ರೇವತಗಾಂವ ಉಮರಜ ಮಾರ್ಗ ಮಧ್ಯದ ರಸ್ತೆ | ಸಂಚಾರಕ್ಕೆ ನಿತ್ಯ ಪರದಾಟ | ಚಾಲಕರಿಗೆ ಧೂಳಿನ ಸ್ವಾಗತ | ಬೈಕ್ ಸವಾರರೇ ಹುಷಾರ್!
ಉದಯರಶ್ಮಿ ದಿನಪತ್ರಿಕೆ
ವರದಿ: ಸಿದ್ರಾಮ ಮಾಳಿ
ಚಡಚಣ: ಶಿರಾಡೋಣ, ರೇವತಗಾಂವ ಉಮರಜ ಮಾರ್ಗ ಮಧ್ಯದ ರಸ್ತೆ ಸಂಪೂರ್ಣ ಹದಗೆಟ್ಟ ಹಿನ್ನಲೆ ವಾಹನ ಚಾಲಕರು, ಬೈಕ್ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಸ್ವಲ್ಪ ಎಚ್ಚರ ತಪ್ಪಿದರೆ ಭಾರಿ ಅನಾಹುತಗಳು ಸಂಭವಿಸಬಹುದಾಗಿದೆ.
ತೀವ್ರ ಹದಗೆಟ್ಟಿರುವ ರಸ್ತೆಯುದ್ಧಕ್ಕೂ ಅಲ್ಲಲ್ಲಿ ಭಾರೀ ಗಾತ್ರದ ಹೊಂಡಗಳು ನಿರ್ಮಾಣವಾಗಿವೆ. ಡಾಂಬರು ಕಾಣದೆ ದಶಕಗಳೇ ಕಳೆದಿವೆ. ಕಲ್ಲು-ಮಣ್ಣು, ಜಲ್ಲಿ ಕಲ್ಲು ಮೇಲೆದ್ದಿರುವುದರಿಂದ ಸಂಚಾರಕ್ಕೆ ಇನ್ನಿಲ್ಲದ ಅಡಚಣೆಯಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿಷ್ಕಾಳಜಿಯಿಂದ ರಸ್ತೆಗಳು ಅಭಿವೃದ್ಧಿ ಕಂಡಿಲ್ಲ. ತಗ್ಗು-ಗುಂಡಿಗಳಿರುವ ರಸ್ತೆಗಳಲ್ಲಿ ಸಂಚರಿಸಲು ಸಾಧ್ಯವಾಗದ ಕಾರಣ, ವಾಹನ ಸವಾರರು ಜನಪ್ರತಿನಿಧಿಗಳಿಗೆ ನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ.
ರಸ್ತೆ ತುಂಬ ಗುಂಡು ಕಲ್ಲುಗಳು ತುಂಬಿಕೊಂಡಿದ್ದು, ಅಲ್ಲಲ್ಲಿ ತಗ್ಗು-ದಿನ್ನೆಗಳು ನಿರ್ಮಾಣವಾಗಿವೆ. ಅಲ್ಲದೆ, ಗಾಡಿಗಳ ಓಡಾಟದಿಂದ ಧೂಳು ಏಳುತ್ತಿದ್ದು, ಚಾಲಕರು ಪರದಾಡುತ್ತಿದ್ದಾರೆ. ಬೈಕ್ ಸವಾರರು ಈ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾಗಿದೆ. ಸ್ವಲ್ಪ ಯಾಮಾರಿದರೆಜೀವ ಹೋಗುವುದು ಗ್ಯಾರಂಟಿ. ಧೂಳಿನಿಂದ ಮುಂದೆ ಬರುವ ವಾಹನ ಗುರುತಿಸಲಾಗದೆ ಬಿದ್ದು ಗಾಯಗೊಂಡ ಅನೇಕ ಘಟನೆಗಳು ನಡೆದಿವೆ.
ಬಡತನ ರೇಖೆಗಿಂತ ಕೆಳಗಿರುವವರು ಅಗತ್ಯ ಕೆಲಸಗಳಿಗೆ ಬರಬೇಕಾದರೆ ಹಾಗೂ ರೋಗಿಗಳು ತುರ್ತು ಚಿಕಿತ್ಸೆಗೆ ತೆರಳಲು ಹರಸಾಹಸ ಪಡಬೇಕಾಗಿದೆ.
ಈ ರಸ್ತೆ ಮಾರ್ಗವಾಗಿ ರಾಜಕಾರಣಿಗಳು ಹಲವು ಕಾರ್ಯಕ್ರಮಗಳಿಗಾಗಿ ಬಂದು ಹೋಗಿದ್ದಾರಾದರೂ ರಸ್ತೆಗೆ ಮಾತ್ರ ಮುಕ್ತಿ ದೊರೆತ್ತಿಲ್ಲ. ಚುನಾವಣಾ ಸಮಯದಲ್ಲಿ ನೀಡಿದ್ದ ಭರವಸೆಯನ್ನು ಉಳಿಸಿಕೊಂಡಿಲ್ಲ. ಶೀಘ್ರ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ದುರಸ್ತಿಗೆ ಮುಂದಾಗಿ ವಾಹನ ಸವಾರರ ಪರದಾಟ ತಪ್ಪಸಬೇಕಿದೆ

