ಓದಿಗೆ ನೀವು ಜಾಣರಾಗಿರಬೇಕೆಂದಿಲ್ಲ ನಿಮಗೆ ಜ್ಞಾನದ ಹಸಿವು ಇದ್ದರೆ ಸಾಕು. ಓದು, ನೀವು ಯಾವ ಶಾಲೆ ಕಾಲೇಜು ವಿಶ್ವವಿದ್ಯಾಲಯಗಳಲ್ಲಿ ಅಭ್ಯಾಸ ಮಾಡಿರುವಿರಿ ಎಂಬುದಕ್ಕೆ ಮಹತ್ವ ಕೊಡುವುದಿಲ್ಲ. ನಿನ್ನಲ್ಲಿರುವ ಜ್ಞಾನದ ಹಸಿವಿಗೆ ಕಲಿಕೆಗೆ ಏಳ್ಗೆಗೆ ಮಹತ್ವ ಕೊಡುತ್ತದೆ. ನಮ್ಮ ಸುತ್ತಮುತ್ತಲಿರುವ ನಾಯಕರು ಸಾಧಕರು ಆಕಸ್ಮಿಕವಾಗಿ ಆಗಿಲ್ಲ. ಅವರೆಲ್ಲ, ಯೋಧರು ತಮ್ಮ ದೇಹವನ್ನು ಬಿಲ್ಡ್ ಮಾಡಲು ಹೇಗೆ ವ್ಯಾಯಾಮ ಮಾಡುವರೋ ಹಾಗೆಯೇ ಸಾಧಕರು ತಮ್ಮ ಸಾಧನೆಗೆ ಓದನ್ನು ಬಳಸಿಕೊಳ್ಳುತ್ತಾರೆ. ಇದರರ್ಥ ನಮ್ಮ ಅತ್ಯುತ್ತಮ ಆವೃತ್ತಿ ಓದಿನಲ್ಲಿದೆ ಜ್ಞಾನದ ಹಸಿವಿನಲ್ಲಿದೆ.

ಪ್ರಶ್ನೆ ಕೇಳಿ
ಮಾರ್ಕ್ಟ್ವೇನ್ ಹೇಳಿದಂತೆ ‘ ನಿಮ್ಮ ಜೀವನದ ಎರಡು ಪ್ರಮುಖ ದಿನಗಳು ನೀವು ಹುಟ್ಟಿದ ದಿನ ಮತ್ತು ಏಕೆ ಎಂದು ನೀವು ಕಂಡುಕೊAಡ ದಿನ.’ ಪ್ರಶ್ನೆಗಳನ್ನು ಕೇಳುವುದು ಬಲಹೀನತೆಯಲ್ಲ. ಸುರಕ್ಷಿತ ವಲಯ ಇತಿಹಾಸವನ್ನು ನಿರ್ಮಿಸಿಲ್ಲ ಪ್ರಶ್ನೆಗಳು ಇತಿಹಾಸವನ್ನು ನಿರ್ಮಿಸಿವೆ. ಅವು ನಿನ್ನನ್ನು ನೀನು ತಿಳಿದುಕೊಳ್ಳಲು ಮಾರ್ಗವನ್ನು ತೆರೆಯುತ್ತವೆ. ನೀನು ಕೇವಲ ಪ್ರಶ್ನಿಸುತ್ತಿಲ್ಲ ಆಲೋಚಿಸುತ್ತಿರುವೆ. ಸ್ವಂತ ಆಲೋಚನೆಗಳನ್ನು ಪ್ರಸ್ತಾಪಿಸಲು ಅವಕಾಶ ಮಾಡುತ್ತವೆ. ಸೃಜನಶೀಲತೆಯನ್ನು ಉತ್ತೇಜಿಸುತ್ತವೆ. ಜವಾಬ್ದಾರಿಯುತ ಪ್ರಶ್ನೆಗಳು ನಿಮ್ಮ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತವೆ. ಅನೇಕರು ಪ್ರಶ್ನಿಸುವುದು ಮೂರ್ಖರ ಲಕ್ಷಣವೆಂದು ತಪ್ಪಾಗಿ ತಿಳಿದಿದ್ದಾರೆ. ನಿಮಗೆ ನೀವೇ ಏಕೆ ಎಂಬ ಪ್ರಶ್ನೆಯನ್ನು ಕೇಳಿಕೊಂಡರೆ ನಿನ್ನೊಳಗಿನ ನಿನ್ನನ್ನು ಪರಿಚಯಿಸುತ್ತದೆ. ವರ್ತನೆಯಲ್ಲಿ ಪರಿವರ್ತನೆ ತರುತ್ತದೆ. ಪ್ರೇರಣೆ, ದಕ್ಷತೆ, ಮತ್ತು ಉತ್ಪಾದಕತೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ.
ತಪ್ಪುಗಳು
‘ನೋಯಿಂಗ್ ಯುವರ್ಸೆಲ್ಫ್ ಈಸ್ ಬಿಗಿನಿಂಗ್ ಆಫ್ ಆಲ್ ವಿಸಡಮ್’ ಇದು ಅರಿಸ್ಟಾಟಲ್ ಹೇಳಿದ ಮಾತು.’ ನಿನ್ನನ್ನು ಅರಿಯುದೇ ಇರುವುದು ಕತ್ತಲೆಯಲ್ಲಿ ಇದ್ದಂತೆ ಅರಿತರೆ ಸೂರ್ಯನ ಪ್ರಕಾಶ ನೀ ನೋಡುವ ವಸ್ತುವಿನ ಮೇಲೆ ಬಿದ್ದಂತೆ. ನಾನು ಮಾಡಿದ್ದು ಸರಿಯೇ ತಪ್ಪೇ ಎಂದು ವಿವೇಚಿಸುವ ಸಾಮರ್ಥ್ಯ ಇರುವುದು ಅರಿವಿಗೆ ಮಾತ್ರ. ಅದು ಇರುವುದು ಮನುಷ್ಯನಿಗೆ ಮಾತ್ರ. ತಪ್ಪು ಮಾಡುವುದು ತಪ್ಪಲ್ಲ. ತಪ್ಪುಗಳು ಜೀವನದ ಪ್ರಗತಿಗೆ ಅವಶ್ಯಕವಾದ ಅಂಶವಾಗಬಹುದು. ‘ಒಳ್ಳೆಯ ತೀರ್ಮಾನಗಳಿಂದ ಸಂತೋಷವುಂಟಾಗುತ್ತದೆ. ಒಳ್ಳೆಯ ತೀರ್ಮಾನಗಳು ಅನುಭವದ ಮೇಲೆ ಅವಲಂಬಿಸಿರುತ್ತವೆ. ಅನುಭವ ಕೆಟ್ಟ ತೀರ್ಮಾನಗಳಿಂದ ಬರುತ್ತದೆ.’ ಎಂಬ ಮಾತೊಂದಿದೆ. ತಪ್ಪು ಸ್ವ ಅರಿವಿನ ಅಭಾವವನ್ನು ಸೂಚಿಸುತ್ತದೆ.
ಪ್ರತಿಬಿಂಬ
‘ಟು ನೋ ಅರ್ಸ್ ಈಸ್ ವಿಸಡಮ್’ ನಮಗೆ ನಮ್ಮ ಬಗ್ಗೆ ಕಡಿಮೆ ತಿಳಿದಿರುತ್ತದೆ. ಆದರೆ ಮತ್ತೊಬ್ಬರ ಬಗ್ಗೆ ಹೆಚ್ಚು ತಿಳಿದಿರುತ್ತದೆ. ಮತ್ತೊಬ್ಬರನ್ನು ತಿಳಿಯುವುದು ಜಾಣತನ ಆದರೆ ಲಾವೋ ತ್ಸು ಹೇಳಿದಂತೆ ‘ಟು ನೋ ಯುವರ್ ಸೆಲ್ಫ್ ಈಸ್ ಎನ್ಲೈಟನ್ಮೆಂಟ್’ ದಿನನಿತ್ಯದ ಚಟುವಟಿಕೆಗಳಲ್ಲಿ ಯಾವುದು ಸರಿ ಯಾವುದು ತಪ್ಪು ಎಂಬುದನ್ನು ವಿವೇಚಿಸಬೇಕು. ಕೂಡಲೇ ಸುಧಾರಿಸಬೇಕು. ಇದೊಂದು ತರ ಕನ್ನಡಿಯಲ್ಲಿ ನಮ್ಮ ಮುಖವನ್ನು ನಾವೇ ನೋಡಿಕೊಳ್ಳುವಂತೆ. ವೈಯಕ್ತಿಕ ಪ್ರತಿಬಿಂಬ ನೋಡಿಕೊಳ್ಳುವ ರೂಢಿಮಾಡಿಕೊಳ್ಳಬೇಕು. ಮೊದಮೊದಲು ಈ ಹೊಸ ಅಭ್ಯಾಸ ತುಸು ಕಷ್ಟವೆನಿಸಬಹುದು. ಮುಂದಿನ ದೊಡ್ಡ ಲಾಭಕ್ಕಾಗಿ ಕಷ್ಟ ಪಡಬೇಕು. ’ಹೊಸ ಅಭ್ಯಾಸ ಹೊಸ ಪಾದರಕ್ಷೆಗಳನ್ನು ಹಾಕಿಕೊಂಡಂತೆ ಮೊದಲ ಕೆಲ ದಿನಗಳು ಕಾಲುಗಳಿಗೆ ಸರಿಯಾಗಿ ಚುಚ್ಚಿದಂತೆ ಅನಿಸುತ್ತದೆ. ನಂತರ ಸುಖಕರ ಅನುಭವ ನೀಡುತ್ತವೆ.’
ಯೋಗ್ಯತೆ
‘ಯೋಗ್ಯತೆ ಅನ್ನುವುದು ನೀನು ಹಾಕಿಕೊಳ್ಳುವ ಬಟ್ಟೆಗಳಿಂದ ಬರುವುದಿಲ್ಲ. ನೀನು ಹೇಗೆ ನಡೆದುಕೊಳ್ಳುವೆ ಎನ್ನುವುದರಿಂದ ಬರುತ್ತದೆ. ನಡುವಳಿಕೆ ನಿನ್ನ ಸ್ವಯಂ ಅರಿವಿನಿಂದ ಬರುತ್ತದೆ.’ ವೈಯಕ್ತಿಕವಾಗಿ ಯೋಗ್ಯತೆಯನ್ನು ಅರಿಯುವುದು ಒಂದು ದೊಡ್ಡ ಕೆಲಸವೆಂದು ತೋರುತ್ತದೆಯಾದರೂ ನಿಮ್ಮಲ್ಲಿರುವ ವಿಶಿಷ್ಟ ಸಾಮರ್ಥ್ಯ ಮತ್ತು ಸವಾಲುಗಳನ್ನು ಗುರುತಿಸಲು ನಿಮಗೆ ಸಾಧ್ಯವಾದರೆ, ಅದನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ. ಅದೃಷ್ಟದ ಕುದುರೆ ಸಿಕ್ಕರೆ ಅದನ್ನೇರಿ ಓಡಿಸುವ ಯೋಗ್ಯತೆ ಬೇಕಲ್ಲವೇ? ಯೋಗ್ಯತೆ ಎಂಬುದು ಜೀವನದ ಆಟದ ಟೀಮ್ ಲೀಡರ್ ಇದ್ದಂತೆ. ಲೀಡರ್ ಸರಿಯಾಗಿ ಇರದಿದ್ದರೆ ಸಿಕ್ಕದ್ದೆಲ್ಲ ಉಪಯೋಗವಾಗುವುದಿಲ್ಲ. ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟ ಹಾಗೆ ಆಗುತ್ತದೆ. ‘ಸರಿಯಾದ ಸಮಯದಲ್ಲಿ ಸರಿಯಾದ ಜಾಗದಲ್ಲಿ ಇರುವುದು ಯೋಗ.’ ಆದರೆ ಅದನ್ನು ಪಡೆಯಲು ಯೋಗ್ಯತೆಯನ್ನು ಸಂಪಾದಿಸಬೇಕು.
ಕೊನೆ ಹನಿ
ಜೀವನದಲ್ಲಿ ಓದು, ಪ್ರಶ್ನೆಗಳು, ತಪ್ಪುಗಳು, ಜ್ಞಾನದ ಹಸಿವು ವೈಯಕ್ತಿಕ ಪ್ರತಿಬಿಂಬ ಒಂದಕ್ಕೊಂದು ಬೆಸೆದುಕೊಂಡಿವೆ. ಇವೆಲ್ಲವುಗಳನ್ನು ಸ್ವಯಂಅರಿವು ಮಾತ್ರ ಸರಿಪಡಿಸುತ್ತದೆ. ಸುಂದರ ಅತ್ಯದ್ಭುತ ಜೀವನವನ್ನು ಮುಂದೆ ತಂದು ನಿಲ್ಲಿಸುತ್ತದೆ.
