ಕೋಟ್ಯಾಳದಲ್ಲಿ ದುಡಿಯೋಣ ಬಾ ಅಭಿಯಾನ | ಸಹಾಯಕ ನಿರ್ದೇಶಕ ಬಸವರಾಜ ಸಂಕಗೊಂಡ ಸಲಹೆ
ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ತಾಲೂಕಿನ ಕೋಟ್ಯಾಳ ಗ್ರಾಮ ಪಂಚಾಯತಿಯಲ್ಲಿ ಮನರೇಗಾ ಯೋಜನೆಯಡಿ ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ನಿರಂತರವಾಗಿ 100 ದಿನಗಳ ಉದ್ಯೋಗ ಒದಗಿಸುವ ಸಲುವಾಗಿ ಮಾಹಿತಿ, ಶಿಕ್ಷಣ & ಸಂವಹನ ಕಾರ್ಯಕ್ರಮದಡಿ ಹಮ್ಮಿಕೊಂಡ “ದುಡಿಯೋಣ ಬಾ” ಅಭಿಯಾನಕ್ಕೆ ಚಾಲನೆ ನೀಡಿ ತಿಕೋಟಾ ತಾಲೂಕು ಪಂಚಾಯತಿಯ ಸಹಾಯಕ ನಿರ್ದೇಶಕರಾದ ಬಸವರಾಜ ಸಂಕಗೊಂಡ ಮಾತನಾಡಿದರು.
“ಈ ಬೇಸಿಗೆ ಅವಧಿಯಲ್ಲಿ ನರೇಗಾ ಕೂಲಿಕಾರರಿಗೆ ನಿರಂತರವಾಗಿ 100 ದಿನಗಳ ಉದ್ಯೋಗ ಒದಗಿಸುವುದು ಆ ಮೂಲಕ ಗ್ರಾಮೀಣ ಆಸ್ತಿಗಳ ರಚನೆ ಮಾಡುವುದು, ಜಲ ಸಂರಕ್ಷಣೆ ಮಾಡಿ ಅಂತರ್ಜಲ ಮಟ್ಟ ವೃದ್ಧಿಸುವುದು, ಅರಣ್ಯೀಕರಣ ಕಾಮಗಾರಿಗಳು, ಶಾಲಾ ಅಭಿವೃದ್ಧಿ ಕಾಮಗಾರಿಗಳನ್ನು ಯಶಸ್ವಿಯಾಗಿ ನಿರ್ಮಾಣ ಮಾಡುವುದು ಈ ದುಡಿಯೋಣ ಬಾ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಈ ಅಭಿಯಾನದ ಅಂಗವಾಗಿ ಎಲ್ಲ ಗ್ರಾಮ ಪಂಚಾಯತಿಯಲ್ಲಿ ಮನೆ-ಮನೆ ಭೇಟಿ, ಸ್ವ-ಸಹಾಯ ಸಂಘದ ಸಭೆ, ಮಹಿಳಾ ವಿಶೇಷ ಗ್ರಾಮ ಸಭೆ, ವಾರ್ಡ್ ಸಭೆ, ಡಂಗೂರ, ಕರಪತ್ರ ವಿತರಣೆಯಂತಹ ವಿವಿಧ ಐಇಸಿ ಚಟುವಟಿಕೆಗಳ ಮೂಲಕ ಅರಿವು ಮೂಡಿಸುವ ಕಾರ್ಯವನ್ನು ತಾಲೂಕು ಐಇಸಿ ಬಳಗ ಮಾಡುತ್ತಿದೆ. ಐಇಸಿ ತಂಡದ ಜೊತೆ ಸ್ವತಃ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ಎಲ್ಲ ಪಿಡಿಓಗಳು, ಕಾರ್ಯದರ್ಶಿಗಳು, ಲೆಕ್ಕ ಸಹಾಯಕರು, ಟಿಸಿ, ಟಿಎಇ, ಬಿ.ಎಪ್.ಟಿ, ಕಾಯಕ ಮಿತ್ರ ಸೇರಿದಂತೆ ಚುನಾಯಿತ ಸದಸ್ಯರುಗಳು, ನರೇಗಾ ಸಿಬ್ಬಂದಿಗಳು, ಸ್ವ-ಸಹಾಯ ಸಂಘದವರು ಈ ಅಭಿಯಾನದಲ್ಲಿ ಅತ್ಯಂತ ಉತ್ಸುಕತೆಯಿಂದ ಪಾಲ್ಗೊಳುತ್ತಿದ್ದಾರೆ ಎಂದರು.
ತಾಲೂಕು ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ ಮಾತನಾಡಿ, “ನಮ್ಮ ಮನರೇಗಾ ಯೋಜನೆಯಡಿ ವಿಶೇಷವಾಗಿ ಮಹಿಳೆಯರಿಗೆ, ವಿಶೇಷ ಚೇತನರಿಗೆ, ಹಿರಿಯ ನಾಗರಿಕರಿಗೆ, ಲಿಂಗತ್ವ ಅಲ್ಪಸಂಖ್ಯಾತರಿಗೆ, ದುರ್ಬಲ ವರ್ಗದವರಿಗೆ ವಿಶೇಷ ಆಧ್ಯತೆ ನೀಡಲಾಗುತ್ತಿದೆ. ಕಡ್ಡಾಯವಾಗಿ 60% ಮಹಿಳೆಯರ ಭಾಗವಹಿಸುವಿಕೆಯನ್ನು ನಿರ್ವಹಣೆ ಮಾಡಲು ಈಗಾಗಲೇ ಎಲ್ಲ ಗ್ರಾಮ ಪಂಚಾಯತಿಗಳಿಗೆ ಸೂಚನೆ ನೀಡಲಾಗಿದೆ. ಜೊತೆಗೆ ನೋಂದಾಯಿತ ವಿಶೇಷಚೇತನರಿಗೆ 100 ದಿನಗಳ ಕೆಲಸ ಖಾತರಿಪಡಿಸಿಕೊಳ್ಳಲು ಸಹ ಸೂಚಿಸಲಾಗಿದೆ. ಸಣ್ಣ-ಅತೀ ಸಣ್ಣ ರೈತ್ತರಿಗೆ ಅವಶ್ಯಕವಿರುವ ವೈಯಕ್ತಿಕ ಕಾಮಗಾರಿಗಳನ್ನು ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ. ಪ್ರತಿ ವರ್ಷ ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಪ್ರದೇಶದ ಜನರು ತಮ್ಮ ಊರಲ್ಲಿ ಕೆಲಸ ಸಿಗದ ಕಾರಣದಿಂದ ನಗರ ಪ್ರದೇಶಗಳಿಗೆ ವಲಸೆ ಹೋಗುವುದು ಸಾಮಾನ್ಯ. ಇದನ್ನು ಗಂಭೀರವಾಗಿ ಪರಿಗಣಿಸಿದ ನಮ್ಮ ತಾಲೂಕು ಪಂಚಾಯತಿ ತಂಡ ನರೇಗಾ ಯೋಜನೆಯ ಕುರಿತು, ಯೋಜನೆಯಡಿ ಸಿಗುವ ಸೌಲಭ್ಯಗಳ ಕುರಿತು ಹೆಚ್ಚು ಪ್ರಚಾರ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಕೂಲಿಕಾರರಿಗೆ ನರೇಗಾದಿಂದಾಗುವ ಅನುಕೂಲಗಳ ಕುರಿತು ಸುವಿವರವಾದ ಮಾಹಿತಿ ನೀಡುವ ಕಾರ್ಯ ಭರದಿಂದ ಸಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿ.ಎಫ್.ಟಿ ಸಿದ್ರಾಯ ದಾಶ್ಯಾಳ, ಡಿಇಒ ಆರತಿ ಪಾಟೀಲ, ಕ್ಲರ್ಕ್ ಶರಣಪ್ಪ ಜಿಡ್ಡಿ, ಎಂ.ಬಿ.ಕೆ ಮೇಘಾ ಪಶ್ಚಾಪುರ ಸೇರಿದಂತೆ ಕಾಯಕ ಬಂಧುಗಳು & ಕೂಲಿಕಾರರು ಸೇರಿ ಇತರರು ಹಾಜರಿದ್ದರು.

