ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಸುಕ್ಷೇತ್ರ ಶ್ರೀಶೈಲ ಕ್ಷೇತ್ರಕ್ಕೆ ತೆರಳಿದ್ದ ಮಲ್ಲಯ್ಯನ ಕಂಬಿಗಳನ್ನು ಭಕ್ತರು ವಿವಿಧ ವಾಧ್ಯ ಮೇಳಗಳೊಂದಿಗೆ ಸಂಭ್ರಮ, ಸಡಗರದಿಂದ ಭಾನುವಾರ ಬರಮಾಡಿಕೊಂಡರು.
ಕಳೆದ ತಿಂಗಳು ಹೋಳಿಹುಣ್ಣಿಮೆ ಮರುದಿನ ಇಲ್ಲಿಂದ ಪಾದಯಾತ್ರಾ ಭಕ್ತರೊಂದಿಗೆ ಕಂಬಿಗಳು ಪಾದಯಾತ್ರೆ ಮೂಲಕ ಶ್ರೀಶೈಲ ಕ್ಷೇತ್ರಕ್ಕೆ ತೆರಳಿದ್ದವು. ದ್ವಾದಶ ಲಿಂಗಗಳಲ್ಲಿ ಒಂದಾದ ಸುಕ್ಷೇತ್ರ ಶ್ರೀಶೈಲ ಮಲ್ಲಿಕಾರ್ಜುನ ಕ್ಷೇತ್ರದಲ್ಲಿ ಪ್ರತಿ ವರ್ಷ ಯುಗಾದಿ ಹಬ್ಬದಂದು ನಡೆಯುವ ರಥೋತ್ಸವದಲ್ಲಿ ಈ ಭಾಗದ ಜನರು ಭಾಗವಹಿಸಿ ತಮ್ಮ ತಮ್ಮ ಗ್ರಾಮಗಳಿಗೆ ಆಗಮಿಸುತ್ತಾರೆ. ತದ ನಂತರ ಹುಣ್ಣಿಮೆಗೆ ಆಯಾ ಆಯಾ ಗ್ರಾಮಗಳಿಗೆ ಅಂದು ತೆರಳಿದ್ದ ಮಲ್ಲಯ್ಯನ ಕಂಬಿಗಳು ಆಗಮಿಸುವದು ಸಾಮಾನ್ಯ.
ಪಟ್ಟಣದ ಮುದ್ದೇಬಿಹಾಳ ರಸ್ತೆಯಲ್ಲಿರುವ ಕಂಬಿ ಕಟ್ಟೆಗೆ ಶನಿವಾರ ರಾತ್ರಿ ಮಲ್ಲಯ್ಯನ ಕಂಬಿಗಳು ಬಂದಿದ್ದವು. ಇಂದು ಬೆಳಗ್ಗೆ ಇಲ್ಲಿನ ಭಕ್ತರು ಕುಂಬಾರರ ಮನೆಗೆ ತೆರಳಿ ಅಲ್ಲಿಂದ ಪೂಜಾ ಸಾಮಗ್ರಿಗಳೊಂದಿಗೆ ಬಸವೇಶ್ವರರ ವಂಶಸ್ಥರಾದ ಕುಲಕರ್ಣಿಯವರ ಮನೆಗೆ, ಗೌಡರ ಮನೆಗೆ ವಿವಿಧ ವಾಧ್ಯ ಮೇಳಗಳೊಂದಿಗೆ ತೆರಳಿ ಅವರನ್ನು ಕರೆದುಕೊಂಡು ಕಂಬಿ ಕಟ್ಟೆಗೆ ಆಗಮಿಸಿದರು. ನಂತರ ಕಂಬಿ ಕಟ್ಟೆಯಲ್ಲಿ ಮಲ್ಲಯ್ಯನ ಕಂಬಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ಮಂಗಳಾರತಿ ಸಲ್ಲಿಸಿ ವಾದ್ಯಮೇಳಗಳೊಂದಿಗೆ ಬಸವೇಶ್ವರ ದೇವಸ್ಥಾನಕ್ಕೆ ಭಕ್ತರು ಅವುಗಳನ್ನು ಬರಮಾಡಿಕೊಂಡರು. ಬಸವೇಶ್ವರ ದೇವಸ್ಥಾನದಲ್ಲಿ ಬಂದು ಕುಳಿತ ಮಲ್ಲಯ್ಯನ ಕಂಬಿಗಳಿಗೆ ಭಕ್ತರು ಬೆಲ್ಲವನ್ನು ಮಲ್ಲಯ್ಯನಿಗೆ ಅರ್ಪಿಸಿ ನೆರೆದ ಭಕ್ತ ಸಮೂಹಕ್ಕೆ ಹಂಚಿ ಧನ್ಯತಾ ಭವಾ ಅನುಭವಿಸಿದರು.
ವೇ.ಗುರುಸಂಗಯ್ಯ ಮಠಪತಿ, ಶ್ರೀಶೈಲ ಮಠಪತಿ, ಎ.ಐ.ಮಠಪತಿ ಅವರನ್ನು ಮಾತನಾಡಿಸಿದಾಗ, ಪ್ರತಿ ವರ್ಷವೂ ಮಲ್ಲಯ್ಯನ ಕಂಬಿಗಳು ಶ್ರೀಶೈಲಕ್ಕೆ ತೆರಳುತ್ತವೆ. ಅಲ್ಲಿ ಮಲ್ಲಯ್ಯನ ಜಾತ್ರೆ ಮುಗಿಸಿಕೊಂಡು ಹದಿನೈದು ದಿನಗಳ ನಂತರ ಕಂಬಿಗಳು ಆಗಮಿಸಿದ ನಂತರ ಶ್ರೀಶೈಲ ಮಲ್ಲಿಕಾರ್ಜುನ ಭಕ್ತರು ತಮ್ಮ ತಮ್ಮ ಮನೆಗಳಲ್ಲಿ ಬೋರಮ್ಮ ಎಂದು ಪೂಜೆಯನ್ನು ಮಾಡುವ ಮೂಲಕ ಶ್ರೀಶೈಲ ಕ್ಷೇತ್ರದ ಹರಕೆಯನ್ನು ತೀರಿಸುವ ಪದ್ದತಿ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಪ್ರತಿ ಗ್ರಾಮದಲ್ಲಿ ಮಲ್ಲಯ್ಯನ ಕಂಬಿಗಳು ಬಂದ ನಂತರವೇ ಈ ಪೂಜೆ ಎಲ್ಲರ ಮನೆಯಲ್ಲಿ ಅವರ ಅನುಕೂಲಕ್ಕೆ ತಕ್ಕಂತೆ ಎರಡು ತಿಂಗಳ ಕಾಲ ನಡೆಯುತ್ತದೆ. ಏ. 17 ರಂದು ಪಟ್ಟಣದಲ್ಲಿ ಐದೇಶಿ(ಬೋರಮ್ಮ) ಪೂಜೆಯನ್ನು ಭಕ್ತರು ಮಾಡುವರು ಎಂದರು.
ಕಂಬಿ ಮೆರವಣಿಗೆಯಲ್ಲಿ ಗುರುಸಂಗಯ್ಯ ಮಠಪತಿ, ವೀರಗಂಗಾಧರಯ್ಯ ಕಾಳಹಸ್ತೇಶ್ವರಮಠ, ಅಪ್ಪಯ್ಯ ಮಠಪತಿ, ಶ್ರೀಶೈಲ ಮಠಪತಿ, ಬಸವರಾಜ ಹಾರಿವಾಳ, ಚಂದ್ರಶೇಖರ ಮುರಾಳ, ಮಂಜು ಕುಂಬಾರ, ಈಶ್ವರ ಕುಂಬಾರ, ಅಶೋಕ ಕುಂಬಾರ, ಶ್ರೀಶೈಲ ಕುಂಬಾರ, ಕಿರಣ ಕುಲಕರ್ಣಿ, ಶ್ರೀಶೈಲ ಪತ್ತಾರ, ರಾಜು ನಾಲತವಾಡ, ಶ್ರೀಶೈಲ ಹೆಬ್ಬಾಳ
ಸೇರಿದಂತೆ ಇತರರು ಭಾಗವಹಿಸಿದ್ದರು.
ಪ್ರಸಾದ ವ್ಯವಸ್ಥೆ
ಪಟ್ಟಣದ ಬಸವೇಶ್ವರ ದೇವಸ್ಥಾನದ ಜೀರ್ಣೋದ್ದಾರಕರ ದಿ. ಮಲ್ಲಪ್ಪ ಸಿಂಹಾಸನ ಪ್ರತಿಮೆ ಆವರಣದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಪಾದಯಾತ್ರೆ ಸೇವಾ ಸಮಿತಿಯಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

