ಚಿಂತನೆ
– ಶರಣಮ್ಮ ಗೊರೆಬಾಳ
ಪ್ರಾಚಾರ್ಯರು
ವಿದ್ಯಾರಣ್ಯ ಪಪೂ ಮಹಾವಿದ್ಯಾಲಯ
ಧಾರವಾಡ
ಉದಯರಶ್ಮಿ ದಿನಪತ್ರಿಕೆ
ಬಸವಯುಗದ ಶ್ರೇಷ್ಠ ಶಿವಶರಣ, ಕಾಯಕಯೋಗಿ, ಕಟುವಾದರೂ ದಿಟವನ್ನೇ ನುಡಿಯುವ ಕೆಚ್ಚೆದೆಯ ವಚನಕಾರ ಅಂಬಿಗರ ಚೌಡಯ್ಯ.
ಕಾಲ: 12ನೇ ಶತಮಾನ
ಊರು: ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚೌಡದಾನಪುರ
ವೃತ್ತಿ: ದೋಣಿ ನಡೆಸುವುದು
ದೊರಕಿದ ವಚನಗಳು: 278
ವಿಶೇಷತೆ: ತನ್ನ ಹೆಸರನ್ನೇ ಅಂಕಿತನಾಮವನ್ನಾಗಿ ಇಟ್ಟುಕೊಂಡು ವಚನ ರಚಿಸಿದ್ದು,
ಆಳವಾದ ಅನುಭವ, ಕಾಯಕನಿಷ್ಠೆಯನ್ನು ಹೊಂದಿದ ಚೌಡಯ್ಯನವರ ವಚನಗಳಲ್ಲಿ ಸಾಮಾಜಿಕ ಪ್ರಜ್ಞೆ ಎದ್ದು ಕಾಣುತ್ತದೆ. ತನ್ನ ವಚನಗಳ ಮೂಲಕ ಸಮಾಜದ ಓರೆ ಕೋರೆಗಳನ್ನು ತಿದ್ದಿದವನು, ಮನುಷ್ಯ ದೇವರನ್ನು ಹುಡುಕಿಕೊಂಡು ಎಲ್ಲಿಗೂ ಹೋಗಬೇಕಿಲ್ಲ ತನ್ನಲ್ಲಿಯೇ ದೇವರನ್ನು ಕಂಡುಕೊಳ್ಳಬಹುದು ಎಂಬ ವಿಶಿಷ್ಟ ತತ್ವವನ್ನು ಸಾರಿದವನು. ತನ್ನ ಅರಿವೇ ತನಗೆ ಗುರು ಎಂಬ ಅಂಶ ಅವರ ಸಾಕಷ್ಟು ವಚನಗಳಲ್ಲಿ ಕಂಡು ಬರುತ್ತದೆ, ಅಂಬಿಗರ ಚೌಡಯ್ಯ ದೋಣಿಯನ್ನು ನಡೆಸುವ ಕಾಯಕವನ್ನು ನಿಷ್ಠೆಯಿಂದ ಮಾಡುತ್ತಿದ್ದನು, ದೋಣಿಯಲ್ಲಿ ಜನರನ್ನು ಕೂರಿಸಿಕೊಂಡು ನದಿ ದಾಟಿಸುವ ಕಾಯಕ ಮಾಡುತ್ತಿದ್ದನು, ಮಾನವ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳುವ ಮಾರ್ಗಗಳನ್ನು ತೋರಿಸುವ ಅಂಬಿಗ ಆಗಿದ್ದನು, ಚೌಡಯ್ಯನವರಿಗೆ ತಮ್ಮ ವೃತ್ತಿಯಿಂದ ಹಣ ಮಾಡುವ ಆಸೆ ಇರಲಿಲ್ಲ , ಆದರೆ ಜನರಿಗೆ ಅದರಿಂದ ಉಪಯೋಗವಾದರೆ ಸಾಕು ಎಂಬ ನಿಷ್ಠೆ ಅವರಲ್ಲಿತ್ತು. ದೋಣಿ ನಡೆಸುವವನೇ ಎಂದು ಜನ ಹೀನಾಯವಾಗಿ ಕಾಣುವುದು ಅವನಿಗೆ ಬೇಸರ ತರುತ್ತಿತ್ತು, ವೃತ್ತಿ ಯಾವುದಾದರೂ ಏನು ಅದನ್ನು ನಿಷ್ಠೆಯಿಂದ ಮಾಡುವುದು ಮುಖ್ಯ, ಕಾಯಕವೇ ಕೈಲಾಸ ಎಂದು ನಂಬಿದ ಚೌಡಯ್ಯ,
ವಚನ ಓದು
“ಅಂಬಿಗ ಅಂಬಿಗ ಎಂದು ಕುಂದನುಡಿಯದಿರು
ನಂಬಿದರೆ ಒಂದೇ ಹುಟ್ಟಲಿ
ಕಡೆಯ ಹಾಯಿಸುವ ನಂಬಿಗರ ಚೌಡಯ್ಯ”
ವಚನ ವಿಶ್ಲೇಷಣೆ
ಈ ವಚನದಲ್ಲಿ ತನ್ನ ವೃತ್ತಿಯ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ.
ಅರಿವೇ ಗುರು , ಮೊದಲು ತನ್ನನ್ನು ತಾನು ಅರಿಯಬೇಕು ಎಂಬುದರ ಕುರಿತು ಹಲವಾರು ವಚನಗಳನ್ನು ರಚಿಸಿದ್ದಾರೆ ಅದರಲ್ಲಿ ಮುಖ್ಯವಾದ ಒಂದು ವಚನ
ವಚನ ಓದು
“ಅರಿವಿನ ಪಥವನರಿಯದಿರ್ದಡೆ
ಮುಂದೆ ಹೆರರಿಗೆ ದೀಕ್ಷೆ ಮಾಡಲೇಕೆ?
ತೊರೆಯಲದ್ದವನ ಸೀಲರಿಯದವ
ತೆಗೆಯ ಹೋದಂತಾಯಿತ್ತೆಂದ
ಅಂಬಿಗರ ಚೌಡಯ್ಯ”
ವಚನ ವಿಶ್ಲೇಷಣೆ
ನಾವು ಯಾರಿಗಾದರೂ ಒಳ್ಳೆಯ ದಾರಿ ತೋರಿಸಬೇಕಾದರೆ, ಅರಿವಿನ ಮಾರ್ಗ ತಿಳಿಸ ಬೇಕಾದರೆ ಮೊದಲು ನಾವು ಅರಿವಿನ ದಾರಿ ತಿಳಿದಿರಬೇಕು, ನಮಗೆ ಸರಿಯಾದ ತಿಳುವಳಿಕೆ ಇಲ್ಲದಿದ್ದರೆ ಬೇರೆಯವರಿಗೆ ಹೇಳಲು ಸಾಧ್ಯವಿಲ್ಲ, ಅರಿವು ಎಂದರೆ ತಿಳುವಳಿಕೆ, ಜ್ಞಾನ ತನ್ನನ್ನು ತಾನು ಅರಿತುಕೊಳ್ಳುವುದು, ಯಾವುದೇ ಜ್ಞಾನವಾಗಲಿ ತಿಳುವಳಿಕೆಯನ್ನಾಗಿ ಇನ್ನೊಬ್ಬರಿಗೆ ಹೇಳಬೇಕಾದರೆ ಅದು ಮೊದಲು ನಮಗೆ ತಿಳಿದಿರಬೇಕು, ಅರಿವಿನ ಮಾರ್ಗ ಎಂದರೆ ಬದುಕಿನ ದಾರಿ , ಆಧ್ಯಾತ್ಮಿಕ ಶಿಖರವನ್ನು ಏರುವ ಭಕ್ತಿ ಮಾರ್ಗ, ನುಡಿದಂತೆ ನಡೆಯುವ, ನಡೆದಂತೆ ನುಡಿಯುವ, ಬದುಕಿನ ಮಾರ್ಗ, ಅರಿಷದ್ವರ್ಗಗಳನ್ನು ಮೆಟ್ಟಿ ನಿಲ್ಲುವ ಗೆಲುವಿನ ಮಾರ್ಗ, ಹೀಗೆ ಒಳ್ಳೆಯ ಮಾರ್ಗದಲ್ಲಿ ನಾವು ನಡೆಯಬೇಕಾದರೆ, ನಮ್ಮ ಜೀವನದಲ್ಲಿ ಮೊದಲು ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು, ಆದರ್ಶ ಬದುಕನ್ನು ನಿರ್ಮಾಣ ಮಾಡಿಕೊಳ್ಳಬೇಕು. ಇನ್ನೊಬ್ಬರಿಗೆ ಹೇಳುವ ನೈತಿಕತೆಯನ್ನು ನಾವು ಹೊಂದಿರಬೇಕು, ಸುಸಜ್ಜಿತ, ಸುವ್ಯವಸ್ಥಿತ , ಸುರಕ್ಷಿತ ಮಾರ್ಗವನ್ನು ನಾವು ನಿರ್ಮಾಣ ಮಾಡಿಕೊಳ್ಳಬೇಕು ಅಂದಾಗ ಮಾತ್ರ ನಾವು ಆ ದಾರಿಯಲ್ಲಿ ನಡೆಯಬಹುದು, ಇತರರನ್ನು ಕರೆದುಕೊಂಡು ಹೋಗಬಹುದು, ಆದರೆ ನಮಗೆ ಅರಿವಿನ ಪಥ ಗೊತ್ತಿರದಿದ್ದರೆ ಇನ್ನೊಬ್ಬರಿಗೆ ತೋರಿಸಲು ಹೇಗೆ ಸಾಧ್ಯ , ಆದ್ದರಿಂದ ಅರಿವಿನ ಪಥವನ್ನು ಅರಿಯದಿದ್ದರೆ ಹೆರವರಿಗೆ ದೀಕ್ಷೆ ಮಾಡಬೇಕೇ ಎಂಬ ಪ್ರಶ್ನೆ ಅಂಬಿಗರ ಚೌಡಯ್ಯನವರದು.