ಪುರಾಣ ಮಹಾಮಂಗಲೋತ್ಸವ | ಗ್ರಾಮದ ೫೦ ಕ್ಕೂ ಹೆಚ್ಚು ಸರಕಾರಿ ನೌಕರರಿಗೆ ಸನ್ಮಾನ | ಗಮನ ಸೆಳೆದ ನಾಟಕ ಪ್ರದರ್ಶನ
ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ಸಮಾಜದಲ್ಲಿ ಇಂದು ಅವಿನಾಭಾವ ಸಂಬಂಧದ ಕೊರತೆ ಎದ್ದು ಕಾಣುತ್ತಿದೆ, ಜನರಲ್ಲಿ ಪ್ರೀತಿ ವಿಶ್ವಾಸ ಕೊರತೆ ಕಾಣಿಸುತ್ತಿದೆ. ಯುವ ಜನಾಂಗ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುತ್ತಾ ಉತ್ತಮ ವ್ಯಕ್ತಿತ್ವ ರೂಪಿಸಲು ಕಾರಣರಾದ ತಂದೆ, ತಾಯಿ, ಗುರುಹಿರಿಯರನ್ನು ಗೌರವಿಸುವಂತಾಗಬೇಕು ಎಂದು ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ಡಾ.ಪ್ರಭುಗೌಡ ಲಿಂಗದಳ್ಳಿ ಹೇಳಿದರು.
ರವಿವಾರ ಸಂಜೆ ಕಲಕೇರಿ ಸಮೀಪದ ಬೆಕಿನಾಳ-ವಣಕ್ಯಾಳದ ಮಾತೆ ಮಹೇಶ್ವರಿ ದೇವಸ್ಥಾನದಲ್ಲಿ ಹಮ್ಮಿಕೊಂಡ ಸದ್ಗುರು ಶ್ರೀ ಸಿದ್ದಾರೂಢ ಮಹಾಸ್ವಾಮಿಗಳವರ ಪುರಾಣದ ಮಹಾಮಂಗಲೋತ್ಸವ ಹಾಗೂ ಧರ್ಮ ಸಭೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾನವ ಜನ್ಮದಲ್ಲಿ ಮಾನವೀಯತೆ ದೊಡ್ಡದು ಎಂಬುದನ್ನು ಸನಾತನ ಸಂಸ್ಕೃತಿ ಪ್ರತಿನಿದಿಸುತ್ತದೆ. ಧರ್ಮ ಸಂಸ್ಕೃತಿಗೆ ಪೂರಕವಾದ ಶಿಕ್ಷಣದ ಅವಶ್ಯಕತೆ ಇದ್ದು ಮುಖ್ಯವಾಗಿ ಜೀವನದಲ್ಲಿ ಸೋತು ಗೆದ್ದಾಗ ಮಾತ್ರ ಜೀವನದ ಮೌಲ್ಯಗಳನ್ನು ಅರಿಯಲು ಸಾಧ್ಯವಿದೆ. ಮಾತಾ ಪಿತರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕಲಿಸಬೇಕಿದೆ ಎಂದು ಅವರು ಹೇಳಿದರು.
ನಾವದಗಿಯ ರಾಜಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯರು, ಚಬನೂರ ಹಿರೇಮಠದ ಜ್ಯೋತಿಷ್ಯರತ್ನ ರಾಮಲಿಂಗಯ್ಯ ಸ್ವಾಮಿಗಳು ಮಾತನಾಡಿ, ಹಣತೆಯಿಂದ ಹೇಗೆ ಮನೆಯಲ್ಲಿನ ಅಂಧಕಾರ ದೂರವಾಗುತ್ತದೆಯೋ ಹಾಗೆಯೇ ಗುರುವಿನ ವಾಣಿ ಆಲಿಸುವದರಿಂದ, ಮಠ ಮಂದಿರಗಳಲ್ಲಿನ ಧರ್ಮಕಾರ್ಯದಲ್ಲಿ ಭಾಗಿಯಾಗುವದರಿಂದ ನೆಮ್ಮದಿಯ ಬದುಕನ್ನು ಸಾಗಿಸಲು ಸಾಧ್ಯವಾಗುತ್ತದೆ ಎಂದರು.
ಆಲೂರಿನ ಗರುಕೆಂಚವೃಷಬೇಂದ್ರ ಶಿವಾಚಾರ್ಯರು, ಮಾತೆ ಮಹೇಶ್ವರಿ ದೇವಸ್ಥಾನದ ಮಹೇಶ ಮುತ್ಯಾ ಮಾತನಾಡಿದರು.
ಈ ಸಂದರ್ಭದಲ್ಲಿ ಬೆಕಿನಾಳ ಮತ್ತು ವಣಕಿಹಾಳ ಗ್ರಾಮದ ಸುಮಾರು ೫೦ಕ್ಕೂ ಹೆಚ್ಚು ಸರಕಾರಿ ನೌಕರರನ್ನು, ಗ್ರಾಮ ಪಂಚಾಯತಿಯ ಸದಸ್ಯರನ್ನು, ಪಿಕೆಪಿಎಸ್ ಸದಸ್ಯರನ್ನು, ಎಸ್ಡಿಎಂಸಿ ಸದಸ್ಯರನ್ನು ಒಳಗೊಂಡಂತೆ ಇನ್ನೂ ಅನೇಕ ಸಾಧಕರನ್ನು ದೇವಸ್ಥಾನದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ನಂತರ ರಾತ್ರಿ ೧೦ ಘಂಟೆಗೆ ಭಾಗ್ಯವಂತಿ ನಾಟ್ಯ ಸಂಘ ಕಲಹಳ್ಳಿ ಇವರಿಂದ ಶ್ರೀ ಘತ್ತರಗಿ ಭಾಗಮ್ಮ ಎಂಬ ಪೌರಾಣಿಕ ನಾಟಕ ಪ್ರದರ್ಶನಗೊಂಡಿತು.
ಅಜಲಾಪುರದ ಶಂಕ್ರಗೌಡ ತಾತನವರು, ಅರ್ಜೂಣಗಿಯ ಮಡಿವಾಳಯ್ಯ ಶಾಸ್ತ್ರಿಗಳು, ಅಂಕಲಗಿಯ ಚನ್ನಮಲ್ಲಯ್ಯ ಸ್ವಾಮಿಗಳು, ಸಚಿನಗೌಡ ಪಾಟೀಲ ಕುದರಿಸಾಲೋಡಗಿ, ನಾನಾಗೌಡ ಪಾಟೀಲ, ರವೀಂದ್ರ ಸುಧಾಕರ್, ಶಿವಶರಣ ಸಜ್ಜನ, ಕಾಶಿಂ ನಾಯ್ಕೋಡಿ, ರಮೇಶ ಹೆಂಡಿ, ದೇವಿಂದ್ರಪ್ಪ ವಗ್ಗರ್, ಬಸನಗೌಡ ಪಾಟೀಲ, ನಿಂಗಯ್ಯ ಮಠ ಸೇರಿದಂತೆ ಇತರರು ಇದ್ದರು.

