ಲೇಖನ
– ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ
ಪುಣೆ
ಉದಯರಶ್ಮಿ ದಿನಪತ್ರಿಕೆ
ಕರ್ನಾಟಕದ ಇತಿಹಾಸದಲ್ಲಿ 12ನೇ ಶತಮಾನವೆಂದರೆ ಹತ್ತು ಹಲವು ದೃಷ್ಟಿಯಲ್ಲಿ ಪರ್ವಕಾಲ. ಬಸವಣ್ಣನವರ ಮುಖಂಡತ್ವದಲ್ಲಿ ಮನುಕುಲೋದ್ಧಾರದ ಒಂದು ಸಮಾಜದ ಧಾರ್ಮಿಕ ಆಂದೋಲನ ಆಗ ನಡೆಯಿತು. ಬಸವಾದಿ ಶರಣರು ಬದುಕಿನ ಮೌಲ್ಯಗಳನ್ನು ಗುರುತಿಸಿದರು. ಅವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಆದರ್ಶ ಜೀವನ ನಡೆಸಿ ದೃಷ್ಟಾಂತವಾಗಿ ನಿಂತರು. ಕಾರಣ ಅಂದಿನ ಸಾಮಾಜಿಕ ಪರಿಸ್ಥಿತಿ ಹದಗೆಟ್ಟಿತ್ತು. ಬಡವ ಬಲ್ಲಿದರು ಎಂಬ ವರ್ಗ ಭೇದ, ಹೆಣ್ಣು ಗಂಡೆoಬ ಲಿಂಗ ಭೇದ, ಹುಚ್ಚ ನೀಚ ಎಂಬ ಜಾತಿ ಭೇದ ಆಳು ಅರಸ ಎಂಬ ಸ್ಥಾನಭೇದಗಳಿಂದ ಸಮಾಜ ಹರಿದು ಹಂಚಿಹೋಗಿತ್ತು. ಸಮಾಜದ ಈ ವಿಷಮತೆಯನ್ನು ತೊಡೆದು ಸರ್ವಸಮಾನತೆಯನ್ನು ಸಾಧಿಸುವ ಹಂಬಲ ಅವರದಾಯಿತು. ಉಚ್ಚ ಕುಲದವರು ಕೆಳ ವರ್ಗದವರನ್ನು ಶೋಷಣೆ ಮಾಡುತ್ತಿದ್ದರು. ಕೆಲವರಿಗೆ ಅಸ್ತಿತ್ವವೇ ಇರಲಿಲ್ಲ. ಅವರು ದನಿ ಇಲ್ಲದ ಮೂಕರಾಗಿ, ಜೀವವಿಲ್ಲದ ಶವವಾಗಿ ಬದುಕು ಸಾಗಿಸಿದ್ದರು. ಅಸ್ಪೃಶ್ಯತೆಯಂತೂ ಭಯಾನಕವಾಗಿತ್ತು. ಈ ಇಡೀ ಸಮುದಾಯಕ್ಕೆ ಬಸವಾದಿ ಶರಣರು ದನಿ ಕೊಟ್ಟರು. ಎದೆ ಕೊಟ್ಟರು. ಅಭಿಮಾನ ನೀಡಿದರು. ಅವರ ಕೀಳರಿಮೆಯನ್ನು ನೀಗಿ ಆತ್ಮ ಗೌರವವನ್ನು ಜಾಗೃತಗೊಳಿಸಿದರು. ಬಸವಾದಿ ಶರಣರ ಸಂಪರ್ಕದಿಂದ ಅವರು ಪರುಷ ಸೋಂಕಿದ ಲೋಹದಂತೆ ಬಂಗಾರವಾದರು. ಹಿಂದೆ ಕವಡೆ ಕಾಸಿನ ಕಿಮ್ಮತ್ತಿಲ್ಲದೆ ನೆಲಹತ್ತಿದ್ದ ದಲಿತರನ್ನು ಮೇಲೆತ್ತಿ ಗೌರವಯುತ ಬದುಕನ್ನು ನಡೆಸುವಂತೆ ಮಾಡಿದ್ದು ಅವರ ಬಹುದೊಡ್ಡ ಮಾನವೀಯ ಕಾರ್ಯ. ಅಂದಿನ ಸಮಾಜ ಸ್ತ್ರೀಯನ್ನು ಮಾಯೆ ಎಂದು ದೂರವಿಟ್ಟಿತ್ತು. ಆ ದೊಡ್ಡ ಸಮುದಾಯವನ್ನೇ ಅವಕಾಶ ವಂಚಿತರನ್ನಾಗಿ ಮಾಡಿ ಶೂದ್ರ ಸ್ಥಾನದಲ್ಲಿಡಿಸಲಾಗಿತ್ತು. ಹೀಗೆ ನೆಲದ ಮರೆಯ ನಿಧಾನದಂತಿದ್ದ ಮಾನವ ಶಕ್ತಿ ಸದುಪಯೋಗವಾಗದೆ ಹೋಗಿತ್ತು.
ಶರಣರು ಜನತೆಯ ಮುಂದಿರಿಸಿದ ತತ್ವಗಳು ಬದುಕಿನಿಂದ ದೂರವಾದುವಲ್ಲ. ಅವು ನಿತ್ಯ ಜೀವನಕ್ಕೆ ನೇರವಾಗಿ ಸಂಬಂಧಿಸಿದವು ಮತ್ತು ಆಚರಣೆ ಸಾಧ್ಯವೂ, ಅನುಸರಣ ಯೋಗ್ಯವೂ, ಆಗಿದ್ದವು. ಇನ್ನೊಂದು ಮಹತ್ವದ ಸಂಗತಿ ಎಂದರೆ ಸಾಧನೆಯಿಂದ ಸಾಮಾನ್ಯ ಮನುಷ್ಯನೂ ದೈವತ್ವಕ್ಕೆ ಏರಬಲ್ಲ ಎಂಬುದನ್ನು ಶರಣರು ಸಾಧ್ಯ ಮಾಡಿ ತೋರಿದ್ದರಿಂದ ಎಲ್ಲರೂ ಆಕರ್ಷಿತರಾದರು. ನಿಜವಾಗಿ ನೋಡಿದರೆ ಮನುಷ್ಯನ ಬಾಳನ್ನು ಸುಂದರಗೊಳಿಸಲು ಬಸವಾದಿ ಶರಣರು ಹಾಕಿಕೊಟ್ಟ ತತ್ವಗಳು ಜೀವನ ವಿಧಾನ ಇಂದಿಗೂ ಎಂದೆಂದಿಗೂ ನವನೀನವಾಗಿವೆ. ಅವರು ತಿದ್ದ ಹೊರಟದ್ದು ತನ್ನ ಸುತ್ತಲಿನವರ ಜೀವನ ರೀತಿಯನ್ನು ಮಾತ್ರವಲ್ಲ,ಇಡೀ ಮಾನವ ಕೋಟಿಯ ಹಣೆಬರಹವನ್ನು. ದುರ್ದೈವ, ಅದು ನೆರವೇರುವ ಮುನ್ನವೇ ಕ್ರಾಂತಿಯಾಯಿತು. ಆ ತತ್ವಗಳು ಅನುಷ್ಠಾನಕ್ಕೆ ಬಂದಿದ್ದರೆ ಭಾರತದ ಇತಿಹಾಸವೇ ಬೇರೆಯಾಗಿರುತ್ತಿತ್ತು.
ಅಂದು ಚಾಲುಕ್ಯರ ರಾಜಧಾನಿ ಕಲ್ಯಾಣ ಪಟ್ಟಣವು ಜಗತ್ತಿನ ಶ್ರೇಷ್ಠ ನಗರಿಗಳಲ್ಲಿ ಒಂದಾಗಿತ್ತು. ಕರ್ನಾಟಕ ಮತ್ತು ಉತ್ತರ ಭಾರತದ ಸಂಬಂಧಗಳು ನಿಕಟವಾಗಿದ್ದವು. ಇಂದಿನಂತೆ ಪ್ರಚಾರ ಮಾಧ್ಯಮಗಳು ಸಂಪರ್ಕ ಸಾಧನೆಗಳು ಇಲ್ಲದ ಆ ಕಾಲದಲ್ಲೂ ಶರಣರ ಆಂದೋಲನದ ಕೀರ್ತಿವಾರ್ತೆ ಇಡೀ ಭರತ ಖಂಡದ ಮೂಲೆ ಮೂಲೆಗೂ ಮುಟ್ಟಿತ್ತು. ಅಷ್ಟೇ ಅಲ್ಲ, ದೇಶದ ಹೊರಗೂ ಸಾಗಿತು. ಕಲ್ಯಾಣದ ಜನ ಧಾವಿಸಿ ಬಂದರು. ಆ ಕಾಲದ ಸವಾಲಕ್ಷ, ಕಾಂಬೋಜ, ಕುಂತಳ, ಕಳಿಂಗ, ಗುರ್ಜ್ಜರ ಗೊಲ್ಲ, ಲಾಳ, ಬರ್ಬರ ಮೊದಲಾದ ರಾಜ್ಯಗಳಿಂದ ಬಂದರು. ಹಾಗೆ ಬಂದವರಲ್ಲಿ ರಾಜ ಮಹಾರಾಜರು ಮಂತ್ರಿ ಮಹೋದಯರು, ಅಧಿಕಾರಿಗಳು, ಸಿರಿವಂತರು, ಪ್ರತಿಷ್ಠಿತರು, ವಿದ್ವಾಂಸರು, ನಾನಾ ವೃತ್ತಿಯವರು, ಕಲಾವಿದರು, ಕೆಲವರ್ಗದವರು ಮೇಲ್ವರ್ಗದವರು ಇದ್ದರು. ಸವಾಲಕ್ಷದಿಂದ ಮಹದೇವ ಭೂಪಾಲ ಮತ್ತು ರಾಣಿ ಮಹಾದೇವಿ ಸೌರಾಷ್ಟ್ರದಿಂದ ಆದಯ್ಯ , ಸೊಡ್ಡಳ ಬಾಚರಸ, ಬರ್ಬರದಿಂದ ಮರುಳ ಶಂಕರ ದೇವ, ಗುರ್ಜ್ಜರದಿಂದ ಸುರಗಿ ಚೌಡಯ್ಯ, ಮಾಳವದಿಂದ ಡೋಹರ ಕಕ್ಕಯ್ಯ, ಕುಂತಳದಿಂದ ಏಕಾಂತರಾಮಯ್ಯ, ಆಂಧ್ರದಿಂದ ಮೈದುನ ರಾಮಯ್ಯ , ಕಳಿಂಗದಿಂದ ಮಹಾದೇವ ಶೆಟ್ಟಿ, ಕಲ್ಲು ಕುರಿಕೆಯ ರಾಜ್ಯ ಸಲೇಶಮಾದರಸ, ಐಹೊಳೆಯ ರಾಜಮಲ್ಲರಸ, ಕೆಂಭಾವಿಯ ರಾಜ ಚಂದಿಮರಸ ಮೊದಲಾದವರು ಕರ್ನಾಟಕದ ಕಲ್ಯಾಣಕ್ಕೆ ಬಂದರು.

ಹಾಗೆ ಬಂದ ಸಾವಿರಾರು ಮಂದಿ ಶರಣ ಸಂಸ್ಕೃತಿಗೆ ಒಗ್ಗಿಕೊಂಡರು. ಕಾಯಕ ನಿಷ್ಠರಾದರು. ದಾಸೋಹoಭಾವಿಗಳಾದರು. ಅವರೆಲ್ಲ ಒತ್ತಟ್ಟಿಗೆ ಕೂಡಿ ಸರ್ವೋದಯ ಕಾರ್ಯ ಕೈಗೊಂಡದ್ದು ಜಾಗತಿಕ ಇತಿಹಾಸದಲ್ಲಿ ಅಪರೂಪದ ಘಟನೆ. ಇಷ್ಟೊಂದು ಜನ ಸ್ತ್ರೀಯರು ಪುರುಷರು ಸಮಾಜದ ಎಲ್ಲಾ ಸ್ಥಳದ ಜನ ತಾರತಮ್ಯ ಭೇದವಿಲ್ಲದೆ ಕಲಿತು ಮುಕ್ತವಾಗಿ ಚರ್ಚೆ ಮಾಡಿ ಓರೆ ಕೋರೆಗಳನ್ನು ತಿದ್ದಿಕೊಂಡು ಸಮಾಜದ ಸಮಗ್ರ ಕ್ರಾಂತಿಗೆ ಕಾರಣರಾದರು. ಇವರೆಲ್ಲ ಮಾನವ ಪ್ರೇಮಿಗಳು. ಮನುಕುಲದ ಕಲ್ಯಾಣಕ್ಕೆ ಎಲ್ಲವನ್ನೂ ತೊರೆದು ಕರ್ನಾಟಕಕ್ಕೆ ಬಂದರು. ಎಲ್ಲರೊಳಗೊಂದಾದರು. ಅವರು ಕನ್ನಡ ಭಾಷೆ ಕಲಿತು ಕಾವ್ಯ ರಚನೆ ಮಾಡುವಷ್ಟು ಪ್ರಭುದ್ಧರಾದುದು ಕನ್ನಡದ ಪುಣ್ಯ ಬಸವಣ್ಣನಂತಹ ಅಸಾಧಾರಣ ಯುಗಪುರುಷನ ಅದ್ಭುತ ಯೋಜನೆಗಳು ಸಮಾನಮನಸ್ಕರಾದ ಇಂತಹ ಅನೇಕ ಶರಣ- ಶರಣೆಯರ ಸಹಭಾಗಿತ್ವದಿಂದ ನವ ಸಮಾಜ ನಿರ್ಮಾಣಕ್ಕೆ ಕಾರಣವಾದದನ್ನು ಇತಿಹಾಸ ದಾಖಲಿಸಿದೆ.
ಬಸವೇಶ್ವರರ ಧಾರ್ಮಿಕ ಸುಧಾರಣೆಗಳನ್ನು ಸಾರ್ಥಕ ಗೊಳಿಸುವ ಕಾರ್ಯದಲ್ಲಿ ಸ್ತ್ರೀಯರೂ ಸಹಾಯಕರಾಗಿ ನಿಂತರು. ಇವರಲ್ಲಿ ಮುಖ್ಯರಾದವರೆಂದರೆ..
“ಎನ್ನ ದೇವ ಚನ್ನಮಲ್ಲಿಕಾರ್ಜುನನಲ್ಲದೆ ಅನ್ಯಕ್ಕೆಳಸುವುದೇ ಎನ್ನ ಮನ ಕೆಳದಿಯರಿರಾ?” ಎಂದು ನುಡಿದು ಚೆನ್ನ ಮಲ್ಲಿಕಾರ್ಜುನನನ್ನೇ ವರನನ್ನಾಗಿ ಆರಿಸಿದ ಅಕ್ಕಮಹಾದೇವಿ. ಬಸವೇಶ್ವರರ ಪತ್ನಿಯರಾದ ಗಂಗಾಂಬಿಕೆ, ನೀಲಾಂಬಿಕೆಯರು ಅವರ ಕಾರ್ಯಗಳಿಗೆ ಸ್ಪೂರ್ತಿಯನ್ನು ಕೊಟ್ಟರು. ಶಿವಶರಣೆ ಅಕ್ಕನಾಗಮನವರು ಬಸವೇಶ್ವರರ ಅಕ್ಕ. ಈಕೆಗೆ ಶಿವಯೋಗ ಸಾಧನೆ ಮುಖ್ಯ ಗುರಿಯಾಗಿತ್ತು. ಮತ್ತೊಬ್ಬ ಶಿವಶರಣೆ ಆದ ಮುಕ್ತಾಯಕ್ಕನ ಆಧ್ಯಾತ್ಮ ನಿಷ್ಠೆಯು ಸದ್ಭಕ್ತಿಯ ಚರಿತ್ರೆಯಲ್ಲಿ ಮುಖ್ಯಸ್ಥಳವನ್ನು ಗಳಿಸಿದೆ.
ಕರ್ನಾಟಕದವರಷ್ಟೇ ಸೇವೆಯನ್ನು ಲಿಂಗಾಯತ ಧರ್ಮಕ್ಕೆ ಮಾಡಿದವರು ಅನ್ಯ ದೇಶದವರು ಹಲವರಿದ್ದರು. ಇಂಥವರಲ್ಲಿ ಒಬ್ಬರಾದವರು ಆಂಧ್ರಪ್ರದೇಶದ ಮಲ್ಲಿಕಾರ್ಜುನ ಪಂಡಿತಾರಾಧ್ಯರು. ಪಂಡಿತತ್ರಯರಲ್ಲಿ ಒಬ್ಬರೆಂದು ಪರಿಗಣಿತರಾದ ಇವರು ವೆಲನಾಡು ಚೋಳನ ಆಸ್ಥಾನಕ್ಕೆ ತೆರಳಿ, ಅಲ್ಲಿ ಅನ್ಯ ಮತ ವಿದ್ವಾಂಸರನ್ನು ಪರಾಜಯಗೊಳಿಸಿ ಲಿಂಗಾಯತ ಆಚಾರವನ್ನು ಸ್ಥಾಪಿಸಿದರು. ಮತ್ತೊಬ್ಬರು ಮೋಳಿಗೆಯ ಮಾರಿ ತಂದೆ ಎಂಬುದಾಗಿ ಬಸವಣ್ಣನವರಿಂದಲೇ ಗೌರವಿಸಲ್ಪಟ್ಟ ಕಾಶ್ಮೀರದ ಮಾಂಡವ್ಯಪುರದ ರಾಜರಾದ ಮೋಳಿಗೆ ಮಾರಯ್ಯನವರು. ಈತ ಶರಣ ಜನರ ಸಹವಾಸಕ್ಕಾಗಿ ರಾಜ್ಯವನ್ನೇ ತ್ಯಾಗ ಮಾಡಿದನೆಂಬುದು ಸರ್ವವಿದಿತ. ಇಷ್ಟೆoದ ಮೇಲೆ ಬಸವೇಶ್ವರರ ವ್ಯಕ್ತಿತ್ವ ಮತ್ತು ಜೀವನವು ಮತ್ತು ಮೇಲೆ ನಿರೂಪಿಸಿರುವ ಶಿವಶರಣರ ವ್ಯಕ್ತಿತ್ವ ಮತ್ತು ಜೀವನವು ಹಾಸು ಹೊಕ್ಕಾಗಿ ನಿಂತಿವೆ.
ಮಹಾನುಭಾವ ಬಸವಣ್ಣನವರು ಈಗಿನ ಪಾರ್ಲಿಮೆಂಟಿನಂತಿದ್ದ ಅನುಭವ ಮಂಟಪ ಸ್ಥಾಪಿಸಿ ಅದರ ಮೂಲಕ ಹರಿಸಿದ ವಿಚಾರಧಾರೆಗಳು ಬಹಳ ಬಹಳ ಪ್ರಗತಿಪರವಾಗಿದ್ದವು. ಅವು ಎಷ್ಟು ದ್ರುತಗತಿಯಲ್ಲಿ ಇದ್ದವೆಂದರೆ 800 ವರ್ಷ ಮುಂದಿದ್ದವು. ಇಂದು 20ನೇ ಶತಮಾನದಲ್ಲಿಯೂ ಕಾರ್ಯರೂಪಕ್ಕೆ ತರಲು ದುಸ್ಸಾಧ್ಯವಾದ ಆಚಾರ ವಿಚಾರಗಳನ್ನು ಅವರು ತಮ್ಮ ಹನ್ನೆರಡನೆಯ ಶತಮಾನದಲ್ಲಿ ಕಾರ್ಯಾನ್ವಯಗೊಳಿಸಿದರು.
ಬಸವಣ್ಣನವರ ವಚನಗಳು ಕುಸುಮದ ಕುಡಿಗಳು. ವೈಚಾರಿಕ ವಜ್ರದ ಕಿಡಿಗಳು. ಅವರ ವಚನ ರಚನೆಯ ಪ್ರಭಾವ ಎಷ್ಟೊಂದು ಆಯಿತೆಂದರೆ 770 ಅಮರ ಗಣಗಳು. ಅದರಲ್ಲಿ 70 ಜನ ಮಹಿಳೆಯರು ವಚನಗಳನ್ನು ಬರೆದವರು. ಈ ವಚನ ಸಾಹಿತ್ಯದ ಮಹಾಪೂರದ ನಂತರ ಕನ್ನಡ ಸಾಹಿತ್ಯದ ದಿಕ್ಕೇ ಬದಲಾಯಿತು. ಕನ್ನಡ ಭಾಷೆಯ ಸ್ವರೂಪ ಬೇರೆಯೇ ಆಯಿತು. ತಮ್ಮ ವ್ಯಕ್ತಿತ್ವದ ಪಡಿಯಚ್ಚನ್ನು ಭಾರತೀಯ ಇತಿಹಾಸದಲ್ಲಿ ಮೂಡಿಸಿ ಅವರು ಕೂಡಲಸಂಗಮನಲ್ಲಿ ಒಂದಾದರು.
