ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಗ್ರಾಮದಲ್ಲಿ ನಡೆದ ಶ್ರೀಶೈಲ ಮಲ್ಲಿಕಾರ್ಜುನನ ಐದೇಶಿ ಜಾತ್ರಾ ಮಹೋತ್ಸವದಲ್ಲಿ ಜಾತ್ರೆಗೆ ಬಂದ ಭಕ್ತಾದಿಗಳಿಗೆ ಗ್ರಾಮದ ಅಂಜುಮನ್ ಇಸ್ಲಾಂ ಸಮೀತಿಯ ವತಿಯಿಂದ ಶರಬತ್ ಹಾಗೂ ಪಾನೀಯ ವ್ಯವಸ್ಥೆಯನ್ನು ಮಾಡಿ ಮುಸ್ಲಿಮ ಸಮುದಾಯದವರು ಸೌಹಾರ್ದತೆ ಮೆರೆದರು.
ತಾಲ್ಲೂಕಿನ ಮುಳಸಾವಳಗಿ ಗ್ರಾಮದಲ್ಲಿ ಶ್ರೀಶೈಲ ಮಲ್ಲಿಕಾರ್ಜುನನ ಜಾತ್ರಾ ಮಹೋತ್ಸವದ ಅಂಗವಾಗಿ ಹಲವಾರು ಆಧ್ಯಾತ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದವರು ಕೇಸರಿ ಶಾಲನ್ನು ಧರಿಸಿ ಜಾತ್ರಾ ಮಹೋತ್ಸವದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.
ಭಾವೈಕ್ಯತೆಗೆ ಹೆಸರಾದ ಮುಳಸಾವಳಗಿ ಗ್ರಾಮದಲ್ಲಿ ಹಜರತ್ ಮತಾಬ್ ಷಹೀದ ಜಾತ್ರಾ ಮಹೋತ್ಸವವನ್ನು ಗ್ರಾಮಸ್ಥರು ಎಲ್ಲರೂ ಸೇರಿ ಆಚರಿಸುವುದು ವಿಶೇಷ. ಜೊತೆಗೆ ಪ್ರತಿ ವರ್ಷ ರಮಜಾನ್ ಮಾಸಾಚರಣೆಯ ಸಂದರ್ಭದಲ್ಲಿ ಹಿಂದು ಸಮುದಾಯದವರು ಉಪಾಹಾರ ಹಾಗೂ ತಂಪು ಪಾನೀಯ, ಹಣ್ಣುಗಳ ವ್ಯವಸ್ಥೆಯನ್ನು ಮಾಡುತ್ತಾರೆ.
ಅಂಜುಮನ್ ಇಸ್ಲಾಂ ಸಮಿತಿಯ ರಜಾಕ ಮುಜಾವರ, ಕಲಶಾ ಮಕಾನದಾರ, ಸಾಹೇಬ ಹುಸೇನ ಮುಲ್ಲಾ, ಇಸ್ಮಾಯಿಲ್ ಪಠಾಣ, ದಾವುಲ್ ಇನಾಮದಾರ, ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಬಿರಾದಾರ, ಶರಣಗೌಡ ಬಿರಾದಾರ, ಜಿ.ಪಿ.ಬಿರಾದಾರ, ಬಿ.ಎಸ್.ಪೊಲೇಶಿ, ಮಲಕು ಸುರಗಿಹಳ್ಳಿ, ಹಣಮಂತ ಹಿರೂರ, ಬಸವರಾಜ ಕಲ್ಲೂರ, ವಿರುಪಾಕ್ಷಿ ರೋಡಗಿ, ಸಿದ್ದು ಬಿರಾದಾರ, ಶ್ರೀಶೈಲ ಮಠಪತಿ, ಶಿವು ಹೊನ್ನಳ್ಳಿ, ಮನೋಹರ ಪೂಜಾರಿ, ಶರಣಯ್ಯ ಮಂಗಲಗಿ, ಸಿದ್ದು ಹದರಿ, ಮೈಬೂಬಸಾಬ ಆಹೇರಿ, ಮತಾಬಸಾಬ ಆಹೇರಿ, ದಾವಲಸಾಬ ಗಂಗೂರ, ಕಿರಣ್ ಗಬ್ಬೂರ, ಸೇರಿದಂತೆ ಅನೇಕರು ಇದ್ದರು.

