ಚಿಂತನೆ
– ಡಾ.ಸಂಗಮೇಶ ಕಲಹಾಳ
ಶರಣ ತತ್ವ ಚಿಂತಕರು
ಕೊಪ್ಪಳ
ಉದಯರಶ್ಮಿ ದಿನಪತ್ರಿಕೆ
ಅಭ್ಯಾಸವೆನ್ನ ವರ್ತಿಸಿತ್ತಯ್ಯಾ,
ಭಕ್ತಿ ಸಾಧ್ಯವಾಗದು ನಾನೇವೆನಯ್ಯಾ
ಅನು ನಿಮ್ಮ ಮನಂಬೊಗುವನ್ನಕ್ಕ,
ನೀವೆನ್ನ ಮನಂಬೊಗುವನ್ನಕ್ಕ
ಕಾಯಗುಣಂಗಳ ಕಳೆದವರಿಗೆ
ಶರಣೆಂಬೆ ಕೂಡಲಸಂಗಮದೇವಾ.
(ಬಸವಣ್ಣ, ಸಮಗ್ರ ವಚನ ಸಂಪುಟ : 1 ವಚನದ ಸಂಖ್ಯೆ : 511)
ವಚನದಲ್ಲಿನ ಶಬ್ದಾರ್ಥಗಳು
ಅಭ್ಯಾಸ : ಸಾಧನೆ
ವರ್ತನೆ : ನಿರಂತರ ಅನುಕರಣೆ, ಪಾಲಿಸುವ ಕ್ರಮ
ವರ್ತನೆಗಳು : ಅಭ್ಯಾಸ ಅಥವಾ ಸಾಧನೆಯು ಜಪ, ತಪ, ಧ್ಯಾನ, ಶಿವಯೋಗಾದಿ ಕ್ರಮಗಳನ್ನು ಒಳಗೊಂಡಿರುತ್ತವೆ.
ಜಪ : ಸ್ತುತಿ, ಅತೀಂದ್ರಿಯ ಉಚ್ಚಾರಣೆ, ಭಕ್ತಿ ಉದ್ದೇಶಕ್ಕಾಗಿ ಚಿಂತನೆ, ಬಯಸಿದ ವಿಷಯದ ನಿರಂತರ ಚಿಂತನೆ, ಪದೇ ಪದೇ ಪಠಿಸುವುದು.
ತಪ : ಸಾಧನೆಗಾಗಿ ದೃಢತೆ, ಕಠಿಣ ಆಚರಣೆ, ಸಮಚಿತ್ತತೆ, ಆಂತರಿಕ ನೆನಹು.
ಧ್ಯಾನ : ಒಳನೋಟ, ಆಳವಾದ ಏಕಾಗ್ರತೆ, ಪ್ರಾಣದಲ್ಲಿ ಮಗ್ನತೆ.
ಶಿವಯೋಗ : ಪರಶಿವನೇ ಪರತತ್ವವೆಂಬ ಸಾಧಕನ ಮಗ್ನತೆ. ಜೀವಚೈತನ್ಯವು ವಿಶ್ವಚೈತನ್ಯದಲ್ಲಿ ಬೆರೆಯುವುದು, ಜೀವಶಕ್ತಿಯು ವಿಶ್ವಶಕ್ತಿಯೊಂದಿಗೆ ಕೂಡುವುದು, ಪರತತ್ವದಲ್ಲಿ ಒಂದಾಗುವುದು.
ಭಕ್ತಿ : ಶುದ್ಧಅಂತಃಕರಣ, ಪರಶಿವನ ಉಪಾಸನೆ, ಪರತತ್ವದಲ್ಲಿ ನಿಷ್ಠೆ, ದೇವನಲ್ಲಿ ಶರಣಾಗತಿ ಮತ್ತು ಪರಮಾತ್ಮನೊಂದಿಗೆ ಏಕತೆ ಸಾಧಿಸುವುದು.
ಮನಂಬೊಗುವನ್ನಕ್ಕ : ಮನಸ್ಸು ಲಯವಾಗುವಿಕೆ.
ವಚನ ವಿಶ್ಲೇಷಣೆ
ಅಭ್ಯಾಸ ಅಥವಾ ಸಾಧನೆಯು ಜಪ, ತಪ, ಧ್ಯಾನ, ಶಿವಯೋಗಾದಿ ಕ್ರಮಗಳನ್ನು ಜೀವನದಲ್ಲಿ ನಿರಂತರ ಅನುಸರಿಸುವ ವರ್ತನೆ ಅಥವಾ ಕ್ರಮಗಳಾಗಿವೆ. ಕೇವಲ ಅಭ್ಯಾಸದಿಂದ ಮಾತ್ರ ಭಕ್ತಿಯು ಸಾಧ್ಯವಿಲ್ಲ ಎಂಬುದು ಇದರ ಭಾವ. ಭಕ್ತಿ ಎಂದರೆ, ನಿಷ್ಠೆ, ಶರಣಾಗತಿ ಮತ್ತು ಪರಮಾತ್ಮನೊಂದಿಗೆ ಮಾನಸಿಕ ಏಕತೆಯನ್ನು ಹೊಂದುವುದು. ಭಗವಂತನು ಭಕ್ತನ ಮನಸ್ಸಿಗೆ ಲಯವಾಗಬೇಕು ಮತ್ತು ಭಕ್ತನು ಭಗವಂತನ ಮನಸ್ಸಿಗೆ ಲಯವಾಗಬೇಕು. ಇದು ಭಕ್ತಿಯ ಪರಿಪೂರ್ಣ ರೂಪ. ದೇಹದ ಗುಣಗಳಿಂದ ಮುಕ್ತರಾಗಿರುವವರೇ ನಿಜವಾದ ಶರಣರು. ಲೌಕಿಕ ಸ್ವಾರ್ಥ, ಅಹಂಕಾರ, ದೇಹಭಿಮಾನ ಇವುಗಳಿಂದ ಮುಕ್ತರಾದವರು ನಿಜಶರಣರು. ಇಂತಹ ನಿಜಶರಣರಿಗೆ ಶರಣಾಗತಿ ಆಗುವೆನೆಂಬ ಭಾವ ತುಂಬಿದೆ.
ಸಂಕ್ಷಿಪ್ತ ಭಾವಾರ್ಥ
ನಾವು ಭಗವಂತನನ್ನು ಪ್ರೀತಿಸುತ್ತೇವೆ ಅಂದ್ರೆ, ಕೇವಲ ಜಪ ಅಥವಾ ಧ್ಯಾನ ಮಾಡಿದರೆ ಸಾಕಾಗಲ್ಲ. ನಿಜವಾದ ಭಕ್ತಿಗೆ ಶುದ್ಧ ಮನಸ್ಸು ಬೇಕು. ನಿಜವಾದ ಭಕ್ತನ ಮನಸ್ಸು ಮತ್ತು ಭಗವಂತನ ಮನಸ್ಸು ಒಂದೇ ಆಗಬೇಕು. ಕೇವಲ ದೇಹದಿಂದ ಮಾಡುವ ಆಚರಣೆ ಮಾತ್ರ ಸಾಕಾಗಲ್ಲ. ನಮ್ಮಲ್ಲಿ ಸ್ವಾರ್ಥ, ಅಹಂಕಾರ ಇದ್ದರೆ, ನಿಜವಾದ ಶರಣಾಗತಿ ಸಾಧ್ಯವಿಲ್ಲ. ನಿಜವಾದ ಭಕ್ತರು ಶುದ್ಧ ಮನಸ್ಸಿನಿಂದ ಭಗವಂತನಿಗೆ ಶರಣಾಗಿರುತ್ತಾರೆ. ಅವರಿಗೆ ದೇವರ ಪ್ರೀತಿ ಸಿಗುತ್ತದೆ.