ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಸಮಾಜವನ್ನು ವೈಚಾರಿಕ ಪ್ರಜ್ಞೆಯೊಂದಿಗೆ ಮಾದರಿ ಸಮಾಜ ರೂಪಿಸಲು ಬಸವಾದಿ ಶರಣರು ಪ್ರಯತ್ನ ನಡೆಸಿದ್ದರು. ವಿಶ್ವಗುರು ಬಸವೇಶ್ವರರ ಲಿಂಗೈಕ್ಯರಾದ ಪುಣ್ಯದಿನವಾದ ಇಂದು ನಾಗಪಂಚಮಿ ದಿನದಂದು ಕಲ್ಲು ನಾಗದೇವರಿಗೆ ಹಾಲು ಎರೆಯದೇ ಪೌಷ್ಟಿಕ ಆಹಾರವಾದ ಹಾಲನ್ನು ಮಕ್ಕಳಿಗೆ ಕುಡಿಯಲು ಕೊಡುವ ಮೂಲಕ ಶರಣರ ವೈಚಾರಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳವಂತಾಗಬೇಕೆಂದು ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಪಟ್ಟಣದ ನಂದೀಶ್ವರ ರಂಗಮಂದಿರದಲ್ಲಿ ಬಸವೇಶ್ವರ ಸೇವಾ ಸಮಿತಿ, ಬಸವೇಶ್ವರ ಜಾತ್ರಾ ಉತ್ಸವ ಸಮಿತಿಯ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಸವ ಪಂಚಮಿ ಕಾರ್ಯಕ್ರಮದಲ್ಲಿ ಬಸವೇಶ್ವರ ದೇವಾಲಯ ಕನ್ನಡ ಮಾಧ್ಯಮ ಶಾಲೆಯ ಮಕ್ಕಳಿಗೆ ಹಾಲು ವಿತರಿಸಿ ಮಾತನಾಡಿದ ಅವರು, ಪೌಷ್ಟಿಕ ಆಹಾರವಾಗಿರುವ ಹಾಲನ್ನು ಕಲ್ಲು ಮಣ್ಣಿನ ಮೇಲೆ ಸುರಿಯುವುದು ಸಲ್ಲದು. ಬಸವ ಪಂಚಮಿ ಆಚರಿಸುವ ಮೂಲಕ ಕಲ್ಲು-ಮಣ್ಣನ್ನು ದೇವರೆಂದು ತಿಳಿದು ಅದರ ಮೇಲೆ ಹಾಲು ಸುರಿದು ಹಾಳು ಮಾಡುವ ಮೌಢ್ಯನಂಬಿಕೆ ಹೋಗಲಾಡಿಸುವಂತಾಗಬೇಕು. ಮೌಢ್ಯ-ಕಂದಾಚಾರಗಳನ್ನು ಬಿಡಬೇಕು. ಮಾನವೀಯ ಮೌಲ್ಯದ ಆಚರಣೆಗಳನ್ನು ಅಳವಡಿಸಿಕೊಳ್ಳುವಂತಾಗಬೇಕೆಂದರು.
ಅಥಣಿ ಮೋಟಗಿಮಠದ ಪ್ರಭು ಚನ್ನಬಸವ ಸ್ವಾಮೀಜಿ ಮಾತನಾಡಿ, ನಾಡಿನಲ್ಲಿ ಶುದ್ಧ ಪರಂಪರೆ,ಆಚರಣೆ ಮಾಡುವಂತಾಗಬೇಕು. ಹಾಲು ಮಕ್ಕಳ ಬದುಕಿಗೆ ಚೈತನ್ಯ ನೀಡುತ್ತದೆ. ಇಂತಹ ಚೈತನ್ಯ ನೀಡುವ ಪೌಷ್ಟಿಕ ಆಹಾರವಾಗಿರುವ ಹಾಲನ್ನು ನಾಗರ ಪಂಚಮಿ ಹಬ್ಬದಂದು ನೆಲಕ್ಕೆ ಹಾಕದೇ ಅದನ್ನು ಮಕ್ಕಳೇ ದೇವರು ಎಂದು ಹೇಳುವ ಅವರಿಗೆ ಹಾಲು ನೀಡುವ ಮೂಲಕ ಅವರನ್ನು ಚೈತನ್ಯರಾಗುವಂತೆ ಮಾಡಬೇಕು. ಬಸವ ಪಂಚಮಿಯಂದು ಎಲ್ಲ ಮಕ್ಕಳಿಗೂ ಹಾಲು ಕುಡಿಸುವ ಸಂಪ್ರದಾಯ ನಾಡಿನಲ್ಲಿ ಆಚರಣೆಯಾಗುವಂತಾಗಬೇಕು. ಬಸವ ಪಂಚಮಿಯಂದು ಎಲ್ಲೆಡೆ ಬಸವ ನಾಮಸ್ಮರಣೆ ಮೊಳಗುವಂತಾಗಬೇಕೆಂದರು.
ಅಧ್ಯಕ್ಷತೆಯನ್ನು ಬಸವೇಶ್ವರ ದೇವಾಲಯ ಕನ್ನಡ ಮತ್ತು ಇಂಗ್ಲೀಷ ಮಾಧ್ಯಮ ಶಾಲೆಯ ಮೇಲು ಉಸ್ತುವಾರಿ ಸಮಿತಿ ಅಧ್ಯಕ್ಷ ಅನಿಲ ಅಗರವಾಲ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಬಸವೇಶ್ವರ ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ರವಿ ರಾಠೋಡ, ಬಸವೇಶ್ವರ ಸೇವಾ ಸಮಿತಿಯ ಶೇಖರಗೌಡ ಪಾಟೀಲ, ಎಂ.ಜಿ.ಆದಿಗೊಂಡ, ಸಂಕನಗೌಡ ಪಾಟೀಲ, ಬಸವರಾಜ ಗೊಳಸಂಗಿ, ಎಪಿಎಂಸಿ ಮಾಜಿ ಅಧ್ಯಕ್ಷ ಶೇಖರ ಗೊಳಸಂಗಿ, ಹಾಲುಮತ ಸಮಾಜದ ಅಧ್ಯಕ್ಷ ಸಂಗಮೇಶ ಓಲೇಕಾರ ಇತರರು ಇದ್ದರು. ಎಲ್.ಎಸ್.ಹಿರೇಮಠ ಪ್ರಾರ್ಥಿಸಿದರು. ರಾಷ್ಟ್ರೀಯ ಬಸವಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಪ್ರಾಸ್ತವಿಕವಾಗಿ ಮಾತನಾಡಿದರು. ವೈ.ಎನ್.ಮಿಣಜಗಿ ಸ್ವಾಗತಿಸಿದರು. ಎಸ್.ಎಸ್.ಹಡಪದ ನಿರೂಪಿಸಿದರು. ಬಸವರಾಜ ನಂದಿಹಾಳ ವಂದಿಸಿದರು. ನಂತರ ಬಸವ ಪಂಚಮಿಯಂಗವಾಗಿ ಬಸವೇಶ್ವರ ದೇವಾಲಯ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಶ್ರೀಗಳು, ಗಣ್ಯರು ಹಾಲು ವಿತರಿಸಿದರು.

