ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಏ.೧೭ ರಂದು ವಿಜಯಪುರದಲ್ಲಿ ಜನಾಕ್ರೋಷ ಯಾತ್ರೆಯ ಅಂಗವಾಗಿ ನಡೆಯಲಿರುವ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಜಿಲ್ಲೆಯ ಎಲ್ಲ ಬಿಜೆಪಿ ಕಾರ್ಯಕರ್ತರು ಭಾಗಿಯಾಗಬೇಕು ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಕರೆ ನೀಡಿದರು.
ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಈ ಹೋರಾಟದ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ. ಹತ್ತಾರು ಸುಳ್ಳುಗಳನ್ನು, ಅನೇಕ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕೆಲವೇ ದಿನಗಳಲ್ಲಿ ಜನರ ಆಕ್ರೋಷಕ್ಕೆ ಕಾರಣವಾಗಿದೆ. ಪ್ರತಿಯೊಂದರಲ್ಲೂ ದರ ಏರಿಕೆ, ತೆರಿಗೆ ಅಂತಾ ಬಡವರ ಮೇಲೆ ಬರೆ ಎಳಿದಿದೆ. ಜನಸಾಮಾನ್ಯರ ಬದುಕನ್ನು ನಾಶ ಮಾಡಲು ಹೊರಟಿದೆ. ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಇದು ೪೦% ಸರ್ಕಾರ, ಎಟಿಎಂ, ಪೇಟಿಎಂ ಸರ್ಕಾರ ಅಂತಾ ಸುಳ್ಳು ಆರೋಪ ಮಾಡಿ ಜನರಲ್ಲಿ ಗೊಂದಲ ಸೃಷ್ಟಿ ಮಾಡಿದ್ರು. ಈ ಬಗ್ಗೆ ಲೋಕಾಯುಕ್ತರು ತನಿಖೆ ಮಾಡಿ ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ ಅಂತಾ ಬಿ ರಿಪೋರ್ಟ ನೀಡಿದ್ದಾರೆ. ನಮ್ಮ ಸರ್ಕಾರ ಅಭಿವೃಧ್ಧಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮೊದಲನೇ ಸ್ಥಾನದಲ್ಲಿ ಅಂತಾ ಕಾಂಗ್ರೇಸ್ ಶಾಸಕರೇ ಸರ್ಟಿಫಿಕೇಟ್ ಕೊಟ್ಟಿದ್ದಾರೆ ಎಂದು ಕುಟುಕಿದರು.
ರೈತ ವಿರೋಧಿ, ಜನವಿರೋಧಿ ಈ ಕಾಂಗ್ರೇಸ್ ಸರ್ಕಾರದ ವಿರುದ್ಧ ಪ್ರಾರಂಭವಾದ ಜನಾಕ್ರೋಷ ಯಾತ್ರೆಗೆ ಒಳ್ಳೆಯ ಸ್ಪಂದನೆ ದೊರೆಯುತ್ತಿದೆ. ದೊಡ್ಡ ಪ್ರಮಾಣದಲ್ಲಿ ಜನ ಭಾಗಿಯಾಗುತ್ತಿದೆ. ಹೋರಾಟವನ್ನು ನೋಡಿ ಕಾಂಗ್ರೇಸ್ ನಾಯಕರು ವಿಚಲಿತರಾಗಿದ್ದಾರೆ. ಈ ಹೋರಾಟ ನಡೆಯಬಾರದು ಅಂತಾ ಷಡ್ಯಂತ್ರ ಮಾಡುತ್ತಿದ್ದಾರೆ. ಆದರೆ ಜನ ಇದಕ್ಕೆಲ್ಲ ಬೆಲೆ ಕೊಡದೇ ಸ್ವಯಂ ಪ್ರೇರಣೆಯಿಂದ ಭಾಗಿಯಾಗುತ್ತಿದ್ದಾರೆ. ಹಾಗಾಗಿ ಜಿಲ್ಲೆಯ ಎಲ್ಲ ಬಿಜೆಪಿ ಕಾರ್ಯಕರ್ತರು ಭಾಗಿಯಾಗಬೇಕು ಎಂದರು.
ಈ ವೇಳೆ ಬಿಜೆಪಿ ಮಂಡಲದ ಅಧ್ಯಕ್ಷ ಜಗದೀಶ ಪಂಪಣ್ಣವರ ಪ್ರಮುಖರಾದ ಹೇಮರೆಡ್ಡಿ ಮೇಟಿ, ಎಂ.ಎಸ್.ಪಾಟೀಲ, ಗಂಗಾಧರ ನಾಡಗೌಡರ, ಕೆಂಚಪ್ಪ ಬಿರಾದಾರ, ಮಲಕೇಂದ್ರಗೌಡ ಪಾಟೀಳ, ಪ್ರಭು ಕಡಿ, ಚನ್ನಪ್ಪ ಕಂಠಿ, ಶ್ರೀಶೈಲ ದೊಡಮನಿ, ಪ್ರೇಮಸಿಂಗ್ ಚೌವ್ಹಾಣ, ಅಶೋಕ ರಾಠೋಡ, ಸಂಜು ಬಾಗೇವಾಡಿ, ಸಂಗಮ್ಮ ದೇವರಳ್ಳಿ, ಗೌರಮ್ಮ ಹುನಗುಂದ, ಪ್ರೀತಿ ಕಂಬಾರ, ಕಾವೇರಿ ಕಂಬಾರ, ಸಿದ್ಧರಾಜ ಹೊಳಿ, ರಾಮು ಪೂಜಾರಿ, ಅಶೋಕ ವನಹಳ್ಳಿ ಸೇರಿದಂತೆ ಹಲವರು ಇದ್ದರು.

