ಚಿಂತನೆ
– ಸುಧಾ ಪಾಟೀಲ್
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ
ಪುಣೆ
ಉದಯರಶ್ಮಿ ದಿನಪತ್ರಿಕೆ
ಲಿಂಗವನ್ನು ನೆನೆ ನೆನೆದು ಲಿಂಗವೇ ತಾನಾದಂತೆ ಗುರುವನ್ನೇ ನೆನೆದು ಗುರುವೇ ತಾನಾದಂತೆ ಬಸವ ಬಸವ ಎಂದು ಅನುದಿನ ಬಸವಣ್ಣನವರನ್ನು ನೆನೆದು ವಚನ ರಚನೆಯಲ್ಲಿ ಮಾತ್ರ ಪ್ರತಿಬಸವಣ್ಣನಾದವರು ಷಣ್ಮುಖ ಶಿವಯೋಗಿಗಳು. ಅವರ ವಚನದ ಶಿಲ್ಪ, ಸ್ವರೂಪ, ಶೈಲಿ,ತಂತ್ರ, ಶಬ್ದ, ಅರ್ಥ, ಅಲಂಕಾರಗಳೆಲ್ಲವೂ ನಮ್ಮನ್ನು 12ನೇ ಶತಮಾನಕ್ಕೆ ಕೊಂಡೊಯುತ್ತವೆ.
ಷಣ್ಮುಖ ಶಿವಯೋಗಿಗಳು ಬಾಲ್ಯದಿಂದಲೇ ನಿವೃತ್ತಿ ಮಾರ್ಗದಲ್ಲಿದ್ದರು. ಭಕ್ತಿ,ಜ್ಞಾನ, ವೈರಾಗ್ಯ ಅವರ ತ್ರಿವಿಧ ಧ್ಯೇಯಗಳಾದವು. ಗುರುವ ಹಿಡಿದು ಕುರುಹನ್ನು ಕಂಡರು, ಕುರುಹಿನಿಂದ ಅರುಹನ್ನು ಕಂಡರು. ಅರುಹಿನಿಂದ ಆಚಾರವ ಕಂಡರು. ಆಚಾರದಿಂದ ನಿಜವ ಕಂಡರು. ನಿಜದಿಂದ ಅಖoಡೇಶ್ವರನ ಕೂಡಿದರು. ಕೂಡಿದರಷ್ಟೇ ಅಲ್ಲ ಅಖಂಡೇಶ್ವರನೇ ತಾವಾದರು. ಅಂತೆಯೇ ತಮ್ಮ ವಚನಾoಕಿತ ವಾಗಿ ಅಖಂಡೇಶ್ವರ ಎಂಬ ಅಂಕಿತನಾಮವನ್ನು ಇಟ್ಟುಕೊಂಡರು. ಅಖoಡೇಶ್ವರರ ವಚನಗಳ ಒಂದು ವೈಶಿಷ್ಟ್ಯವೆಂದರೆ ಅವು ಬಸವಣ್ಣನವರ ಷಟಸ್ಥಲ ವಚನಗಳು ಪ್ರಕಟವಾಗುವ ಪೂರ್ವದಲ್ಲಿಯೇ ಪ್ರಕಟವಾಗಿ ಜನರ ಕೈ ಸೇರಿತ್ತು.ಲಿಂಗಾಯತ ಧರ್ಮದ ಧರ್ಮ ಗ್ರಂಥವೆಂದರೆ ಅಖoಡೇಶ್ವರ ವಚನಗಳು ಎಂಬಷ್ಟು ಅವು ಜನಪ್ರಿಯವಾಗಿದ್ದವು. ಎಲ್ಲ ಹದಿನಾಲ್ಕು ಸ್ಥಲಕಟ್ಟುಗಳಿಗೆ ಅನುಗುಣವಾಗಿ ವಚನಕಾರರೇ ವಚನಗಳನ್ನು ವಿಂಗಡಿಸಿದ್ದರಿಂದ ಅವು ಶಿವಾನುಭವ ಸಿದ್ಧಾಂತ ಎಂದು ಕರೆಸಿಕೊಂಡವು.
ಷಣ್ಮುಖ ಶಿವಯೋಗಿಗಳು ಗುರುಕರಸಂಜಾತರಾಗಿ ಒಂದು ರಾತ್ರೋರಾತ್ರಿ ಅಖಂಡ ಜ್ಞಾನಿಗಳಾಗಲಿಲ್ಲ. ಗುರುವಿನ ಅಡಿಯಲ್ಲಿ ಸರ್ವವನ್ನು ಸಮರ್ಪಿಸಿಕೊಂಡು ವೇದಾ ಗಮ ಶಾಸ್ತ್ರಗಳ ಅಧ್ಯಯನ ಮಾಡಿದರು. ಬಸವಾದಿ ಪ್ರಮಥರ ವಚನ ಸಾಹಿತ್ಯವನ್ನಲ್ಲದೆ ತೋಂಟದ ಸಿದ್ಧಲಿಂಗಯತಿಗಳು ಮತ್ತು ಅವರ ಶಿಷ್ಯರ ವಚನಗಳನ್ನು ಪಠಣ ಮಾಡಿದರು. ಅಷ್ಟೇ ಅಲ್ಲ ಗುರು ಉಪದೇಶದಂತೆ ದೇಶದ ಜಾಗೃತ ಸ್ಥಳಗಳ ಸಂದರ್ಶನ ಮಾಡಿ ಶಿವಾನುಭವವನ್ನು ವಿಸ್ತರಿಸಿಕೊಂಡರು. ಕೊನೆಯಲ್ಲಿ ಜೇವರ್ಗಿ ಸಮೀಪದಲ್ಲಿಯೇ ಇರುವ ಜೋಗಿ ಕೊಳ್ಳದಲ್ಲಿ ಯೋಗ ಸಾಧನೆ ಮಾಡಿದರು. ಅಲ್ಲಿಯೇ ಅವರಿಗೆ ಸಾಕ್ಷಾತ್ಕಾರವಾಯಿತು. ಆ ದಿನದ ನಿರೀಕ್ಷೆಯಲ್ಲಿಯೇ ಇದ್ದರೆoಬಂತೆ ಅಖಂಡೇಶ್ವರರು ಷಣ್ಮುಖ ಶಿವಯೋಗಿಗಳಿಗೆ ಉತ್ತರಾಧಿಕಾರವನ್ನು ನೀಡಿ ಅದೇ ವರ್ಷ ತಾವು ಲಿಂಗದೊಳಗಾದರು.
ಷಣ್ಮುಖ ಶಿವಯೋಗಿಗಳು ಪೀಠದ ಅಧಿಕಾರವನ್ನು ಸುಖದ ಸುಪ್ಪತ್ತಿಗೆಯಾಗಿ ತೆಗೆದುಕೊಳ್ಳಲಿಲ್ಲ. ಸರ್ವರಿಗೆ ಸಮಬಾಳು, ಸರ್ವರಿಗೆ ಸಮಪಾಲು ಇರುವ ಕಲ್ಯಾಣ ಸoಸ್ಕೃತಿಯನ್ನು ಜೇವರ್ಗಿಯಲ್ಲಿ ಮೈಗೂಡಿಸಲು ಪ್ರಯತ್ನಿಸಿದರು. ಅಸ್ಪೃಶ್ಯತೆ ನಿವಾರಣೆ ಅವರ ಮೊದಲ ಆದ್ಯತೆಯಾಗಿತ್ತು. ಕುಲ ಜಾತಿ ಮತಗಳಲ್ಲಿ ಸಾಮರಸ್ಯ ಮೂಡಿಸಲು ಪ್ರಯತ್ನಿಸಿದರು. ಸುರಪುರದ ಬೇಡ ಜನಾಂಗದ ದೊರೆಗಳು ರಾಜಗುರುಗಳ ಮನ್ನಣೆ ನೀಡಿದಾಗ ಅದನ್ನು ಸಂತೋಷದಿಂದ ಸ್ವೀಕರಿಸಿ ಅವರನ್ನು ಆಶೀರ್ವದಿಸಿದರು.
ಷಣ್ಮುಖ ಪ್ರಯೋಗಿಗಳ ಧರ್ಮಬೋಧೆ ಪರಿಣಾಮಕಾರಿಯಾಗಿರುತ್ತಿತ್ತು. ಅವರು ಹೇಳುವುದನ್ನು ನೇರವಾಗಿಯೂ ದೃಷ್ಟಾಂತಗಳ ಮೂಲಕವಾಗಿಯೂ ಹೇಳುತ್ತಿದ್ದರು. ಷಣ್ಮುಖ ಶಿವಯೋಗಿಗಳ ವಚನಗಳು ಧಾರ್ಮಿಕ ಕ್ರಾಂತಿಯನ್ನೇ ಎಸಗಿದವು. ಮುಂದಿನ ಶತಮಾನಗಳಲ್ಲಿ ಕಲ್ಬುರ್ಗಿ ಜಿಲ್ಲೆಯಲ್ಲಿ ಅಸಂಖ್ಯಾತ ತತ್ವಪದಕಾರರು ಆಗಿ ಹೋಗಲು ಈ ಕ್ರಾಂತಿಕಾರ ಸಾಹಿತ್ಯವೇ ಕಾರಣವಾಯಿತು.
ವಚನ ವಿಶ್ಲೇಷಣೆ
ಮನವೆಂಬ ಒರಳಿಗೆ, ಸಕಲ ಶರಣಂಗಳೆoಬ ತಂಡುಲವ ಹಾಕಿ,
ಸುಜ್ಞಾನವೆಂಬ ಒನಕೆಯಿಂದ ಪರಿಣಾಮದ ಲೋಲಾಡುತ್ತ ಕುಟ್ಟಿ
ಅಜ್ಞಾನವೆಂಬ ತೌಡಕೇರಿ, ಚಿತ್ಕ ರಣಗಳೆಂಬ ಅಕ್ಕಿಯ ತೆಗೆದು,
ಸದ್ಭಾವವೆಂಬ ಭಾಂಡದಲ್ಲಿ ಪರಮಾನಂದವೆಂಬ ಜಲದ ಎಸರನಿಟ್ಟು,
ತ್ರಿಪುಟಿಯೆoಬ ವಲಯ ಹೂಡಿ, ಚಿದಗ್ನಿ ಎಂಬ ಬೆಂಕಿಯ ಪುಟವನಿಟ್ಟು,
ಅರಿಷಡ್ವರ್ಗಗಳೇ ಸೌದೆಯಾಗಿರಲು ಮಹಾ ಜ್ಞಾನವೆಂಬ ಪಾಕವ ಮಾಡಿ,
ಪರಿಪೂರ್ಣವೆಂಬ ಪರಿಯಾಣ ದಲ್ಲಿ ಗಡಣಿಸಿಕೊಂಡು
ಅಖಂಡ ಮಂಡಲ ವ್ಯೋ ಮಾತೀತ ಮಹಾಘನಲಿಂಗಕ್ಕೆ ನೀಡಬಲ್ಲಾತನೇ
ನಿಜಶರಣ, ನಿಜಾನುಭಾವಿ, ನಿಜ ಲಿಂಗೈಕ್ಯನು .
ಇಂತಿ ಭೇದವನರಿಯದೆ ಮಣ್ಣ ಪರಿಯಾಣ ಲೋಹ ಪಾತ್ರೆಗಳಲ್ಲಿ
ಮನ ಬಂದ ಪರಿಯಲ್ಲಿ ಒಟ್ಟಿಸಿಕೊಂಡು ಬಾಯಿಗೆ ಬಂದಂತೆ ತಿಂಬುವ
ಜೀವಗಳ್ಳ ಭವಭಾರಕರಿಗೆ, ಏಕಭೋಜನವೆಲ್ಲಿಯದಯ್ಯಾ
ಅಖಂಡೇಶ್ವರಾ !
ತಮ್ಮ ಆಧ್ಯಾತ್ಮಿಕ ಗುರು ಅಖಂಡೇಶ್ವರರ ನಾಮಾoಕಿ ತವನ್ನೇ ತಮ್ಮ ವಚನಾಂಕಿತವನ್ನಾಗಿ ಮಾಡಿಕೊಂಡಿರುವ ಗುಲ್ಬರ್ಗ ಜಿಲ್ಲಾ ಜೇವರ್ಗಿಯ ಷಣ್ಮುಖ ಶಿವಯೋಗಿಗಳು ಪರಮಾತ್ಮನಿಗೆ ಯಾವುದನ್ನು ನೈವೇದ್ಯವಾಗಿ ಅರ್ಪಿಸಬೇಕು ಮತ್ತು ಯಾವುದನ್ನು ಪ್ರಸಾದವಾಗಿ ಭುoಜಿಸಬೇಕು ಎಂಬ ವಿಷಯವನ್ನು ಬಹಳ ತಾತ್ವಿಕವಾಗಿ ಪ್ರಸ್ತುತ ವಚನದಲ್ಲಿ ವಿವರಿಸುತ್ತಿರುವರು. ಇಲ್ಲಿ ಷಣ್ಮುಖ ಶಿವಯೋಗಿಗಳು ಪರಮ ಜ್ಞಾನವೆಂಬ ಪರಮಾನ್ನವನ್ನು ದೇವರಿಗೆ ಅರ್ಪಿಸಿ ಸೇವಿಸುವುದರಲ್ಲಿಯೇ ಸಾರ್ಥಕವಿದೆ. ಹೊರತಾಗಿ ಸ್ವಾಧಿ ಷ್ಟ ವಾದ ಅಡಿಗೆ ಮೃಷ್ಟಾನ್ನ ಭೋಜನ ಅದು ಒಂದು ಹೊ ತ್ತೇ ಆಗಲಿ,ಎರಡು ಹೊತ್ತೇ ಆಗಲಿ ಅರ್ಪಿಸುವುದರಲ್ಲಿ ಏನೇನೂ ಸ್ವಾರಸ್ಯವಿಲ್ಲವೆಂಬ ಮಾತುಗಳನ್ನು ತಿಳಿಸುತ್ತಿರುವರು. ಪರಮ ಜ್ಞಾನವೆಂಬ ಪಾಕ ಸುಲಭವಾಗಿ ಸಿದ್ಧವಾಗುವಂಥದ್ದಲ್ಲ, ಸಾಮಾನ್ಯ ವಸ್ತುಗಳಿಂದ ತಯಾರಾಗುವಂಥದ್ದೂ ಅಲ್ಲ ಹಾಗೆ ನೋಡಿದರೆ ಈ ಆಧ್ಯಾತ್ಮಿಕ ಪಾಕ ಖರ್ಚು ವೆಚ್ಚಗಳಿಂದ ಕೂಡಿದುದೂ ಅಲ್ಲ ಶ್ರಮ ಸಂಕಷ್ಟಗಳ ಜಂಜಾಟವೂ ಅಲ್ಲ.ಆದರೆ ಅದಕ್ಕೆ ಬೇಕಾದ ತ್ಯಾಗ ಸರ್ವಾರ್ಪಣೆ ಭಾವಗಳನ್ನು ನಾವು ಮೈಗೂಡಿಸಿಕೊಳ್ಳಬೇಕು
ಪರಮ ಜ್ಞಾನವೆಂಬ ಪಾಕವನ್ನು ಬಾಹ್ಯ ವಸ್ತುಗಳಿಂದಲ್ಲ, ಅಂತರಂಗದ ವಸ್ತುಗಳಿಂದಲೇ ತಯಾರು ಮಾಡಬೇಕೆಂಬ ವಿಷಯವನ್ನು ಷಣ್ಮುಖ ಶಿವಯೋಗಿಗಳು ತಿಳಿಸಿಕೊಡುತ್ತಿರುವರು. ನಮ್ಮ ನಮ್ಮ ಮನಸ್ಸನ್ನೇ ಒರಳಾಗಿ ಮಾಡಿಕೊಳ್ಳಬೇಕು,ಈ ಮನವೆಂಬ ಒರಳಿನಲ್ಲಿ ಅತ್ತಲಿತ್ತ ಹರಿವ ನಮ್ಮ ಪಂಚೇಂದ್ರಿಯಗಳೆಂಬ ಕಳವೆಗಳನ್ನು ಹಾಕಿ ಸುಜ್ಞಾನವೆಂಬ ಒನಕೆಯಿಂದ ಸಂತೃಪ್ತಿ ಎಂಬ ಶ್ರಮ ವಹಿಸಿ ಥ ಳಿಸಲು ಅಜ್ಞಾನವೆಂಬ ಹೊಟ್ಟು ತಾನೇ ಹಾರಿ ಹೋಗುವುದು. ಪಂಚೇಂದ್ರಿಯಗಳನ್ನು ಎಷ್ಟರ ಮಟ್ಟಿಗೆ ಕುಟ್ಟಬೇಕೆಂದರೆ ನಮ್ಮ ಅರಿಷಡ್ವರ್ಗಗಳೆಲ್ಲ ಚಿತ್ಕರಣ ಗಳೆಂಬ ಶುಭ್ರ ಹಕ್ಕಿಗಳಾಗಿ ಮಾರ್ಪಡಬೇಕು.ಕಾಮವು ಲಿಂಗದ ಕಡೆಗೆ ತಿರುಗಬೇಕು. ಕ್ರೋಧವು ಸದ್ಗುಣಗಳತ್ತ ಹರಿಯಬೇಕು.ಮೋಹವು ಜಂಗಮರಾದನೆಯಲ್ಲಿ ತೊಡಗಿ ಲೋಭವು ಪ್ರಸಾದದ ಬಗ್ಗೆ ಉಂಟಾಗಬೇಕು.
ಚಿತ್ಕರಣಗಳೆಂಬ ಅಕ್ಕಿ ತಯಾರಾದ ಬಳಿಕ ನಮ್ಮ ಸದ್ಭಾವವನ್ನೇ ಭಾಂಡವನ್ನಾಗಿ ಬಳಸಬೇಕು. ಪರಮಾನಂದವೆಂಬ ಜಲವ ತುಂಬಿ ಏಕಾಗ್ರ ಚಿತ್ತವೆಂಬ ಒಲೆಯ ಹೂಡಬೇಕು.ಶಾಶ್ವತ ಯಾವುದು,ಅಶಾಶ್ವತ ಯಾವುದು, ಸ್ವಕೀಯವಾದುದು ಯಾವುದು, ಪರಕೀಯವಾದುದು ಯಾವುದು, ಸಾರಭೂತವಾದುದು ಯಾವುದು ನಿಸ್ಸಾರವಾದುದು ಯಾವುದು ಎಂಬ ವಿಚಾರ ಮಂಥನವೇ ಇಲ್ಲಿ ಕಿಡಿಯಾಗಿ ಚಿದಗ್ನಿ ಗೊಳ್ಳಬೇಕು. ಆಗ ನಮ್ಮ ದುರ್ಗುಣಗಳನ್ನೇ ಸೌದೆಯಾಗಿ ಮಾಡಿಕೊಂಡು ಪರಮ ಜ್ಞಾನವೆಂಬ ಪರಮಾಣುವನ್ನು ಪಾಕಗೊಳಿಸಬೇಕು.ಆಗ ಮನುಷ್ಯ ಪುಟವಿಟ್ಟ ಬಂಗಾರದಂತೆ ಅಥವಾ ಜ್ಯೋತಿಯಂತೆ ಶೋಭಿಸುತ್ತಾನೆ ಇಂಥವನ ಅರ್ಪಣೆಯೇ ಪರಾತ್ಪರ ಪರಮಾತ್ಮನಿಗೆ ಅರ್ಪಿತವಾಗುತ್ತದೆ.
ಇಂತಹ ಅನುಭವದ ಅಡಿಗೆ ತಯಾರಿಸುವುದರ ಬಗ್ಗೆ ಮಹಾಮಾನವರು ಮಾತ್ರ ಲಕ್ಷ ಕೊಡುತ್ತಾರೆ. ಶ್ರೀಸಾಮಾನ್ಯರಿಗೆ ಇದಾವುದರ ದಂದುಗವೂ ಇಲ್ಲ ಅವರು ಭವಭಾರಕರಾಗಿಯೇ ಜೀವನ ಸವೆಸುತ್ತಾರೆ. ಸಂಸಾರಿಗರದೆಲ್ಲ ತೋರಿಕೆಯ ಭಕ್ತಿ,ನಟನಾ ಪೂಜೆ, ಮಾಯಾ ಪ್ರಪಂಚವನ್ನೇ ಹಾಸಿಕೊಂಡು ಮೋಹ ಪ್ರಪಂಚವನ್ನೇ ಹೊದ್ದುಕೊಂಡಿರುತ್ತಾರೆ. ಸಾಕ್ಷಾತ್ ದೇವರಿಗೆ ಮಾತು ಕೊಟ್ಟು ಕೈಕೊಡುವ ಭೂಪರಿವರು.
ಎಡರಡಸಿದಾಗ ಮೃಡನನ್ನು ನೆನೆವರು, ಎಡರು ಕಡೆಯಾಗಲೊಡನೆ ಮೃಢನನ್ನು ಎಡಹಿಯೂ ಕಾಣದ ಮೂಢಮತಿಗಳು. ಹಸಿವಾದಾಗ ನೈವೇದ್ಯವ ಮಾಡಿ, ತೃಷೆಯಾದಾಗ ಮಜ್ಜನ ಕ್ಕೆರೆವರು.ಉಣ್ಣುವ ಜಂಗಮ ಬಂದರೆ ಮುಂದಕ್ಕೆ ನಡೆ ಎಂದು ಹೇಳಿ ಉಣ್ಣದ ಲಿಂಗಕ್ಕೆ ಬೋನವ ನೀಡುವವರು. ಮಣ್ಣಿನ ಪರಿಯಾಣದಲ್ಲಿ ಅಥವಾ ಲೋಹದ ಪಾತ್ರೆಗಳಲ್ಲಿ ತಮಗೆ ಬೇಕಾದ ತಮ್ಮ ನಾಲಿಗೆಯ ಚಪಲದ ಅಡಿಗೆಗಳನ್ನು ದೇವರ ಸಮಾರಾಧನೆ ಮಾಡಿದೆವೆಂದು ಜಂಬ ಕೊಚ್ಚಿಕೊಳ್ಳುವವರು. ಇಂಥವರು ನಿರಾಹಾರ ಮಾಡಿದರೂ ಒಂದೇ, ಇಂಥವರು ಒಪ್ಪತ್ತು ಆಚರಣೆ ಮಾಡಿದರೂ ಒಂದೇ, ಹೊರಗಿನ ಹಸನು ಒಳಗಿನ ಹಸನಿಗೆ ಪೀಠಿಕೆ ಆಗಬೇಕೆ ವಿನಹ ಬಾಹ್ಯ ಪೂಜೆ ಅಂತರಂಗ ಪೂಜೆಗೆ ಅನುವಾಗಬೇಕೇ ಹೊರತು ಡಾಂಬಿಕ ಭಕ್ತಿಯಲ್ಲಿ ಏನೇನೂ ಅರ್ಥವಿಲ್ಲ ಎನ್ನುವುದನ್ನು ಷಣ್ಮುಖ ಶಿವಯೋಗಿಳು ಮೇಲಿನ ವಚನದ ಮೂಲಕ ನಮಗೆಲ್ಲ ತಿಳಿಸಿದ್ದಾರೆ.
