ಶಾಸಕ ಬಸನಗೌಡ ಪಾಟೀಲ ಯತ್ನಾಳ ಹತ್ಯೆ ವಿಚಾರಕ್ಕೆ ಸಂಬಂಧಿಸಿದ ಆಡಿಯೊ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರ ಹತ್ಯೆಗೆ ಸಂಬಂಧಿಸಿದಂತೆ, ಮುಸ್ಲಿಂ ಮುಖಂಡರು ನಡೆಸಿದ ಸಭೆಯಲ್ಲಿ ನಿರ್ಧರಿಸಿದ್ದ ವಿಷಯಗಳನ್ನು ತಿಳಿಸಲು, ಅದೇ ಸಭೆಯಲ್ಲಿದ್ದ ವ್ಯಕ್ತಿಯೇ ಆಡಿಯೋ ಮಾಡಿ ಹಂಚಿಕೊಂಡಿರುವ ಆತಂಕಕಾರಿ ವಿಷಯದಿಂದ ಇಡೀ ಹಿಂದೂ ಸಮುದಾಯವೇ ಆತಂಕದಲ್ಲಿದ್ದು, ಈ ಗಂಭೀರ ಪ್ರಕರಣವನ್ನು ಎನ್.ಐ.ಎ ತನಿಖೆ ವಹಿಸಿ, ಸತ್ಯಾಸತ್ಯತೆ ಬಯಲಿಗೆಳೆಯಬೇಕು ಎಂದು ಬಿಜೆಪಿ ನಗರ ಮಂಡಲ ಮಾಜಿ ಅಧ್ಯಕ್ಷ ಶಂಕರ ಹೂಗಾರ, ಮಹಾನಗರ ಪಾಲಿಕೆ ಸದಸ್ಯರಾದ ಕಿರಣ ಪಾಟೀಲ, ರಾಜಶೇಖರ ಕುರಿಯವರ, ಪ್ರೇಮಾನಂದ ಬಿರಾದಾರ, ದಾದಾಸಾಹೇಬ ಬಾಗಾಯತ, ಸಂತೋಷ ಪಾಟೀಲ ತಿಳಿಸಿದ್ದಾರೆ.
ಜಂಟಿ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮುಸ್ಲಿಂ ಸಮುದಾಯದವರು ಈಚೆಗೆ ನಗರದಲ್ಲಿ ಮುಸ್ಲಿಂ ಮುತೈದಾ ಕೌನ್ಸಿಲ್ ವತಿಯಿಂದ (ಎಂ.ಎಂ.ಸಿ) ಸಭೆ ನಡೆಸಿ, ಏಪ್ರಿಲ್ ೧೫ ರಂದು ವಿಜಯಪುರ ನಗರದಲ್ಲಿ ಬಂದ್ ನಡೆಸಲು ನಿರ್ಧರಿಸಿ, ಅಂದು ೧ ಲಕ್ಷ ಜನರು ಸೇರಿ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ರ್ಯಾಲಿ ಮೂಲಕ ಬಸನಗೌಡ ಪಾಟೀಲ ಯತ್ನಾಳ ಅವರ ಮನೆಗೆ ತೆರಳಲಾಗುವುದು. ಅಂದೇ ಯತ್ನಾಳ ಅವರಿಗೆ ಅಂತಿಮ ದಿನವಾಗಲಿದೆ ಎಂದು ನಿರ್ಧಾರ ಮಾಡಿದ್ದರ ಬಗ್ಗೆ ಅದೇ ಸಭೆಯಲ್ಲಿ ಭಾಗವಹಿಸಿದ ವ್ಯಕ್ತಿಯಿಂದಲೇ ಎಲ್ಲ ಕಡೆ ವಿಷಯ ಹಂಚಿಕೊಳ್ಳಲು ಆಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ.
ಆದರೆ, ಸಭೆಯಲ್ಲಿದ್ದ ಮುಖಂಡರು ತಮ್ಮ ಬುಡಕ್ಕೆ ಬರುತ್ತೆ ಅಂತ ಪತ್ರಿಕಾಗೋಷ್ಠಿ ನಡೆಸಿ, ಯಾರೋ ಕಿಡಗೇಡಿ ನಕಲಿ ಆಡಿಯೋ ಮಾಡಿ ಹರಿಬಿಟ್ಟಿದ್ದಾನೆಂದು ಸಬೂಬು ನೀಡಿದ್ದಾರೆ. ಅಲ್ಲದೆ, ದೊಂಬಿ, ಮತೀಯ ಗಲಭೆ, ಎಸ್.ಸಿ, ಎಸ್.ಟಿ ಹಾಗೂ ಇತರೆ ಪ್ರಕರಣಗಳಲ್ಲಿ ಭಾಗಿಯಾಗಿ ಗಡಿಪಾರು ಶಿಕ್ಷೆಗೂ ಗುರಿ ಆದ ಖಾದ್ರಿ ಎನ್ನುವ ವಕೀಲ ಸಭೆ ನಡೆಸಿದನ್ನು ಪತ್ರಿಕಾಗೋಷ್ಠಿಯಲ್ಲಿಯೇ ದೃಢಪಡಿಸಿದ್ದಾನೆ. ಆತ ಕೂಡ ಮುಸ್ಲಿಂ ಮುತೈದಾ ಕೌನ್ಸಿಲ್ (ಎಂ.ಎಂ.ಸಿ) ಸದಸ್ಯನಾಗಿದ್ದಾನೆ. ಆದರೆ, ಈ ಆಡಿಯೋ ಬಸನಗೌಡ ಪಾಟೀಲ ಯತ್ನಾಳ ಅವರೆ ತಮ್ಮ ಹಿಂಬಾಲಕರಿಂದ ಮಾಡಿಸಿ ಬಿಟ್ಟಿದ್ದಾರೆಂದು ಹೇಳುವ ಮೂಲಕ ಪ್ರಕರಣದ ದಾರಿ ತಪ್ಪಿಸಲು ಯತ್ನಿಸುತ್ತಿದ್ದಾನೆ.
ಇವನೊಬ್ಬ ಗುಂಡಾ ಆಗಿದ್ದು, ಇತನೊಂದಿಗೆ ವಕ್ಫ್ ಆಸ್ತಿ ಕಬಳಿಸಿರುವ ವ್ಯಕ್ತಿಗಳು ಪತ್ರಿಕಾಗೋಷ್ಠಿ ನಡೆಸುವುದು ಕೂಡ ಮೂರ್ಖತನ. ಸಮಾಜದಲ್ಲಿ ಶಾಂತಿ ಕದಡುವ ಘಟನೆಗಳು ನಡೆದರೆ ಅವರು ಕೂಡ ಹೊಣೆಗಾರರಾಗುತ್ತಾರೆ.
ಬಸನಗೌಡ ಪಾಟೀಲ ಯತ್ನಾಳ ರವರ ಹತ್ಯೆ ಸಂಚಿನ ಆಡಿಯೋ ಮೂಲಕ ಸಮಾಜದಲ್ಲಿ ಶಾಂತಿ ಕದಡಿಸುವ ಯತ್ನ ನಡೆಸಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ. ಇದರ ಹಿಂದೆ ಯಾವ ಸಮಾಜಘಾತುಕ ಸಂಘಟನೆಗಳು, ಸಮಾಜಘಾತುಕ ವ್ಯಕ್ತಿಗಳಿದ್ದಾರೆ ಎಂಬುವುದು ಹೊರಬರಬೇಕು. ಗೃಹ ಸಚಿವರು ಹಾಗೂ ಉಸ್ತುವಾರಿ ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು. ಸಮಾಜಘಾತುಕ ಶಕ್ತಿಗಳ ಹೆಡೆಮುರಿ ಕಟ್ಟುವುದು ಅತ್ಯಗತ್ಯವಿದೆ. ಸಮಾಜದಲ್ಲಿ ಶಾಂತಿ ಕದಡುವ ಆಡಿಯೋ, ವಿಡಿಯೋ ಹರಿ ಬಿಡುವವರನ್ನು ಗಡಿಪಾರು ಮಾಡಬೇಕು. ಗೂಂಡಾ ವಕೀಲ ಖಾದ್ರಿಯನ್ನು ಸರ್ಕಾರಿ ವಕೀಲನಾಗಿ ನಿಯೋಜನೆ ಮಾಡಿದ್ದನ್ನು ತಕ್ಷಣ ರದ್ದುಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

