ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಾಗತಿಕ ಮಹಿಳಾ ಸ್ವಾಭಿಮಾನ ಮತ್ತು ಆತ್ಮಬಲದ ಸಂಕೇತ ಅಕ್ಕಮಹಾದೇವಿ. ಅವರ ಜೀವನದ ಯಶೋಗಾಥೆಯು ಅಬಲೆಯರಿಗೆ ಶಕ್ತಿಯ ಮೈಲಿಗಲ್ಲಾಗಿದೆ.
ಅವರು ಶರಣ ಚಳುವಳಿಯಲ್ಲಿ ಮೇರು ವ್ಯಕ್ತಿತ್ವದ ಚೇತನ
ಶಕ್ತಿಯಾಗಿದ್ದರು ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.
ಶನಿವಾರದಂದು ತಾಲೂಕಿನ ನಾಗಠಾಣ ಗ್ರಾಮದ ಅಕ್ಕಮಹಾದೇವಿ ಗುಡಿಯಲ್ಲಿ ಅಕ್ಕಮಹಾದೇವಿ ಮಹಿಳಾ ಬಳಗದ ವತಿಯಿಂದ ಹಮ್ಮಿಕೊಂಡ ಅಕ್ಕಮಹಾದೇವಿ ಜಯಂತಿ ಆಚರಣೆಯನ್ನು ಉದ್ಧೇಶಿಸಿ ಮಾತನಾಡಿದರು.
ಅಕ್ಕಮಹಾದೇವಿಯು ತನ್ನ ವಚನಗಳಲ್ಲಿ ಬುದ್ದಿಗಿಂತ ಭಾವಕ್ಕೆ,ಮಾತಿಗಿಂತ ಕ್ರಿಯೆಗೆ, ಅಧಿಕಾರಕ್ಕಿಂತ ಅಂತಃಕರಣಕ್ಕೆ ಹೆಚ್ಚು ಮಹತ್ವ ನೀಡಿದ್ದಾರೆ. ಅಕ್ಕಳು ಹೇಳುವ ಮಾತು ಪಾಂಡಿತ್ಯದ ಪ್ರದರ್ಶನವಾಗಿರದೇ, ಅಂತರಂಗದಲ್ಲಿ ಹಚ್ಚಿಟ್ಟ ದೀಪದಂತಿದೆ. ಅಕ್ಕ ಒಬ್ಬ ಕವಯತ್ರಿ-ಅನುಭಾವಿ-ಜ್ಞಾನದ ಬೆಳಕಾಗಿ ಕನ್ನಡ ಸಾಹಿತ್ಯದ ದೃವತಾರೆಯಾಗಿದ್ದಾಳೆ ಎಂದು ಹೇಳಿದರು.
ಬಳಗದ ಸುನಂದಾ ತಾಯಿ ಮಾತನಾಡಿ, ಅಕ್ಕಳನ್ನು ಭಕ್ತಿ, ಜ್ಞಾನ. ವೈರಾಗ್ಯಗಳ ಖಣಿ ಎಂದು ಶರಣರು ಬಣ್ಣಿಸಿರುವರು. ಆದಕಾರಣ ಶರಣರಿಗೆ ಬಸವಣ್ಣ ಪ್ರಮುಖರಾದಂತೆ ಶರಣೆಯರಿಗೆ ಅಕ್ಕಮಹಾದೇವಿ ಆದರ್ಶರಾಗಿರುವರು ಎಂದರು.
ಮಂಜುನಾಥ ಗಂಗನಳ್ಳಿ ಮಾತನಾಡಿ, ಕನ್ನಡ ಸಾಹಿತ್ಯದ ಮೊದಲ ಬಂಡಾಯ ಕವಯತ್ರಿ, ವಚನಗಾರ್ತಿ ಹಾಗೂ ಮಹಿಳೆಯರ ಪ್ರತಿನಿಧಿಯಾಗಿ, ಸಾಮಾಜಿಕ ಬದಲಾವಣೆಗೆ ಶ್ರಮಿಸಿದ ಅಕ್ಕಮಹಾದೇವಿಯ ಬದುಕೇ ಒಂದು
ಮಹಾಕಾವ್ಯವಾಗಿದೆ ಎಂದು ಹೇಳಿದರು.
ರಾಜು ಕತ್ನಳ್ಳಿ, ಪ್ರವೀಣ ಅರಕೇರಿ, ಮುತ್ತಪ್ಪ ಹಂಡಿ, ಬಾಬು ಕತ್ನಳ್ಳಿ, ತಿಪರಾಯ ಹಂಡಿ, ಕಸ್ತೂರಿ ವಗ್ಗೆ, ಮಹಾದೇವಿ ಹಡಪದ, ಪ್ರವೀಣ ಬಬಲಾದ, ಭವರವ್ವ ಬಂದಾಳ, ಪಾರ್ವತಿ ಸಾರವಾಡ ಸೇರಿದಂತೆ ಅನೇಕರು ಭಾಗವಹಿಸಿದ್ದರು.

