ದಿನಕ್ಕೊಂದು ವಚನ
ಚಿಂತನೆ
– ಡಾ.ಶಶಿಕಾಂತ ಪಟ್ಟಣ ರಾಮದುರ್ಗ
ಉದಯರಶ್ಮಿ ದಿನಪತ್ರಿಕೆ
ಆದಯ್ಯ ಒಬ್ಬ ಶ್ರೇಷ್ಠ ಮಟ್ಟದ ಅನುಭಾವಿ ವಚನಕಾರ ತನ್ನ ವಚನಗಳಲ್ಲಿ ಕೆಲ ಬೆಡಗುಗಳನ್ನು ಬಳಸಿ ವಚನಗಳ ಮೌಲ್ಯ ಅರ್ಥವನ್ನು ವಿಸ್ತರಿಸುವ ಮತ್ತು ಆಧ್ಯಾತ್ಮಿಕ ಅನುಭವನ್ನು ಪುಟ್ಟ ವಚನಗಳಲ್ಲಿ ಅಡಗಿಸುವ ಕಲಾ ಕೌಶಲ್ಯವನ್ನು ಹೊಂದಿದ್ದಾನೆ.
ಒಬ್ಬನಿಗೆ ರೂಹಿಲ್ಲ, ಒಬ್ಬನಿಗೆ ರೂಹುಂಟು,
ಒಬ್ಬನ ರೂಹು ಹೋಗುತ್ತ ಬರುತ್ತದೆ
ಮೂವರನೊಂದೆಡೆಗೆ ತಂದಡೆ ಏನಹರೆಂಬುದ ನೋಡಿಕೊಳ್ಳಿರಣ್ಣಾ. ಕಂಡಡೆ ಉಣಲಿಲ್ಲ ಕಾಣದಿರ್ದಡೆ ಉಣದಿರಲಿಲ್ಲ. ಇದೇನು ಸೋಜಿಗವಯ್ಯಾ ಸೌರಾಷ್ಟ್ರ ಸೋಮೇಶ್ವರಾ.
ಒಬ್ಬನಿಗೆ ರೂಹಿಲ್ಲ, ಒಬ್ಬನಿಗೆ ರೂಹುಂಟು,ಒಬ್ಬನ ರೂಹು ಹೋಗುತ್ತ ಬರುತ್ತದೆ.
ಪ್ರಸಕ್ತ ಈ ವಚನದಲ್ಲಿ ನಿರಾಕಾರ ಸಾಕಾರದ ರೂಪಗಳ ಮಧ್ಯ ಲಿಂಗವೆಂಬ ಆಕಾರವು ನಿರಾಕರವಾಗುತ್ತ ತನ್ನ ರೂಪದ ಹಂಗು ಹರಿದುಕೊಳ್ಳುತ್ತಾ ಮತ್ತೆ ಮತ್ತೆ ಆಕಾರವಾಗಿ ಕರಸ್ಥಲಕ್ಕೆ ಬಂದು ನಿರಾಕಾರದ ತತ್ವಕ್ಕೆ ಸಾಗುವ ಸುಂದರ ಪಯಣವು ಅದ್ಭುತವಾಗಿದೆ ಎಂದಿದ್ದಾನೆ ಆದಯ್ಯ.
ಮೂವರನೊಂದೆಡೆಗೆ ತಂದಡೆ ಏನಹರೆಂಬುದ ನೋಡಿಕೊಳ್ಳಿರಣ್ಣಾ.
ಇಂತಹ ಆಕಾರ ಸಾಕಾರ ಮತ್ತು ನಿರಾಕಾರ ರೂಪದಲ್ಲಿ ಕಂಡು ಕಾಣದರಿಯದೇ ಕೂಡುವ ಮೂರು ಸ್ಥಿತಿಗಳನ್ನು ಒಂದೆಡೆ ತಂದರೆ ಅವರ ಆಗು ಹೋಗು ಅವರು ಎಂತವರು ಎಂಬುದನ್ನು ನೀವೇ ನೋಡಿಕೊಳ್ಳಿ ಎಂದು ಸಲಹೆ ನೀಡುತ್ತಾನೆ.
ಕಂಡಡೆ ಉಣಲಿಲ್ಲ, ಕಾಣದಿರ್ದಡೆ ಉಣದಿರಲಿಲ್ಲ.ಇದೇನು ಸೋಜಿಗವಯ್ಯಾ ಸೌರಾಷ್ಟ್ರ ಸೋಮೇಶ್ವರಾ.
ಸಾಕಾರ ರೂಪವು ತನ್ನ ಮುಂದಿನ ಪ್ರಸಾದವನ್ನು ಉಣಲಾಗದು .ಆದರೆ ರೂಪವಿಲ್ಲದ ಆತ್ಮದ ಪ್ರಾಣಲಿಂಗವು ಹೊರಗಿನ ಪದಾರ್ಥವನ್ನು ಉಣದೆ ಇರದು .
ಆಕಾರವು ಬಯಸುವದಿಲ್ಲ ನಿರಾಕಾರದ ಜ್ಞಾನ ಆತ್ಮ ಜ್ಯೋತಿಯು ಪ್ರಾಣಲಿಂಗವು ಲಿಂಗ ಸಮಾಜವು ಜಂಗಮ ಸಮಾಜವು ಉಣದೆ ಇರಲಾರದು. ಇದು ಎಂತಹ ಸೋಜಿಗ ಸೌರಾಷ್ಟ್ರ ಸೋಮೇಶ್ವರಾ ಎಂದು ಪ್ರಶ್ನಿಸಿಕೊಂಡಿದ್ದಾನೆ ಆದಯ್ಯನು.
ಸಮಷ್ಟಿಯ ಉಳಿವು ಹುಟ್ಟು ಚರಾಚರ ಪಕ್ಷಿ ಪ್ರಾಣಿಗಳ ಬಗ್ಗೆ ಚಿಂತಿಸುವ ಆದಯ್ಯನು ತನ್ನೊಂದು ವಚನದಲ್ಲಿ ಹೀಗೆ ಹೇಳಿದ್ದಾನೆ.
ಬ್ರಹ್ಮವೆಂಬ ವೃಕ್ಷದಲ್ಲಿ ಫಲಪತ್ರಕುಸುಮಂಗಳೆಂಬ
ಸಚರಾಚರಂಗಳಷ್ಟಮೂರ್ತಿಗಳಾಗಿ ಆಗಿ ಆಗಿ ಅಳಿವುತ್ತಿಪ್ಪವಯ್ಯಾ.
ಇದಕ್ಕೆ ಶ್ರುತಿ:
ಬ್ರಹ್ಮಣೋ ವೃಕ್ಷಾನ್ಮಹತೋ ಪತ್ರಂ ಕುಸುಮಿತಂ ಫಲಂ
ಚರಾಚರಾಷ್ಟಮೂರ್ತಿಂ ಚ ಫಲಿತಂ ಫಲಶೂನ್ಯವತ್
ಇಂತೆಂದುದಾಗಿ,
ಅಷ್ಟಮೂರ್ತಿಗಳು ನಷ್ಟವಾದಲ್ಲಿ
ಸೌರಾಷ್ಟ್ರ ಸೋಮೇಶ್ವರಲಿಂಗ ನಷ್ಟವಾಯಿತ್ತೆಂಬ
ಮಿಟ್ಟಿಯ ಭಂಡರನೇನೆಂಬೆನಯ್ಯಾ..
ಬ್ರಹ್ಮವೆಂಬ ವೃಕ್ಷದಲ್ಲಿ ಫಲಪತ್ರಕುಸುಮಂಗಳೆಂಬ,ಸಚರಾಚರಂಗಳಷ್ಟಮೂರ್ತಿಗಳಾಗಿ ಆಗಿ ಆಗಿ ಅಳಿವುತ್ತಿಪ್ಪವಯ್ಯಾ.
ಸೃಷ್ಟಿ ಹುಟ್ಟು ಎಂಬ ಮರದಲ್ಲಿ ಫಲ ಪತ್ರ ಕುಸುಮಗಳೆಂಬ ಸಸ್ಯಗಳು ,ಸಚರಾಚರ ಅಷ್ಟ ಮೂರ್ತಿಗಳು ಮಾನವ ಪ್ರಾಣಿ ಕೀಟಗಳು ಜಲಚರ ಭೂಚರ ವಾಯು ಸಂಚಾರಿ ಪಕ್ಷಿಗಳು , ಸರಿಸೃಪಗಳು , ಅಂಡಜಗಳು ,ಮುಂತಾದ ಅಷ್ಟ ತರದ ಜೀವಗಳು ಆಗಿ ಆಗಿ ಅಳಿವು ಕಾಣುತ್ತವೆ.
ಇದಕ್ಕೆ ಶ್ರುತಿ:
ಬ್ರಹ್ಮಣೋ ವೃಕ್ಷಾನ್ಮಹತೋ ಪತ್ರಂ ಕುಸುಮಿತಂ ಫಲಂ,ಚರಾಚರಾಷ್ಟಮೂರ್ತಿಂ ಚ ಫಲಿತಂ ಫಲಶೂನ್ಯವತ್” ಇಂತೆಂದುದಾಗಿ,
ಶ್ರುತಿಯು ಹೇಳುವಂತೆ ಬ್ರಹ್ಮವೆಂಬ ವೃಕ್ಷದಲ್ಲಿ ಪತ್ರಂ ಕುಸುಮಿತಂ ಫಲಂ ಹುಟ್ಟುತ್ತವೆ ಜನ್ಮ ತಾಳುತ್ತವೆ. ಚರಾಚರ ಅಷ್ಟ ಬಗೆಯ ಜೀವಿಗಳು ಹುಟ್ಟಿ ಶೂನ್ಯವಾಗುತ್ತವೆ.
ಅಷ್ಟಮೂರ್ತಿಗಳು ನಷ್ಟವಾದಲ್ಲಿ,ಸೌರಾಷ್ಟ್ರ ಸೋಮೇಶ್ವರಲಿಂಗ ನಷ್ಟವಾಯಿತ್ತೆಂಬ,ಮಿಟ್ಟಿಯ ಭಂಡರನೇನೆಂಬೆನಯ್ಯಾ..
ಸೃಷ್ಟಿಯೊಳಗಿನ ಜೈವಿಕ ಸಸ್ಯಗಳು ಪುಷ್ಪ ಕುಸುಮಗಳು ಪತ್ರಗಳು , ಚರಾಚರ ಜೀವಿಗಳು ನಾಶವಾದ ಮಾತ್ರಕ್ಕೆ ಅಥವಾ ಅಳಿವುಗೊಂಡ ಮಾತ್ರಕ್ಕೆ ಸೌರಾಷ್ಟ್ರ ಸೋಮೇಶ್ವರಲಿಂಗ ನಷ್ಟವೂ ನಷ್ಟವಾಯಿತ್ತೆಂದು ಹೇಳುವ ಮಿಟ್ಟಿಯ ಭಂಡರನ್ನು ನಾನು ನಂಬೆನು ಎಂದು ಟೀಕಿಸಿದ್ದಾನೆ.
ಸೃಷ್ಟಿ ಸ್ಥಿತಿ ಲಯಗಳ ತತ್ವಗಳನ್ನಾಧರಿಸಿ , ಲಯವು ಮತ್ತೆ ಆರಂಭಕ್ಕೆ ಮೂಲವಾಗುತ್ತದೆ ಎಂದು ಸೂಚಿಸುತ್ತಾ ಸೃಷ್ಟಿ ಸಮಷ್ಟಿಗೆ ಸಾವಿಲ್ಲ ಅದು ನಿರಂತರ ವಿಕಸನ ಗೊಳ್ಳುವುದು ಅದುವೇ ಚೈತನ್ಯ ಕರಸ್ಥಲದೊಳಗಿನ ಲಿಂಗ ಜಂಗಮವೆಂದಿದ್ದಾನೆ.
ಇಂತಹ ಅಪೂರ್ವ ವಚನಕಾರ ಆದಯ್ಯ ಗುಜರಾತದಿಂದ ಕನ್ನಡ ನೆಲಕ್ಕೆ ಬಂದು ಇಲ್ಲಿನ ಶರಣ ಚಳುವಳಿಯಲ್ಲಿ ಪಾಲ್ಗೊಂಡು ಅಂಗ ಲಿಂಗ ಅಭೇದ್ಯದ ಅರಿವನ್ನು ನೀಡಿ ವೃಷ್ಟಿ ಸಮಷ್ಟಿಯ ಬಂಧನದ ಜೊತೆಗೆ ಪ್ರಗತಿ ವಿಕಸನ ಕಾಣುವ ಹಂಬಲ ಚಿಂತನೆ ಶ್ಲಾಘನೀಯವಾಗಿದೆ. ಇಂತಹ ಶ್ರೇಷ್ಠ ಸಂಶೋಧಕರಿಗೆ ಅನಂತ ಶರಣಾರ್ಥಿಗಳು.
ಶರಣರ ಸಮಾಧಿಯ ನೆಪದಲ್ಲಿ ಶರಣರ ಆಗಾಧ ಜ್ಞಾನ ಕ್ರಿಯೆಯನ್ನು ನೆನಪಿಸಿಕೊಂಡು ನಾವು ಬಸವಾದಿ ಪ್ರಮಥರಿಗೆ ಕೃತಾರ್ಥರಾಗೋಣ .
