ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಕರೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ತವ್ಯದ ಜೊತೆ ಕುಟುಂಬ ನಿರ್ವಹಣೆಗೂ ಪ್ರಾಧಾನ್ಯತೆ ಕೊಡಿ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಯುವ ಸಬಲಿಕರಣ ಹಾಗೂ ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕದ ಸಹಯೋಗದೊಂದಿಗೆ ಸೋಮವಾರ ನಡೆದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಒತ್ತಡದ ಮಧ್ಯೆ ಕರ್ತವ್ಯ ನಿರ್ವಹಣೆ ಮಾಡುವದರಿಂದ ಕ್ರೀಡಾಕೂಟಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ತೇಜನ ನೀಡುತ್ತವೆ. ಈ ಒತ್ತಡದ ಮಧ್ಯೆಯೂ ಕುಟುಂಬಕ್ಕೂ ಸಮಯವನ್ನು ಮೀಸಲಿಡಬೇಕು. ನೌಕರರ ಎಲ್ಲ ಸಮಸ್ಯೆಗಳಿಗೆ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ನಿರಂತರವಾಗಿ ನನ್ನ ಗಮನಕ್ಕೆ ತರುತ್ತಿದ್ದು, ನಾನು ಸಹ ಸ್ಪಂದಿಸುತ್ತಿದ್ದೇನೆ ಎಂದರು.
ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಮಾತನಾಡಿ, ಜಿಲ್ಲಾಡಳಿತದಿಂದ ಎಲ್ಲ ಇಲಾಖೆಗಳ ಕ್ರೀಡಾಕೂಟಗಳಿಗೆ ಉತ್ತೇಜನ ನೀಡಲಾಗಿದ್ದು, ಕರ್ತವ್ಯದ ಒತ್ತಡದ ಮಧ್ಯದಲ್ಲಿ ಆರೋಗ್ಯಯುತವಾದ ಜೀವನ ಸಾಗಿಸಲು ದೈಹಿಕ ಶ್ರಮ ಬಹಳ ಮುಖ್ಯವಾಗಿದೆ. ಈ ತಂತ್ರಜ್ಞಾನದ ಬಳಕೆಯಿಂದ ಕಛೇರಿ ಕೆಲಸದಲ್ಲಿ ದೈಹಿಕ ಶ್ರಮ ಕಮ್ಮಿಯಾಗಿದ್ದು, ಈ ಕ್ರೀಡಾಕೂಟ ಏರ್ಪಡಿಸುವದರಿಂದ ನೌಕರರು ದೈಹಿಕ ಶ್ರಮ ರೂಢಿಸಿಕೊಳ್ಳಬಹುದಾಗಿದೆ ಎಂದರು.
ಜಿಲ್ಲಾ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶಡಶ್ಯಾಳ ಮಾತನಾಡಿ, ಜಿಲ್ಲೆಯಲ್ಲಿ ನೌಕರರ ಸಂಘ ಜಿಲ್ಲಾಡಳಿತದೊಂದಿಗೆ ಒಳ್ಳೆಯ ಸಂಬಂಧ ಇಟ್ಟುಕೊಂಡು ಸರ್ಕಾರಿ ನೌಕರರ ಸಮಸ್ಯೆಗಳನ್ನು ಎದುರಿಸಲು ಬದ್ದರಾಗಿದೆ. ಸರ್ಕಾರಿ ನೌಕರರ ಮೇಲೆ ನಡೆಯುವ ದಬ್ಬಾಳಿಕೆಗಳು, ಒತ್ತಡಗಳು ಅನಧಿಕೃತ ವ್ಯಕ್ತಿಗಳ ಬೆದರಿಕೆಗಳಿಗೆ ಯಾವ ಸರ್ಕಾರಿ ನೌಕರರು ಹೆದರುವ ಅವಶ್ಯಕತೆ ಇಲ್ಲ. ಸದಾ ನಿಮ್ಮ ಸೇವೆಗೆ ಸರ್ಕಾರಿ ನೌಕರ ಸಂಘ ಇರುತ್ತದೆ ಎಂದು ಹೇಳಿದರು.
ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ನೌಕರರು ಆನಲೈನ ಮೂಲಕ 1125 ಜನರು ನೊಂದಣಿ ಮಾಡಿಕೊಂಡಿದ್ದಾರೆ. ಗುಂಪು ಹಾಗೂ ವಯಕ್ತಿಕ ವಿಭಾಗದ ಕ್ರೀಡಾಕೂಟಗಳಿದ್ದು, ಉತ್ಸಾಹದಿಂದ ನೌಕರರು ಪಾಲ್ಗೊಂಡರು.
ಜಿಲ್ಲಾ ಪೋಲಿಸ್ ವರಿಷ್ಠಾಧಕಾರಿ ಲಕ್ಷ್ಮಣ ನಿಂಬರಗಿ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ಜಾವೀದ ಜಮಾದಾರ, ಸಂಜೀವ ಖೋತ, ಮುಖಂಡ ಅಡಿವೆಪ್ಪ ಸಾಲಗಲ್, ನೌಕರರ ಸಂಘದ ರಾಜ್ಯ ಕಾರ್ಯಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ, ನೌಕರರ ಸಂಘದ ಖಜಾಂಚಿ ಜುಬೇರ ಕೆರೂರ, ರಾಜ್ಯ ಪರಿಷತ್ ಸದಸ್ಯ ವಿಜಯಕುಮಾರ ಹತ್ತಿ, ಪ್ರಧಾನ ಕಾರ್ಯದರ್ಶಿ ಶಿವರಾಜ ಬಿರಾದಾರ, ಕೋಶಾಧ್ಯಕ್ಷ ಪ್ರಕಾಶ ಗೊಂಗಡಿ, ಗೌರವಾಧ್ಯಕ್ಷ ವಿಶ್ವನಾಥ ಬೆಳ್ಳೆನವರ, ಹಿರಿಯ ಉಪಾಧ್ಯಕ್ಷ ಗಂಗಾಧರ ಜೇವೂರ, ಕ್ರೀಡಾ ಕಾರ್ಯದರ್ಶಿ ನೀಜು ಮೇಲಿನಕೇರಿ, ತಾಲ್ಲೂಕ ಅಧ್ಯಕ್ಷರುಗಳಾದ ಅಶೋಕ ತೆಲ್ಲೂರ, ಬಸವರಾಜ ಮಜ್ಜಗಿ, ಅರವಿಂದ ಹೂಗಾರ, ಬಿ.ಟಿ.ಗೌಡರ, ವಿವಿಧ ಇಲಾಖೆಯ ನಿರ್ದೇಶಕರು ಇದ್ದರು.
ಸ್ವಾಗತವನ್ನು ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆಯ ದೈವಾಡಿ, ನಿರೂಪಣೆಯನ್ನು ಎಚ್.ಎ.ಮಮದಾಪೂರ, ವಂದನಾರ್ಪಣೆಯನ್ನು ಶಿವರಾಜ ಬಿರಾದಾರ ನೆರವೇರಿಸಿದರು.

“ಸರ್ಕಾರಿ ನೌಕರರು ಆರೋಗ್ಯಯುತವಾಗಿ ಕರ್ತವ್ಯ ನಿರ್ವಹಿಸಿ ತಮ್ಮ ಮಕ್ಕಳಿಗೆ ಒಳ್ಳೆಯ ವಿಧ್ಯಾಭ್ಯಾಸ ಕೊಡಿಸಿ ಈ ಜಿಲ್ಲೆಯ ಜಿಲ್ಲಾಧಿಕಾರಿ , ಪೋಲಿಸ್ ವರಿಷ್ಠಾಧಿಕಾರಿ ಜಿಪಂ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನಮ್ಮ ಸರ್ಕಾರಿ ನೌಕರರ ಮಕ್ಕಳನ್ನು ನೋಡುವಂತಾಗಬೇಕು. ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರು ಯಾವುದೇ ಸರ್ಕಾರಿ ನೌಕರರಿಗೆ ಅನವಶ್ಯಕವಾಗಿ ತೊಂದರೆ ಕೊಡದೆ ಅತ್ಯಂತ ಪಾರದರ್ಶಕ ಆಡಳಿತ ನೀಡಲು ಸಹಕಾರಿಯಾಗಿದ್ದಾರೆ.”
– ಸಂಗಮೇಶ ಬಬಲೇಶ್ವರ
ಅಧ್ಯಕ್ಷರು, ಕರ್ನಾಟಕ ಬಾಲ ವಿಕಾಸ ಅಕಾಡೆಮಿ

