ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಡಾ. ಬಿ.ಆರ್.ಅಂಬೇಡ್ಕರ ಅವರು ಎಂದಿಗೂ ದೇಶ ಒಡೆಯುವ, ಸಮಾಜ ಸೀಳುವ ಕೆಲಸ ಮಾಡಲಿಲ್ಲ. ತಮ್ಮ ಅವಿಶ್ರಾಂತ ಹೋರಾಟದ ಫಲವಾಗಿ ಅವರೊಬ್ಬ ಜಾತಿ ನಾಯಕರಾಗದೇ ಇಡೀ ರಾಷ್ಟ್ರದ ನಾಯಕರಾಗಿದ್ದಾರೆ ಎಂದು ಧಾರವಾಡ ಎಲ್ಐಸಿ ಉಪವ್ಯವಸ್ಥಾಪಕ ಪಿ.ಎಸ್.ಮಳಗಿ ಹೇಳಿದರು.
ಪಟ್ಟಣದ ಬಸವ ಭವನದಲ್ಲಿ ತಾಲೂಕಾಡಳಿತ ತಾಲೂಕು ಪಂಚಾಯತ, ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ ಅವರ ೧೩೪ ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಡಾ.ಅಂಬೇಡ್ಕರ ಅವರ ಹೋರಾಟ ಕೇವಲ ಸ್ವಂತದ ಉನ್ನತಿಗಾಗಿರದೇ ಇಡೀ ಒಂದು ಜನವರ್ಗದ ಉನ್ನತಿಗಾಗಿ ಇತ್ತು. ಅವರು ಈ ಶತಮಾನದ ಒಬ್ಬ ಶ್ರೇಷ್ಠ ಮೇಧಾವಿಯೆನಿಸಿಕೊಂಡು ಬುದ್ಧಿಯೋಗಿಯಾಗಿದ್ದಾರೆ ಎಂದರು.
ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಪ್ರಾಸ್ತವಿಕವಾಗಿ ಮಾತನಾಡಿದರು.
ಅಧ್ಯಕ್ಷತೆಯ ವಹಿಸಿದ್ದ ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ಪುರಸಭೆ ಉಪಾಧ್ಯಕ್ಷ ಅಶೋಕ ಹಾರಿವಾಳ, ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ, ಡಿಎಸ್ಎಸ್ ಮುಖಂಡರಾದ ಅರವಿಂದ ಸಾಲವಾಡಗಿ, ಅಶೋಕ ಚಲವಾದಿ, ಮಹಾಂತೇಶ ಸಾಸಾಬಾಳ, ಸಂಜೀವ ಕಲ್ಯಾಣಿ, ಪರಶುರಾಮ ದಿಂಡವಾರ, ಗುರುರಾಜ ಗುಡಿಮನಿ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಿಕ ಮಂಜುಳಾ ಹಿರೇಮನಿ ಅವರು ಭಾರತದ ಸಂವಿಧಾನದ ಪ್ರಸ್ತಾವನೆಯ ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಶಿವನಗೌಡ ಬಿರಾದಾರ, ಸಂಗಮೇಶ ಓಲೇಕಾರ, ರವಿ ನಾಯ್ಕೋಡಿ, ಬಿ.ಪಿ.ನಾಗಾವಿ, ಶಿವಾನಂದ ಮಂಗಾನವರ, ಬಸನಗೌಡ ಪಾಟೀಲ, ಪುರಸಭೆ ಸದಸ್ಯೆ ರೇಖಾ ಬೆಕಿನಾಳ,ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ, ಬಿಇಓ ವಸಂತ ರಾಠೋಡ, ತಾಪಂ ಇಓ ಪ್ರಕಾಶ ದೇಸಾಯಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾ ಹಿರೇಮನಿ, ಇತರರು ಇದ್ದರು.
ವಿರೇಶ ಹೊನವಾಡ ಸ್ವಾಗತಿಸಿದರು. ರಶ್ಮಿ ರಾಘವೇಂದ್ರ ನಿರೂಪಿಸಿದರು. ಕಚೇರಿಯ ಅಧೀಕ್ಷಕ ಎಂ.ಎಂ.ದಪೇದಾರ ವಂದಿಸಿದರು. ಸಂಗಮೇಶ ಚಲವಾದಿ, ಚಂದ್ರಶೇಖರ ನಾಲತವಾಡ ಕ್ರಾಂತಿಗೀತೆ ಹಾಡಿದರು.
ಡಾ.ಅಂಬೇಡ್ಕರ ಭಾವಚಿತ್ರ ಮೆರವಣಿಗೆ
ಕಾರ್ಯಕ್ರಮದ ಮುನ್ನ ತೆಲಗಿ ರಸ್ತೆಯ ಡಾ.ಅಂಬೇಡ್ಕರ ವೃತ್ತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಡಾ.ಅಂಬೇಡ್ಕರ ಭಾವಚಿತ್ರ ಮೆರವಣಿಗೆ ವಾದ್ಯಮೇಳದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ಜರುಗಿತು.

