ಚಡಚಣದ ಕಲ್ಲೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಅಕ್ಕಮಹಾದೇವಿ ಜಯಂತಿ ಆಚರಣೆ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಚಿಕ್ಕ ವಯಸ್ಸಿನಲ್ಲಿಯೇ ಸಕಲ ಸುಖವನ್ನು ತ್ಯಜಿಸಿ, ಚೆನ್ನಮಲ್ಲಿಕಾರ್ಜುನನ್ನು ತನ್ನ ಪತಿಯೆಂದು ಸ್ವೀಕರಿಸಿ, ಲೌಕಿಕ ಜಗತ್ತನ್ನು ಧಿಕ್ಕರಿಸಿ, ಕೇಶಾಂಬರೆಯಾಗಿ ವಚನ ಸಾಹಿತ್ಯದಲ್ಲಿ ಗುರುತಿಸಿಕೊಂಡು ಮಾದರಿಯಾಗಿದ್ದಾಳೆ. ಸ್ತ್ರೀವಾದಿ ಚಳುವಳಿಯ ಪ್ರತಿಪಾದಕಿಯಾಗಿ ಅಂದಿನ ಕಾಲದಲ್ಲಿ ತೋರಿದ ದಿಟ್ಟತನ, ಶ್ರದ್ಧೆ, ವೈಚಾರಿಕ ಮನೋಭಾವನೆ ಇಂದಿನ ಮಹಿಳೆಯರ ಬದುಕಿಗೆ ಅಕ್ಕಮಹಾದೇವಿ ಆದರ್ಶ ಎಂದು ಚಡಚಣ ತಾಲೂಕು ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರಾದ ದೀಪಾ ಪ್ರಶಾಂತ ಮಾಳಿಯವರು ಹೇಳಿದರು.
ಚಡಚಣ ಪಟ್ಟಣದ ಕಲ್ಮೇಶ್ವರ ಪ್ರಾಥಮಿಕ ಶಾಲೆಯಲ್ಲಿ ಕದಳಿ ಮಹಿಳಾ ವೇದಿಕೆ ಹಾಗೂ ಕಲ್ಮೇಶ್ವರ ಶಿಕ್ಷಣ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಅಕ್ಕಮಹಾದೇವಿ’ ಜಯಂತಿ ಕಾರ್ಯಕ್ರಮವನ್ನು ಉದ್ದೇಶಸಿ ಮಾತನಾಡಿದ ಅವರು. ಅಕ್ಕಮಹಾದೇವಿಯವರ ಧಾರ್ಮಿಕ ತತ್ತ್ವಗಳು, ಸಾಧನೆ ಹಾಗೂ ಮಹಿಳಾ ಸಬಲೀಕರಣಕ್ಕೆ ನೀಡಿದ ಕೊಡುಗೆಗಳು ಅಜರಾಮರ ಎಂದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲ್ಮೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಕಾಶಿಬಾಯಿ ವಾಲಿಕಾರರವರು ಮಾತನಾಡುತ್ತ. ೧೨ನೇ ಶತಮಾನದ ವಚನಕಾರರಲ್ಲಿ ಅಕ್ಕಮಹಾದೇವಿ ಪ್ರಮುಖರಾಗಿದ್ದಾರೆ. ಅಧಿಕಾರ, ಸಂಪತ್ತು, ವೈಭವ, ಆಡಂಬರ, ಭೋಗ ಜೀವನವನ್ನು ಸಂಪೂರ್ಣವಾಗಿ ತಿರಸ್ಕರಿಸಿದರು. ಎಲ್ಲ ಬಂಧನಗಳಿಂದ ಬಿಡುಗಡೆ ಪಡೆದು ಸಾಮಾನ್ಯರಲ್ಲಿ ಸಾಮಾನ್ಯಳಂತೆ ಜನ ಜೀವನದಲ್ಲಿ ಬೆರೆತು ಬದುಕಿನ ಮೌಲ್ಯಗಳನ್ನು ವಚನಗಳ ಮೂಲಕ ಪ್ರತಿಪಾದಿಸಿದರು. ಅಕ್ಕನ ವಚನಗಳ ಸಾರವನ್ನು ಇಂದಿನ ವಿದ್ಯಾರ್ಥಿಗಳಿಗೆ ಮುಟ್ಟಿಸುವ ಕಾರ್ಯವಾಗಬೇಕಿದೆ ಎಂದರು.
ಈ ವೇಳೆಯಲ್ಲಿ ಕದಳಿ ವೇದಿಕೆಯ ಸದಸ್ಯರಾದ ಶಾಂತಾಬಾಯಿ ಹಿರೇಮಠ, ಅನುರಾಧಾ ಜಂಗಮಶೆಟ್ಟಿ, ಕವಿತಾ ಹಳದಕಿ, ಗಂಗಾ ಬಗಲಿ ಸೇರಿದಂತೆ ಕಲ್ಮೇಶ್ವರ ಪ್ರಾಥಮಿಕ ಶಾಲೆಯ ಶಿಕ್ಷಕ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

