ಆದ್ಯಾಳ ಸಹೋದರಿಗೆ ’ಅಮ್ಮನ ಮಡಿಲು’ ಟ್ರಸ್ಟಿನಿಂದ ಶೈಕ್ಷಣಿಕ ನೆರವಿನ ಭರವಸೆ ನೀಡಿದ ಸಂಗಮೇಶ ಬಬಲೇಶ್ವರ
ಉದಯರಶ್ಮಿ ದಿನಪತ್ರಿಕೆ
ಹುಬ್ಬಳ್ಳಿ: ಇಲ್ಲಿಯ 5 ವರ್ಷದ ಮಗು ಆದ್ಯಾಳ ಮೇಲೆ ನಡೆದ ಅತ್ಯಾಚಾರ ಯತ್ನ ಹಾಗೂ ಕೊಲೆ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವ ವಿಚಾರವಾಗಿದ್ದು, ಆದ್ಯಾಳಿಗೆ ಆದ ಅನ್ಯಾಯ ಎಂದೂ ಯಾರಿಗೂ ಆಗದಿರಲಿ. ಇಂತಹ ಹೇಯ ಕೃತ್ಯಗಳು ಮತ್ತೆಂದೂ ಮರುಕಳಿಸದಿರಲಿ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.
ಅವರು ಗುರುವಾರ ಹುಬ್ಬಳ್ಳಿಯಲ್ಲಿ ಆದ್ಯ ಕುರಿ ಪಾಲಕರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಸಾಂತ್ವನ ಹೇಳಿದರು.
ಆದ್ಯಾಳ ತಾಯಿ-ತಂದೆ ಹಾಗೂ ಬಂಧುಗಳ ಕಣ್ಣೀರು ಕಂಡು ಭಾವುಕರಾಗಿ ಕಂಬನಿ ಮಿಡಿದ ಸಂಗಮೇಶ ಬಬಲೇಶ್ವರ, ಆದ್ಯಾಳ ಸಹೋದರಿಯ ಶಿಕ್ಷಣಕ್ಕೆ ತಮ್ಮ ’ಅಮ್ಮನ ಮಡಿಲು’ ಟ್ರಸ್ಟಿನಿಂದ ಶೈಕ್ಷಣಿಕ ನೆರವು ನೀಡುವುದಾಗಿ ಭರವಸೆ ನೀಡಿದರು.
ನತದೃಷ್ಟೆ ಆದ್ಯ ಕುಟುಂಬಕ್ಕೆ ಸರಕಾರದಿಂದ ದೊರಕಬಹುದಾದ ಎಲ್ಲ ರೀತಿಯ ನೆರವನ್ನು ಉಸ್ತುವಾರಿ ಸಚಿವರು ಒದಗಿಸಿಕೊಡಲಿದ್ದು, ಸರಕಾರ ಮತ್ತು ನಾವೆಲ್ಲರೂ ಸದಾ ನಿಮ್ಮೊಂದಿಗೆ ಇದ್ದೇವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನೀತಾ ವಾಡಕರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಕರಣ ಹಿನ್ನೆಲೆ
ಹುಬ್ಬಳ್ಳಿಯಲ್ಲಿ ಆರೋಪಿ ಬೀಹಾರ ಮೂಲದ ರಿತೀಶ ಕುಮಾರ ತಿನಿಸು ನೀಡುವುದಾಗಿ ಪುಸಲಾಯಿಸಿ ಬಾಲಕಿ ಆದ್ಯಾಳನ್ನು ಹೊತ್ತೊಯ್ದಿದ್ದ. ಎದುರಿನ ಮನೆಯಲ್ಲಿರುವ ಶೆಡ್ನಲ್ಲಿರಿಸಿ ಅಸಭ್ಯವಾಗಿ ವರ್ತಿಸಿದ್ದ. ಬಳಿಕ, ಬಾಲಕಿಯನ್ನು ಕೊಲೆ ಮಾಡಿದ್ದ. ಬಾಲಕಿ ಶವ ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆತನನ್ನು ಹಿಡಿದು ಅಶೋಕ ನಗರ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದರು.
ಪೊಲೀಸರ ಕಾರ್ಯ ಮುಕ್ತ ಕಂಠದಿಂದ ಶ್ಲಾಘಿಸಿದ ಬಬಲೇಶ್ವರ
ಹುಬ್ಬಳ್ಳಿಯ ಐದು ವರ್ಷದ ಹೆಣ್ಣು ಮಗುವಿನ ಕೊಲೆ ಪ್ರಕರಣ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಈ ಕೇಸ್ನಲ್ಲಿ ಪೊಲೀಸರು ನಡೆದುಕೊಂಡ ರೀತಿಗೆ ಹಾಗೂ ಮಹಿಳಾ ಪಿಎಸ್ಐ ಅನ್ನಪೂರ್ಣ ಅವರ ಸಾಹಸವನ್ನು ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ವಿಳಂಬ ಮಾಡದ ಪೊಲೀಸರು ತಮ್ಮ ಮೇಲೆ ದಾಳಿ ಮಾಡಿದ ಆ ದುರುಳನು ಮಹಿಳಾ ಪೊಲೀಸ್ ಅಧಿಕಾರಿಯ ಗುಂಡಿಗೆ ಬಲಿಯಾಗಿದ್ದು ಸಾರ್ವಜನಿಕರಲ್ಲಿ ನೆಮ್ಮದಿ ಮೂಡಿಸಿದ್ದಲ್ಲದೇ ಇಲಾಖೆ ಬಗೆಗಿನ ಗೌರವ ಹೆಚ್ಚಿಸಿದೆ ಎಂದು ಬಬಲೇಶ್ವರ ’ಉದಯ ರಶ್ಮಿ’ ಗೆ ತಿಳಿಸಿದ್ದಾರೆ.
ಮಾನವೀಯತೆ ಮೆರೆದ ಬಬಲೇಶ್ವರ
ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅವರದು ಸದಾ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ದುಡಿಯುವ ವ್ಯಕ್ತಿತ್ವ.
ಹೊಟ್ಟೆಪಾಡಿಗಾಗಿ ಪರ ಊರಿನಿಂದ ಬಂದಿರುವ ಕುರಿ ಕುಟುಂಬದ ಇನ್ನೊಂದು ಕುಡಿ, ನತದೃಷ್ಟ ಆದ್ಯಾಳ ಅಕ್ಕನಿಗೆ ವಿಜಯಪುರದ ಪ್ರತಿಷ್ಠಿತ ಶಾಲೆಗೆ, ಸ್ವತಃ ದುಡ್ಡು ಕೊಟ್ಟು ಪ್ರವೇಶ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.
ಅವಳ ಮುಂದಿನ ಶಿಕ್ಷಣದ ಜವಾಬ್ದಾರಿಯನ್ನು ಅಕಾಡೆಮಿ ಹಾಗೂ ತಾವು ಜಂಟಿಯಾಗಿ ನಿರ್ವಹಿಸುವ ಭರವಸೆ ನೀಡಿದ್ದಾರೆ.

“ಮುಂದಿನ ದಿನಗಳಲ್ಲಿ ಬಾಲ ವಿಕಾಸ ಅಕಾಡೆಮಿಯಿಂದ ಪರಸ್ಥಳಗಳಿಂದ ಕೂಲಿ ಕೆಲಸಕ್ಕೆ ಬರುವ ಕಾರ್ಮಿಕರಿಗೆ ಹಾಗೂ ವಿಶೇಷವಾಗಿ ಕಾರ್ಮಿಕರ ಮಕ್ಕಳಿಗೆ ಸುರಕ್ಷಿತ ಸ್ಥಳ ಹಾಗೂ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಹೆಣ್ಣುಮಕ್ಕಳ ಸುರಕ್ಷತೆ ಹಾಗೂ ಶಿಕ್ಷಣಕ್ಕೆ ಆದ್ಯತೆ ನೀಡಿ, ಕಾರ್ಯಕ್ರಮಗಳನ್ನು ರೂಪಿಸಲಾಗುವುದು.”
– ಸಂಗಮೇಶ ಬಬಲೇಶ್ವರ
ಅಧ್ಯಕ್ಷರು, ಕರ್ನಾಟಕ ಬಾಲ ವಿಕಾಸ ಅಕಾಡೆಮಿ

