ಸಿಂದಗಿಯಲ್ಲಿ ವಸತಿ ಗೃಹಗಳ ಉದ್ಘಾಟನೆ- ಬಸ್ ನಿಲ್ದಾಣಕ್ಕೆ ನಾಮಕರಣ | ಸಿಂದಗಿ ನಗರ ಬಸ್ ಸಂಚಾರಕ್ಕೆ ಅನುಮತಿ | ಸಾರಿಗೆ ಹಾಗೂ ಮುಜರಾಯಿ ಖಾತೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಚಾಲಕರು, ನಿರ್ವಾಹಕರು ಸೇರಿದಂತೆ ೯೦೦೦ ಜನರನ್ನು ನೇಮಕಾತಿ ಮಾಡಿಕೊಳ್ಳಲಾಗಿದ್ದು, ಅನುಕಂಪದ ಆಧಾರದ ಮೇಲೆ ೧೦೦೦ ಜನರಿಗೆ ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದು ಸಾರಿಗೆ ಹಾಗೂ ಮುಜರಾಯಿ ಖಾತೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ಹೇಳಿದರು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದಿಂದ ಮಂಗಳವಾರ ಸಿಂದಗಿ ಪಟ್ಟಣದಲ್ಲಿ ನಿಗಮದ ಸಿಬ್ಬಂದಿಗಳ ನೂತನ ವಸತಿ ಗೃಹಗಳ ಉದ್ಘಾಟನೆ ಹಾಗೂ ಬಸ್ ನಿಲ್ದಾಣಕ್ಕೆ ಪೂಜ್ಯ ಶ್ರೀ ಚನ್ನವೀರ ಸ್ವಾಮಿ ಬಸ್ ನಿಲ್ದಾಣ ಸಿಂದಗಿ ನಾಮಕರಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ನೂತನವಾಗಿ ಹೊಸ ಬಸ್ಗಳನ್ನು ಖರೀದಿಸಲಾಗಿದ್ದು, ಕಲ್ಯಾಣ ಕರ್ನಾಟಕ ವಿಭಾಗಕ್ಕೆ ೮೦೦ ಬಸ್ಗಳನ್ನು ಒದಗಿಸಲಾಗಿದೆ ಎಂದು ಅವರು ಹೇಳಿದರು.
ಸಿಂದಗಿಯಲ್ಲಿ ಸುಸಜ್ಜಿತವಾದ ಬಸ್ ನಿರ್ಮಾಣ ಮಾಡಿ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಬಸ್ ನಿಲ್ದಾಣಕ್ಕೆ ಜಾಗ ನೀಡಿರುವ ಜ್ಞಾಪಕಾರ್ಥವಾಗಿ ಸ್ವಾಮೀಜಿ ಹೆಸರನ್ನು ಇಡಲಾಗಿದೆ. ಶಾಸಕರ ಮನವಿಯಂತೆ, ಸಿಂದಗಿ ನಗರ ೫ ಕಿ.ಮೀ. ವ್ಯಾಪ್ತಿ ಹೊಂದಿರುವುದರಿಂದ ಪ್ರಯಾಣಿಕರು, ವ್ಯಾಪಾರಸ್ಥರು, ವಿದ್ಯಾರ್ಥಿಗಳ ಸುಗಮ ಸಂಚಾರಕ್ಕಾಗಿ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಮುಂದಿನ ವಾರದಿಂದಲೇ ಸಿಂದಗಿ ನಗರ ಬಸ್ ಸಂಚಾರ ಕಾರ್ಯಾಚರಣೆ ಅನುಮತಿ ನೀಡಲಾಗುವುದು ಎಂದು ಅವರು ಹೇಳಿದರು.
ದೇವರ ಹಿಪ್ಪರಗಿ ಬಸ್ ನಿಲ್ದಾಣಕ್ಕೆ ಮಡಿವಾಳ ಮಾಚಿದೇವ ಹೆಸರು ನಾಮಕರಣ ಮಾಡಲಾಗಿದೆ. ಸುರಪುರ ಬಸ್ ನಿಲ್ದಾಣಕ್ಕೆ, ರಾಜವೆಂಕಟಪ್ಪ ನಾಯಕ ಹೆಸರು ಇಡಲಾಗಿದೆ. ಶಹಾಪುರ ನಿಲ್ದಾಣದಲ್ಲಿ ಅಂಬೇಡ್ಕರ್ ಮೂರ್ತಿ ಸ್ಥಾಪನೆಗೆ ಸ್ಥಳಾವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಸಿಂದಗಿ ಶಾಸಕ ಅಶೋಕ ಮನಗೂಳಿ ಅವರು ಮಾತನಾಡಿ, ಅಭಿವೃದ್ದಿಗೆ ಒತ್ತು ನೀಡಿ ಹಲವು ಅಭಿವೃದ್ದಿ ಕಾರ್ಯಗಳನ್ನು ಹಮ್ಮಿಕೊಂಡು ಜನರ ಜೀವನ ಸುಧಾರಿಸುವತ್ತ ಶ್ರಮಿಸುತ್ತಿರುವ ಸರ್ಕಾರ ನಮ್ಮದಾಗಿದೆ. ೫ ಗ್ಯಾರಂಜಿ ಯೋಜನೆಗಳನ್ನು ಸಮಪರ್ಕವಾಗಿ ಜಾರಿಗೊಳಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಶಕ್ತಿ ನೀಡಿ, ಶಕ್ತಿ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗುತ್ತಿದೆ. ಅಭಿವೃದ್ದಿ ಯಾವುದೇ ಒಂದು ವರ್ಗ, ಜಾತಿ, ಸಮುದಾಯಕ್ಕೆ ಸೀಮಿತವಾಗಿಲ್ಲ, ಸರ್ವಜನರ ಬಾಳನ್ನು ಹಸನಾಗಿಸುವ ನಿಟ್ಟಿನಲ್ಲಿ ಸರ್ವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಸಿಂದಗಿ ನಗರ ವ್ಯಾಪ್ತಿ ೫ ಕಿ.ಮೀ. ಹೊಂದಿದ್ದು, ವ್ಯಾಪಾರಸ್ಥರು, ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಗರ ಬಸ್ ಸಂಚಾರ ಆರಂಭ ಹಾಗೂ ದೇವರಹಿಪ್ಪರಗಿ, ತಾಂಬಾ ದಿಂದ ಬಳ್ಳಾರಿ ಹಾಗೂ ಮಂತ್ರಾಲಯಕ್ಕೆ ನೂತನ ಬಸ್ ಆರಂಭಿಸುವಂತೆ ಸಚಿವರಲ್ಲಿ ಅವರು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಶಕ್ತಿ ಯೋಜನೆಯ ಸದುಪಯೋಗ ಪಡೆದುಕೊಂಡ ಇಂಡಿಯ ಒಡಲ ಧ್ವನಿ ಸದಸ್ಯರು ಸಚಿವರಾದ ರಾಮಲಿಂಗಾ ರೆಡ್ಡಿ ಅವರಿಗೆ ಸನ್ಮಾನಿಸಿ, ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧಿ ಪಡೆದ ಖಾದ್ಯವಾದ ೧೦೦ ಶೇಂಗಾ ಹೋಳಿಗೆಯನ್ನು ಸಚಿವರಿಗೆ ನೀಡಿದರು. ಸಿಬಂದಿಗಳ ನೂತನ ವಸತಿ ಗೃಹಗಳ ಹಂಚಿಕೆ ಆದೇಶ ಪತ್ರ ಹಾಗೂ ಅನುಕಂಪದ ಆಧಾರದ ಮೇಲೆ ನೇಮಕಗೊಂಡವರಿಗೆ ನೇಮಕಾತಿ ಪತ್ರವನ್ನು ಸಾಂಕೇತಿಕವಾಗಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ.ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಸಿಂದಗಿ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ಇಂಡಿ ಉಪ ವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.
ಕಲಬುರಗಿಯ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ ರಾಚಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಜಯಪುರದ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ನಾರಾಯಣಪ್ಪ ಕುರುಬರ ಸ್ವಾಗತಿಸಿದರು.

“ವಸತಿ ಗೃಹ ಉದ್ಘಾಟನೆ ಹಾಗೂ ಸಿಂದಗಿ ಬಸ್ ನಿಲ್ದಾಣದ ನಾಮಕರಣ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾದ ಕಾರ್ಯಕ್ರಮವಾಗಿದೆ. ಕಳೆದ ೨೦೧೮ನೇ ಸಾಲಿನಲ್ಲಿ ನನ್ನ ತಂದೆಯವರಾದ ದಿ: ಎಂ.ಸಿ.ಮನಗೂಳಿ ಅವರು ಅಡಿಗಲ್ಲು ಹಾಕಿದ ವಸತಿ ಗೃಹಗಳಿಗೆ ನಾನು ಶಾಸಕನಾದ ಮೇಲೆ ಪೂರ್ಣಗೊಳಿಸಿ ಉದ್ಘಾಟನೆ ನೆರವೇರಿಸುತ್ತಿರುವುದು ನನ್ನ ಪೂರ್ವಜನ್ಮದ ಪುಣ್ಯವಾಗಿದೆ. ಸಿಂದಗಿ ಬಸ್ ನಿಲ್ಧಾಣ ನಿರ್ಮಾಣಕ್ಕೆ ಜಾಗ ದಾನ ನೀಡಿದ ಚನ್ನವೀರ ಸ್ವಾಮೀಜಿ ಯಹೆಸರು ಅಜರಾಮರ ಆಗಿ ಉಳಿಯಬೇಕೆಂಬ ಮಹದಾಸೆಯೊಂದಿಗೆ ಬಸ್ ನಿಲ್ದಾಣಕ್ಕೆ ಶ್ರೀಗಳ ಹೆಸರನ್ನು ನಾಮಕರಣ ಮಾಡಲಾಗಿದೆ. ಈ ಕಾರ್ಯಕ್ಕಾಗಿ ಸಹಕರಿಸಿ, ಪ್ರೊತ್ಸಾಹಿಸುತ್ತಿರುವ ರಾಜ್ಯದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಸೇರಿದಂತೆ ಸಚಿವ ಸಂಪುಟದ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ.”
– ಅಶೋಕ ಮನಗೂಳಿ
ಶಾಸಕರು, ಸಿಂದಗಿ

