ಗುತ್ತಿಗೆದಾರನ ಕರಾಮತ್ತು | ಬಡವರಿಗಿಲ್ಲಾ ಇಂದಿರಾ | ಹೊಟ್ಟೆತುಂಬಾ ಊಟ | ಸ್ವಚ್ಚತೆ ಇಲ್ಲಿ ಮರಿಚಿಕೆ
ಉದಯರಶ್ಮಿ ದಿನಪತ್ರಿಕೆ
ವರದಿ: ಜಿ.ಪಿ. ಘೋರ್ಪಡೆ
ತಾಳಿಕೋಟೆ: ಬಡವರಿಗೆ ಕೂಲಿ ಕಾರ್ಮಿಕರಿಗೆ ಕೈಗೆಟಕುವ ದರದಲ್ಲಿ ಹೊಟ್ಟೆತುಂಬಾ ಊಟ ಸಿಗಲೆಂಬ ಉದ್ದೇಶದಿಂದ ಮಹತ್ವಾಕಾಂಕ್ಷೀ ಯೋಜನೆಯ ಮೂಲಕ ರಾಜ್ಯದೆಲ್ಲಡೆ ಇಂದಿರಾ ಕ್ಯಾಂಟಿನ್ ಪ್ರಾರಂಬಿಸಿದ್ದರೆ ತಾಳಿಕೋಟೆಯಲ್ಲಿಯ ಇಂದಿರಾ ಕ್ಯಾಂಟಿನ್ ಗುತ್ತಿಗೆದಾರನ ಕರಾಮತ್ತಿನಿಂದ ಬಡವರಿಗೆ ಊಟವೇ ಸಿಗದಂತಹ ಪರಸ್ಥಿತಿ ಎದುರಾಗಿದೆ.
ಇಂದು ಕ್ಯಾಂಟಿನ್ ಓಪನ್ ಆಗಿದ್ದರೆ ನಾಳೆ ಬಂದ್ ಆಗಿರುತ್ತದೆ ದಿನಕ್ಕೆ ಕನಿಷ್ಠ ಬೆಳಿಗ್ಗೆ ೩೦೦ ಜನರಿಗೆ ಉಪಹಾರ ಮಧ್ಯಾಹ್ನ ೩೦೦ ಜನರಿಗೆ ಊಟ ಸಂಜೆ ೩೦೦ ಜನರಿಗೆ ಊಟವೆಂಬ ನಿಯಮವಿದ್ದರೂ ಕೂಡಾ ಎಲ್ಲವನ್ನು ಗಾಳಿಗೆ ತೋರಲಾಗಿದ್ದು ಮೊದಲು ಬಂದವರಿಗೆ ಮಾತ್ರ ಆದ್ಯತೆ ಎಂಬಂತಾಗಿದೆ.
ಬೆಳಿಗ್ಗೆ ೮ ಗಂಟೆಗೆ ಪ್ರಾರಂಭವಾದರೆ ಅರ್ದಗಂಟೆಯಲ್ಲಿ ಸುಮಾರು ೫೦ ಜನರಿಗೆ ಉಪಹಾರ ಸಿಗುವದೇ ಕಷ್ಟವಾಗಿದೆ ಮದ್ಯಾಹ್ನ ತೆರೆದರೆ ಸಂಜೆ ತೆರೆಯುವದಿಲ್ಲಾ ಸಂಜೆ ತೆರೆದರೆ ಮದ್ಯಾಹ್ನ ತೆರೆಯುವದಿಲ್ಲಾ, ಇದು ಇಂದಿರಾ ಕ್ಯಾಂಟಿನ್ಗೆ ಬಂದ ದುರ್ಗತಿಯಾಗಿದೆ.
ಇಂದಿರಾ ಕ್ಯಾಂಟಿನ್ಗೆ ಆಗಮಿಸುವ ಗ್ರಾಹಕರಿಗೆ ಶುದ್ದ ಕುಡಿಯುವ ನೀರು ಒದಗಿಸಬೇಕೆಂಬ ನಿಯಮವಿದ್ದರೂ ಕೂಡಾ ಪ್ಲೋರಾಯ್ಡ್ ಯುಕ್ತ ಬೋರವ್ಹೇಲ್ ನೀರನ್ನು ಇಡಲಾಗಿರುತ್ತದೆ. ಇಂದು ಬೋರವ್ಹೇಲ್ ನೀರು ಶೇಕರಿಸಿದ್ದರೆ ವಾರಗಟ್ಟಲೇ ನೀರು ಬದಲಾವಣೆಯಾಗುವದಿಲ್ಲ. ನೀರು ಸಂಪೂರ್ಣ ಖಾಲಿಯಾದ ನಂತರವೇ ಮತ್ತೆ ನೀರು ತುಂಬಿಸಲಾಗುತ್ತದೆ. ಕುಡಿಯಲು ಮತ್ತು ಗ್ರಾಹಕರು ತಿಂದ ಪ್ಲೇಟ್ ತೊಳೆಯಲು ಎಲ್ಲದಕ್ಕೂ ಇದೇ ನೀರನ್ನೇ ಬಳಸಲಾಗುತ್ತಿದೆ.
ಇನ್ನಾದರೂ ಸಂಬAದಿಸಿದ ಅಧಿಕಾರಿಗಳು ಇತ್ತಕಡೆ ಗಮನ ಹರಿಸಿ ಬಡವರ ಕೂಲಿ ಕಾರ್ಮಿಕರಿಗೆ ಕೈಗೆಟಕುವ ದರದಲ್ಲಿ ಹೊಟ್ಟೆತುಂಬಾ ಊಟಕೊಡಿಸಲು ಮುಂದಾಗುತ್ತಾರೋ ಕಾದು ನೋಡಬೇಕಿದೆ.
ಸ್ವಚ್ಚತೆ ಎಂಬುದು ಮರಿಚಿಕೆ
ಕಳೆದ ೧ ವರ್ಷದಿಂದ ಪ್ರಾರಂಭಗೊಂಡಿರುವ ಇಂದಿರಾ ಕ್ಯಾಂಟಿನ್ನಲ್ಲಿ ಸ್ವಚ್ಚತೆ ಎಂಬುದೇ ಮರಿಚಿಕೆಯಾಗಿದೆ. ಗ್ರಾಹಕರು ತಿಂದ ಪ್ಲೇಟ್ದಿಂದ ಚೆಲ್ಲಿದ ಎಲ್ಲ ಮುಸರೆಯನ್ನು ಮರುದಿನವೇ ಸ್ವಚ್ಚಮಾಡಲಾಗುತ್ತಿದ್ದರಿಂದ ಕ್ಯಾಂಟಿನ್ಗೆ ಆಗಮಿಸುವ ಗ್ರಾಹಕರಿಗೆ ತಲೆಗಿಂವಿಗುಟುವ ವಾಸನೆ ಇಂದಿರಾ ಕ್ಯಾಂಟಿನತ್ತ ಮುಖಮಾಡದಂತೆ ಮಾಡುತ್ತಿದೆ. ಉಳಿದು ಚೆಲ್ಲಿದ ಪದಾರ್ಥ ಮುಂದಿನ ಚರಂಡಿಗೆ ಚೆಲ್ಲಲಾಗುತ್ತಿದೆ. ಸ್ವಚ್ಚತೆಯ ದೃಷ್ಠಿಯಿಂದಾದರೂ ಚರಂಡಿಗೆ ನೀರು ಬಿಟ್ಟು ಸ್ವಚ್ಚತೆ ಕಾಪಾಡಬಹುದಿತ್ತು. ಆದರೆ ಇದ್ಯಾವುದನ್ನು ಮಾಡದೇ ಸಾಗಿದ್ದರಿಂದ ಕ್ಯಾಂಟಿಗೆ ಗ್ರಾಹಕರು ಬರಲು ಹಿಂದೇಟು ಹಾಕುವಂತೆ ಮಾಡಿದೆ.ಸರ್ಕಾರದ ದುಡ್ಡು ಪೋಲು
ಬಡವರಿಗೆ ಮತ್ತು ಕೂಲಿ ಕಾರ್ಮಿಕರಿಗಾಗಿ ಪ್ರಾರಂಬಿಸಲಾಗಿರುವ ಇಂದಿರಾ ಕ್ಯಾಂಟಿನ್ ನಿರ್ವಹಣೆಗೆ ಸರ್ಕಾರವು ಲಕ್ಷಾಂತರ ರೂ. ಖರ್ಚು ವೆಚ್ಚ ಮಾಡುತ್ತಿದೆ. ಆದರೆ ಬಡವರಿಗೆ ಒಪ್ಪತ್ತಿನ ತುತ್ತಿನ ಚೀಲ ತುಂಬಿಸಲೂ ಕೂಡಾ ನಿರ್ವಹಣೆಯ ಗುತ್ತಿಗೆದಾರರು ಮಾಡದಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಸರ್ಕಾರದಿಂದ ಪ್ರತಿ ತಿಂಗಳು ಲಕ್ಷಾಂತರ ಗುತ್ತಿಗೆದಾರನು ಪಡೆದುಕೊಂಡು ತನ್ನ ಜೇಬು ತುಂಬಿಸಿಕೊಳ್ಳುತ್ತಿದ್ದಾನೆಂಬ ದೂರು ಕೂಲಿ ಕಾರ್ಮಿಕರದ್ದಾಗಿದೆ.
"ತಾಳಿಕೋಟೆಯ ಇಂದಿರಾ ಕ್ಯಾಂಟಿನಲ್ಲಿ ಬಡವರಿಗೆ ಉಪಹಾರವು ಮತ್ತು ಊಟವೂ ಸಿಗುತ್ತಿಲ್ಲ. ಒಂದು ದಿನ ತೆಗೆದರೆ ಮರುದಿನ ಮುಚ್ಚಿರುತ್ತದೆ. ನಿತ್ಯ ನೂರಾರು ಜನ ಕೂಲಿಕಾರ್ಮಿಕರು ಆಗಮಿಸುತ್ತಾರೆ. ಕೆಲವು ಜನರಿಗೆ ಉಪಹಾರ, ಊಟ ಸಿಕ್ಕರೆ ಇನ್ನು ಕೆಲವು ಜನರಿಗೆ ಸಿಗುವದಿಲ್ಲ. ಸ್ವಚ್ಚತೆ ಎಂಬುದು ಮರಿಚಿಕೆಯಾಗಿದೆ. ಗುತ್ತಿಗೆದಾರನು ಬೇಕಾಬಿಟ್ಟಿ ಕ್ಯಾಂಟಿನ್ ನಡೆಸುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಗುತ್ತಿಗೆದಾರನ ಮೇಲೆ ಕ್ರಮ ಜರುಗಿಸಿ ಬಡವರಿಗೆ ಅನುಕೂಲ ಕಲ್ಪಿಸಬೇಕು."– ಬಸ್ಸು ಕಟ್ಟಿಮನಿ (ಮಾದರ)
ಅಂಬೇಡ್ಕರ ಸೇನೆ ಸಂಘಟನೆ ಜಿಲ್ಲಾ ಉಪಾಧ್ಯಕ್ಷ
“ಇಂದಿರಾ ಕ್ಯಾಂಟಿನಲ್ಲಿ ಬಡವರಿಗೆ ಉಪಹಾರ ಮತ್ತು ಊಟ ಸಿಗುವದರ ಬಗ್ಗೆ ಮತ್ತು ಸ್ವಚ್ಚತೆ ಇಲ್ಲದಿರುವ ಬಗ್ಗೆ ಹಾಗೂ ಶುದ್ದಿ ಕುಡಿಯುವ ನೀರು ಬಳಕೆ ಮಾಡದಿರುವ ಬಗ್ಗೆ ದೂರು ಬಂದಿದೆ. ಕೂಡಲೇ ಕ್ಯಾಂಟಿಗೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸುತ್ತೇನೆ.”
– ವಸಂತ ಪವಾರ
ಮುಖ್ಯಾಧಿಕಾರಿ, ಪುರಸಭೆ ತಾಳಿಕೋಟೆ

