ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ಆರೋಪ
ಉದಯರಶ್ಮಿ ದಿನಪತ್ರಿಕೆ
ಬೆಳಗಾವಿ: ಡಾ.ಶಂಕರ ಬಿದರಿ ಅವರು ತಮಗೆ ತಿಳಿದಿದ್ದನ್ನು ಮಾತನಾಡುವುದು ನೋಡಿದರೆ ಅವರು ಪಂಚಪೀಠದ ಸ್ವಾಮಿಗಳ ಪ್ರಭಾವಕ್ಕೆ ಒಳಗಾಗಿದ್ದಾರೆ, ಇಲ್ಲಾ ಅಂದ್ರೆ ಅವರಿಗೆ ವಯೋಸಹಜ ಅರಳು ಮರಳು ಅಂತ ಕಾಣುತ್ತದೆ. ಈ ಐಏಎಸ್ – ಐಪಿಎಸ್ ಅಧಿಕಾರಿಗಳು ಸೇವಾವಧಿಯಲ್ಲಿ ಏನೂ ಲಿಂಗಾಯತ ಧರ್ಮಕ್ಕೆ ಮಾಡದೇ ಈಗ ಏನೇನೋ ಹೇಳಿಕೆ ನೀಡಿ ಯಾರೋ ಆಡಿಸುವ ಸೂತ್ರದ ಗೊಂಬೆಯಾಗಿದ್ದಾರೆ ಎಂದು ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆಯ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ಮತ್ತು ಇತರರು ಆರೋಪಿಸಿದ್ದಾರೆ.
ಶುಕ್ರವಾರ ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಶಂಕರ ಬಿದರಿ ಅವರು ತಮ್ಮ ವೀರಶೈವವನ್ನು ಜಗತ್ತಿನ ಶ್ರೇಷ್ಠ ಪಂಥ ಅಂತ ಹೇಳಿ ಕೊಳ್ಳಲಿ, ಆದರೆ ಬಸವ ತತ್ವದ ಗಂಧ ಗಾಳಿ ಗೊತ್ತಿರದೆ ಲಿಂಗಾಯತ ಒಂದು ಪಂಥ ಧರ್ಮ ಎನ್ನಲಾಗದು ಎಂದು ಹೇಳಲು ಇವರಿಗೆ ಲಿಂಗಾಯತ ಧರ್ಮದ ಬಗ್ಗೆ ಏನು ಗೊತ್ತಿದೆ. ಇಂತವರನ್ನು ಲಿಂಗಾಯತ ಸಂಘಟನೆಗಳು ದೂರ ಇಟ್ಟರೆ ವಾಸಿ, ಲಿಂಗಾಯತರು ಹಿಂದೂಗಳ ಇಲ್ಲವೇ ವೀರಶೈವರ ವಿರೋಧಿಗಳಲ್ಲ, ಲಿಂಗಾಯತ ಧರ್ಮಕ್ಕೆ ತನ್ನದೇ ಆದ ಅಸ್ಮಿತೆ, ಇತಿಹಾಸ ಇದೆ. ಮನಸ್ಸಿಗೆ ಬಂದಂತೆ ಮಾತನಾಡಿ ಕೆಲವರ ಮನ್ನಣೆ ಪಡೆಯಲು ಹವಣಿಸುತ್ತಿದ್ದಾರೆ. ಶಂಕರ ಬಿದರಿ ಅವರು ರೇಣುಕಾರ ಭಾವ ಚಿತ್ರವನ್ನು
ಬಸವಣ್ಣನವರ ಜೊತೆಗೆ ಇಟ್ಟು ಬಸವ ಜಯಂತಿ ಮಾಡಬೇಕು ಎಂದಾಗಲೇ ಲಿಂಗಾಯತರು ಶಂಕರ ಬಿದರಿ ಅವರ ಹುನ್ನಾರ ಅರಿಯಬೇಕಿತ್ತು. ಈಗಲೂ ತಡವಾಗಿಲ್ಲ, ಲಿಂಗಾಯತ ಒಂದು ಪರಿಪೂರ್ಣ ಧರ್ಮ, ವೀರಶೈವ ಒಂದು ಶೈವ ವೃತ ಅಷ್ಟೇ. ಲಿಂಗಾಯತ ಸಿದ್ಧಾಂತವನ್ನು ತಿಳಿದುಕೊಳ್ಳದೆ ಹೀಗೆ ಪ್ರಸಿದ್ಧಿ ಪ್ರಚಾರಕ್ಕೆ ಡಾ ಶಂಕರ ಬಿದರಿಯವರು ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಹೇಳಿಕೆ ನೀಡದಂತೆ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆಯ ಅಧ್ಯಕ್ಷರಾದ ಡಾ.ಶಶಿಕಾಂತ ಪಟ್ಟಣ, ಡಾ.ಯು ಬಿ ಶೆಟ್ಕರ್, ಪ್ರೊ.ಶಾರದಮ್ಮ ಪಾಟೀಲ , ಸುಧಾ ಪಾಟೀಲ, ಡಾ.ಜಯಶ್ರೀ ಪಟ್ಟಣ ಮುಂತಾದವರು ಆಗ್ರಹಿಸಿದ್ದಾರೆ.

