ಇಂದು ರಥೋತ್ಸವ | ನಾಳೆ ಪಲ್ಲಕ್ಕಿ ಉತ್ಸವ | ಹಿಂದು-ಮುಸ್ಲಿಂ ಸೌಹಾರ್ದದ ಪ್ರತಿಬಿಂಬ
ಉದಯರಶ್ಮಿ ದಿನಪತ್ರಿಕೆ
ವರದಿ: ಎಸ್.ಎಮ್.ಇಟ್ಟಿ
ಜಮಖಂಡಿ: ತಾಲೂಕಿನ ತುಬಚಿ ಗ್ರಾಮ ಹಿಂದು ಮುಸ್ಲಿಮರ ಸಮನ್ವಯತೆಗೆ ಖ್ಯಾತಿ ಹೊಂದಿದೆ. ಧಾರ್ಮಿಕವಾಗಿ ಗ್ರಾಮಕ್ಕೆ ಸುಕ್ಷೇತ್ರದ ಸ್ಥಾನಮಾನ ಕಲ್ಪಿಸಿದ ಪವಾಡ ಪುರುಷ ಶಿವಲಿಂಗೇಶ್ವರರ ರಥೋತ್ಸವ ಇಂದು ಸಂಜೆ 7 ಗಂಟೆಗೆ ನಡೆಯಲಿದೆ.
ಡಾ. ಅಲ್ಲಮ್ಮಪ್ರಭು ಸ್ವಾಮಿಗಳು ನಾಗನೂರಮಠ (ಸಾವಳಗೇಶ ದೇವರು ವಿರಕ್ತಮಠ ತುಬಚಿ ಇವರ ನೇತೄತ್ವದಲ್ಲಿ ಏ.13 ರಂದು ಬೆಳ್ಳಿಗ್ಗೆ 11 ಗಂಟೆಗೆ ಪಲ್ಲಕ್ಕಿ ಉತ್ಸವ ಸಕಲ ವೈಭವಗಳೊಂದಿಗೆ ನಡೆಯಲಿದೆ.
ಮಠದ ವಿಶೇಷ: ಮೂರು ಅಂತಸ್ತಿನ ಶಿವಲಿಂಗೇಶ್ವರ ಮಠ ಭಾವೈಕ್ಯ ಕೇಂದ್ರವಾಗಿದೆ. ಮಠದ ಕಟ್ಟಡ ಮೇಲಿರುವ ಗೋಪುರಕ್ಕೆ ಹೋಗಲು 12 ಮೆಟ್ಟಿಲುಗಳಿವೆ. ಮೂರನೇ ಅಂತಸ್ತು ಮುಸ್ಲಿಂ ದರ್ಗಾದ ಮಿನಾರ್ ರೂಪದಲ್ಲಿದೆ. ಮಧ್ಯದ ಅಂತಸ್ತಿನಲ್ಲಿ ಶಿವಲಿಂಗೇಶ್ವರರ ಅನುಷ್ಠಾನದ ಆಸನ ಸಹಿತ ಗದ್ದುಗೆ ಇದೆ. ಅದರ ಮೇಲೆ ಶ್ರೀಗಳ ಇಷ್ಟಲಿಂಗ ಇಡಲಾಗಿದೆ. ನೆಲಮನೆ ಅತ್ಯಂತ ಆಕರ್ಷಕವಾಗಿದೆ. ಗವಿ ರೂಪದಲ್ಲಿರುವ ನೆಲಮನೆಯ ಹದಿನಾಲ್ಕು ಮೆಟ್ಟಿಲುಗಳನ್ನು ಇಳಿದು ಒಳಗೆ ಪ್ರವೇಶಿಸಿ ನೋಡಿದರೆ ಮಜಾರ ಕಾಣುತ್ತದೆ. ಇದು ಹಿಂದು ಮುಸ್ಲಿಂ ಸೌಹಾರ್ದದ ಪ್ರತಿಬಿಂಬವಾಗಿದೆ.
ಕೃಷ್ಣಾ ನದಿ ದಡದ ಮೇಲಿರುವ ಶಿವಲಿಂಗೇಶ್ವರ ದೇವಸ್ಥಾನ ದೂರದಿಂದ ನೋಡಿದರೆ ಮುಸ್ಲಿಂ ದರ್ಗಾ ಎಂಬಂತೆ ಗೋಚರವಾಗುತ್ತದೆ. ಈ ಮಠದಿಂದ ಶ್ರೀಗಳು ತುಂಬಿ ಹರಿಯುವ ಕೃಷ್ಣಯ ಮಹಾಪೂರದ ಮೇಲೆ ನಡೆದುಕೊಂಡು ಬಂದರು ಎಂಬ ಪ್ರತೀತಿ ಕೂಡ ಇದೆ.
ಶ್ರೀಗಳ ಮಹಿಮೆ
17ನೇ ಶತಮಾನದ ಅಂತ್ಯದಲ್ಲಿ ಪವಾಡಗಳ ಮೂಲಕ ಭಕ್ತರ ಪ್ರೀತಿಗೆ ಪಾತ್ರರಾಗಿದ್ದ ತುಬಚಿ ಶಿವಲಿಂಗೇಶ್ವರರು ಅಖಂಡ ವಿಜಯಪುರ ಜಿಲ್ಲೆಯಲ್ಲಿ ಸಂಚಾರ ಕೈಗೊಂಡು ಜಮಖಂಡಿ ತಾಲೂಕಿನ ತುಬಚಿ ಗ್ರಾಮದಲ್ಲಿ ನೆಲೆಸಿದ್ದರು. ವಿಜಯಪುರದ ಶ್ರೀಗಳ ಪವಾಡ ಪ್ರಭಾವಕ್ಕೊಳಗಾಗಿದ್ದರು. ಶ್ರೀಗಳ ದರ್ಶನಕ್ಕೆ ಆದಿಲ್ಶಾಹಿ ಬರುತ್ತಿದ್ದರು ಎನ್ನುವುದಕ್ಕೆ ಗ್ರಾಮದಲ್ಲಿ ಇಂದಿಗೂ ಪುರಾವೆಗಳಿವೆ. ಗುರುಗಳಿಗೆ ಕಾಣಿಕೆಯಾಗಿ 37 ಹಳ್ಳಿಗಳನ್ನು ಹೊಂಬಳ (ಬಳುವಳಿ)ವಾಗಿ ಆದಿಲ್ಶಾಹಿ ನೀಡಿದ್ದರಂತೆ. ಶ್ರೀಗಳ ವಾಸದಿಂದಾಗಿ ಗ್ರಾಮ ಸಮೃದ್ಧಿಯಿಂದ ಕೂಡಿತ್ತು ಎಂದು ಗ್ರಾಮದ ಹಿರಿಯರು ಹೇಳುತ್ತಾರೆ.
“ಶಿವಲಿಂಗೇಶ್ವರರಲ್ಲಿ ಭಕ್ತಿಯಿಂದ ನಡೆದುಕೊಂಡರೆ ನಾವು ಅಂದುಕೊಂಡ ಕೆಲಸಗಳು ಯಶಸ್ವಿ ಹೊಂದುತ್ತವೆ. ಗ್ರಾಮದಲ್ಲಿ ನೂರಾರು ಯುವಕರಿಗೆ ಸರ್ಕಾರಿ ನೌಕರಿ ದೊರಕಿದ್ದು, ನಮ್ಮೂರಿನ ರೈತರು ಅಪಾರ ಸಾಧನೆ ಮಾಡಿದ್ದರ ಹಿಂದೆ ಶ್ರೀಗಳ ಮಹಿಮೆ ಅಡಗಿದೆ.”
– ಶಿವಲಿಂಗ ಮಿರ್ಜಿ
ತುಬಚಿ ಗ್ರಾಮಸ್ಥ

