ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಬೇಸಿಗೆಯಲ್ಲಿ ಜನಜಾನುವಾರಗಳಿಗೆ ಸಹಕಾರಿಯಾಗುವಂತೆ ಕೂಡಲೇ ಆಲಮಟ್ಟಿ ಜಲಾಶಯದ ಚಿಮ್ಮಲಗಿ ಏತ ನೀರಾವರಿ ಕಾಲುವೆಗೆ ನೀರು ಹರಿಸುವಂತೆ ರೈತರು ಆಗ್ರಹಿಸಿದ್ದಾರೆ.
ಪಟ್ಟಣದ ಪ್ರವಾಸಿಮಂದಿರದಲ್ಲಿ ಭಾನುವಾರ ಸಭೆ ಸೇರಿದ ರೈತರು ಎಪ್ರೀಲ್ನಲ್ಲಿ ಬೇಸಿಗೆಯ ಬಿಸಿಲಿನ ತಾಪಕ್ಕೆ ನೀರಿನ ಕೊರತೆ ಕಾಡಲಾರಂಭಿಸಿದೆ. ಇನ್ನೂ ಮೇ ತಿಂಗಳು ಮುಗಿಯಬೇಕು. ಅಲ್ಲಿಯವರೆಗೆ ಜನತೆ ಹಾಗೂ ಜಾನುವಾರಗಳಿಗೆ ಕುಡಿಯುವ ನೀರಿನ ಅಗತ್ಯತೆಯಿದೆ. ಆದ್ದರಿಂದ ಇದೇ ದಿ: ೯ ರ ಒಳಗಾಗಿ ಚಿಮ್ಮಲಗಿ ಏತನೀರಾವರಿ ಕಾಲುವೆಗೆ ನೀರು ಹರಿಸಲು ಜಿಲ್ಲಾ ಸಚಿವರು, ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು.
ಕಾಲುವೆಗಳಿಗೆ ನೀರು ಹರಿಯುವುದರಿಂದ ಜಲಮೂಲಗಳಾದ ಭಾವಿ, ಬೊರೆವೆಲ್ಗಳು ಸಹ ನೀರಿನಿಂದ ಭರ್ತಿಯಾಗಿ ಪ್ರಾಣಿ, ಪಕ್ಷಿಗಳಿಗೆ ಜೀವಜಲ ದೊರೆಯುವಂತಾಗುತ್ತದೆ. ಒಂದು ವೇಳೆ ಶಾಸಕರು, ಸಚಿವರು, ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿ ನೀರು ಹರಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ರೈತರು ರಾಷ್ಟೀಯ ಹೆದ್ದಾರಿ ತಡೆ ಕೈಗೊಂಡು ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ. ಆದ್ದರಿಂದ ತಾಲ್ಲೂಕಿನ ಜಾಲವಾದ, ಬಮ್ಮನಜೋಗಿ, ಪುರದಾಳ, ಮುಳಸಾವಳಗಿ, ಇಂಗಳಗಿ, ಹರನಾಳ, ಕಡ್ಲೇವಾಡ ಪಿಸಿಎಚ್, ಅಂಕಲಗಿ, ಜಂಬಗಿ ಸೇರಿದಂತೆ ಹಲವು ಗ್ರಾಮಗಳಿಗೆ ಅನುಕೂಲವಾಗುವಂತ ಚಿಮ್ಮಲಗಿ ಏತ ನೀರಾವರಿ ಕಾಲುವೆಗೆ ಕೂಡಲೇ ನೀರು ಹರಿಸಲು ಮುಂದಾಗುವAತೆ ಆಗ್ರಹಿಸಿದರು.
ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ವಿಜಯಪುರ ಜಿಲ್ಲಾ ಸಮಿತಿಯ ಅಧ್ಯಕ್ಷ ಶಂಕರಗೌಡ ಹಿರೇಗೌಡರ, ತಾಲ್ಲೂಕು ಅಧ್ಯಕ್ಷ ರಾಮು ದೇಸಾಯಿ, ನಾಗೇಂದ್ರ ಇಂಡಿ, ಕಾಸುಗೌಡ ಜಿರ್ಲಿ, ಬಸನಗೌಡ ಬಿರಾದಾರ(ಮುಳಸಾವಳಗಿ), ರಾಚೋಟಯ್ಯ ಹಿರೇಮಠ, ಚಂದು ಏಳಕೋಟಿ, ಶ್ರೀಕಾಂತ ಬಜಂತ್ರಿ, ಸಂತೋಷ ಬಿರಾದಾರ(ಇಂಗಳಗಿ), ಸೇರಿದಂತೆ ಇತರರು ಇದ್ದರು.

