ಚಿಂತನೆ
– ಡಾ.ಸಾವಿತ್ರಿ ಕಮಲಾಪೂರ
ಬೆಳಗಾವಿ
ಉದಯರಶ್ಮಿ ದಿನಪತ್ರಿಕೆ
ಹಸಿಮಸಿ ಕೃಷಿ ವಾಣಿಜ್ಯ ಮುಂತಾದ
ಕಾಯಕವ ಮಾಡಿ
ಭಕ್ತರ ಪಡುಗ , ಪಾದತ್ತ್ರಾನ, ಪಹರಿ, ಬಾಗಿಲು, ಬೊಕ್ಕಸ, ಬಿಯಗ ಮುಂತಾದ ಕಾಯಕಂ ಮಾಡಿಕೊಂಡು
ವ್ರತಕ್ಕೆ ಊಣೆಯವಿಲ್ಲದೆ ಮಾಡುವ ಕೃತ್ಯಕ್ಕೆ ಕಡೆಯಾಗದೆ
ಈ ಭಕ್ತನ ಅಂಗಳ ಅವಿಮುಕ್ತಿ ಕ್ಷೇತ್ರ
ಆತನ ಮನೆಯೆ ಆಚಾರವೇ ಪ್ರಾಣವಾದ
ರಾಮೇಶ್ವರ ಲಿಂಗದಾಶ್ರಯ
ವಚನಅಸಿ ಎಂದರೆ : ಯುದ್ಧ .
ಮಸಿ ಎಂದರೆ : ಸಾಹಿತ್ಯ . ಸಂಪುಟ ೫
ವಚನ ಸಂಖ್ಯೆ ೪೪೫
ಅಕ್ಕಮ್ಮನವರು 12ನೇ ಶತಮಾನದ ಶರಣೆ. ಅಕ್ಕಮ್ಮನವರಿಗೆ ರೆಮ್ಮವ್ವೆ ಎಂತಲೂ ಶೋಧನೆಗಳಿಂದ ತಿಳಿದು ಬಂದಿದೆ.
ಡಾಕ್ಟರ ಫ, ಗು ಹಳಕಟ್ಟಿಯವರ ಶಿವಾನುಭವ ಗ್ರಂಥ ಮಾಲೆ ಏಳೇಶ್ವರ ಲಿಂಗ ಎಂಬ ಅಂಕಿತದಲ್ಲಿ 23 ವಚನಗಳು ಸಿಕ್ಕ ಆಧಾರದ ಮೇಲೆ ಇವುಗಳನ್ನೆಲ್ಲ ಪ್ರತ್ಯೇಕಿಸಿ ಡಾಕ್ಟರ ಆರ್, ಸಿ ಹಿರೇಮಠ ಅವರು ಅಕ್ಕಮ್ಮನ ವಚನಗಳು ಎಂಬ ವಚನಗಳನ್ನು ಪ್ರಕಟಿಸಿರುವುದು ಕಂಡು ಬಂದಿದೆ. ಹೀಗಾಗಿ ಏಲೇಶ್ವರದ ಕೇತಯ್ಯ ಮತ್ತು ಎಲೇಶ್ವರದ ಅಕ್ಕಮ್ಮ ಇವರಿಬ್ಬರೂ ದಂಪತಿಗಳೇ ಎನ್ನುವ, ಸಂಶೋಧನೆಯು ಮುಂದುವರಿಯಬೇಕಾಗಿದೆ.
ಸ್ಥಳ :- ಯಾದಗಿರಿ ಜಿಲ್ಲೆ ಏಳೇರಿ
ಕಾಯಕ:- ಕೃಷಿ ಕಾಯಕ
ಅಂಕಿತನಾಮ:- ಆಚಾರವೇ ಪ್ರಾಣವಾದ ರಾಮೇಶ್ವರ ಲಿಂಗ
ಸಂಶೋಧನೆ:- ರೆಮ್ಮವ್ವೆಯೇ ಅಕ್ಕಮ್ಮ
ಡಾಕ್ಟರ ಆರ್, ಸಿ, ಹಿರೇಮಠ
ಕಾಲ:- ಬಸವಾದಿ ಶರಣರ 12ನೇ ಶತಮಾನ
( ಯಾವುದೇ ಆಧಾರಗಳಿಲ್ಲ)
ನಿಜಗುಣ ಶಿವಯೋಗಿಗಳನ್ನು ಸ್ಮರಿಸಿದ್ದರಿಂದ 15ನೇ ಶತಮಾನ
ಎಂಬುದು .
ಐಕ್ಯ ಸ್ಥಳ:- ಕಲ್ಯಾಣ
ಒಟ್ಟು ವಚನಗಳು ೧೫೪
ವಚನಗಳ ಲಕ್ಷಣ:- ವ್ರತ, ನೇಮ, ಆಚಾರ, ಶೀಲ .
ವಚನಗಳ ಮೂಲ:- ಧಾನ್ಯ ,ಪಶು, ಪಕ್ಷಿ ,ಜನಪದ ನಂಬಿಕೆ ಮತ್ತು ರೂಢಿ.
ಅಸಿ, ಮಸಿ, ಕೃಷಿ, ವಾಣಿಜ್ಯ ಮುಂತಾದ ಕಾಯಕವ ಮಾಡಿ .
ಅಸಿ ಎಂದರೆ : ಯುದ್ಧ .
ಮಸಿ ಎಂದರೆ : ಸಾಹಿತ್ಯ .
ಬೊಕ್ಕಸ ಬಿಯಗ ಮುಂತಾದ ಕಾಯಕವಂ ಮಾಡಿಕೊಂಡು
ಆತ್ಮಗೌರವದಿಂದ ಯಾವುದೇ ಸಣ್ಣಪುಟ್ಟ ಕೆಲಸ ಆದರೂ ಸರಿ, ಅದು ಬಾಗಿಲು, ಬೀಗ, ಖಜಾನೆ ಕಾಯುವುದು ಸಣ್ಣ ಕೆಲಸ ಆದರೂ ಅವರಲ್ಲಿ ಇರುವ ಕಾಯಕ ನಿಷ್ಠೆ , ವ್ರತಕ್ಕೆ ಭಂಗವಾಗದಂತೆ ದುಡಿಯುವ ಕಾಯಕ ಜೀವಿಗಳನ್ನು ಎತ್ತಿ ಕಟ್ಟಿರುವ ಶರಣೆ ಅಕ್ಕಮ್ಮನವರು ಆಗಿದ್ದಾರೆ.
ಯಾರನ್ನೂ ಕೀಳಾಗಿ ಕಾಣದೆ ಅವರು ಮಾಡುವ ಕಾಯಕ ನಿಷ್ಠೆ, ಆತ್ಮ ತೃಪ್ತಿ ಭಾವ ,ಅತಿಯಾಸೆ ಇಲ್ಲದ ಸ್ವಾಭಿಮಾನದ ಬದುಕು. ಹಾಸಿಗೆ ಇದ್ದಷ್ಟೇ ಕಾಲು ಚಾಚುವ, ಬದುಕಿನ ಸತ್ಯ ಮಾರ್ಗವನ್ನು ಶರಣೆ ಅಕ್ಕಮ್ಮನವರ ವಚನಗಳಲ್ಲಿ ಕಾಣಬಹುದಾಗಿದೆ.
ವಚನ ವಿಶ್ಲೇಷಣೆ
ವ್ರತಕ್ಕೆ ಊಣೆಯವಿಲ್ಲದೆ ಮಾಡುವ ಕೃತ್ಯಕ್ಕೆ ಕಡೆಯಾಗದೆ
ಅಕ್ಕಮ್ಮನವರು ವ್ರತಕ್ಕೆ ಹೆಚ್ಚಿನ ಮಹತ್ವ ಕೊಡುತ್ತಾರೆ.
ವಯಸ್ಸಿನಿಂದ ಹಿರಿಯರಾದವರು ಹಿರಿಯರಲ್ಲ. ಯಾರು ವ್ರತನಿಷ್ಠರೋ ಅವರೇ ಹಿರಿಯರು.
ಯಾರು ಈ ಸಮಾಜದಲ್ಲಿ ಸ್ವಾರ್ಥಿಗಳು ಇದ್ದಾರೋ, ಲೋಭಿಗಳು ಇದ್ದಾರೋ, ಸಣ್ಣಪುಟ್ಟ ವಿಷಯಕ್ಕೆಲ್ಲ ಕೋಪ ಮಾಡಿಕೊಳ್ಳುವರೋ ,ಅಂಥಹವರು ಮಾಡುವ ಯಾವುದೇ ತೆರನಾದ ವ್ರತ ಮಾಡಿದರೂ ಅದು ನಿರರ್ಥಕ ಎನ್ನುವರು.
ಕೇವಲ ಹೆಣ್ಣಿಗೆ ಅಷ್ಟೇ ಈ ವ್ರತ ಅನ್ವಯ ಆಗುವುದೇ ? ಈ ಸಮಾಜದಲ್ಲಿ? ಪುರುಷ ನೈತಿಕ ತತ್ತ್ವಗಳನ್ನು ಮೀರಿ, ವ್ರತ ಭ್ರಷ್ಟನಾದರೆ, ಸಮಾಜ ಅದನ್ನು ಪರಿಗಣಿಸದಿರುವುದಕ್ಕೆ, ಪುರುಷ ಪ್ರಧಾನ ಈ ಸಮಾಜದಲ್ಲಿ, ಮಹಿಳೆ ಗಟ್ಟಿ ಧ್ವನಿಯಲ್ಲಿ, ಈ ವ್ರತ ದ ಬಗ್ಗೆ ಉಲ್ಲೇಖಿಸಿರುವುದು ಕಂಡು ಬಂದಿದೆ ಎನ್ನುವುದು ನನ್ನ ವ್ಯಕ್ತಿಗತ ಅಭಿಪ್ರಾಯ.
ಅದನ್ನೇ ಅಕ್ಕಮ್ಮನವರು ವ್ರತ ಪಾಲನೆಯು ಪುರುಷರಿಗೂ ಅನ್ವಯವಾಗುವ ಒಂದು ಸತ್ಯದರ್ಶನ ಈ ಒಂದು ವಚನದಲ್ಲಿ ನಾವು ಕಾಣುತ್ತೇವೆ.
ದೇವರ ಪೂಜಾರಿಗೆ ಕೊಡುವ ಕಾಣಿಕೆ, ಅದು ಏನೇ ಆಗಿರಲಿ ಉದಾಹರಣೆ ಅಕ್ಕಿ, ಬೆಲ್ಲ, ಉದ್ದಿನಬೇಳೆ, ಕಡಲೆ ಬೇಳೆ ,ಹಿಟ್ಟು ಪೂಜಾರಿಗೆ ಕೊಟ್ಟು ವ್ರತ ಮಾಡುವುದನ್ನು ಖಂಡಿಸುತ್ತಾಳೆ.
ಗುರು, ಲಿಂಗ, ಜಂಗಮ ಅವರು ಯಾರೇ ಆಗಿರಲಿ ಅವರ ನಡೆ ನುಡಿ , ಆಚಾರ , ವಿಚಾರ ಭಕ್ತಿ ಭಾವವನ್ನು ಹೊಂದಿರದವರು ಮಾಡುವ ಭಕ್ತಿ ವ್ರತವಲ್ಲ. ಅದು ಜನರನ್ನು ಮೆಚ್ಚಿಸುವ ವ್ರತ ಢಾಂಭಿಕತೆ, ಬೂಟಾಟಿಕೆಯ ಭಕ್ತಿ.
ಜಿನನ ಹೆಸರಲ್ಲಿ ಬತ್ತಲೆ ತಿರುಗುವ ಜೈನರು, ವಿಷ್ಣುವಿನ ಹೆಸರಲ್ಲಿ ತಲೆ ಬೋಳಿಸಿಕೊಳ್ಳುವ ವೈದಿಕರು, ಎಲ್ಲಮ್ಮ, ದುರ್ಗಮ್ಮ, ದ್ಯಾಮಮ್ಮ, ಹುಲಿಗೆಮ್ಮನ ಹೆಸರಲ್ಲಿ ತಲೆ ಜಡೆ ಬಿಟ್ಟು ವ್ರತವೆಂದು ಆಚರಿಸುವ ಶೂದ್ರರನ್ನು ಅಕ್ಕಮ್ಮ ನೇರವಾಗಿಯೇ ಟೀಕಿಸಿರುವುದು ಕಂಡುಬಂದಿದೆ .
ವ್ರತವೆಂಬುದೇನು
ಮನ ವಿಕಾರಿಸುವುದಕ್ಕೆ ಕಟ್ಟಿದ ಗೊತ್ತು
ಜಗದ ಕಾಮಿಯಂತೆ ಕಾಮಿಸದೆ
ಜಗದ ಕ್ರೋಧಿಯಂತೆ ಕ್ರೋಧಿಸದೆ
ಜಗದ ಲೋಭಿಯಂತೆ ಲೋಭಿಸದೆ
ಮಾಯಾ ಮೋಹಂಗಳು ವರ್ಜಿತವಾಗಿ
ಮನ ಬಂದಂತೆ ಆಡದೆ
ತನು ಬಂದಂತೆ ಕೂಡದೆ
ವ್ರತದಂಗಕ್ಕೆ ಸಂಗವಾಗಿ
ನಿಂದ ಸದ್ಭಕ್ತನ ಅಂಗವೆ
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ.
ವ್ರತ ಎಂದರೆ, ಶುಭ್ರ ಬದುಕು .
ಬರೀ ಮಾತಿನಿಂದ ಅಲ್ಲ.ಆಚರಣೆಯಿಂದ .ಬರೀ ಶಾಸ್ತ್ರಾಚರಣೆ ಅಲ್ಲ. ವ್ರತ ಎಂಬುದು ಪರಬ್ರಹ್ಮವನ್ನು ಕಾಣುವ ಏಣಿ. ಇಂದ್ರಿಯಗಳ ವಿಷಯ ಸುಖಾಪೇಕ್ಷೆಯನ್ನು ಕಡಿದು ಹಾಕುವ ಕೊಡಲಿ . ಎಲ್ಲೆಂದರಲ್ಲಿ ಓಲಾಡುವ ಮನಸ್ಸಿನ ಕಾಳ್ಗಿಚ್ಚು.
ಒಟ್ಟಿನಲ್ಲಿ ಪರಿಶುದ್ಧವಾದ ಮನದಿಂದ ಪರವಸ್ತುವನ್ನು ಕಾಣಲು ಮಾಡಿಕೊಂಡ ಕರಾರು .
ಕೇವಲ ಇಷ್ಟಲಿಂಗವನ್ನು ಪೂಜಿಸುವುದು ವ್ರತ ಆಗಿರದೇ ,
ಮನದಲ್ಲಿ ಇರುವ ಅರಿಷಡ್ವರ್ಗಗಳ ನ್ನು ಗೆದ್ದು , ಸತ್ಯ ನಿಷ್ಠೆಯ ಕಾಯಕವ ಮಾಡಿ ಬದುಕುವ ಮಾರ್ಗ.
ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳುವುದಕ್ಕಾಗಿ ,ದೇವರ ಹೆಸರಿನಲ್ಲಿ ವೇಷ ಹಾಕಿ ಕುಣಿಯುವವರ ,ಮೌಢ್ಯ ಭಕ್ತಿ ಹಾಗೂ ಜನರನ್ನು ನಂಬಿಸಿ ಮೋಸ ಮಾಡುವ ಢಾಂಬಿಕ ಭಕ್ತಿಯನ್ನು ಅಕ್ಕಮ್ಮನವರು ಅಲ್ಲಗಳೆಯುವರು.
ಸಮಾಜದಲ್ಲಿ ಜೀವಿಸುವ ವ್ಯಕ್ತಿ ಸಮಾಜ ಒಪ್ಪಿ ಮೆಚ್ಚಿ ನಡೆಯುವ ಕೆಲಸಮಾಡುವುದೇ ವ್ರತ.
ಶರಣರು ಸಂಸಾರ ತ್ಯಾಗಿಗಳಲ್ಲ.ಸಂಸಾರದಲ್ಲೇ ಇದ್ದು .ಅತಿ ಆಸೆ ,ಲೋಭಕ್ಕೆ ಒಳಗಾಗದೆ ಅರಿಷಡ್ವರ್ಗಗಳನ್ನು ಜಯಿಸಿ ನಡೆದ ಶರಣ ಶರಣಿಯರು ಆಗಿದ್ದಾರೆ .
ಈ ಭಕ್ತನ ಅಂಗಳವೇ ಅವಿಮುಕ್ತಿ ಕ್ಷೇತ್ರ
ಸಣ್ಣ ಸಣ್ಣ ಕಾಯಕವ ಮಾಡಿ ತೃಪ್ತಿ ಪಡೆಯುವ ಕಾಯಕ ಜೀವಿಗಳ ಅಂಗಳವೇ ಅವಿಮುಕ್ತಿ ಕ್ಷೇತ್ರ. ಅವರ ದೇಹವೇ ದೇವಾಲಯ.ಅವರ ಮನೆಯೇ ಶಿವಾಲಯ.
ಬೇರೆ ಯಾವ ಕ್ಷೇತ್ರವನ್ನು ಹುಡುಕಿಕೊಂಡು ಹೋಗುವುದು ಅಲ್ಲ .ಆ ಭಕ್ತನ ಅಂಗಳವೇ ಅವಿಮುಕ್ತಿ ಕ್ಷೇತ್ರ. ದೊಡ್ಡ ದೊಡ್ಡ ಕೆಲಸ ಮಾಡಿ ಶ್ರೀಮಂತರಾಗಿ ಸಮಾಜದಲ್ಲಿ ಮೆರೆಯುವ, ಬಡವರನ್ನು ತಿರಸ್ಕರಿಸುವವರ ಬಗ್ಗೆ ಲಕ್ಕಮ್ಮನವರಿಗೆ ಕೋಪ.
ಬಡವರ್ಗದ ಲಕ್ಕಮ್ಮನವರು, ಬಡವರನ್ನು,ಬಡವರ ಆತ್ಮ ಗೌರವವನ್ನು ಎತ್ತಿ ಹಿಡಿದು,ಬಡವರ ಬಗ್ಗೆ ಇರುವ ಕಾಳಜಿ ಎದ್ದು ಕಾಣುತ್ತದೆ.
ಸಣ್ಣಪುಟ್ಟ ಕಾಯಕದಲ್ಲಿ ಬಡವರು, ಪ್ರಮಾಣಿಕವಾಗಿ ದುಡಿದು, ಆ ಕಾಯಕದಲ್ಲಿಯೇ ಕೈಲಾಸ ಕಂಡು, ಅದೇ ಒಂದು ಕಾಯಕದಲ್ಲಿ ಸಮಾಧಾನ, ತೃಪ್ತಿ ಹಾಗೂ ನಿರ್ಮಲ ಭಕ್ತಿಯ ಭಾವದಿಂದ ಇರುವ ಭಕ್ತರ
ಮನೆಯ ಅಂಗಳವೇ ಪುಣ್ಯಕ್ಷೇತ್ರ ಅವಿಮುಕ್ತಿ ಕ್ಷೇತ್ರ.
ಕಾಶಿ ರಾಮೇಶ್ವರ, ಕೇದಾರ ಮುಂತಾದ ಕ್ಷೇತ್ರಗಳನ್ನು ಹುಡುಕಿಕೊಂಡು ಹೋಗುವುದನ್ನು ಲಕ್ಕಮ್ಮನವರು ಅಲ್ಲಗಳೆದು ,
ಕಾಯಕ ನಿರತ ವ್ಯಕ್ತಿಯ ಮನ , ಆತನಲ್ಲಿರುವ ಭಕ್ತಿ,ನಡೆ -ನುಡಿ ಆಚಾರ -ವಿಚಾರ,ಗುರು ಹಿರಿಯರ ಲ್ಲಿ ಯಾರಿಗೆ ಭಕ್ತಿ ಭಾವ ಉಂಟೋ ಆ ಭಕ್ತರ ಮನೆಯ ಅಂಗಳವೇ
ಅವಿಮುಕ್ತಿ ಕ್ಷೇತ್ರ.
ಒಟ್ಟಿನಲ್ಲಿ ಶರಣೆ ಅಕ್ಕಮ್ಮನವರು
ಈ ಒಂದು ವಚನದಲ್ಲಿ ನಾವು ಮಾಡುವ , ಯಾವುದೇ ಚಿಕ್ಕ ಪುಟ್ಟ ಕಾಯಕವೇ ಆಗಿರಲಿ . ಅದರಲ್ಲೇ ನಿಷ್ಠೆ ಹಾಗೂ ಪರಿಶುದ್ಧವಾದ ನಿರ್ಮಲ ಭಕ್ತಿ ಭಾವವನ್ನು ಹೊಂದಿ ಸಮಾಜದಲ್ಲಿ ಮಾನವೀಯ ಗುಣಗಳನ್ನು ಹೊಂದಿ . ತಮ್ಮ ಮನೆಯೇ ಕೇದಾರ ,ಕಾಶಿ ರಾಮೇಶ್ವರ ಪುಣ್ಯ ಕ್ಷೇತ್ರ ಎನ್ನುವ ಅರಿವು ತಿಳುವಳಿಕೆಯ ತತ್ವ ಭಾವವನ್ನು ಅಕ್ಕಮ್ಮನವರ ವಚನಗಳಲ್ಲಿ ಕಾಣುತ್ತೇವೆ.
ನೂರಾರು ದೇವರುಗಳಿಗೆ ಮೊರೆ ಹೋಗದೇ , ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡುತ್ತಾ , ಒಳ್ಳೆಯ ಭಕ್ತಿ ಭಾವವನ್ನು ಹೊಂದಿ ದೇವರಂತೆ ಆಗೋಣ .ಕೊನೆಗೆ ದೇವರೆ ಆಗಿ ಉಳಿಯೋಣ ಎಂದು ಹೇಳುತ್ತ ,ಲೇಖನಕ್ಕೆ ವಿರಾಮ ನೀಡುತ್ತೇನೆ .