ಸಮಾಜ ಕಾರ್ಯ ಶಿಬಿರ ಉದ್ಘಾಟಿಸಿದ ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ. ಶಾಂತಾದೇವಿ ಟಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಇಂತಹ ಶಿಬಿರಗಳು ಅತ್ಯಗತ್ಯವಾಗಿವೆ ಎಂದು ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ. ಶಾಂತಾದೇವಿ ಟಿ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ವಿಭಾಗ ಹಾಗೂ ಬಾಬಾನಗರ ಗ್ರಾಮ ಪಂಚಾಯತ ಇವರ ಸಹಯೋಗದಲ್ಲಿ ತಿಕೋಟಾ ತಾಲೂಕಿನ ಬಾಬಾನಗರ ಗ್ರಾಮದಲ್ಲಿ ಹಮ್ಮಿಕೊಂಡಿರುವ ಸಮಾಜ ಕಾರ್ಯ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ವಿವಿಧ ಸಮುದಾಯಗಳ ಪ್ರಗತಿಗೆ ಸಾಕಷ್ಟು ಪ್ರಾಯೋಗಿಕ ಕಾರ್ಯಗಳು, ಜಾಗೃತಿ ಜಾಥಾಗಳು ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆಯಬೇಕಾಗಿವೆ. ಸರ್ಕಾರದಿಂದ ರೂಪಗೊಳ್ಳುವ ಯೋಜನೆಗಳು ಯಶಸ್ವಿಯಾಗಬೇಕಾದರೆ ಸಾರ್ವಜನಿಕರ ಸಹಭಾಗಿತ್ವ ಅತ್ಯಂತ ಮುಖ್ಯ. ಇಂತಹ ಶಿಬಿರಗಳು ವಿದ್ಯಾರ್ಥಿಗಳಿಗೆ ಗ್ರಾಮೀಣ ಜೀವನಶೈಲಿ, ಸಂಸ್ಕೃತಿ ಮತ್ತು ಪರಂಪರೆಯ ಪರಿಚಯವನ್ನು ನೀಡುತ್ತವೆ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮದ ಹಿರಿಯ ಶಿಕ್ಷಕ ಬಸವರಾಜ ನಾವಿ ಮಾತನಾಡಿ, ಶಿಬಿರದ ಪ್ರಾಮುಖ್ಯತೆಯನ್ನು ಗ್ರಾಮಸ್ಥರಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಸದಸ್ಯ ಸಿದಗೊಂಡ ರುದ್ರಗೌಡರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷೆ ಸಾಹೇರಾಭಾನು ಕ ಏಳಾಪುರ ಮಾತನಾಡಿ, ಶಿಬಿರಾರ್ಥಿಗಳು ಗ್ರಾಮೀಣ ಜನರೊಂದಿಗೆ ನಿಕಟ ಸಂಪರ್ಕ ಹೊಂದಿ, ಅವರ ಸಂಸ್ಕೃತಿ, ಜೀವನಶೈಲಿ ಹಾಗೂ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ಕಲಿಯಬೇಕು. ಜೊತೆಗೆ ಶಿಬಿರದಲ್ಲಿ ತಮ್ಮ ಪಾಲಿಗೆ ಬಂದ ಜವಾಬ್ದಾರಿಗಳನ್ನು ನಿಷ್ಠೆಯಿಂದ ಹಾಗೂ ಶಿಸ್ತಿನಿಂದ ನಿರ್ವಹಿಸಬೇಕೆಂದು ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಯ ಉಪಾಧ್ಯಕ್ಷ ಅಯ್ಯಗೌಡ ರುದ್ರಗೌಡರ, ಸದಸ್ಯರಾದ ಅಶೋಕ ನಿಂಗನಗೌಡ ಬಿರಾದಾರ, ಪ್ರಕಾಶ ಸಿದ್ರಾಮ ಆಯತವಾಡ, ಮಹಮದಲೀಫ ಅಮೀನಸಾಬ ಮಕಾಂದಾರ, ಶ್ರೀಕಾಂತ ಭಜಂತ್ರಿ, ರಾಜಕುಮಾರ ರಾಮಣ್ಣ ವಾಲಿಕಾರ, ಸಮಾಜ ಕಾರ್ಯ ವಿಭಾಗ ಸಹಪ್ರಾಧ್ಯಾಪಕ ಡಾ.ರಮೇಶ ಎಂ. ಸೋನಾಕಾಂಬಳೆ, ಶಿಬಿರದ ಸಹಾಯಕರಾದ ಶ್ರೀನಾಥ ಪಾಟೀಲ, ಮಂಜುಳಾ ಮುದಿಗೌಡರ, ಊರಿನ ಗ್ರಾಮಸ್ಥರು ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಮಾಜ ಕಾರ್ಯ ಶಿಬಿರದ ನಿರ್ದೇಶಕಿ ಡಾ.ಕಲಾವತಿ ಕಾಂಬಳೆ ಪ್ರಾಸ್ಥಾವಿಕ ನುಡಿಗಳನ್ನಾಡಿದರು. ಲಕ್ಷ್ಮಿ ಬಜಂತ್ರಿ ಪ್ರಾರ್ಥಿಸಿದರು. ಸುಧಾರಾಣಿ ಮೇಟಿ ಸ್ವಾಗತಿಸಿದರು. ವಿದ್ಯಾಶ್ರೀ ಬೆಳುಂಡಗಿ ನಿರೂಪಿಸಿದರು. ಸುರೇಖಾ ರಾಠೋಡ ವಂದಿಸಿದರು.

