ವಿಜಯಪುರದಲ್ಲಿ ಮಜದೂರ್ ಕಾರ್ಡ್ ಕುರಿತು ಅರಿವು ಮೂಡಿಸುವ ಕಾರ್ಯಾಗಾರಕ್ಕೆ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಶಕೀಲ್ ಬಾಗಮಾರೆ ಚಾಲನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ನೇತೃತ್ವದಲ್ಲಿ ಮಜ್ದೂರ್ ಕಾರ್ಡ್ ಪಡೆದುಕೊಳ್ಳುವ ನಿಟ್ಟಿನಲ್ಲಿ ಅರಿವು ಮೂಡಿಸುವ ಉಚಿತ ಕಾರ್ಯಾಗಾರ ನಡೆಯಿತು.
ಈ ಕಾರ್ಡ್ ಪಡೆದುಕೊಳ್ಳುವ ವಿಧಾನ, ಸೌಲಭ್ಯಗಳ ಕುರಿತು ಸಮಗ್ರವಾಗಿ ತಿಳಿವಳಿಕೆ ನೀಡಲಾಯಿತು. ಶಿಬಿರದಲ್ಲಿ ಕಾರ್ಮಿಕರಿಗೆ ತಕ್ಷಣದ ನೋಂದಣಿ, ದಾಖಲೆ ಪರಿಶೀಲನೆ ಮತ್ತು ಲೇಬರ್ ಕಾರ್ಡ್ ಪಡೆಯಲು ಮಾರ್ಗದರ್ಶನ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯಕ್ರಮದ ರೂವಾರಿ ಹಾಗೂ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಶಕೀಲ್ ಬಾಗಮಾರೆ ಮಾತನಾಡಿ, ಕಾರ್ಮಿಕರು ಈ ದೇಶದ ಉಸಿರು, ಕಾರ್ಮಿಕರೇ ಈ ದೇಶದ ಶಕ್ತಿ, ಕಾರ್ಮಿಕರ ಕಲ್ಯಾಣವನ್ನೇ ಡಾ.ಬಿ.ಆರ್. ಅಂಬೇಡ್ಕರ್ ಬಹುಮುಖ್ಯ ಧ್ಯೇಯವಾಗಿಸಿಕೊಂಡಿದ್ದರು. ಕಾರ್ಮಿಕರಿಗಾಗಿ ಅನೇಕ ಸೌಲಭ್ಯಗಳಿವೆ, ಆದರೆ ಸೌಲಭ್ಯಗಳ ಬಗ್ಗೆ ಅರಿವಿನ ಕೊರತೆಯಿಂದ ಕಾರ್ಮಿಕರಿಗೆ ಸೌಲಭ್ಯಗಳು ಮರೀಚಿಕೆಯಾಗಿವೆ ಎಂದರು.
ದಿನನಿತ್ಯ ತೊಂದರೆ ಅನುಭವಿಸುವ ಕಾರ್ಮಿಕರಿಗೆ ಸರಕಾರಿ ಸೌಲಭ್ಯಗಳನ್ನು ನೇರವಾಗಿ ಒದಗಿಸುವ ಉದ್ದೇಶದಿಂದ ಈ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.
ಮಾಹಿತಿ ಕೊರತೆಯಿಂದ ತಮ್ಮ ಹಕ್ಕುಗಳಿಂದ ಕಾರ್ಮಿಕರು ವಂಚಿತರಾಗುತ್ತಿದ್ದಾರೆ.
ಕಾರ್ಮಿಕರು ತಮ್ಮ ಮಜದೂರ್ ಕಾರ್ಡ್ ಪಡೆದು, ಯಾವುದೇ ಮಧ್ಯವರ್ತಿಗಳ ಸಹಾಯವಿಲ್ಲದೇ ಯಾವುದೇ ತೊಂದರೆ ಇಲ್ಲದೆ ಸರಕಾರಿ ಯೋಜನೆಗಳ ಲಾಭ ಪಡೆಯಬೇಕು ಎಂದರು.
ಕಾಂಗ್ರೆಸ್ ಪಕ್ಷವು ಕೇವಲ ಚುನಾವಣೆಗಾಗಿ ಅಲ್ಲ, ಜನಸೇವೆಗೆ ನಂಬಿಕೆ ಇಟ್ಟುಕೊಂಡಿದೆ. ಇಂತಹ ಶಿಬಿರಗಳನ್ನು ಮುಂದಿನ ದಿನಗಳಲ್ಲಿ ಸಹ ಆಯೋಜಿಸಲಾಗುವುದು ಎಂದು ಬಾಗಮಾರೆ ನುಡಿದರು.

