ತೊಗರಿ ಬೆಳೆ ಪರಿಹಾರಕ್ಕೆ ಆಗ್ರಹಿಸಿ ಕರವೇ ಪ್ರತಿಭಟನೆ
ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲ್ಲೂಕಿನಲ್ಲಿ ತೊಗರಿ ಬೆಳೆ ಬೆಳೆದ ರೈತರು ಸಂಕಷ್ಟದಲ್ಲಿದ್ದಾರೆ. ಸರಿಯಾದ ಸಮಯಕ್ಕೆ ಮಳೆ ಬಾರದೆ ಹಾಗೂ ಮಂಜಿನ ವಾತಾವರಣದಿಂದ ತೊಗರಿ ಬೆಳೆ ಸಂಪೂರ್ಣ ಕೈ ಕೊಟ್ಟಿದೆ. ಅದಲ್ಲದೇ ಈ ಬಾರಿ ಕಳಪೆ ಬೀಜ ವಿತರಣೆ ಮಾಡಿದ್ದರಿಂದ ಇಳುವರಿ ಕುಂಠಿತವಾಗಿದ್ದು, ಅಂತಹ ಕಂಪನಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಕೂಡಲೇ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಲು ಆಗ್ರಹಿಸಿ ರಾಜ್ಯ ರಸ್ತೆ ತಡೆದು ಬೃಹತ್ ಪ್ರತಿಭಟನೆ ಕರವೇ ಪದಾಧಿಕಾರಿಗಳು ಮಾಡಿದರು.
ತಾಲ್ಲೂಕಿನ ತಾಂಬಾ ಗ್ರಾಮದ ಪ್ರಮುಖ ಹೃದಯಭಾಗದ ವೃತ್ ದಲ್ಲಿ ಹಲುಗೆ ಬಾರಿಸುತ್ತಾ, ಎಮ್ಮೆ ಮೆರವಣಿಗೆ ನಡೆಸಿ, ರಾಜ್ಯ ರಸ್ತೆ ತಡೆದು ಸರಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಶಿವರಾಜ್ ಕೆಂಗನಾಳ ಉಪ ತಹಶಿಲ್ದಾರ ಆರ್ ಬಿ ಮೂಗಿ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದರು. ಈ ಭಾಗದ ರೈತರು ಯಾವಾಗಲೂ ಅತೀವೃಷ್ಟಿ ಮತ್ತು ಅನಾವೃಷ್ಟಿಗೆ ಬಲಿಯಾಗುತ್ತಾರೆ. ಈ ಬಾರಿಯೂ ಇಂತಹ ದುರಂತದ ಘಟನೆ ರೈತರಿಗೆ ತಪ್ಪಿಲ್ಲ ಹಾಗಾಗಿ ಈ ಕೂಡಲೇ ರೈತರಿಗೆ ವಿಶೇಷ ಪ್ಯಾಕೇಜ್ ನೀಡಬೇಕು ಮತ್ತು ಜನ ಜಾನುವಾರುಗಳ ಹಿತದೃಷ್ಟಿಯಿಂದ ಗುತ್ತಿ ಬಸವಣ್ಣ ಕಾಲುವೆಗೆ ಕುಡಿಯಲು ನೀರು ಹರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕ ರಾಯ್ಗೊಂಡ ಪೂಜಾರಿ ಮಾತನಾಡಿ, ವಿಮಾ ಕಂಪನಿಯವರು ನಮ್ಮ ರೈತರ ಕಡೆಯಿಂದ ವಿಮಾ ಕಟ್ಟಿಸಿಕೊಂಡು ನಂತರ ಬೇರೆ ಬೇರೆ ಕಾರಣ ಹೇಳಿ, ರೈತರಿಗೆ ತೊಗರಿ ಇಳುವರಿ ಬರದಿದ್ದರೂ ಸರಿಯಾಗಿ ವಿಮಾ ಪರಿಹಾರ ನೀಡುತ್ತಿಲ್ಲ. ಅಂತವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ನಂತರ ಮಾತನಾಡಿದ ಕರವೇ ವಕ್ತಾರ ಮಾಸಿಮ್ ವಾಲಿಕರ್ ಮಾತನಾಡಿ ಈ ನಮ್ಮ ಬೇಡಿಕೆಗಳನ್ನು ಕೂಡಲೇ ಸ್ಪಂದನೆ ಮಾಡಿ ಪರಿಹಾರ ವಿತರಸಬೇಕು ಇಲ್ಲದಿದ್ದರೆ, ಇಂಡಿ ದೇವರ- ಹಿಪ್ಪರಗಿ ರಾಜ್ಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ರಜಾಕ್ ಚಿಕ್ಕಗಸಿ, ಉಪಾಧ್ಯಕ್ಷ, ರಾಮಚಂದ್ರ ದೊಡ್ಡಮನಿ, ರವೀಂದ್ರ ನಡಗಡ್ಡಿ, ತಾ.ಪಂ. ಸದಸ್ಯ ಪ್ರಕಾಶ ಮುಂಜಿ, ರೈತ ಮುಖಂಡ ಬೀರಪ್ಪ ವಗ್ಗಿ, ವಿಠ್ಠಲ ಹೊರ್ತಿ, ಮಲ್ಲಿಕಾರ್ಜುನ ದಿವಟಗಿ, ಪ್ರಶಾಂತ ದೇಗಿನಾಳ, ರಾಕೇಶ ಬಾಗಲಕೋಟಿ, ಶರಣು ಕಲ್ಲೂರ್, ಶಂಕರ ಗಬಸಾವಳಗಿ, ರಮೇಶ ಚಾಂದಕವಟೆ, ಭೀಮಣ್ಣ ಕನ್ನೂರ ಹಾಗೂ ತಾಂಬಾ ಗ್ರಾಮದ ಸಮಸ್ತ ರೈತ ಬಾಂಧವರು ಸಾರ್ವಜನಿಕರು ಭಾಗವಹಿಸಿದ್ದರು.