ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ತಾಲೂಕಾ ಆಡಳಿತದ ವ್ಯವಸ್ಥೆಯನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮತಿ (ಪ್ರೋ.ಬಿ.ಕೃಫ್ಣಪ್ಪ ಬಣ) ವಲಯ ಶಾಖೆ ಕಲಕೇರಿ ಹಾಗೂ ವಿವಿಧ ಸಂಘಟನೆಗಳ ಪ್ರಗತಿಪರ ಹೋರಾಟಗಾರರು, ರೈತಪರ ಹೋರಾಟಗಾರರ ನೇತೃತ್ವದಲ್ಲಿ ತಾಳಿಕೋಟಿ ತಾಲೂಕಿನ ಕಲಕೇರಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ನಾಗರಿಕರ ಅನಕೂಲಕ್ಕಾಗಿ ವಿವಿಧ ಬೇಡಿಕೆಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪ್ರತಿಭಟನಾ ರ್ಯಾಲಿ ಮಾಡಲಾಯಿತು.
ಕಲಕೇರಿ ಪಟ್ಟಣದ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದಿಂದ ಪೊಲೀಸ್ ಠಾಣೆಯ ಮಾರ್ಗವಾಗಿ ಬಸ್ ನಿಲ್ದಾಣದಲ್ಲಿ ಸಭೆ ಸೇರಿದ ಪ್ರತಿಭಟನಾಕಾರರು ಸದರಿ ನ್ಯಾಯಯುತವಾದ ಹಕ್ಕೊತ್ತಾಯಗಳ ಈಡೇರಿಕೆಗಾಗಿ ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡು ಉಪ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಿಗೆ ಸಮಸ್ಯೆಗಳು ಹೆಚ್ಚಾದವು ಹೊರತಾಗಿ ಕಡಿಮೆ ಆಗಲಿಲ್ಲ. ಈಗ ಆಡಳಿತ ನಡೆಸುತ್ತಿರುವ ತಾಲೂಕ ಆಡಳಿತ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಕಡೆ ಗಮನಹರಿಸಿ ಸದರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನಮ್ಮ ಬೇಡಿಕೆಗಳನ್ನು ೧೦ ದಿನಗಳ ಒಳಗಾಗಿ ನೇರವೇರಿಸಿಕೊಡಬೇಕು. ಒಂದು ವೇಳೆ ಬೇಡಿಕೆ ಈಡೇರದಿದ್ದ ಪಕ್ಷದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಎದುರಿಗೆ ಉಗ್ರರೂಪದ ಪ್ರತಿಭಟನಾ ರ್ಯಾಲಿ ಮಾಡುವುದಾಗಿ ಎಚ್ಚರಿಸಿದರು.
ಈ ವೇಳೆ ಮನವಿ ಸ್ವೀಕರಿಸಿ ಮಾತನಾಡಿದ ತಾಳಿಕೋಟಿ ಉಪ ತಹಶೀಲ್ದಾರ ಜೆ.ಆರ್.ಜೈನಾಪುರ ಅವರು, ನಿಮ್ಮ ಬೇಡಿಕೆಗಳನ್ನು ಮಾನ್ಯ ಜಿಲ್ಲಾಡಳಿತಕ್ಕೆ ತಲುಪಿಸುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ರೇಣುಕಾ ಪಾಟೀಲ್, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾದ ಲಕ್ಕಪ್ಪ ಬಡಿಗೇರ, ಶರಣು ಸಿಂಧೆ, ಹಣಮಂತ ವಡ್ಡರ, ಲಕ್ಷ್ಮಣ್ ಹೊಸಮನಿ, ಅನೀಲ ಬಡಿಗೇರ, ಅಶೋಕ್ ಗುಡಿಸಲಮನಿ, ಶ್ರೀಶೈಲ ಜಾಲವಾದ , ಅಕ್ಬರ್ ಬನ್ನೆಟ್ಟಿ, ಮಹಾದೇವ ಲಿಂಗದಳ್ಳಿ, ಸೋಮು ನೀರಲಗಿ, ದಾನೇಶ ಕೇಸರಿ, ಮಾಂತು ಸಂದಿಮನಿ, ಶಿವು ಹೊಸಮನಿ, ಉಮೇಶ್ ಬಡಿಗೇರ, ಚಂದ್ರು ಬಡಿಗೇರ, ಕಾಸೀಮ್ ನಾಯ್ಕೊಡಿ, ಸಾಯಬಣ್ಣ ನೀರಲಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಪದಾಧಿಕಾರಿಗಳು ಹಾಗೂ ರೈತ ಸಂಘದ ಮುಖಂಡರು ಉಪಸ್ಥಿತರಿದ್ದರು.
ಪ್ರತಿಭಟನಾಕಾರರ ಬೇಡಿಕೆಗಳು
೧. ತಾಳಿಕೋಟಿ ತಾಲೂಕಿನ ಕಲಕೇರಿ ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರಿಗೆ ಬೆಳೆ ಪರಿಹಾರ ಮತ್ತು ಬೆಳೆ ವಿಮೆ ಮಂಜೂರಾತಿ ಮಾಡಬೇಕು.
೨. ಬೂದಿಹಾಳ-ಪೀರಾಪೂರ ಏತ ನೀರಾವರಿ ಯೋಜನೆಡಿಯಲ್ಲಿ ರೈತರ ಜಮೀನುಗಳ ಅನಕೂಲಕ್ಕಾಗಿ ೨೪೦ ಹೊಸದಾಗಿ ನೀರಿನ ಶೇಖರಣಾ ಘಟಕಗಳು(ಟ್ರಯಲ್ ರನ್ ಪಾಕಗಳು) ಮಂಜೂರಾಗಿದ್ದು ಕೂಡಲೇ ಕೆಲಸ ಪ್ರಾರಂಭಿಸಬೇಕು.
೩. ಕಲಕೇರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳ ಅನಕೂಲಕ್ಕಾಗಿ ೧೦೮ ಅಂಬುಲೆನ್ಸ್ ಸೇವೆಯನ್ನು ಕೂಡಲೇ ಪ್ರಾರಂಭಿಸಬೇಕು ಹಾಗೂ ರೋಗಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಸಬೇಕು.
೪. ಕಲಕೇರಿ ಗ್ರಾಮ ಪಂಚಾಯತಿಗೆ ವಿವಿಧ ವಸತಿ ಯೋಜನೆಡಿಯಲ್ಲಿ ೪೫೦ ಮನೆಗಳ ಮಂಜೂರಾಗಿದ್ದು ಕೂಡಲೇ ಫಲಾನುಭವಿಗಳ ಆಯ್ಕೆ ಪಟ್ಟಿ ತಯಾರಿಸಿ ಮಂಜೂರು ಮಾಡಬೇಕು.
೫. ಹುಣಶ್ಯಾಳ ಕೆರೆ ನೀರು ತುಂಬುವ ಯೋಜನೆಡಿಯಲ್ಲಿ ಅಂದಾಜು ೫.೫ ಕೋಟಿ ಮಂಜೂರಾಗಿದ್ದು, ಕೆರೆ ತುಂಬುವ ಕೆಲಸ ಪೂರ್ಣಗೊಳಿಸಬೇಕು.

