ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ವಾರ್ಡ್ ನಂ.೧೪ರಲ್ಲಿದ್ದ ಉದ್ಯಾನದಲ್ಲಿ ವಾಸವಿದ್ದವರನ್ನು ತೆರವುಗೊಳಿಸುವಂತೆ ಸ್ಥಳೀಯ ನಾಗರಿಕರು ಶಾಸಕರಿಗೆ ಹಾಗೂ ಪುರಸಭೆಗೆ ಒತ್ತಡ ಹೇರಿದ್ದರಿಂದ ಅದನ್ನು ತೆರವುಗೊಳಿಸಲಾಯಿತೇ ಹೊರತು ಅದರಲ್ಲಿ ನನ್ನ ಸ್ವ- ಹಿತಾಸಕ್ತಿ ಏನಿಲ್ಲ. ಅಲ್ಲಿದ್ದವರಿಗೆ ಬೇರೆ ಸ್ಥಳಾವಕಾಶ ಮಾಡಿಕೊಡುವವರೆಗೂ ಬೇರೊಂದೆಡೆ ಸ್ಥಳ ನಿಗದಿ ಪಡಿಸಿದ್ದರಿಂದ ಸ್ವಯಂ ಪ್ರೇರಿತವಾಗಿ ಅಲ್ಲಿದ್ದವರು ತೆರವು ಕಾರ್ಯಾಚರಣೆಗೆ ಸಹಕರಿಸಿದ್ದಾರೆ. ಮುಂಬರುವ ದಿನಗಳಲ್ಲಿ ಅವರಿಗೆ ಸೂಕ್ತ ನಿವೇಶನ ಒದಗಿಸಿ ಸ್ಥಳದ ಹಕ್ಕುಪತ್ರ ವಿತರಿಸಲಾಗುವುದು ಎಂದು ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಸವಾಲು ಹಾಕಿದರು.
ಪಟ್ಟಣದಲ್ಲಿ ಹಮ್ಮಿಕೊಂಡ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರಸಭೆಯ ಕೆಲವು ಸದಸ್ಯರು ನನ್ನ ವಿರುದ್ಧ ಆರೋಪ ಮಾಡುತ್ತಿರುವುದು ಹುಸಿ ಸುಳ್ಳಾಗಿದೆ. ಅವರ ಆರೋಪಕ್ಕೆ ಪುರಾವೆ ಏನಾದರೂ ಇದ್ದರೆ ಸಾಬೀತು ಪಡಿಸಲಿ.ನನ್ನ ವಿರುದ್ಧ ತನಿಖೆಗೆ ಮನವಿ ಮಾಡಿದ್ದು ಸ್ವಾಗತಾರ್ಹ. ಅಧಿಕಾರಿಗಳು ಬಂದು ಅವರಿಗೆ ಬೇಕಾದ ಮಾಹಿತಿ ಕೇಳಿದರೂ ನೀಡಲು ಸಿದ್ದ. ನ್ಯಾಯಾಲಯದಿಂದ ನನಗೆ ನ್ಯಾಯ ಸಿಕ್ಕಿದೆ. ಸುಪ್ರೀಂಕೋರ್ಟ್ ನನ್ನನ್ನು ಅಧ್ಯಕ್ಷನೆಂದು ಮುಂದುವರಿಯಲು ಅವಕಾಶ ಮಾಡಿಕೊಟ್ಟಿದೆ. ನನಗೆ ಸಿಕ್ಕ ಅವಧಿಯಲ್ಲಿ ಅಭಿವೃದ್ಧಿಪರ ಕಾರ್ಯಗಳನ್ನು ಮಾಡುತ್ತೇನೆ. ನಾನು ಅಧ್ಯಕ್ಷನಾಗುವದಕ್ಕಿಂತ ಮುಂಚೆ ನಡೆಯುತ್ತಿದ್ದ ಅವ್ಯವಹಾರಗಳನ್ನು ನಿರ್ಧಾಕ್ಷೀಣ್ಯವಾಗಿ ಮಟ್ಟ ಹಾಕಿದ್ದು, ಹಾಗೂ ಯಾವುದೇ ರೀತಿಯ ಅನ್ಯಾಯಗಳನ್ನು ನಡೆಯಲು ಬಿಡದೆ ಇದ್ದದ್ದೇ ನನಗೆ ಮುಳುವಾಗುತ್ತಿದೆ.
ಬಜೆಟ್ ಮಂಡನೆಯ ಸಭೆಯನ್ನು ಇದ್ದಕ್ಕಿದ್ದಂತೆ ಪುರಸಭೆ ಮುಖ್ಯಾಧಿಕಾರಿ ಮೊಟಕುಗೊಳಿಸಿದ್ದರಿಂದ ಪೌರ ಕಾರ್ಮಿಕರ, ನೌಕರರ ಸಂಬಳ, ತೆರಿಗೆ ಭರಣ ಹಾಗೂ ಲೇವಾದೇವಿ ಸಂಪೂರ್ಣ ಸ್ಥಗಿತವಾಗಿದ್ದು, ಪಟ್ಟಣದ ಅಭಿವೃದ್ಧಿ ಕುಂಠಿತಗೊಂಡಿದೆ. ಇದನ್ನು ಪ್ರಶ್ನಿಸಿ ಪುರಸಭೆ ಮುಖ್ಯಾಧಿಕಾರಿಯ ವಿರುದ್ಧ ಕ್ರಮಕೈಗೊಳ್ಳುವಂತೆ ಮೇಲಾಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಯಾವುದೇ ಕ್ರಮವಾಗಿಲ್ಲ. ಇದಕ್ಕೆ ಸಂಪೂರ್ಣ ರಾಜಕೀಯ ಒತ್ತಡವೇ ಕಾರಣ. ಹೀಗೆ ಪ್ರತಿಯೊಂದು ಚಿಕ್ಕ ಕಾರಣಕ್ಕೂ ರಾಜಕೀಯ ಹಿತಾಸಕ್ತಿ ಮನೆ ಮಾಡಿದರೆ ಅಭಿವೃದ್ಧಿಯಾದರೂ ಹೇಗೆ ಸಾಧ್ಯ.? ಸುಗಮ ಆಡಳಿತ ನಡೆಸಲು ಹೀಗೆಯೇ ಒತ್ತಡ ಬಂದರೆ ರಾಜಿ ಮಡಿಕೊಳ್ಳದೇ ರಾಜೀನಾಮೆ ನೀಡುತ್ತೇನೆ ಎಂದರು.
ವಾರ್ಡ್ ನಂ.೧೩ರಲ್ಲಿ ಬರುವ ೧೪೨೦/ಎ ಜಾಗೆ ನನ್ನ ಹೆಸರಲ್ಲಿದ್ದು, ಅಲ್ಲಿ ಈಗಾಗಲೇ ಕಟ್ಟಡವಿದ್ದು, ಪುರಸಭೆಯ ಸದಸ್ಯರಿಗೆ ನಮ್ಮ ಕುಟುಂಬದ ಆಸ್ತಿ ಯಾವುದು ಎಲ್ಲಿದೆ ಎಂಬುದು ಗೊತ್ತಿಲ್ಲ. ಆದರೂ ಅಲ್ಲಿ ಅನಧಿಕೃತ ಕಟ್ಟಡ ನಡೆದಿದೆ ಎಂದು ಆರೋಪಿಸುತ್ತಾರೆ. ಆದರೆ ಕಟ್ಟಡ ನಡೆದ ಜಾಗೆಯು ಶಾಸಕರ ಮನೆಯ ಹಿಂಬದಿಯಲ್ಲಿದ್ದು, ಅದು ನನ್ನ ಅತ್ತಿಗೆಯ ಹೆಸರಿನಲ್ಲಿದೆ. ಕಟ್ಟಡದ ಪರವಾನಿಗೆಗಾಗಿ ಪುರಸಭೆಗೆ ಅರ್ಜಿ ಸಲ್ಲಿಸುದ್ದು, ಅದು ಅನುಮೋದನೆಯಾಗಿ ಬಂದಿಲ್ಲ. ಆದರೂ ಕಟ್ಟಡ ನಡೆದಿದ್ದು, ಕಟ್ಟಡ ಪೂರ್ಣಗೊಂಡ ನಂತರ ಪುರಸಭೆಗೆ ಸಲ್ಲಿಸಬೇಕಾದ ಕರವನ್ನು ದಂಡ ಸಮೇತ ಭರಣ ಮಾಡುತ್ತೇವೆ. ಇದರಲ್ಲಿ ತೆರಿಗೆ ವಂಚಿಸುವ ಪ್ರಶ್ನೆಯೇ ಇಲ್ಲ.
ನನ್ನ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲಿ ಅದು ನನಗೆ ನೋವಿಲ್ಲ. ನಾನು ಯಾರ ಹಂಗಿಗೂ ಒಳಗಾಗದೆ ಇತರೆ ಸದಸ್ಯರ ಒತ್ತಡಕ್ಕೊಳಗಾಗದೆ ನಿರ್ಧಾಕ್ಷಿಣ್ಯವಾಗಿ, ನಿರ್ಭೀತಿಯಿಂದ ಮಾಡುತ್ತಿರುವ ಕೆಲಸ ಅವರಿಗೆ ಸಹ್ಯವಾಗದೆ ನನ್ನ ವಿರುದ್ಧ ಇಲ್ಲ ಸಲ್ಲದ ಆಪಾದನೆ ಮಾಡುತ್ತಿರುವುದು ಮನಸ್ಸಿಗೆ ನೋವಾಗಿದೆ. ಪುರಸಭೆಯಲ್ಲಿ ಏಕಪಕ್ಷೀಯವಾಗಿ ನಿರ್ಣಯ ತೆಗೆದುಕೊಂಡಿದ್ದೇನೆ ಎಂದು ನನ್ನ ವಿರುದ್ಧ ಮಾಡುತ್ತಿರುವ ಆರೋಪ ನಿಜವಲ್ಲ. ನಾವು ಸರ್ವ ಸಾಧಾರಣ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡೆ ಕಾರ್ಯನಿರ್ವಹಿಸಿದ್ದೇನೆ. ತೆರವು ಕಾರ್ಯಾಚರಣೆಯಲ್ಲಿ ದುಡ್ಡು ಪಡೆದಿದ್ದೇನೆ ಎನ್ನುವ ಆರೋಪ ಮಾಡುತ್ತಿದ್ದಾರೆ. ಆದರೆ ಯಾವ ಅಂಗಡಿ ಮುಂಗಟ್ಟುಗಳನ್ನು ತೆರವು ಕಾರ್ಯಾಚರಣೆಯಲ್ಲಿ ಉಳಿಸಿಲ್ಲ. ಗುಡಂಗಡಿಗಳನ್ನು ಹೊರತುಪಡಿಸಿ ಪುರಸಭೆ ಸರಹದ್ದಿನಲ್ಲಿ ಬರುವ ಆರ್ಸಿಸಿ ಕಟ್ಟಡಗಳ ತೆರವಿಗೆ ಕೆಲವೊಂದು ಪ್ರಭಾವಿಗಳ ಮನವಿಯ ಮೇರೆಗೆ ನಾಲ್ಕೆಂಟು ದಿವಸ ಸಮಯಾವಕಾಶ ಕೊಟ್ಟಿದ್ದಷ್ಟೇ ಹೊರತು ಯಾರು ಮುಲಾಜಿಗೂ ಒಳಗಾಗುವ ಪ್ರಶ್ನೆಯೇ ಇಲ್ಲ.
ಈ ವೇಳೆ ಪುರಸಭೆ ಉಪಾಧ್ಯಕ್ಷ ರಾಜಣ್ಣ ನಾರಾಯಣಕರ ಇದ್ದರು.

