ಲೇಖನ
– ಶೈಲಜಾ ಆಲಗೂರ
ಉಪನ್ಯಾಸಕರು
ಶಿವಣಗಿ
ವಿಜಯಪುರ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
“ಜ್ಞಾನದ ಬಲದಿಂದ ಅಜ್ಞಾನದ ಕೇಡು
ಜ್ಯೋತಿಯ ಬಲದಿಂದ ತಮಂಧದ ಕೇಡು
ಸತ್ಯದ ಬಲದಿಂದ ಅಸತ್ಯದ ಕೇಡು
ಪರುಷದ ಬಲದಿಂದ ಅವಲೋಹದ ಕೇಡು
ಕೂಡಲಸಂಗನ ಶರಣುಭಾವದಿಂದ
ಎನ್ನ ಭವದ ಕೇಡು ನೋಡಯ್ಯ “
ಜಗತ್ತು ಅಂಧಕಾರದಲ್ಲಿ ಮುಳುಗಿದ್ದಾಗ ಸಮಾಜವನ್ನು ಮುನ್ನಡೆಸಲು, ಬೆಳಕಿನೆಡೆಗೆ ತೆಗೆದುಕೊಂಡು ಹೋಗಲು ಮಹಾಪುರುಷರು ಹುಟ್ಟುತ್ತಾರೆಂಬುದಕ್ಕೆ ಬುದ್ಧನಿಂದ ಬಸವ ಮತ್ತು ಅಂಬೇಡ್ಕರ್ ಇವರು ಜನ್ಮ ತಾಳಿದ್ದು ಇದಕ್ಕೆ ನಿದರ್ಶನ. ಹನ್ನೆರಡನೇ ಶತಮಾನದ ಮಧ್ಯಭಾಗದಲ್ಲಿ ಇಡೀ ದೇಶ ಅಸಮಾನತೆ,ಅಂಧಶ್ರದ್ಧೆಯಲ್ಲಿ ಮುಳುಗಿ ಹೋಗಿತ್ತು ಅಂತಹ ಕಾಲಘಟ್ಟದಲ್ಲಿ ಶ್ರೀಸಾಮಾನ್ಯರ ಪರವಾಗಿ ಧ್ವನಿ ಎತ್ತಿ ಜಾತೀಯತೆ, ಅಸ್ಪೃಶ್ಯತೆ, ಸಾಮಾಜಿಕ ಅಸಮಾನತೆಯ ವಿರುದ್ಧ ಸಿಡಿದೆದ್ದ ಬಸವಣ್ಣನವರು ಕಾಲ ಕಾಲದಿಂದ ನಡೆದು ಬಂದ ತೊಡರುಗಳಿಗೆ ಅಂಜದೆ, ಅಳುಕದೆ ಬಂಡಾಯವೆದ್ದರು. ಪುರೋಹಿತಶಾಹಿಯನ್ನು ಧಿಕ್ಕರಿಸಿ ಕಂದಾಚಾರದ ವಿರುದ್ಧ ತಿರುಗಿಬಿದ್ದರು. ಸಮಾಜದ ಎಲ್ಲ ಜನರ ಒಳಿತಿಗಾಗಿ ಹೋರಾಟ ಶುರು ಮಾಡಿದರು. ಬಸವಣ್ಣನವರು ಇಂದಿಗೂ ನಮ್ಮೊಡನೆ ಜೀವಂತವಾಗಿರುವುದು ಅವರಲ್ಲಿದ್ದ ವೈಚಾರಿಕ ಅಂಶಗಳಿಂದ. ಇವರು ಜಾತಿ, ಮತ, ಉದ್ಯೋಗ, ವಯಸ್ಸು ಯಾವುದೂ ಅಡ್ಡಿಯಾಗದಂತಹ ನೈತಿಕ ಜೀವನವನ್ನು ಸಾಮಾಜಿಕ ಸಮತೆಯನ್ನು ಸಾಧಿಸುವ ಮಾರ್ಗ ತೋರಿಸಿದರು. ಅದಕ್ಕೆ ಅವರು ಬಳಸಿದ ಪ್ರಮುಖ ಅಸ್ತ್ರವೆಂದರೆ ವಚನಗಳು.
“ಇವನಾರವ ಇವನಾರವ,
ಇವನಾರವನೆಂದೆನಿಸದಿರಯ್ಯ
ಇವ ನಮ್ಮವ ಇವ ನಮ್ಮವ
ಇವ ನಮ್ಮವನೆಂದೆನಿಸಯ್ಯ “
ಎಂಬ ಇವರ ವಚನದಂತೆ ಅರ್ಥಪೂರ್ಣ ನಡೆಗೆ ಇವರು ಸಮಾಜವನ್ನು ಕೊಂಡೊಯ್ಯಲು ಶ್ರಮಿಸಿದರು. ವಿವಿಧ ವರ್ಗ, ಜಾತಿ, ಪಂಗಡ, ಧರ್ಮಗಳಿಂದಲ್ಲದೆ, ಅರಮನೆ, ಗುರುಮನೆ, ಹಿರಿಮನೆ, ಕಿರಿಮನೆ, ಗುಡಿಸಲು ಮುಂತಾದವುಗಳಿಂದ ಬಂದ ಶರಣರ ನೇತೃತ್ವ ವಹಿಸಿದ ಅಣ್ಣ ಬಸವಣ್ಣ. ಅನುಭಾವಿ, ಸಮಾಜ ಸುಧಾರಕ, ಧಾರ್ಮಿಕ ಮುಖಂಡ, ಕ್ರಾಂತಿಕಾರ, ಕಾಯಕನಿಷ್ಠ ಮತ್ತು ಕವಿ. ಹನ್ನೆರಡನೇ ಶತಮಾನವನ್ನು ಭಾರತಖಂಡದ ಧಾರ್ಮಿಕ ಪರಂಪರೆಯಲ್ಲಿ ಒಂದು ಚಿರಸ್ಮರಣಿಯ ಘಟ್ಟವನ್ನಾಗಿಸಿದ ಮಹಾವ್ಯಕ್ತಿ. ಒಂದು ಯುಗವನ್ನೇ ಎಚ್ಚರಿಸಿ ಬಸವಣ್ಣ ಯುಗ ಪ್ರವರ್ತಕ ಶಕ್ತಿಯಾಗಿ ಪರಿಣಮಿಸಿದರು. ಅವರ ಸಾಮಾಜಿಕ, ಧಾರ್ಮಿಕ ವಿಚಾರಧಾರೆಗಳು ಕಾಲ, ದೇಶಗಳ ಹಂಗು ಹರಿದು ಸರ್ವಸಾಮಾನ್ಯವಾಗಿ ನಿಲ್ಲಬಲ್ಲ ಅಸಾಧಾರಣ ಜೀವಂತಿಕೆಯನ್ನು ಪಡೆದಿವೆ. ಅದಕ್ಕೆ ಕಾರಣೀಭೂತರಾದವರು ಬಸವಣ್ಣ. ಬಸವಣ್ಣನವರು ಮತ್ತು ಇತರೆ ಶರಣರು ತಾವು ಕಂಡಿದ್ದನ್ನು, ಕೇಳಿದ್ದನ್ನು, ಒಪ್ಪಿದ್ದನ್ನು, ಒಪ್ಪದಿರುವುದನ್ನೆಲ್ಲ ವಚನಗಳ ಮೂಲಕ ವೈಜ್ಞಾನಿಕವಾಗಿ ಅಭಿವ್ಯಕ್ತಿಸಿದ್ದಾರೆ. ಬಸವಣ್ಣನವರು ಸಾತ್ವಿಕ ಜೀವನವನ್ನು ನಡೆಸಿ, ಲಿಂಗದ ನುಡಿಗಳನ್ನು ಆಡಿ, ಸಮಾನತೆ ಬೀಜ ಬಿತ್ತುತ್ತ ಶಿವ ವಿಚಾರಗಳನ್ನು ಜನತೆ ಮುಂದಿಟ್ಟರು. ಪರಿಪೂರ್ಣತೆಯತ್ತ ಸಾಗುವುದು ಬಾಳಿನ ಪರಮಗುರಿ ಎಂಬುದನ್ನು ವಚನಗಳ ಮೂಲಕ ಸಾರಿದರು. ಕನ್ನಡ ಭಾಷೆ ಬಸವಣ್ಣನವರ ವಚನಗಳಿಂದ ಅಪೂರ್ವವಾದ ಒಂದು ಶಕ್ತಿಯನ್ನು, ಶ್ರೀಮಂತಿಕೆಯನ್ನು ಪಡೆಯಿತು. ಬಸವಣ್ಣನವರ ಬೋಧನೆ ಅವರ ನೂರಾರು ವಚನಗಳಲ್ಲಿ ವ್ಯಕ್ತವಾಗಿವೆ. ಸಾಮಾನ್ಯರಿಗೂ ನಿಲುಕುವ ವಚನ ಸಾಹಿತ್ಯ ಆ ಕಾಲದಲ್ಲಿ ತುಂಬಿ ಹರಿಯಿತು. ಇವರು ತುಳಿತಕ್ಕೊಳಪಟ್ಟು ಜನರನ್ನು ಮಾತ್ರ ಮೇಲೆತ್ತಲಿಲ್ಲ.ಕನ್ನಡ ಭಾಷೆಯನ್ನು ಉದ್ಧರಿಸಿದರು. ಒಂದು ಭಾಷೆಗೆ ಏನೆಲ್ಲ ಸಾಧ್ಯಗಳಿರಬಹು ಎಂಬುದನ್ನು ತೋರಿಸಿದರು. ಕವಿ ಮನೋಭಾವದಿಂದ ಕೂಡಿದ ಅಣ್ಣನ ವಚನಗಳು ಉಪಮೆ, ರೂಪಕ, ಅಲಂಕಾರಗಳಿಂದ ಕೂಡಿ ಕಾವ್ಯ ಸೌಂದರ್ಯದಿಂದ ಕಂಗೊಳಿಸುತ್ತವೆ. ಜನಸಾಮಾನ್ಯರ ಕೋಶದಿಂದಲೇ ಹೆಕ್ಕಿ ತೆಗೆದ ಉಪಮೆ, ದೃಷ್ಟಾಂತಗಳನ್ನು ಮೇಲಿಂದ ಮೇಲೆ ತಂದು ಓದುಗರ ಮನದಲ್ಲಿ ಭದ್ರವಾಗಿ ನೆಲೆಯೂರಿಸುತ್ತಾರೆ. ಬಸವಣ್ಣನವರ ವಚನಗಳಲ್ಲಿ ವಿಶ್ವಮನ್ನಣೆ ಪಡೆಯಬಲ್ಲ ವಿಚಾರಗಳು, ಭಾವನೆಗಳ ಧಾರೆಯಿದೆ, ತತ್ವದರ್ಶನವಿದೆ,ಅನುಭಾವ ದೃಷ್ಟಿಯಿದೆ.

“ಉಳ್ಳವರು ಶಿವಾಲಯ ಮಾಡುವರಯ್ಯಾ
ನಾನೇನು ಮಾಡಲಿ ಬಡವನಯ್ಯಾ
ಎನ್ನ ಕಾಲೆ ಕಂಬ, ದೇಹವೇ ದೇಗುಲ
ಶಿರವೇ ಹೊನ್ನ ಕಳಸವಯ್ಯಾ…”
ಎನ್ನುವ ವಚನಾಮೃತದಂತೆ ಕಾಯಕಕ್ಕೆ ಹೆಚ್ಚಿನ ಮಹತ್ವ ನೀಡಿದರು. ವ್ಯಕ್ತಿ ಕೈಗೊಂಡ ಉದ್ಯೋಗ ತನ್ನ ಅವಶ್ಯಕತೆಯ ಜೊತೆಗೆ ಸಮಾಜದ ಅವಶ್ಯಕತೆಯನ್ನು ಪೂರೈಸಬೇಕು. ಅದರ ಫಲ ಸಮಾಜಕ್ಕೆ ದೊರೆಯಬೇಕು. ಆಗ ಸ್ವಾರ್ಥ ಅಳಿದು ವಿಶ್ವಭಾತೃತ್ವ ಬರುತ್ತದೆ. ಅಲ್ಲದೇ ಕಾಯಕದಲ್ಲಿ ಮೇಲು ಕೀಳಿಲ್ಲ. ಕಾಯಕವೇ ಕೈಲಾಸ ಎಂಬುದು ಅವರ ಆರ್ಥಿಕ ಸ್ವಾವಲಂಬನೆ ಚಿರಾನೂತನವಾಗಿದೆ. ಬಸವಣ್ಣನವರು ಕೇವಲ ಸಾಧಕ ಜೀವಿ ಮಾತ್ರ ಅಲ್ಲ. ಸಮಾಜ ಸುಧಾರಕರೂ ಹೌದು. ಅವರ ವಚನಗಳಲ್ಲಿ ಸಾಧನಾ ಮಾರ್ಗದ ವಿವರಣೆ ಇದೆ. ಧಾರ್ಮಿಕ ಆಚಾರ ವಿಚಾಗಳ ನಿರೂಪಣೆಯಿದೆ. ನೀತಿಬೋಧನೆ ಹಾಗೂ ಸ್ವವಿಮರ್ಶೆಯೂ ಇದೆ. ತಮ್ಮ ಮನದ ಸಂಕಟಗಳನ್ನು ಮುಚ್ಚುಮರೆಯಿಲ್ಲದೆ ಹೊರಗೆಡಹಿದ್ದಾರೆ. ಸಾಧಕನ ಗುಣಗಳನ್ನು ನಿರೂಪಿಸುತ್ತಾರೆ. ಭಕ್ತಿ ಪ್ರತಿಪಾದನೆಗೆ ಅಹಂಕಾರ ತ್ಯೆಜಿಸಬೇಕು ಎಂಬ ನಿಲುವನ್ನು ಎತ್ತಿ ಹಿಡಿದಿದ್ದಾರೆ. ಈ ವಿಶ್ವಮಾನವನ ವಿಚಾಧಾರೆಗಳು ಇನ್ನೂ ಹೆಚ್ಚಿನ ಮಟ್ಟದಲ್ಲಿ ಪ್ರಸಾರವಾಗಬೇಕಿರುವುದು ಇಂದಿನ ಪೀಳಿಗೆಗೆ ಅತೀ ಅವಶ್ಯಕ ಎನಿಸುವುದು ಸುಳ್ಳಲ್ಲ. ಅವರ ತತ್ವ ಆದರ್ಶಗಳನ್ನು ವಚನಗಳಲ್ಲಿ ಸೀಮಿತಗೊಳಿಸದೇ ಬದುಕಿನುದ್ದಕ್ಕೂ ಅಳವಡಿಸಿಕೊಳ್ಳುವುದು ಸೂಕ್ತವಾಗಿದೆ. ಜಾತಿ ಧರ್ಮದ ಹೆಸರಿನಲ್ಲಿ ಇಂದು ಬಸವಣ್ಣನವರನ್ನು ತಮ್ಮ ಜೇಬಿನಲ್ಲಿರಿಸಿಕೊಂಡು ಅವರ ವಿಚಾರಧಾರೆಗಳನ್ನು ಸೀಮಿತಗೊಳಿಸಿದ್ದಾರೆ.
