ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಸಂವಿಧಾನ ನೀಡಿರುವ ಅವಕಾಶಗಳನ್ನು ನಾವು ನೀವು ಪಡೆದು, ಅಂಬೇಡ್ಕರ ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಬದುಕು ಕಟ್ಟಿ ಕೊಳ್ಳೋಣ ಎಂದು ತಹಶೀಲ್ದಾರ ಎಸ್.ಎಸ್. ನಾಯಕಲಮಠ ಹೇಳಿದರು.
ಪಟ್ಟಣದ ಸಮುದಾಯ ಭವನದಲ್ಲಿ ತಾಲೂಕು ಆಡಳಿತದಿಂದ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಡಾ.ಬಿ.ಆರ್. ಅಂಬೇಡ್ಕರ ಹಾಗೂ ಡಾ.ಬಾಬು ಜಗಜೀವನರಾಂ ರವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳು, ಚಿಂತನೆಗಳು ಸದಾ ನಮ್ಮಗೆಲ್ಲ ಪ್ರೇರಣಾದಾಯಿ ಎಂದರು.
ಉಪನ್ಯಾಸಕರಾಗಿ ಶಿಕ್ಷಕ ಎನ್.ಎ. ಬನಸೋಡೆ ಮಾತನಾಡಿ ಇಂದು ಭಾರತದ ಪ್ರತಿಯೊಬ್ಬ ನಾಗರಿಕನೂ ಸಮಾನತೆ ಮತ್ತು ಅವಕಾಶಗಳನ್ನು ಪಡೆಯಲು ಸಂವಿಧಾನ ನೀಡಿದ ಕೊಡುಗೆ ಎಂದು ಹೇಳಿದರು.
ಉಪನ್ಯಾಸಕರಾಗಿ ಶಿಕ್ಷಕಿ ರುದ್ರಮ್ಮ ಗಿಡ್ಡಪ್ಪಗೋಳ ಮಾತನಾಡಿ ದೇಶದ ಜನರಲ್ಲಿ ನಾವೆಲ್ಲರೂ ಒಂದೇ ಎಂಬ ಭಾವನೆ ಮತ್ತು ಸಮಾಜದ ಅಂಕುಡೊಂಕು ತಿದ್ದಿ ಉತ್ತಮ ಸಮಾಜದ ನಿರ್ಮಾಣಕ್ಕೆ ಅಡಿಪಾಯ ಹಾಕಿದ ಮೊದಲಿಗರು ಅಂಬೇಡ್ಕರರು ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮನು ಪತ್ತಾರ ಸಂವಿಧಾನ ಪೀಠಿಕೆ ಪಠಣ ಮಾಡಿದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಚನ್ನಮಲ್ಲಪ್ಪ ಗಿಡ್ಡಪ್ಪಗೋಳ, ಪಪಂ ಉಪಾಧ್ಯಕ್ಷೆ ರಾಜಮಾ ನದಾಫ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ ಮದ್ದೀನ, ಪಪಂ ಮುಖ್ಯಾಧಿಕಾರಿ ಉಮೇಶ ಚಲವಾದಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮನು ಪತ್ತಾರ, ಪಿಎಸ್ಐ ಎಮ್.ಬಿ. ಬಿರಾದಾರ, ಆರೋಗ್ಯ ಅಧಿಕಾರಿ ಲಕ್ಷ್ಮೀ ತೆಲ್ಲೂರು, ಹೆಸ್ಕಾಂ ಅಧಿಕಾರಿ ಎಸ್.ಎಸ್. ಪಡಸಲಗಿ, ಕೃಷಿ ಅಧಿಕಾರಿ ಎಂ.ಕೆ. ಪುರೋಹಿತ, ಶಿಕ್ಷಣ ಸಂಯೋಜಕ ವಿ.ಎಚ್. ಪುರೋಹಿತ, ಪಶುಸಂಗೋಪನೆ ಅಧಿಕಾರಿ ವೆಂಕಟೇಶ ವಾಲಿಕಾರ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರು, ಡಿಎಸ್ಎಸ್ ಸಂಘದ ಸರ್ವ ಸದಸ್ಯರು, ವಿವಿಧ ಇಲಾಖೆಗಳ ಸಿಬ್ಬಂದಿ ವರ್ಗದವರು ಸ್ಥಳೀಯ ಶಾಲಾ ಕಾಲೇಜುಗಳ ಮುಖ್ಯಸ್ಥರು, ಶಿಕ್ಷಕರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ದಲಿತಪರ ಸಂಘಟನೆಯ ಮುಖಂಡರು, ಕಾರ್ಯಕರ್ತರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಮೆರವಣಿಗೆ: ಕಾರ್ಯಕ್ರಮದ ಮೊದಲು ದಿಗಂಬರೇಶ್ವರ ಮಠದ ಯೋಗಿ ಕಲ್ಲಿನಾಥ ಶ್ರೀಗಳು, ಪಟ್ಟಣ ಪಂಚಾಯತಿ ಅಧ್ಯಕ್ಷ ಚನಮಲ್ಲಪ್ಪ ಗಿಡ್ಡಪ್ಪಗೋಳ, ಮಾಜಿ ಜಿಪಂ ಸದಸ್ಯ ಕಲ್ಲು ದೇಸಾಯಿ, ರಫೀಕ ಪಕಾಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ ಹಾಗೂ ಮಾಜಿ ಉಪ ಪ್ರಧಾನಿ ಡಾ ಬಾಬು ಜಗಜೀವನ ರಾಮ್ ರವರ ಭಾವಚಿತ್ರಗಳನ್ನು ಅಳವಡಿಸಿದ್ದ ಭವ್ಯವಾದ ರಥಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಿದರು.
ನಂತರ ದಿಗಂಬರೇಶ್ವರ ಮಠದಿಂದ ಪ್ರಾರಂಭಗೊಂಡ ಮೆರವಣಿಗೆಗೆ ಮಾಜಿ ಜಿಪಂ ಸದಸ್ಯ ಕಲ್ಲು ದೇಸಾಯಿ ಚಾಲನೆ ನೀಡಿದರು. ಮೆರವಣಿಗೆಯು ದಿಗಂಬರೇಶ್ವರ ಮಠದಿಂದ ಪ್ರಾರಂಭಗೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಾಲೂಕು ಪಂಚಾಯತಿ ಹತ್ತಿರದ ಸಭಾ ಭವನವನ್ನು ತಲುಪಿತು. ಪಟ್ಟಣದ ಮಹಾತ್ಮಾ ಗಾಂಧೀಜಿ ವೃತ್ತಕ್ಕೆ ಮೆರವಣಿಗೆ ಆಗಮಿಸುತ್ತಿದ್ದಂತೆ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿಯವರು ಡಾ.ಬಿ.ಆರ್. ಅಂಬೇಡ್ಕರ ಹಾಗೂ ಡಾ.ಬಾಬು ಜಗಜೀವನರಾಮ್ ರವರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿದರು.
ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಗೊಂಬೆ ಕುಣಿತ, ಹಲಗೆ ಮಜಲು ಹಾಗೂ ಮಹಿಳೆಯರ ಆರತಿ ಮೆರವಣಿಗೆಗೆ ಶೋಭೆ ತಂದವು.

