ಇಂದು (ಏಪ್ರಿಲ್ 10) ರಾಷ್ಟ್ರಿಯ ಭೂಮಾಪನ ದಿನಾಚರಣೆ. ಆ ಪ್ರಯುಕ್ತ ಈ ವಿಶೇಷ ಲೇಖನ
ಲೇಖನ
– ಬಸವರಾಜ ಪೂದಾರ
ಭೂಮಾಪಕರು
ಯ ಬೂದಿಹಾಳ
ಮೊ: 95358 54360
ಉದಯರಶ್ಮಿ ದಿನಪತ್ರಿಕೆ
ಪ್ರತಿ ವರ್ಷವು ಏಪ್ರಿಲ್ 10 ರಂದು ರಾಷ್ಟ್ರಿಯ ಭೂಮಾಪನ ದಿನಾಚರಣೆ ಆಚರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಭೂಮಾಪನ ಕಾರ್ಯವು ಬಹು ಮಹತ್ವ ಪಡೆದಿದೆ. ಭಾರತದ ಆರ್ಥಿಕ ವ್ಯವಸ್ಥೆಯ ಮೂಲ ಕಂದಾಯ. ಅಂತಹ ಕಂದಾಯ ನಿಗದಿಪಡಿಸಲು ವೈಜ್ಞಾನಿಕ ದಾಖಲೆ ಒದಗಿಸುವುದೇ ಭೂಮಾಪನ ಶಾಖೆ. ಸರ್ವೆ ಕಾರ್ಯವು ಇಡಿ ಭಾರತದ ಆರ್ಥಿಕ ವ್ಯವಸ್ಥೆಯ ಭುನಾದಿ ಎಂದರೆ ತಪ್ಪಾಗಲಾರದು.
ಈ ಹಿಂದೆ ಬ್ರಿಟೀಷರು ಭಾರತವನ್ನು ಭೂಮಾಪನ ಮಾಡಬೇಕೆಂದು ಮಹತ್ವಾಕಾಂಕ್ಷೆಯನ್ನು ಹೊಂದಿ ಮೊಟ್ಟಮೊದಲ ಬಾರಿಗೆ ಮ್ರದಾಸ ಪ್ರಾಂತ್ಯದಿಂದ ಆರಂಭಿಸಿದರು. ಅಂದಿನ ಮದ್ರಾಸ್ ಸೇನಾಧಿಕಾರಿ ಕರ್ನಲ್ ವಿಲಿಯಂ ಲ್ಯಾಂಬ್ಟನ್ ಅವರು ಮದ್ರಾಸಿನ ಸೆಂಟ್ ಥಾಮಸ್ ಮೌಂಟ ಎಂಬ ಸ್ಥಳದಿಂದ1802 ರ ಎಪ್ರಿಲ್ 10 ರಂದು ಕಾರ್ಯಪ್ರವೃತರಾದರು. ಅದರ ಒಂದು ಸವಿ ನೆನಪಿಗಾಗಿ ಪ್ರತಿ ವರ್ಷವು ಎಪ್ರಿಲ್ 10 ನ್ನು ರಾಷ್ಟ್ರೀಯ ಭೂಮಾಪನ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ.

ಭಾರತವು ಕೃಷಿ ಪ್ರಧಾನ ರಾಷ್ಟ್ರವು, ಕೃಷಿಗೆ ಮೂಲ ಭುನಾದಿ ಭೂಮಿ. ಇಂತಹ ಭೂಮಿಯಲ್ಲಿ ನಿಖರತೆ ನೀಡಿ ವೈಜ್ಞಾನಿಕವಾಗಿ ಕೃಷಿ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡಬೇಕಾಗುತ್ತದೆ. ಹಳ್ಳ ಕೊಳ್ಳ ನದಿ ನೀರಿನ ಮೂಲ ಜಮೀನಿನಿಂದ ಜಮೀನಿಗೆ ಹೋಗಲು ದಾರಿ, ಊರಿನಿಂದ ಊರಿಗೆ ಹೋಗುವ ಮಾರ್ಗ ಹೀಗೆ ಅನೇಕ ಮಹತ್ತರ ದಾಖಲೆಗಳನ್ನು ಸಿದ್ದಪಡಿಸುವ ಕಾರ್ಯ ಭೂಮಾಪನ ಇಲಾಖೆ ಕೈಗೆತ್ತಿಕೊಂಡಿತು. ಈ ದೇಶದ ಸಂಪತ್ತಿನ ಮುಖ್ಯ ಕೊಡುಗೆದಾರನಾದ ರೈತನ ಬದುಕನ್ನು ಉತ್ತಮ ಪಡಿಸಲು ಸರ್ವೇ ದಾಖಲೆಗಳು ಅಡಿಪಾಯವಾಗಿ ಕಾರ್ಯ ನಿರ್ವಹಿಸುತ್ತವೆ. ರೈತನ ವ್ಯವಸಾಯದ ಕ್ರಮ, ಆಹಾರೋತ್ಪನದ ಸಾಮರ್ಥ್ಯ, ತೆರಿಗೆ ಬರಿಸುವ ಸಾಮರ್ಥ್ಯ ಎಲ್ಲವನ್ನು ತಿಳಿದುಕೊಳ್ಳಬಹುದು. ಬ್ರಿಟೀಷರಿಗೆ ಮೂಲ ಆದಾಯವೇ ಭೂಕಂದಾಯವಾಗಿತ್ತು ಹಾಗಾಗಿ ಭೂಮಿಯ ಮೇಲಿನ ಕರವನ್ನು ಕರವತ್ತತ್ತಾಗಿ ವೈಜ್ಞಾನಿಕವಾಗಿ ತೆರಿಗೆ ಭರಿಸುವ ಸಾಮರ್ಥ್ಯವನ್ನು ಭೂಮಿಯ ಫಲವತ್ತತೆ, ನೀರಾವರಿಯ ವ್ಯವಸ್ಥೆ ಬೆಳೆಯುವ ಬೆಳೆಗಳ ಆಧಾರದ ವಿವಿಧ ರೀತಿಯಲ್ಲಿ ಖುಷ್ಕಿ, ಭಾಗಾಯ್ತು, ತರಿ ಪ್ಲಾಂಟೇಷನ್ ಎಂಬ ವಿಧಗಳಾಗಿ ವಿಂಗಡಿಸಿ ಅದರ ಆದಾರ ಮೇಲೆ ಕಂದಾಯ ನಿರ್ಧರಿಸಿದರು. ಒಣ ಬೇಸಾಯ ಯಾವುದೇ ನೀರಿನ ಮೂಲವಿಲ್ಲದೆ ಮಳೆ ಆಧಾರಿತವಾಗಿ ಬೆಳೆ ಬೆಳೆಯುವ ಜಮೀನುಗಳಿಗೆ ಖುಷ್ಕಿ ಜಮೀನುಗಳೆಂದು ಕರೆಯುತ್ತಾರೆ. ತರಿ ಜಮೀನುಗಳು ಎಂದರೆ ಸರ್ಕಾರದ ನೀರಿನ ಮೂಲವಿಲ್ಲದೆ ಸ್ವಂತ ನೀರಾವರಿ ವ್ಯವಸ್ಥೆ ಮಾಡಿಕೊಂಡು ಬೆಳೆಯುವ ಜಮೀನು. ಭಾಗಾಯ್ತು ಜಮೀನುಗಳೆಂದರೆ ಸರಕಾರದ ಮೂಲ ಸ್ವಾಯತ್ತ್ವ ಹೊಂದಿರುವ ನೀರಿನ ಮೂಲದಿಂದ ಬೆಳೆ ಬೆಳೆಯುವ ಜಮೀನು. ಪ್ಲಾಂಟೇಷನ್ ಜಮೀನುಗಳೆಂದರೆ ತೋಟಗಾರಿಕೆ ಮತ್ತು ವಾಣಿಜ್ಯ ಬೆಳೆಗಳಾದ ಏಲಕ್ಕಿ, ಕಾಫಿ, ಮೆಣಸು, ಗೋಡಮಳೆ, ರಬ್ಬರ್ ಚಹಾಗಳಂತ ಇತರೆ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಜಮೀನುಗಳು. ಈ ರೀತಿಯ ಜಮೀನುಗಳಿಗೆ ಮಣ್ಣಿನ ಫಲವತ್ತತೆ ಕಂಡುಕೊಳ್ಳಲು ಕಾಷ್ಠಿ ವಿಂಗಡಿಸಿ, ಜಮೀನಿನ ವಿಸ್ತೀರ್ಣಗಳ ಮೇಲೆ ಕಂದಾಯ ನಿಗದಿಪಡಿದ್ದರು.
ಜಮೀನಿನ ವಿಸ್ತೀರ್ಣಗಳನ್ನು ಗಣಿತದ ಜಿಯೋಮ್ಯಾಟ್ರಿ ಮತ್ತು ಟ್ರಿಗ್ನಾಮೆಟ್ರಿಗಳನ್ನು ಬಳಸಿಕೊಂಡು ಅಳತೆ ಮಾಡಿದರು. ಸರ್ವೆಯ ಪ್ರಮುಖ ಉದ್ದೇಶ ಭೂಮಿಯ ಬಗ್ಗೆ ಮಾಹಿತಿಯನ್ನು ಒದಗಿಸುವುದು. ಬಳಸುವ ಜಮೀನಿನ ಉದ್ದ ಅಗಲಗಳ ವಿವರವನ್ನು ಕಾಗದದ ಮೇಲೆ ರೇಖೆಸುವುದು. ಇದಕ್ಕೆ ಭಾಷೆಯ ಬಂದನವಿಲ್ಲ. ಎಲ್ಲರಿಗೂ ಅರ್ಥೈಸಿಕೊಳ್ಳುವ ರೀತಿಯಲ್ಲಿ ಚಿತ್ರದ ಮೂಲಕ ನೋಡಬಹುದು. ಇದು ಅನಕ್ಷರಸ್ಥರಿಗೂ ಸರಳವಾಗಿ ಗೊತ್ತಾಗುತ್ತದೆ. ಈ ವಿವರಣೆಯು ಸುಲಭ ಗ್ರಾಹ್ಯವಾಗುತ್ತದೆ. ಈ ಕಾರಣಕ್ಕೆ ಒಂದು ನಕ್ಷೆ ಸಾವಿರ ಮಾತಿಗಿಂತ ಮೇಲು ಎಂಬ ನಾನ್ನುಡಿ ಇದೆ. ಹೀಗೆ ಸರ್ವೇ ಇಲಾಖೆಯು ಜಮೀನಿನ ಗಡಿಗಳನ್ನು ನಿರ್ಧರಿಸಿ ಎಲೆಗಳನ್ನು ಗುರುತಿಸಿ ಪಕ್ಕಾ ಪುಸ್ತಕ, ಟಿಪ್ಪಣಿ, ಹಿಸ್ಸಾ ಮ್ಯಾಪ್ , ಪಿಟಿಶೀಟಗಳನ್ನು ತಯಾರಿಸಿ ಶಾಶ್ವತ ದಾಖಲೆಗಳನ್ನು ಸಿದ್ದಪಡಿಸಿದೆ.

ಗ್ರಾಮದ ಗಡಿ ಮತ್ತು ವಿವಿಧ ಮಾಲಿಕತ್ವದ ಜಮೀನುಗಳ ಗಡಿಗಳು ಒಮ್ಮೆ ಸಿದ್ದವಾದರೆ, ಅಗತ್ಯಬಂದಾಗಲೆಲ್ಲ ಅಂತಹ ಗಡಿರೇಖೆಗಳನ್ನು ಗುರುತಿಸಿ ರೈತರ ವ್ಯಾಜ್ಯಗಳನ್ನು ಪರಿಹರಿಸಬಹುದಾಗಿದೆ. ಕೆರೆ ರಾಜಕಾಲುವೆ ಇತರೆ ಸರಕಾರಿ ಜಮೀನು ಬೇರೆಯವರ ಪಾಲಾಗದಂತೆ ಸರ್ವೆ ದಾಖಲೆಗಳ ಮೂಲಕ ರಕ್ಷಿಸಬಹುದಾಗಿದೆ.
ಈ ಆದುನಿಕ ಕಾಲದಲ್ಲಿ ನಮ್ಮ ಕರ್ನಾಟಕವೂ ಸೇರಿದಂತೆ ಎಲ್ಲಾ ರಾಜ್ಯಗಳ ಭೌಗೋಳಿಕ ಪ್ರದೇಶಗಳು ತಂತ್ರಜ್ಞಾನ ಸ್ವರೂಪ ಪಡೆದುಕೊಂಡು ಇನ್ನಷ್ಟು ಸುಲಭವಾಗಿ ನಾವು ಅಂಗೈಯಲ್ಲಿ ನೋಡಬಹುದಾಗಿದೆ.
ಕರ್ನಾಟಕ ಸರ್ಕಾರದ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಅಭಿವೃದ್ಧಿ ಪಡಿಸಿದ ದಿಶಾಂಕ ತಂತ್ರಾಂಶವು ಭೂಮಿಯ ಸರ್ವೆ ನಂಬರ ಮತ್ತು ಮಾಲಿಕತ್ವದ ನಿಖರ ಮಾಹಿತಿಯನ್ನು ಒದಗಿಸುತ್ತದೆ. ಈ ದಿಶಾಂಕ ತಂತ್ರಾಂಶವು ಈ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ತಯಾರಿಸಲಾಗಿದ್ದು ತುಂಬಾ ಉಪಯೋಗಕಾರಿ ಮತ್ತು ಸಲಭವಾಗಿ ಗುರುತಿಸಬಹುದಾದ ತಂತ್ರಾಂಶವಾಗಿದೆ. ಸರ್ವೆ ನಂಬರಿನ ಸುತ್ತಮುತ್ತಲಿನ ಸರ್ವೆ ನಂಬರಗಳ ಚಕ್ ಬಂದಿ ತಿಳಿಯಬಹುದು. ಕೆರೆಕುಂಟಿ ನದಿಕೊಳ್ಳ, ನೀರಿನ ಮೂಲಗಳ ಬಗ್ಗೆ ಮಾಹಿತಿ ಪಡೆಬಹುದು ಅಷ್ಟೇ ಅಲ್ಲದೆ ರಸ್ತೆ, ಬೆಟ್ಟ , ಗುಡ್ಡ , ನದಿ, ಟ್ಯಾಂಕ್ ಸ್ಟ್ರಿಮ್, ರೈಲು ಮತ್ತು ಗ್ರಾಮ ಠಾಣ ಮಾಹಿತಿವಿದೆ. ಗ್ರಾಮ, ಹೋಬಳಿ, ತಾಲ್ಲೂಕು ಜಿಲ್ಲೆಯ ಗಡಿಗಳನ್ನು ನೋಡಿಕೊಳ್ಳಬಹುದಾಗಿದೆ. ಈ ತಂತ್ರಾಂಶವು ಎಲ್ಲಾ ರೈತರಿಗೂ ತಮ್ಮ ಜಮೀನಿನ ವಿವರ ನೋಡಿಕೊಳ್ಳಲು ಅನುಕೂಲವಾಗಿದೆ, ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ , ಸಾರ್ವಜನಿಕರಿಗೂ ಉಪಯುಕ್ತವಾಗಿದೆ. ಪಿಡಿಒಗಳಿಗೆ ಗ್ರಾಮ ಠಾಣವ್ಯಾಪ್ತಿಯನ್ನು ತಿಳಿಯಲು ಅನುಕೂಲವಾಗುತ್ತದೆ ಮತ್ತು ಮುಖ್ಯವಾಗಿ ಭೂಮಾಪಕರಿಗೆ ಸರ್ವೆ ನಂಬರ ಗುರುತಿಸಲು ರಸ್ತೆ ಗುರುತಿಸಲು ಗಡಿ ಗುರುತಿಸಲು ಸಹಾಯಕವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಆ್ಯಪ್ ನಿಂದ ಎಲ್ಲಾ ಮಾಹಿತಿಗಳನ್ನು ಅಂಗೈಯಲ್ಲಿಯೇ ನೋಡಬಹುದಾಗಿದೆ. ಅಷ್ಟೇ ಅಲ್ಲದೇ ಇತ್ತೀಚಿನ ಇಲಾಖೆಯು ಆಧುನಿಕ ಉಪಕರಣವಾದ ರೋವರ್ ಯಂತ್ರವನ್ನು ಭೂಮಾಪಕರಿಗೆ ನೀಡುವ ಉದ್ದೇಶಹೊಂದಿದ್ದು ಇದು ಇನ್ನಷ್ಟು ಸರ್ವೇ ಕಾರ್ಯಕ್ಕೆ ವೇಗ ನೀಡುತ್ತದೆ, ದಕ್ಷತೆ ಬರುತ್ತದೆ.
ಇದೊಂದು ತಾಂತ್ರಿಕ ಸ್ವರೂಪದ ಕ್ಲಿಷ್ಟ ಕಾರ್ಯವಾಗಿದ್ದು. ಈ ಸರ್ವೇ ಕಾರ್ಯವನ್ನು ”ದಿ ಗ್ರೇಟ್ ಟ್ರಿಗ್ನಾಮಿಟ್ರಕಲ್ ಸರ್ವೆ ಆಪ್ಇಂಡಿಯಾ” ಎಂಬ ಜಾಗತಿಕವಾಗಿ ಗುರುತಿಸಿ ಗೌರವಿಸಲಾಗಿದೆ. ಈ ಸರ್ವೇಯ ಸಾರ್ವಜನಿಕ ಮಹತ್ವ ಅರಿತು ದೇಶದ ಎಲ್ಲಾ ರಾಜ್ಯಗಳು ಎಪ್ರೀಲ್ 10 ನ್ನು ರಾಷ್ಟ್ರೀಯ ಭೂಮಾಪನ ದಿನವನ್ನಾಗಿ ಆಚರಿಸುತ್ತಾ ಬಂದಿವೆ.
