ಚಿಂತನೆ
– ಡಾ.ದಾನಮ್ಮ. ಚ. ಝಳಕಿ
ಉದಯರಶ್ಮಿ ದಿನಪತ್ರಿಕೆ
ವಚನಯುಗದ ಕ್ರಿಯಾಶೀಲ ವಚನಕಾರ್ತಿ ಮಹಾದೇವಿಯಕ್ಕನ ತರುವಾಯ ಹೆಚ್ಚಿನ ವಚನಗಳನ್ನು ನೀಡಿದ ಅಕ್ಕಮ್ಮನನ್ನು ಸ್ಮರಿಸಬೇಕು. 12 ನೇಯ ಶತಮಾನದ ನಬೋಂಗಣದಲ್ಲಿ ಮಿನಗುವ ಚುಕ್ಕೆ ಅಕ್ಕಮ್ಮ. ಅಕ್ಕಮ್ಮನ ಕಾಲ ಕ್ರಿ.ಶ. 1160 ಆಗಿದೆ. ಈಕೆಯ ಮೊದಲಿನ ಹೆಸರು ರೆಮ್ಮವ್ವೆಯಾಗಿತ್ತು. ಪ್ರಗತಿಶೀಲ ಗುಣಪಕ್ಷಪಾತಿಯಾಗಿದ್ದ ರೆಮ್ಮೆವ್ವೆ ಅಕ್ಕನೆಂಬ ನಿಜನಾಮದಲ್ಲಿ ನೆಲೆ ನಿಂತಿರುವಳು. ಈಕೆ ಯಾದಗಿರಿ ಜಿಲ್ಲೆಯ ಏಲೇರಿ ಗ್ರಾಮದಲ್ಲಿ ಜನಿಸಿರಬಹುದಾಗಿದೆ. ಅಧಿದೈವ ‘ರಾಮೇಶ್ವರ’. ‘ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ’ ಅಂಕಿತದಲ್ಲಿ ೧೫೪ ವಚನಗಳು ದೊರೆತಿವೆ. ಅಕ್ಕಮ್ಮ ಶರಣೆಯ ಐಕ್ಯಸ್ಥಳ ಕಲ್ಯಾಣ.
ವ್ರತ, ನೇಮ, ಆಚಾರ, ಶೀಲ – ಇವು ಅಕ್ಕಮ್ಮ ಶರಣೆಯ ವಚನಗಳ ಮೂಲ ದ್ರವ್ಯ. ಅವುಗಳಿಗೆ ಪೂರಕವಾಗಿ ಧಾನ್ಯ, ಪಶು-ಪಕ್ಷಿ; ಜನಪದ ನಂಬಿಕೆ, ರೂಢಿ, ವೃತ್ತಿಪರಿಭಾಷೆಗಳಲ್ಲಿ ಅಕಾರ ಪಡೆದ ಈ ವಚನಗಳು ಆ ಕಾಲದ ಸಾಮಾಜಿಕ ಸ್ಥಿತಿಗತಿಗಳನ್ನು ತಿಳಿದುಕೊಳ್ಳಲು ಸಹಾಯಕವಾಗಿವೆ. ಅಕ್ಕಮ್ಮನ ವಚನಗಳನ್ನು ಅಧ್ಯಯನ ಮಾಡಿದಾಗ ಆಕೆ ವ್ರತಕ್ಕೆ ಮಹತ್ವದ ಸ್ಥಾನ ಕೊಟ್ಟಿದ್ದಾಳೆ. 64 ವ್ರತಗಳನ್ನು, 56 ಶೀಲಗಳನ್ನು, 32 ನೇಮಗಳನ್ನು ಹೇಳಿದ್ದಾಳೆ. ಈ ವ್ರತ ನೇಮಗಳು ಇತರ ಮಹಿಳೆಯರು ಸಾಂಪ್ರದಾಯಿಕವಾಗಿ ಆಚರಿಸುತ್ತಿದ್ದ ವ್ರತ - ನೇಮಗಳಂತಿರದೆ, ಇವೆಲ್ಲ ಶರಣಸಿದ್ದಾಂತಕ್ಕೆ ಬದ್ಧವಾದ ವ್ರತ ನೇಮಗಳಾಗಿದ್ದುವೆಂಬುದು ಬಹುಮುಖ್ಯವಾಗುತ್ತದೆ' ಅಕ್ಕಮ್ಮನ ವಚನಗಳಲ್ಲಿ ಮಾಹೇಶ್ವರ ಸ್ಥಲದ ನಿಷ್ಠೆಗೆ ಮಹತ್ವದ ಸ್ಥಾನ ನೀಡಲಾಗಿದೆ. ವಯಸ್ಸಿನಿಂದ ಹಿರಿಯರಾದವರು ಹಿರಿಯರಲ್ಲ, ಆಚರಣೆ - ನಿಷ್ಠೆಗಳಿಂದ ಇರುವವರು ನಿಜವಾದ ಹಿರಿಯರೆಂದು ಹೇಳಿದ್ದಾಳೆ. ವಯಸ್ಸಿನಿಂದ ಹಿರಯರಾದವರನ್ನು "ಹೋತಿನ ಗಡ್ಡದ ಹಿರಿಯರು ನೋಡಾ" ಎಂದು ವಿಡಂಬಿಸಿದ್ದಾಳೆ. ಅಕ್ಕಿ, ಬೇಳೆ, ಬೆಲ್ಲ ಮುಂತಾದ ಪದಾರ್ಥಗಳನ್ನು ದೇವರ ಪೂಜಾರಿಗೆ ಕೊಟ್ಟು ವ್ರತ ಮಾಡುವವರನ್ನು ಕಂಡು ಅಕ್ಕಮ್ಮ ಕಟುವಾಗಿ ಟೀಕಿಸಿದ್ದಾಳೆ. ಮಾಂಸ ತಿನ್ನುವವರನ್ನು, ಸುರೆ ಕುಡಿಯುವವರನ್ನು ಅಕ್ಕಮ್ಮ ವಿರೋಧಿಸಿದ್ದಾಳೆ. ಇಂತಹವರೆಲ್ಲ ವ್ರತಭ್ರಷ್ಟರೆಂದು ಟೀಕಿಸಿದ್ದಾಳೆ. ಅರಿವು, ಆಚಾರಗಳಿಗೆ ಅತ್ಯಂತ ಮಹತ್ವ ಕೊಟ್ಟ ಅಕ್ಕಮ್ಮ, ಯಾವುದೇ ವಿಚಾರವು ಆಚರಣೆಗೆ ಬಂದಾಗಲೇ ಪೂರ್ಣವಾಗುತ್ತದೆಂದು ಹೇಳಿದ್ದಾಳೆ. ಆಚಾರ ತಪ್ಪಿದಲ್ಲಿ ಪ್ರಾಯಶ್ಚಿತ್ತ ಉಂಟೆಂಬ, ಅನಾಚಾರಿಗಳ ಮುಖವ ನೋಡಬಹುದೆ? ಎಂದು ಪ್ರಶ್ನಿಸಿದ್ದಾಳೆ.
ಎಲ್ಲ ವ್ರತಗಳಿಗೂ ಜಂಗಮ ಪ್ರಸಾದವೇ ಪ್ರಾಣ. ಎಲ್ಲಾ ನೇಮಕ್ಕೂ ಜಂಗಮ ದರ್ಶನವೇ ನೇಮವೆಂದು ಹೇಳಿರುವ ಅಕ್ಕಮ್ಮನು ಗುರು-ಲಿಂಗ-ಜಂಗಮರಿಗೆ ಪ್ರಾಮುಖ್ಯತೆ ನೀಡಿದ್ದಾಳೆ. ಸ್ವಾರ್ಥಿಗಳು, ಕ್ರೋಧಿಗಳು, ಲೋಭಿಗಳು ಯಾವುದೇ ವ್ರತ ಮಾಡಿದರೂ ಅದು ನಿರರ್ಥಕವೆಂದು ಹೇಳಿರುವ ಅಕ್ಕಮ್ಮನು, ಮನುಷ್ಯನಾದವನು ಷಡ್ವೈರಿಗಳನ್ನು ಗೆಲ್ಲಬೇಕೆಂದು ಹೇಳಿದ್ದಾಳೆ. ಗುರು, ಲಿಂಗ, ಜಂಗಮ ಯಾರೇ ಆದರೂ, ಆಚಾರಭ್ರಷ್ಟರಾದವರನ್ನು ನಂಬಲಾಗದೆಂದು ಸ್ಪಷ್ಟಪಡಿಸಿದ್ದಾಳೆ. ಜನ ಮೆಚ್ಚಬೇಕೆಂದು ಮಾಡುವ ವ್ರತವು, ವ್ರತವಲ್ಲ. ಜಗಮೆಚ್ಚಬೇಕೆಂದು ಮಾಡುವ ಶೀಲವು ಶೀಲವಲ್ಲವೆಂದು ಹೇಳಿರುವ ಅಕ್ಕಮ್ಮನು ಡಾಂಭಿಕ ಭಕ್ತಿಯನ್ನು ಅಲ್ಲಗಳೆದಿದ್ದಾಳೆ.
ವಚನ ವಿಶ್ಲೇಷಣೆ
ಅಕ್ಕಿ ಬೇಳೆ ಬೆಲ್ಲ ಉಪ್ಪು ಮೆಣಸು ಅಡಕೆ ಫಲ ರಸ ದ್ರವ್ಯ ಮುಂತಾದ
ದ್ರವ್ಯಕ್ಕೆ ವ್ರತವೊ ? ಮುಟ್ಟುವ ತಟ್ಟುವ ಸೋಂಕುವ ಚಿತ್ತಕ್ಕೆ ವ್ರತವೊ ?
ಇವು ಬಾಹ್ಯದಲ್ಲಿ ಮಾಡುವ ಸೌಕರಿಯವಲ್ಲದೆ ವ್ರತಕ್ಕೆ ಸಲ್ಲ.
ವ್ರತವಾವುದೆಂದಡೆ
ತನ್ನಯ ಸ್ವಪ್ನದಲ್ಲಿ ತನಗಲ್ಲದುದ ಕಂಡಡೆ,
ತಾ ಮುಟ್ಟದುದ ಮುಟ್ಟಿದಡೆ, ತಾ ಕೊಳ್ಳದುದ ಕೊಂಡಡೆ,
ಆ ಸೂಕ್ಷ್ಮತನುವಿನಲ್ಲಿ ಆ ತನುವಂ ಬಿಟ್ಟು ನಿಂದುದು ವ್ರತ.
ಸ್ಥೂಲತನುವಿನಲ್ಲಿ ಸರ್ವರ ನಿಂದೆಗೊಡಲಾಗದೆ,
ಮಾಡಿಕೊಂಡ ನೇಮಕ್ಕೆ ಕೇಡುಬಂದಲ್ಲಿ
ಆ ಅಂಗಕ್ಕೆ ಓಸರಿಸದೆ ನಿಂದುದು ಆಚಾರ.
ಇಂತೀ ಅಂತರಂಗದಲ್ಲಿ ವ್ರತ, ಬಹಿರಂಗದಲ್ಲಿ ಆಚಾರ,
ಇಂತೀ ಉಭಯ ಸಿದ್ಭವಾಗಿ ನಡೆವುದೆ ವ್ರತ ಆಚಾರz
ಇಂತಿವನರಿದು ಮರೆದಲ್ಲಿ, ತಾ ಮಾಡಿಕೊಂಡ ಕುತ್ತಕ್ಕೆ ಹಾಡಿ ಮದ್ದನರೆದಂತೆ,
ಜಗಕ್ಕೆ ಭಕ್ತನಾಗಿ ಆತ್ಮಂಗೆ ಅನುಸರಣೆಯಾದಲ್ಲಿ ಆಚಾರವೆ ಪ್ರಾಣವಾದ
ರಾಮೇಶ್ವರಲಿಂಗಕ್ಕೆ ಸಲ್ಲದ ನೇಮ.
ಸಮಗ್ರ ವಚನ ಸಂಪುಟ: 5 ವಚನದ ಸಂಖ್ಯೆ: ೪೩೬
ದೇವರು ಮತ್ತು ಭಕ್ತ ಇವರ ನಡುವೆ ನಡೆವ ಭೋಗ ಸ್ಥಿತಿಯ ಕುರಿತು ಅಕ್ಕಮ್ಮ ಈ ವಚನದಲ್ಲಿ ವಿವರಣೆಯನ್ನು ಕೊಡುತ್ತಾರೆ. ದೇವರಿಗೂ ಜಾತಿಯನ್ನು ಅಂಟಿಸಿ, ಜಾತಿ ದೇವರನ್ನಾಗಿ ಮಾಡಿದಾಗ, ಆ ಜಾತಿ ದೇವರ ಬೋಗ ಪದಾರ್ಥಗಳು ಬೇರೆ ಆಗಿ ಬಿಡುತ್ತವೆ. ಕೆಲವು ನಿಷಿದ್ಧ ಪದಾರ್ಥಗಳಾಗುತ್ತವೆ. ಆ ದೇವರಿಗೆ, ಅದೇ ದೇವರಿಗೆ ಇನ್ನೊಂದು ಜಾತಿಯಲ್ಲಿ ಅದೇ ಪದಾರ್ಥಗಳು ಪ್ರಿಯವಾಗುತ್ತವೆ, ಎಂದರೆ ಆಶ್ಚರ್ಯವಲ್ಲವೇ? ಈ ಸಮಸ್ಯೆ ಅಕ್ಕಮ್ಮನನ್ನು ಕಾಡಿದೆ. ಅರ್ಪಿತ ಪದಾರ್ಥಳಲ್ಲೂ ಸೂತಕ ಅರಸುವ ಚಿತ್ತಕ್ಕೆ ವೃತವೂ? ದ್ರವ್ಯಕ್ಕೆ ವ್ರತವೋ? ಎಂಬುದು ತಿಳಿಯದಾಗಿದೆ. ಮುಟ್ಟುವ, ತಟ್ಟುವ ಸೋಂಕುವ ಭ್ರಮೆಯಿಂದ ಚಿತ್ತ ಕದಡಿದಾಗ ಯಾವುದೇ ಪದಾರ್ಥವಿರಲಿ, ದ್ರವ್ಯವಿರಲಿ ವ್ರತಕ್ಕೆ ಹೇಗೆ ಒಳಗಾಗಬಲ್ಲದು ಎಂಬುದು ಇಲ್ಲಿಯ ಮುಖ್ಯ ಪ್ರಶ್ನೆ. ಹಾಗೆಯೇ ತಿಳಿದು ನೋಡಿದರೆ ಇವೆಲ್ಲ ಬಹಿರಂಗದ ತೋರಿಕೆಗಾಗಿ ಹಮ್ಮಿಕೊಂಡ ಆಡಂಬರದ ಪ್ರದರ್ಶನವಾಗಿ ಕಾಣಿಸುತ್ತದೆಯೇ ಹೊರತು, ಅಂತರಂಗದ ಭಕ್ತಿಯ ಶುದ್ಧಿಯಾಗಿ ಕಾಣಿಸುವುದಿಲ್ಲ. ಹಾಗಾದರೆ ವ್ರತವೆಂದರೇನು? ಯಾವುದಕ್ಕೆ ವ್ರತವೆಂದು ಕರೆಯಬೇಕು ಎಂದರೆ, ನಿಜವಾದ ಭಕ್ತ ಸ್ವಪ್ನದಲ್ಲಿಯೂ ಕೂಡ ಅನ್ಯವನ್ನು ನೆನೆಯದೇ, ತನ್ನ ಮನಸ್ಸಿಗೆ ಬೇಡವಾದದ್ದನ್ನು ಕಾಣದೇ ಇರಬೇಕು. ತನಗಲ್ಲದದನ್ನು ಕಂಡರೆ ಅದು ವ್ರತವಾಗದು. ತನ್ನೊಳಗಿನ ಭಕ್ತಿ ಚಂಚಲವಾದರೆ, ಹೋಯ್ದಾಟ ಪ್ರಾರಂಭವಾಗುತ್ತದೆ. ಆ ತಾಕಲಾಟದಿಂದ ಮುಟ್ಟಲಾರದ್ದನ್ನು ಮುಟ್ಟಿಬಿಟ್ಟರೆ, ಅದು ವ್ರತಕ್ಕೆ ದೂರವಾಗುತ್ತದೆ. ಸದ್ಭಕ್ತರು ತಾವೆಂದು ಹೇಳಿಕೊಂಡ ಮೇಲೆ ಅಂಗಭೋಗ, ಲಿಂಗಭೋಗ ಎಂದು ಬೇರೆ ಬೇರೆ ಇರಲಾರದು. ಒಪ್ಪತ್ತಿನ ಭಕ್ತಿಯ ಸ್ವರೂಪ ಒಂದು ಬಗೆಯಾದರೆ, ಇನ್ನೋಂದೊಪ್ಪತ್ತಿನ ಭಕ್ತಿ ಇನ್ನೊಂದು ರೀತಿಯಾಗಬಾರದು, ಅರ್ಪಿತಪದಾರ್ಥವು ಸಾತ್ವಿಕವಾಗಿರಬೇಕು . ತಾಮಸ ಪದಾರ್ಥವಾದರೆ ಅದು ವ್ರತವಾಗುವುದಿಲ್ಲ. ಸೂಕ್ಷ್ಮ ತನುವಿನಲ್ಲಿ ನಡೆಯುವ ಈ ಹೋಯ್ದಾಟವನ್ನು ಆ ತನುವಿಗೆ ಒಪ್ಪಿಸಿ ನಿಶ್ಚಿಂತರಾಗಬೇಕು ಅಂದಾಗ ಅದು ನಿಜವಾದ ವ್ರತ ಎನಿಸುತ್ತದೆ. ಜಡವಾದ ದೇಹದ ಗುಣಗಳಿಂದ ಲಿಂಗ ತನುವಿನ ಮಹತ್ವವನ್ನು ಅರಿಯದೇ ಎಲ್ಲರ ನಿಂದೆಗೆ ಗುರಿಯಾಗದೇ ಇರುವಂತೆ ಎಚ್ಚರ ವಹಿಸಬೇಕು. ತಾನು ಹಾಕಿಕೊಂಡ ನೇಮಕ್ಕೆ ಶಿವಪಥಕ್ಕೆ ಕೇಡೆನಾದರೂ ಬಂದರೆ ಅದಕ್ಕೆ ಹೆದರಿ ತನ್ನ ಸನ್ಮಾರ್ಗವನ್ನು ಬದಲಾಯಿಸಿಕೊಳ್ಳದೇ ಇರಬೇಕು. ಕಳವಳದ ಕಾಯಗುಣಗಳನ್ನು ಬದಿಗಿರಿಸಿ, ಲಿಂಗ ಭ್ರಮೆಯಲ್ಲಿ ನಿಲ್ಲಲು ಪ್ರಯತ್ನಿಸುವುದು ಆಚಾರವೆನಿಸುತ್ತದೆ. ಅಂತರಂಗದಲ್ಲಿ ವ್ರತ, ಬಹಿರಂಗದಲ್ಲಿ ಆಚಾರ ಸಿದ್ದವಾಗಿ ಶುಚಿಯಾಗಿ ಆಚಾರಿಸುವುದು ನಡೆಯುವುದು ವೃತವಾಗುತ್ತದೆ. ಆಚಾರವಾಗುತ್ತದೆ. ಅಂತರಂಗ ಬಹಿರಂಗ ಶುಚಿಯ ಬಗ್ಗೆ ತಿಳಿದುಕೊಂಡು ಮತ್ತೆ ಮತ್ತೆ ಮರಹು ಕಾಡಿದರೆ ತನ್ನ ಅವನತಿಗೆ ತಾನೇ ತೊಡಿಕೊಂಡ ಬಾವಿಯಂತಾಗುತ್ತದೆ. ತಾನೇ ತಂದುಕೊಂಡ ಕುತ್ತಕ್ಕೆ ಸಂಭ್ರಮಿಸಿ ಕುಣಿದು ಕುಪ್ಪಳಿಸಿ ಹಾಡಿ ಮದ್ದನೆರೆದಂತಾಗುತ್ತದೆ .ತೋರಿಕೆಗೆ ಜಗತ್ತೇ ಇವನೊಬ್ಬ ಮಹಾಭಕ್ತ, ಶರಣ ಎಂದು ಗುರುತಿಸಿದರೆ ಆಗದು ಆತ್ಮಕ್ಕೆ ಮೊದಲು ಬೇಕಾದವನಾಗಬೇಕು. ಆತ್ಮದ ಹರಿವು ಜ್ಷಾನವನ್ನರಿಸಿ ನಡೆಯದೇ ಹೋದರೆ ಅದು ಸಲ್ಲದ ನೇಮವಾಗಿಬಿಡುತ್ತದೆ ಕಾರಣ ವ್ರತ, ನಿಯಮ ಎನ್ನುವುದು ತನ್ನತನದ ಏಳ್ಗೆಗಾಗಿ ಆತ್ಮೋನ್ನತಿಗಾಗಿ ಇರಬೇಕೇ ಹೊರತು, ಜಗತ್ತು ತನ್ನನ್ನೊಬ್ಬ ಶರಣ, ಭಕ್ತನೆಂದು ಗುರುತಿಸಿ ಮೆರೆಸಲಿ ಎಂಬ ಕಾರಣಕ್ಕೆ ಇರಬಾರದು. ಎಂಬುದೇ ಈ ವಚನದ ತತ್ವಾನುಭಾವ.