ನಂದಿಮಠದ ಗುರುವೀರಸಿದ್ಧ ಶಿವಯೋಗಿಗಳ ೭೫ ನೇ ಜಾತ್ರಾಮಹೋತ್ಸವ | ನಂದಿಸಿರಿ ಪ್ರಶಸ್ತಿ ಪ್ರದಾನ ಸಮಾರಂಭ
ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನ ಶರಣಕ್ಷೇತ್ರ ವಡವಡಗಿ ಗ್ರಾಮದ ನಂದಿಮಠದ ಗುರುವೀರಸಿದ್ಧ ಶಿವಯೋಗಿಗಳ ೭೫ ನೇ ಜಾತ್ರಾಮಹೋತ್ಸವ ಹಾಗೂ ಲಿಂ. ಮಲ್ಲಿಕಾರ್ಜುನ ಸ್ವಾಮೀಜಿಯವರ ತೃತೀಯ ಪುಣ್ಯಾರಾಧನೆಯಂಗವಾಗಿ ಏ.೧೮ ರಿಂದ ೨೦ ರವರೆಗೆ ಪುರಾಣ ಮಹಾಮಂಗಲ, ಶಿವಾನುಭವ ಚಿಂತನ, ನಂದಿಸಿರಿ ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕಾರ, ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ನಂದಿಮಠದ ವೀರಸಿದ್ದ ಸ್ವಾಮೀಜಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಏ.೧೮ ರಂದು ಬೆಳಗ್ಗೆ ೮ ಗಂಟೆಗೆ ಷಟ್ಸ್ಥಲ ಧ್ವಜಾರೋಹಣ ನೆರವೇರಿಸುವ ಮೂಲಕ ಜಾತ್ರಾಮಹೋತ್ಸವಕ್ಕೆ ಚಾಲನೆ ನೀಡಲಾಗುವದು. ಜಾತ್ರಾಮಹೋತ್ಸವದಂಗವಾಗಿ ಮಾ.೩೦ ರಿಂದ ಚಡಚಣದ ಷಡಕ್ಷರ ಸ್ವಾಮೀಜಿಯವರಿಂದ ಪ್ರತಿದಿನ ಸಂಜೆ ಹಮ್ಮಿಕೊಂಡಿದ್ದ ಬಸವ ಮಹಾಪುರಾಣದ ಮಹಾಮಂಗಲತೋತ್ಸವ ಸಂಜೆ ೭ ಗಂಟೆಗೆ ಜರುಗಲಿದೆ. ಸಾನಿಧ್ಯವನ್ನು ದೇವರಹಿಪ್ಪರಗಿಯ ಮಡಿವಾಳೇಶ್ವರ ಸ್ವಾಮೀಜಿ, ಸುರಪುರದ ಪ್ರಭುಲಿಂಗ ಸ್ವಾಮೀಜಿ ವಹಿಸುವರು. ಅಧ್ಯಕ್ಷತೆಯನ್ನು ವೀರಸಿದ್ದ ಸ್ವಾಮೀಜಿ ವಹಿಸುವರು. ಬಸವನಬಾಗೇವಾಡಿಯ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ವಡವಡಗಿಯ ಬೃಂಗೀಶ್ವರ ಶಿವಾಚಾರ್ಯ ಸ್ವಾಮೀಜಿ, ಕೋರವಾರದ ಕಾಶಿಲಿಂಗ ಸ್ವಾಮೀಜಿ, ಕೊಲ್ಹಾರದ ಕಲ್ಲಿನಾಥ ದೇವರು, ಕೊಡಗಾನೂರಿನ ಕುಮಾರದೇವರು, ಹಚ್ಯಾಳದ ವಿರೂಪಾಕ್ಷಯ್ಯ ಶಾಸೀಜಿ ಸಮ್ಮುಖ ವಹಿಸುವರು.
ಇದೇ ಸಂದರ್ಭದಲ್ಲಿ ಬಸನಗೌಡ ಪಾಟೀಲ, ಡಿ.ಬಿ.ಬಿರಾದಾರ, ಜಿ.ಡಿ.ಅಂಗಡಿ ಸೇರಿದಂತೆ ಶ್ರೀಮಠಕ್ಕೆ ಸೇವೆ ಸಲ್ಲಿಸಿದ ಸದ್ಭಕ್ತರನ್ನು ಸನ್ಮಾನಿಸಲಾಗುವದು. ಈ ಕಾರ್ಯಕ್ರಮದಲ್ಲಿ ಶ್ರೀಮಠದ ಶ್ರೀಗಳಿಗೆ ದತ್ತಪ್ಪ ಪೂಜಾರಿ,ಭೀಮರಾಯ ಪೂಜಾರಿ ಕುಟುಂಬಸ್ಥರು ಬೆಳ್ಳಿ ಕಿರೀಟ ಅರ್ಪಿಸುವರು. ಬಸವರಾಜ ಗಂಗಶೆಟ್ಟಿ, ಸಿದ್ದನಗೌಡ ಪಾಟೀಲ, ದೇವಾನಂದ ಹೂಗಾರ, ನೀಲಮ್ಮ ಇವಣಗಿ ಭಕ್ತರು ಶ್ರೀಗಳಿಗೆ ತುಲಾಭಾರ ನೆರವೇರಿಸುವರು. ನಂತರ ರಾತ್ರಿ ೧೦ ಗಂಟೆಗೆ ಸಿದ್ಧಾರ್ಥ ಬೈಚಬಾಳ ಅವರ ಜಯಸಿಂಗ ಕಲಾತಂಡದಿಂದ ಸಂಗೀತ, ಹಾಸ್ಯ ರಸಮಂಜರಿ ಕಾರ್ಯಕ್ರಮ ಜರುಗಲಿದೆ ಎಂದರು.
ಏ. ೧೯ ರಂದು ಬೆಳಗ್ಗೆ ೮ ಗಂಟೆಗೆ ದ್ವಾದಸ ಲಿಂಗತೋಭದ್ರ ದೇವತಾ ಮಂಡಲ ಹೋಮದ ಪೂರ್ಣಾಹುತಿ ಕಾರ್ಯಕ್ರಮ, ಶಿವಪಾರ್ವತಿ ಕಲ್ಯಾಣೋತ್ಸವ ವಿದ್ಯಾಸಾಗರ ಸ್ವಾಮೀಜಿ, ಆನಂದಯ್ಯ ಸ್ಥಾವರಮಠ ಅವರ ವೈದಿಕತ್ವದಲ್ಲಿ ನಡೆಯಲಿದೆ. ಸಂಜೆ ೭ ಗಂಟೆಗೆ ನಡೆಯುವ ಶಿವಾನುಭವ ಚಿಂತನ ಕಾರ್ಯಕ್ರಮದ ಸಾನಿಧ್ಯವನ್ನು ಶಿರಹಟ್ಟಿಯ ಜಗದ್ಗುರು ಫಕೀರ ಸಿದ್ದರಾಮ ಸ್ವಾಮೀಜಿ, ಇಂಗಳೇಶ್ವರದ ಚನ್ನಬಸವ ಸ್ವಾಮೀಜಿ, ಬಸವನಬಾಗೇವಾಡಿಯ ಸಿದ್ದಲಿಂಗ ಸ್ವಾಮೀಜಿ, ಪಡೇಕನೂರಿನ ಮಲ್ಲಿಕಾರ್ಜುನ ಸ್ವಾಮೀಜಿ, ಕಲಕೇರಿಯ ಮಡಿವಾಳೇಶ್ವರ ಸ್ವಾಮೀಜಿ, ಸಿಂದಗಿಯ ಡಾ.ವಿಶ್ವಪ್ರಭುದೇವ ಶಿವಾಚಾರ್ಯ ಸ್ವಾಮೀಜಿ, ಚಡಚಣದ ಷಡಕ್ಷರ ಸ್ವಾಮೀಜಿ, ಹಳೆಕೋಟೆಯ ಸಿದ್ದಬಸವ ಸ್ವಾಮೀಜಿ, ಯಡ್ರಾಮಿಯ ಸಿದ್ದಲಿಂಗ ಸ್ವಾಮೀಜಿ ವಹಿಸುವರು. ಅಧ್ಯಕ್ಷತೆಯನ್ನು ವೀರಸಿದ್ದ ಸ್ವಾಮೀಜಿ ವಹಿಸುವರು. ಸಚಿವ ಶಿವಾನಂದ ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕರಾದ ರಾಜುಗೌಡ ಪಾಟೀಲ, ಅಶೋಕ ಮನಗೂಳಿ, ಮಾಜಿ ಶಾಸಕರಾದ ರಮೇಶ ಭೂಸನೂರ, ಸೋಮನಗೌಡ ಪಾಟೀಲ, ಎ.ಎಸ್.ಪಾಟೀಲ ಶರಣಪ್ಪ ಸುಣಗಾರ ಆಗಮಿಸುವರು. ಇದೇ ಸಂದರ್ಭದಲ್ಲಿ ನಂದಿಮಠದಿಂದ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಮಹನೀಯರಾದ ಶಾಂತಪ್ಪ ನಾಗಪ್ಪ ಶಿರಶ್ಯಾಡ(ಕೃಷಿ ಕ್ಷೇತ್ರ), ಎನ್.ಎಂ.ಬಿರಾದಾರ(ಶಿಕ್ಷಣ ಕ್ಷೇತ್ರ), ಐ.ಸಿ.ಪಟ್ಟಣಶೆಟ್ಟಿ (ಸಮಾಜ ಸೇವೆ), ಮೋಹನ ಕಟ್ಟಿಮನಿ(ಸಾಹಿತ್ಯ), ಮೌಲಾಸಾಬ ಜಾಗೀರದಾರ(ಕಲಾಕ್ಷೇತ್ರ), ಡಾ.ಸಿದ್ದಪ್ಪ ಬಿದರಿ(ಜಾನಪದ), ಬಸವರಾಜ ನಂದಿಹಾಳ(ಪತ್ರಿಕಾಕ್ಷೇತ್ರ) ಇವರಿಗೆ ರಾಜ್ಯಮಟ್ಟದ ನಂದಿಸಿರಿ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಗುವದು. ನಂತರ ರಾತ್ರಿ ೧೦.೩೦ ಗಂಟೆಗೆ ಡಾ.ಸಿದ್ದಪ್ಪ ಬಿದರಿ ಅವರಿಂದ ಜಾನಪದ ಹಾಸ್ಯಭರಿತ ಜವಾರಿ ಮಾತುಗಳು, ಶಾರದಾ ಲಂಬಾಣಿ ಅವರ ತಂಡದಿಂದ ಬಂಜಾರಾ ನೃತ್ಯ ನಡೆಯಲಿದೆ ಎಂದರು.
ಏ.೨೦ ರಂದು ಬೆಳಗ್ಗೆ ೬ ಗಂಟೆಗೆ ಕರ್ತೃ ಗದ್ದುಗೆಗೆ ಪೂಜೆ, ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಜಂಗಮ ವಟುಗಳಿಗೆ ಅಯ್ಯಾಚಾರ ಸಂಸ್ಕಾರ ಡಾ.ವಿಶ್ವಪ್ರಭುದೇವ ಶಿವಾಚಾರ್ಯ ಸ್ವಾಮೀಜಿ, ಆನಂದಯ್ಯ ಸ್ಥಾವರಮಠ ವೈದಿಕತ್ವದಲ್ಲಿ ನೆರವೇರುವದು. ನಂತರ ೯ ಗಂಟೆಗೆ ವೀರಸಿದ್ದ ಶಿವಯೋಗಿಗಳವರ ಪಲ್ಲಕ್ಕಿ ಉತ್ಸವ ವಿವಿಧ ಕಲಾತಂಡ, ವಿವಿಧ ವಾದ್ಯಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. ಮಧ್ಯಾನ್ಹ ೧ ಗಂಟೆಗ ಹೆಬ್ಬಾಳ ಗ್ರಾಮದ ಸದ್ಭಕ್ತರಿಂದ ಸಿದ್ದಪಡಿಸಿದ ಅಗ್ನಿಕುಂಡದ ಅಗ್ನಿಶಮನ ಮಠದ ಪೂಜ್ಯರಿಂದ, ಪುರವಂತರಿಂದ ನೆರವೇರುವದು. ನಂತರ ಭಕ್ತರಿಗೆ ಮಹಾಪ್ರಸಾದ ವಿತರಣೆಯಾಗುವದು. ಸಂಜೆ ೪ ಗಂಟೆಗೆ ಉತ್ಸವ ಮೂರ್ತಿ ಕೊಡೆ ಕಳಸ ಬರಮಾಡಿಕೊಂಡ ನಂತರ ೫ ಗಂಟೆಗೆ ರಥೋತ್ಸವ ಜರುಗಲಿದೆ. ನಂತರ ರಂಗುರಂಗಿನ ಮದ್ದು ಸುಡುವ ಕಾರ್ಯಕ್ರಮ ನಡೆಯಲಿದೆ. ರಾತ್ರಿ ೧೦ ಗಂಟೆಗೆ ಬಸವನಬಾಗೇವಾಡಿಯ ಬಸವೇಶ್ವರ ಬಯಲಾಟ ಸಂಘದಿಂದ ರೇಣುಕಾ ಯಲ್ಲಮ್ಮ ಬಯಲಾಟ ಪ್ರದರ್ಶನವಾಗಲಿದೆ. ಜಾತ್ರಾಮಹೋತ್ಸವದಂಗವಾಗಿ ಮೂರು ದಿನಗಳ ಕಾಲ ನಡೆಯುವ ಕಾರ್ಯಕ್ರಮಕ್ಕೆ ಸದ್ಭಕ್ತರು ಆಗಮಿಸಿ ತನು-ಮನದಿಂದ ಸೇವ ಸಲ್ಲಿಸಿ ಶ್ರೀಗಳ ಕೃಪೆಗೆ ಪಾತ್ರರಾಗಬೇಕೆಂದು ಶ್ರೀಮಠದ ವೀರಸಿದ್ದ ಸ್ವಾಮೀಜಿ ತಿಳಿಸಿದ್ದಾರೆ.

