ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಹಂಡೇವಜೀರ ಕ್ಷೇಮಾಭಿವೃದ್ದಿ ಸಂಘವು ತಾಲೂಕಿನ ಸಂಕನಾಳ ಗ್ರಾಮದಲ್ಲಿ ಏ.9 ರಂದು ಬೆಳಗ್ಗೆ 10 ಗಂಟೆಗೆ ರಾಜ್ಯ ಮಟ್ಟದ 539 ನೇ ರಾಜಾ ಹಂಡೆ ಹನುಮಪ್ಪನಾಯಕನ ಜಯಂತ್ಯೋತ್ಸವ ಹಾಗೂ ಮೂರ್ತಿ ಪ್ರತಿಷ್ಠಾಪನೆ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ವೀರಶೈವ ಲಿಂಗಾಯತ ಹಂಡೇವಜೀರ ಸಂಘದ ರಾಜ್ಯಾಧ್ಯಕ್ಷ ಡಾ.ಎಸ್.ಎಸ್.ಪಾಟೀಲ ಹೇಳಿದರು.
ಪಟ್ಟಣದ ಸಿದ್ದರಾಮೇಶ್ವರ ಪತ್ತಿನ ಸಂಘದ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 2021 ರಿಂದ ಹಂಡೇವಜೀರ ಸಮಾಜ ಬಾಂಧವರ ಕುಲತಿಲಕ ರಾಜಾ ಹಂಡೆ ಹನುಮಪ್ಪನಾಯಕನ ಜಯಂತ್ಯೋತ್ಸವವನ್ನು ನಮ್ಮ ಸಂಘವು ಆಚರಿಸುತ್ತಾ ಬರುತ್ತಿದೆ. ಇದುವರೆಗೂ ಹನುಮಪ್ಪನಾಯಕ ಜನ್ಮಸ್ಥಳ ಮುತ್ತಗಿಯಲ್ಲಿ ಎರಡು ಸಲ, ವಡವಡಗಿಯಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಈ ವರ್ಷ ಹನುಮಪ್ಪ ನಾಯಕನ ಮೊಮ್ಮಗ ವಸಂತರಾಯನ ಪತ್ನಿ ಕಲ್ಯಾಣಮ್ಮ ಜನಿಸಿದ ಸಂಕನಾಳ ಗ್ರಾಮದಲ್ಲಿ ಆಯೋಜನೆ ಮಾಡಲಾಗಿದೆ. ಹಂಡೇ ಅರಸರು 300 ವರ್ಷಗಳ ಕಾಲ ಆಡಳಿತ ನಡೆಸಿದ್ದರು ಎಂದು ಇತಿಹಾಸ ತಿಳಿಸುತ್ತದೆ ಎಂದರು.
ಜಯಂತ್ಯೋತ್ಸವ ಕಾರ್ಯಕ್ರಮದ ಸಾನಿಧ್ಯವನ್ನು ಮುತ್ತಗಿಯ ವೀರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ,ಜಮಖಂಡಿಯ ಆನಂದ ದೇವರು, ಹೂವಿನಹಿಪ್ಪರಗಿಯ ದ್ರಾಕ್ಷಾಯಿಣಿ ಅಮ್ಮ, ಕರಭಂಟನಾಳದ ಶಿವಕುಮಾರ ಸ್ವಾಮೀಜಿ, ಸಂಕನಾಳದ ಗಂಗಾಧರಯ್ಯ ಹಿರೇಮಠ, ಮಲ್ಲಯ್ಯ ಹಿರೇಮಠ ವಹಿಸುವರು. ಅಧ್ಯಕ್ಷತೆಯನ್ನು ಸಂಘದ ರಾಜ್ಯಾಧ್ಯಕ್ಷ ಡಾ.ಎಸ್.ಎಸ್.ಪಾಟೀಲ ವಹಿಸುವರು. ಸಚಿವ ಶಿವಾನಂದ ಪಾಟೀಲ ಉದ್ಘಾಟಿಸುವರು. ರಾಜಾ ಹಂಡೆ ಹನುಮಪ್ಪನಾಯಕನ ಮೂರ್ತಿಯನ್ನು ಶಾಸಕ ಭೀಮನಗೌಡ ಪಾಟೀಲ ಅನಾವರಣಗೊಳಿಸುವರು. ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಡಾ.ಪ್ರಭುಗೌಡ ಲಿಂಗದಳ್ಳಿ ಪುಷ್ಪಾರ್ಚನೆ ನೆರವೇರಿಸುವರು. ಐ.ಬಿ.ಹಿರೇಮಠ, ಎಂ.ಎಸ್.ಚೌಧರಿ ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ಸಂಘದ ಬಾಗಲಕೋಟ ಜಿಲ್ಲಾಧ್ಯಕ್ಷ ಜಿ.ಎನ್.ಪಾಟೀಲ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಮಂಜುಳಾ ರೇವಡಿ, ಸಿದ್ರಾಮೇಶ್ವರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಜಿ.ಪಾಟೀಲ, ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ಎಸ್.ಪಾಟೀಲ, ಕನ್ನಡ ಜನಪದ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ದೇವೇಂದ್ರ ಗೋನಾಳ, ಸಹ ಕಾರ್ಯದರ್ಶಿ ಬೆಳ್ಳಿ ಪ್ರಭುಗೌಡ, ಯುವ ಘಟಕದ ರಾಜ್ಯಾಧ್ಯಕ್ಷ ಸಂಗನಗೌಡ ಯಂಕಂಚಿ, ವಿಜಯಪುರ ಜಿಲ್ಲಾಧ್ಯಕ್ಷ ವಿ.ಕೆ.ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಕುಮಾರ ಮ್ಯಾಗೇರಿ, ತಾಲೂಕಾಧ್ಯಕ್ಷ ಸಿದ್ದನಗೌಡ ಪಾಟೀಲ ಆಗಮಿಸುವರು. ಸಂಘದ ರಾಜ್ಯ, ಜಿಲ್ಲಾ, ತಾಲೂಕು, ಮಹಿಳಾ, ಯುವ ಘಟಕದ ಪದಾಧಿಕಾರಿಗಳು,ಸಂಕನಾಳ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಉಪಸ್ಥಿತರಿರುವರು. ಈ ಕಾರ್ಯಕ್ರಮಕ್ಕೆ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದರು.
ಮುಖಂಡ ಎಸ್.ಜಿ.ಪಾಟೀಲ ಮಾತನಾಡಿ, ಈಚೆಗೆ ಕೂಡಲಸಂಗಮದಲ್ಲಿ ಸಂಘ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಸಮ್ಮೇಳನ, ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ, ವಿಚಾರಗೋಷ್ಠಿ, ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ರಾಜಾ ಹಂಡೆ ಹನುಮಪ್ಪನಾಯಕನ ಜಯಂತಿಯನ್ನು ರಾಜ್ಯ ಸರ್ಕಾರ ಆಚರಿಸುವಂತಾಗಬೇಕು. ನಮ್ಮ ಸಂಘದ ವಿವಿಧ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಬೆಂಗಳೂರಿನ ಸುತ್ತಮುತ್ತ 1 ರಿಂದ 2 ಎಕರೆ ಜಮೀನು ನೀಡಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಿ ಆಗ್ರಹಿಸಲಾಗಿತ್ತು. ಇದಕ್ಕೆ ಸಚಿವ ಶಿವಾನಂದ ಪಾಟೀಲರು ಸಕಾರಾತ್ಮಕ ಸ್ಪಂದಿಸಿ ಈ ಬೇಡಿಕೆಗಳನ್ನು ಮುಂಬರುವ ದಿನಗಳಲ್ಲಿ ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ. ಈ ಭಾಗದಲ್ಲಿ ನಮ್ಮ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿರುವದರಿಂದ ಈ ಜಯಂತ್ಯೋತ್ಸವ ಕಾರ್ಯಕ್ರಮ ಈ ಭಾಗದಲ್ಲಿ ಹಮ್ಮಿಕೊಳಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಿದ್ದನಗೌಡ ಪಾಟೀಲ, ಸಂಗನಗೌಡ ಯಂಕಂಚಿ, ಸಂಗನಗೌಡ ಹೊಸಗೌಡರ, ಪ್ರೇಮಕುಮಾರ ಮ್ಯಾಗೇರಿ, ಬಸವರಾಜ ಹಾಲಿಹಾಳ, ಶೇಖರಗೌಡ ಬಿರಾದಾರ, ಆರ್.ಎಸ್.ಪಾಟೀಲ ಇದ್ದರು.

