ಲೇಖನ
– ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ
ಪುಣೆ
ಉದಯರಶ್ಮಿ ದಿನಪತ್ರಿಕೆ
ಕಸ್ತೂರ್ ಬಾ ಅವರು ಮೋಹನ್ ಚಂದ್ ಕರಮಚಂದ್ ಗಾಂಧೀಜಿಯವರ ಬಾಳ ಸಂಗಾತಿ. ಇವರು ಪೋರ್ ಬಂದರ್ ನಲ್ಲಿ ಹುಟ್ಟಿದರು. ತಂದೆ ಗೋಕುಲ್ ದಾಸ್ ಮಾಕoಜಿ. ತಾಯಿ ಬ್ರಜಕುವರಿ. ಇವರಿಗೆ ಮದುವೆಯಾದಾಗ 13 ವರ್ಷ. ಗಂಡನ ಕೆಲವು ನೀತಿ ನಿಯಮಗಳಿಗೆ ಹೊಸ ಪ್ರಯೋಗಗಳಿಗೆ, ಸಂಪ್ರದಾಯ ಕುಟುಂಬದಲ್ಲಿ ಹುಟ್ಟಿದ ಕಸ್ತೂರ್ ಬಾ ಒಲ್ಲದ ಮನಸ್ಸಿನಿಂದ ಒಗ್ಗಿಕೊಳ್ಳಬೇಕಾಯಿತು. ಆದರೂ ಅವರು ಪತಿ ಹೇಳಿದ್ದಕ್ಕೆಲ್ಲ ಯಾವುದನ್ನೂ ಪ್ರತಿಭಟಿಸದೆ ಮಣಿದವರಲ್ಲ. ವಿಧೇಯ, ವಿವೇಕ ಹೆಂಡತಿ, ಕಷ್ಟ ಸಹಿಷ್ಣುತೆ, ಜವಾಬ್ದಾರಿ ಹೊರುವಿಕೆ, ಧೈರ್ಯದಲ್ಲಿ ನಿಜವಾಗಿ ಅರ್ಧಾoಗಿ ಸಹ ಧರ್ಮಿಣಿ ಆಗಿದ್ದರು. ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳಿ ಆತ್ಮವಿಶ್ವಾಸದಿಂದ ವರ್ತಿಸುತ್ತಿದ್ದರು ದಕ್ಷಿಣ ಆಫ್ರಿಕಾದಲ್ಲಿದ್ದಾಗ ಸ್ವಪ್ರೇರಣೆಯಿಂದ ಸತ್ಯಾಗ್ರಹದಲ್ಲಿ ಭಾಗವಹಿಸಿ ಸೆರೆಮನೆಯ ವಾಸ ಅನುಭವಿಸಿದರು. ಆಹಾರ ಸರಿಯಿಲ್ಲದೆ ಉಪವಾಸ ಮಾಡಿದರು. ಆರೋಗ್ಯ ಕೆಟ್ಟರೂ ಧೃತಿಗಡಲಿಲ್ಲ.
1919ರಲ್ಲಿ ಶುದ್ಧ ಖಾದಿ ವಸ್ತ್ರಧಾರಿಯಾಗಿ ಸಾಬರ್ಮತಿ ಆಶ್ರಮದಲ್ಲಿ ಸಾಮೂಹಿಕ ಪ್ರಾರ್ಥನೆ, ಸಾಮೂಹಿಕ ಭೋಜನ,ಸ್ವದೇಶಿ ವ್ರತಗಳಲ್ಲಿ ಪಾಲ್ಗೊಂಡರು.
ಬಾಪೂಜಿ ಯರವಾಡ ಜೈಲಿನಲ್ಲಿ ಬಂಧಿತರಾದಾಗ ಬಾ ಕಾರ್ಯನಿರ್ತರಾಗಿ ಮಹಿಳೆಯರಲ್ಲಿ ಜಾಗೃತಿಯನ್ನು ಉಂಟುಮಾಡಿದರು. ಮಧ್ಯಪಾನ ವಿರೋಧಿ ಕಾರ್ಯಕ್ರಮ, ಅಸಹಕಾರ ಚಳುವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಹಿಂಸೆ ಅನುಭವಿಸಿದರೂ ಸರ್ಕಾರಕ್ಕೆ ಕಂದಾಯ ಕೊಡಬೇಡಿ ಎಂದು ಸಾರಿ ಹೇಳಿದರು. 1930ರಲ್ಲಿ ಕಂದಾಯ ಸಲ್ಲಿಸುವಿಕೆ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿದ ಅವರನ್ನು ಸೆರೆಮನೆಯಲ್ಲಿಟ್ಟರು 1932 ರಲ್ಲಿ ಮತ್ತೆ ಸಜೆ ಅನುಭವಿಸಿದರು.

ಬಾಪೂಜಿಯಿಂದ ಚರಕದಲ್ಲಿ ನೂಲುವುದನ್ನು ಕಲಿತು ಅದನ್ನು ಅನೇಕ ಮಹಿಳೆಯರಿಗೆ ಹೇಳಿಕೊಟ್ಟರು. ನೂಲುವುದನ್ನು ಹೇಳಿಕೊಟ್ಟು ಆದಿವಾಸಿಗಳಲ್ಲಿ ಕುಡಿತದ ಚಟ ತಪ್ಪಿಸಿದರು.
ಹೆಣ್ಣು ಮಕ್ಕಳ ತರಬೇತಿಗಾಗಿ ವೈಶಿಷ್ಟ್ಯ ಪೂರ್ಣ ಶಿಬಿರ ಆರಂಭಿಸಿದರು ಕಸ್ತೂರ್ಬಾ ಹೆಸರಿನಲ್ಲಿ ಸಂಗ್ರಹವಾದ ಕೋಟಿ ರೂಪಾಯಿ ನಿಧಿಯನ್ನು ಗ್ರಾಮೀಣ ಮಹಿಳೆಯರ ಮಕ್ಕಳ ಅಭಿವೃದ್ಧಿಗಾಗಿ ಉಪಯೋಗಿಸುವ ಸಲುವಾಗಿ ಗಾಂಧೀಜಿ ಕಸ್ತೂರ್ಬಾ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಿದರು. ಸ್ವಾತಂತ್ರ ಪಡೆಯದೆ ಸಮರ್ಮತಿ ಆಶ್ರಮವನ್ನು ಪ್ರವೇಶಿಸುವುದಿಲ್ಲ ಎನ್ನುವ ನಿರ್ಧಾರದಿಂದ ಜಮನ್ ಲಾಲ್ ಬಜಾಜರು ಕೊಟ್ಟ ಜಾಗದಲ್ಲಿ ಸೇವಾ ಗ್ರಾಮ ಆರಂಭವಾಯಿತು. ಶಿಸ್ತು ಸೇವೆ ತ್ಯಾಗಗಳ ಪ್ರತೀಕವಾದ ಬಾ ಇದರ ಆದರ್ಶ ಸೇವಕಿಯಾದರು.
ಬಾ ಓದು ಬರಹ ಕಲಿತ ವಿದ್ಯಾವಂತೆಯಾಗಿರಲಿಲ್ಲ. ಆದರೂ ದೇಶದ ಆಗುಹೋಗುಗಳನ್ನು ಅರಿತಿದ್ದರು. ಪತ್ರಿಕೆಗಳನ್ನು ಓದುತ್ತಿದ್ದರು. ಮಹಿಳೆಯರೊಂದಿಗೆ ಉಪಯುಕ್ತ ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದರು. 1942ರ ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಬಾಪೂಜಿ ಜೊತೆ ಬಾ ಅವರು ಸ್ವಾತಂತ್ರ್ಯ ಸಂಗ್ರಾಮಕ್ಕೆ ಇಳಿದರು. ಬಾಪೂಜಿ ಪುಣೆಯಲ್ಲಿ ಬಾ ಬೊಂಬಾಯಿಯಲ್ಲಿ ಕಾರಾಗೃಹಕ್ಕೆ ಹೋದರು. ಬಾ ಅವರ ಆರೋಗ್ಯ ಹದಗೆಟ್ಟಿತು. 22- 2 -44 ಶಿವರಾತ್ರಿ ದಿನ ಕೊನೆಯುಸಿರೆಳೆದರು. ಬಾಪೂಜಿಯವರ ಇಚ್ಛೆಯಂತೆ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಪಾಲ್ಗೊಂಡು ಹಗಲಿರುಳು ದುಡಿದು ದೇಶಕ್ಕೆ ತಮ್ಮನ್ನು ತಾವೇ ಸಮರ್ಪಿಸಿಕೊಂಡ ಧೀಮಂತ ಮಹಿಳೆ ಮಹಾಚೇತನ.
