ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಬಸವ ಜಯಂತಿ ಕಾರ್ಯಕ್ರಮದಂಗವಾಗಿ ಬಸವಣ್ಣನವರ ಐಕ್ಯಸ್ಥಳ ಕೂಡಲಸಂಗಮದಲ್ಲಿ ಏ.೨೯ ಮತ್ತು ೩೦ ರಂದು ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಅನುಭವ ಮಂಟಪ-ಬಸವಾದಿ ಶರಣರ ವೈಭವ ಕಾರ್ಯಕ್ರಮದಂಗವಾಗಿ ೧೫ ಜಿಲ್ಲೆಗಳಲ್ಲಿ ಸಂಚರಿಸುತ್ತಿರುವ ಅನುಭವ ಮಂಟಪ-ಬಸವಾದಿ ಶರಣರ ವೈಭವ ರಥಯಾತ್ರೆಯು ಬಸವ ಜನ್ಮಸ್ಥಳ ಬಸವನಬಾಗೇವಾಡಿಗೆ ಶುಕ್ರವಾರ ಇಂಗಳೇಶ್ವರ ಮಾರ್ಗವಾಗಿ ಆಗಮಿಸಿದ ಸಂದರ್ಭದಲ್ಲಿ ಬಸವೇಶ್ವರ ವೃತ್ತದಲ್ಲಿ ಭವ್ಯವಾಗಿ ಸ್ವಾಗತಿಸಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿ ವಿಶ್ವಗುರು ಬಸವೇಶ್ವರರ ನೇತೃತ್ವದಲ್ಲಿ ಬಸವಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪನೆಯಾಗುವ ಮೂಲಕ ಸಮಾನತೆ ಸಂದೇಶ ಸಂದೇಶ ಸಾರಲಾಯಿತು. ಅನುಭವ ಮಂಟಪ ಜಗತ್ತಿನ ಮೊದಲ ಸಂಸತ್ತು ಎಂದರೆ ತಪ್ಪಾಗಲಾರದು. ಇದುವೇ ಇಂದಿನ ಸಂಸತ್ತಿನ ಕಲ್ಪನೆಗೆ ನಾಂದಿಯಾಗಿದೆ. ಬಸವಾದಿ ಶರಣರ, ನಾಡಿನ ದಾರ್ಶನಿಕರ ಸಂದೇಶಗಳನ್ನು ನಾಡಿನಾದ್ಯಂತ ಸರ್ಕಾರವು ಪ್ರಚಾರ ಮಾಡುತ್ತಿರುವ ಕಾರ್ಯ ಸುತ್ತ್ಯರ್ಹವಾಗಿದೆ ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಮಾತನಾಡಿ, ಕರ್ನಾಟಕ ರಾಜ್ಯದ ಸಾಂಸ್ಕ್ರತಿಕ ನಾಯಕ ವಿಶ್ವಗುರು ಬಸವಣ್ಣನವರ ಬದುಕು, ಸಂದೇಶ ಮತ್ತು ಚಿಂತನೆಗಳನ್ನು ನಾಡಿನಾದ್ಯಂತ ವ್ಯಾಪಕವಾಗಿ ಪ್ರಚಾರ ಪಡಿಸುವ ನಿಟ್ಟಿನಲ್ಲಿ ಸರ್ಕಾರ ಕೂಡಲಸಂಗಮದಲ್ಲಿ ಎರಡು ದಿನಗಳಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ರಥಯಾತ್ರೆಗೆ ಏ.೧೭ ರಂದು ಸಿಎಂ ಸಿದ್ದರಾಮಯ್ಯನವರು ಬೆಂಗಳೂರಿನ ವಿಧಾನಸೌಧದ ಮುಂಭಾಗ ಚಾಲನೆ ನೀಡಿದ್ದಾರೆ. ಈಗಾಗಲೇ ರಥಯಾತ್ರೆಯು ರಾಮನಗರ, ಮಂಡ್ಯ, ಮೈಸೂರು, ತುಮಕೂರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ರಾಯಚೂರು, ಬೀದರ, ಕಲಬುರಗಿ ಜಿಲ್ಲೆಗಳಲ್ಲಿ ಸಂಚರಿಸಿದೆ. ವಿಜಯಪುರ ಜಿಲ್ಲೆಯಿಂದ ಬೆಳಗಾವಿ ಜಿಲ್ಲೆಗೆ ರಥಯಾತ್ರೆಯು ತೆರಳಲಿದೆ ಎಂದರು.
ಬಸವೇಶ್ವರ ಸೇವಾ ಸಮಿತಿಯ ಸದಸ್ಯ,ನಿವೃತ್ತ ಶಿಕ್ಷಕ ಎಂ.ಜಿ.ಆದಿಗೊಂಡ ಮಾತನಾಡಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಎಚ್.ಯರಝರಿ, ಪುರಸಭೆ ವ್ಯವಸ್ಥಾಪಕ ಸುರೇಶ ಬಾಗೇವಾಡಿ, ಆರೋಗ್ಯ ನಿರೀಕ್ಷಕ ವಿಜಯಕುಮಾರ ವಂದಾಲ, ತಹಸೀಲ್ದಾರ ಸಿಬ್ಬಂದಿ ಮಂಜು ಹಳ್ಳೂರ, ತಾಲೂಕು ಪಂಚಾಯಿತಿಯ ಸಿಬ್ಬಂದಿಗಳಾದ ಅಪ್ಪು ಧನಶೆಟ್ಟಿ, ಶಶಿಧರ ಪಾಟೀಲ, ಕಸಾಪ ತಾಲೂಕಾಧ್ಯಕ್ಷ ಶಿವಾನಂದ ಡೋಣೂರ, ರಾಷ್ಟ್ರೀಯ ಬಸವಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ, ಪುರಸಭೆ ಸದಸ್ಯ ನಜೀರ ಗಣಿ, ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ, ಮುಖಂಡರಾದ ಬಸವರಾಜ ಹಾರಿವಾಳ, ಸಂಗಮೇಶ ಓಲೇಕಾರ, ಬಸವರಾಜ ನಾಯ್ಕೋಡಿ, ಸುರೇಶ ಹೂಗಾರ, ಸಂಗಮೇಶ ಜಾಲಗೇರಿ, ಕೊಟ್ರೇಶ ಹೆಗ್ಡಾಳ, ರವಿಗೌಡ ಚಿಕ್ಕೊಂಡ, ಪ್ರಭಾಕರ ಖೇಡದ, ದೇವೇಂದ್ರ ಬಡಿಗೇರ, ಸಲೀಂ ಸಯ್ಯದ, ಸಂಜೀವ ಬಿರಾದಾರ, ಮಹಾಂತೇಶ ಹೆಬ್ಬಾಳ, ಅರವಿಂದ ಗೊಳಸಂಗಿ, ವಿರೇಶ ಗಬ್ಬೂರ ಇತರರು ಇದ್ದರು.
ರಥಯಾತ್ರೆ ಪಟ್ಟಣಕ್ಕೆ ಪ್ರವೇಶವಾದ ನಂತರ ಕೆಲ ಹೊತ್ತು ಜಿಟಿ ಜಿಟಿ ಮಳೆ ಬಂದರೂ ರಥಯಾತ್ರೆಗೆ ಭವ್ಯವಾಗಿ ಸ್ವಾಗತಿಸಿಕೊಳ್ಳಲಾಯಿತು. ಮಳೆಯಲ್ಲಿಯೇ ಜನರು ರಥಯಾತ್ರೆಗೆ ಶ್ರೀಗಳು, ಅಧಿಕಾರಿಗಳು, ಗಣ್ಯರು ಮಾಲಾರ್ಪಣೆ ಮಾಡುವ ಮೂಲಕ ರಥವನ್ನು ಸ್ವಾಗತಿಸಿ ಬೀಳ್ಕೊಟ್ಟರು.

