ಚಿಂತನೆ
– ಪ್ರೊ.ಶಾರದಾ.ಎಸ್.ಪಾಟೀಲ(ಮೇಟಿ)
ನಿ. ಪ್ರಾಧ್ಯಾಪಕರು
ಬಾದಾಮಿ
ಉದಯರಶ್ಮಿ ದಿನಪತ್ರಿಕೆ
ಬಹುರೂಪಿ ಚೌಡಯ್ಯನವರು ಬಾಲ್ಯದಿಂದಲೇ ಸಂಗೀತ ಮತ್ತು ನಾಟ್ಯದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದುದರಿಂದ ಅದೇ ವಿದ್ಯೆಯನ್ನು ಅವರ ತಂದೆ ತಾಯಿಯವರು ಕೊಡಿಸಿದರು. ಗಮಕ, ಸಂಗೀತ, ನಾಟ್ಯ ಶಾಸ್ತ್ರಗಳಲ್ಲಿ ಪಾಂಡಿತ್ಯವನ್ನು ಸಂಪಾದಿಸಿದರು. ನಾಟ್ಯ ವಿದ್ಯೆಯಲ್ಲಿ ಪ್ರಾವೀಣ್ಯತೆ ಪಡೆದ ಚೌಡಯ್ಯನವರು ಬಹುರೂಪ ಧರಸಿ ಜನರಿಗೆ ರಂಜನೆ ನೀಡಲಾರಂಬಿಸಿದರು. ಇದೇ ಸಂದರ್ಭದಲ್ಲಿ ರೇಖನಾಥಾಚಾರ್ಯ ಎಂಬ ಗುರುಗಳಿಂದ ಲಿಂಗ ದೀಕ್ಷೆಯನ್ನು ಪಡೆದುಕೊಂಡು ಲಿಂಗ ಜಂಗಮದ ಭಕ್ತಿ ದಾಸೋಹ ಮಾಡುತ್ತಾ ಚಿತ್ರ ವಿಚಿತ್ರವಾದ ಬಹುರೂಪವನ್ನು ಆಡುತ್ತಾ ರೇಕಳಿಕೆಯಲ್ಲಿ ಬಹುಬೇಗ ಜನಪ್ರಿಯರಾದರು. ವಚನಗಳು
ಬಹುರೂಪಿ ಚೌಡಯ್ಯನವರ ಕಾರ್ಯಕ್ಷೇತ್ರ ಕಲ್ಯಾಣವಾಗಿದ್ದಿತು ತಮ್ಮ ಪೂರ್ವಾಶ್ರಮದ ಬಹುರೂಪಿ ಕಾಯಕವನ್ನು ಪೂರಕವಾಗಿ ಬಳಸಿಕೊಂಡು ಇವರು ಮನೋಜ್ಞವಾದ ವಚನಗಳನ್ನು ರೇಕಣ್ಣಪ್ರಿಯ ನಾಗನಾಥ”ಎಂಬ ವಚನಾಂಕಿತದಲ್ಲಿ ರಚಿಸಿದ್ದಾರೆ. ದೀಕ್ಷಾ ಗುರು ರೇಕನಾಥ, ಜ್ಞಾನ ಗುರು ನಾಗೀನಾಥರ ಸಂಯುಕ್ತ ಹೆಸರುಗಳಿಂದ ಅಂಕಿತವನ್ನು ಇಟ್ಟುಕೊಂಡು ಅವರಿಬ್ಬರನ್ನೂ ಗೌರವಿಸಿದ್ದಾರೆ. ಇವರ ವಚನಗಳು ಭಕ್ತಿ ಕೇಂದ್ರಿತ ಲಿಂಗಾಯತ ಧರ್ಮದ ಅಷ್ಟಾವರಣ ಪಂಚಾಚಾರಗಳ ವಿವೇಚನೆ, ಲಿಂಗಾಂಗ ಸಾಮರಸ್ಯ,ತತ್ವಜ್ಞಾನದ ನಿರೂಪಣೆ ಜಂಗಮ ನಿಷ್ಠೆ ಗುರುವಿನ ಮಹತ್ವವನ್ನು ಗುರುವೇ ಶಿವನು ಶಿವನೇ ಗುರು. ಗುರುವೆಂಬುದು ಭಯ ಭಕ್ತಿ, ಗುರು ಬಿಟ್ಟು ಲಿಂಗವ ಒಲಿಸುವಂತಿಲ್ಲ ಗುರುವಾದವನು ವೇಷ ಡಂಬಕ ನಾಗಕೂಡದು, ಅಲ್ಲದೇ ಕಾಯಕದ ತತ್ವವನ್ನು ನೇರ ಹಾಗೂ ನಿಷ್ಠುರತೆಯಿಂದ ತಮ್ಮವಚನಗಳಲ್ಲಿ ಒಡಮೂಡಿಸಿರುವುದನ್ನು ನಾವು ಕಾಣಬಹುದಾಗಿದೆ. ಕಾಯಕವನ್ನೇ ಮಾಧ್ಯಮವಾಗಿಸಿಕೊಂಡ ಬೆಡಗಿನ ವಚನಗಳಲ್ಲಿ ಶರಣ ತತ್ವ ಪ್ರತಿಪಾದನೆ ಸಹಜವಾಗಿ ಮೂಡಿಬಂದಿದೆ. ಇವರ 66 ವಚನಗಳಲ್ಲಿ ಬೆಡಗಿನ ವಚನಗಳೇ ಇಲ್ಲಿ ಕಂಡುಬರುತ್ತವೆ.
ವಚನ ವಿಶ್ಲೇಷಣೆ
ಅಲ್ಲಿಯ ಬಹುರೂಪ ಇಲ್ಲಿಗೆ ಬಂದಿತ್ತು.
ಇಲ್ಲಿಯ ಬಹುರೂಪ ಎಲ್ಲಿ ಅಡಗಿತ್ತೋ?
ಎನ್ನ ಬಹುರೂಪ ಬಲ್ಲವರಾರೋ?
ನಾದ ಹರಿದು ಸ್ವರವು ಸೂಸಿದ ಬಳಿಕ
ಈ ಬಹುರೂಪ ಬಲ್ಲವರಾರೋ ?
ರೇಕಣ್ಣಪ್ರಿಯ ನಾಗಿನಾಥನಲ್ಲಿ
ಬಸವಣ್ಣನಿಂದ ಬದುಕಿತೀ ಲೋಕವೆಲ್ಲ.
(ವಸಂ ೮, ವಸಂ ೫)
ಅಲ್ಲಿಯ ಬಹುರೂಪ ಇಲ್ಲಿಗೆ ಬಂದಿತ್ತು;
ಅವರ ಸ್ವಂತ ಹುಟ್ಟೂರು ರೇಕಳಿಕೆ ಯಲ್ಲಿ ಹೊಟ್ಟೆಯ ಉಪಜೀವನಕ್ಕೆ ಕುಲಕಸುಬು “ಬಹುರೂಪಿ ಕಾಯಕವನ್ನುಯನ್ನು” ಬಸವಣ್ಣನವರ ವ್ಯಕ್ತಿತ್ವಕ್ಕೆ ಮಾರುಹೋಗಿ ತೊರೆದು ಕಲ್ಯಾಣಕ್ಕೆಬಂದೆನು.
ಇಲ್ಲಿಯ ಬಹುರೂಪ ಎಲ್ಲಿ ಅಡಗಿತ್ತೋ?;
ಇದುವರೆಗೆ ರಾಮಾಯಣ ಮಹಾಭಾರತದ ಪಾತ್ರಗಳನ್ನು ಮಾಡುತ್ತಿರುವಾಗ ಜನರನ್ನು ರಂಜಿಸಲಾಗಲಿಲ್ಲ. ವೃತ್ತಿಯಲ್ಲಿ ತೃಪ್ತಿಯನ್ನು ಕಾಣಲಿಲ್ಲ. ಆದರೆ ಪುರಾತನ ಹಾಗೂ ಶರಣರ ಚರಿತ್ರೆಗಳ ಬಹುರೂಪವನ್ನು ಧರಿಸಿ ಪ್ರದರ್ಶನವನ್ನು ನೀಡಿದಾಗ ಜನರಲ್ಲಿ ಶಿವ ತತ್ವದ ಬೆಳೆಸನ್ನು ಕಂಡಾಗ,ಇದುವರೆಗೆ ಈ ತರದ ಅನುಭವ ಎಲ್ಲಿಯೋ ಅಡಗಿತ್ತು.
ಎನ್ನ ಬಹುರೂಪ ಬಲ್ಲವರಾರೋ?;
ಮನುಷ್ಯ ಹಲವಾರು ಮುಖವಾಡಗಳನ್ನು ಧರಿಸಿ ಅಡ್ಡಾಡುವುದನ್ನು ನಾವು ಕಾಣುತ್ತೇವೆ. ಹಾಗೆಯೇ ನಾನು ನನ್ನ ನಿಜವಾದ ಪರಮಾನಂದವನ್ನು ಅನುಭವಿಸಲು ಆಗಲಿಲ್ಲ. ಕಲ್ಯಾಣಕ್ಕೆ ಬಂದ ಮೇಲೆ ಶರಣರ ಬಸವಣ್ಣನವರ ಸಂಗದಿಂದ ಕಾಯಕಕ್ಕೆ ದಾಸೋಹ ಬೆರೆತು ಕಾಯಕಕ್ಕೆ ಅನುಭಾವದ ಆಧ್ಯಾತ್ಮದ ಲೇಪ ದೊರೆಯಿತು.ಎನ್ನುವ ಆತ್ಮ ನಿವೇದನೆ,ಆತ್ಮ ವಿಮರ್ಶೆಯನ್ನು ನಾವಿಲ್ಲಿ ಕಾಣುತ್ತೇವೆ.
ನಾದಹರಿದು ಸ್ವರವು ಸೂಸಿದ ಬಳಿಕ ಈ ಬಹುರೂಪ ಬಲ್ಲವರಾರೋ?;
ಮನುಷ್ಯನು ಅಸ್ತಂಗತನಾದ ಮೇಲೆ ಆತನ ಬಹುರೂಪತನವನ್ನು ಯಾರು ಅಳೆಯುವರು? ನಾದ ಬಿಂದು ಕಲಾತೀರ್ಥವಾದ ಈ ಜಗತ್ತಿನಲ್ಲಿ ನಾದಹರಿದು ಸ್ವರ ಹೊರ ಸೂಸಿದ ಯಾವುದೇ ರೂಪವಿಲ್ಲ.
ಆದರೆ ಈ ಜಗತ್ತು ಮಾತ್ರ ರೇಖಣ್ಣಪ್ರಿಯ ನಾಗನಾಥನ ಸಾಕ್ಷಿಯಾಗಿ ಬಸವಣ್ಣನಿಂದ ಬದುಕುತ್ತದೆ, ಅವರು ತೋರಿದ ಮಾರ್ಗದಲ್ಲಿ ಸಾಗುತ್ತದೆ.