ಪಡಗಾನೂರ ಗ್ರಾಮದ ಸೋಮೇಶ್ವರ ಜಾತ್ರಾ ಮಹೋತ್ಸವ | ಧರ್ಮಸಭೆ
ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ನಿಸ್ವಾರ್ಥ ಕಾಯಕ ನಮ್ಮನ್ನು ನಾಯಕರನ್ನಾಗಿಸುತ್ತದೆ ಎಂದು ಶ್ರೀಶೈಲ ಪೀಠದ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.
ತಾಲ್ಲೂಕಿನ ಪಡಗಾನೂರ ಗ್ರಾಮದ ಸೋಮೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಜರುಗಿದ ಧರ್ಮಸಭೆಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ನಿಸ್ವಾರ್ಥವೆಂಬುದು ಧರ್ಮವಾಗಿದ್ದು, ಸ್ವಾರ್ಥವೆಂಬುದು ಅಧರ್ಮವಾಗಿದೆ. ಸ್ವಾರ್ಥವನ್ನು ತೆಗೆದುಹಾಕಿ ಎಲ್ಲರೂ ಸಾರ್ಥಕವಾದ ಜೀವನವನ್ನು ನಡೆಸಬೇಕು ಎಂದರು.
ಕಡಗಂಚಿಯ ಸಾವಿರದೇವರ ಸಂಸ್ಥಾನ ಮಠದ ವೀರಭದ್ರ ಸ್ವಾಮೀಜಿ ನೇತೃತ್ವದಲ್ಲಿ ಹಾಗೂ ಸೋಮೇಶ್ವರ ದೇವಸ್ಥಾನ ಕಮೀಟಿಯ ಅಧ್ಯಕ್ಷ ಅಯ್ಯಪ್ಪಯ್ಯ ಹಿರೇಮಠ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮದ ಸುಮಂಗಲೆಯರಿಂದ ಕುಂಭ ಕಳಶ,ಪಲ್ಲಕ್ಕಿಗಳ ಮೆರವಣಿಗೆ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ಇದೇ ಸಂದರ್ಭದಲ್ಲಿ ಶ್ರೀಶೈಲ ಜಗದ್ಗುರುಗಳ ಭವ್ಯವಾದ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ತುಲಾಭಾರ ಕಾರ್ಯಕ್ರಮ ನಡೆಯಿತು.
ಸಿಂದಗಿ ಡಾ.ಪ್ರಭುಸಾರಂಗದೇವಶ್ರೀ, ಆಲಮೇಲ ಚಂದ್ರಶೇಖರಶ್ರೀ , ಬಸವನಬಾಗೇವಾಡಿ ಶಿವಪ್ರಕಾಶಶ್ರೀ, ಯಂಕಂಚಿ ಅಭಿನವ ರುದ್ರಮುನಿಶ್ರೀ, ದೇವರಹಿಪ್ಪರಗಿಯ ವೀರಗಂಗಾಧರಶ್ರೀ , ಸಿಂದಗಿಯ ವಿಶ್ವಪ್ರಭುಶ್ರೀ, ಕನ್ನೊಳ್ಳಿಯ ಸಿದ್ದಲಿಂಗಶ್ರೀ, ಮುಳಸಾವಳಗಿಯ ದಯಾನಂದ ಸ್ವಾಮೀಜಿ, ಕರಭಂಟನಾಳದ ಶಿವಕುಮಾರ ಸ್ವಾಮೀಜಿ, ಡಿಸಿಸಿ ಬ್ಯಾಂಕ ನಿರ್ದೇಶಕ ಹಣಮಂತ್ರಾಯಗೌಡ ಪಾಟೀಲ, ಸೋಮೇಶ್ವರ ದೇವಸ್ಥಾನ ಕಮೀಟಿ ಉಪಾಧ್ಯಕ್ಷ ಬಸನಗೌಡ ಪಾಟೀಲ ಸೇರಿದಂತೆ ಪಡಗಾನೂರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಇದ್ದರು.

