ಯಡ್ರಾಮಿ ಪ್ರೌಢ ಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮ | ಶಿಕ್ಷಕರಿಗೆ ಸನ್ಮಾನ
ಉದಯರಶ್ಮಿ ದಿನಪತ್ರಿಕೆ
ಯಡ್ರಾಮಿ: ಆಚಾರ, ವಿಚಾರಗಳನ್ನು ಹೋಂದಿರುವ ಶಿಕ್ಷಕರು ಸಂಸ್ಕಾರಯುತ ಶಿಕ್ಷಣ ನೀಡಿದ್ದರಿಂದಲೇ ಇಂತಹ ಗುರುವಂದನಾ ಕಾರ್ಯಕ್ರಮಗಳನ್ನು ನೋಡುವಂತಾಗಿದೆ ಎಂದು ಯಡ್ರಾಮಿ ವಿರಕ್ತಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ತಿಳಿಸಿದರು.
ಯಡ್ರಾಮಿ ಪಟ್ಟಣದ ಸರಕಾರಿ ಪ್ರೌಡ ಶಾಲೆಯಲ್ಲಿ ೨೦೦೪-೦೫ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪಾಠ ಹೇಳಿ, ಜ್ಞಾನಾರ್ಜನೆ ಮಾಡಿಸಿ ಬದುಕಿಗೆ ಬೆಳಕಾದ ಶಿಕ್ಷಕರನ್ನು ಎಂದಿಗೂ ಮರೆಯಬಾರದು. ಗುರುಗಳ ಸೇವೆಯನ್ನು ಸ್ಮರಿಸಿ ಅವರಿಗೆ ಧನ್ಯತೆ ಸಮರ್ಪಣೆ ಮಾಡುವುದು ಸಾರ್ಥಕ ಕಾರ್ಯವಾಗಿದೆ. ಇಂದಿನ ಆಧುನಿಕ ಶಿಕ್ಷಣ ವ್ಯವಸ್ಥೆಗೂ ಆಗಿನ ಶಿಕ್ಷಣ ವ್ಯವಸ್ಥೆಗೂ ಬಹಳ ವ್ಯತ್ಯಾಸವಿದೆ. ಶಿಕ್ಷಕರಾದವರು ಆಧುನಿಕತೆಯ ಜೊತೆಗೆ ಸಂಸ್ಕಾರಯುತ ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಡಬೇಕು ಎಂದರು.
ಇದಕ್ಕೂ ಪೂರ್ವದಲ್ಲಿ ಶಿಕ್ಷಕಿ ಸಾವಿತ್ರಿ ಪಾಟೀಲ ಮಾತನಾಡಿ, ಯಡ್ರಾಮಿ ಪಟ್ಟಣದಲ್ಲಿ ಸಂಸ್ಕಾರಕ್ಕೆ ಕೊರತೆಯಿಲ್ಲ. ಇಲ್ಲಿ ಶಿಕ್ಷಕರಿಗೆ ಒಳ್ಳೆಯ ಸ್ಥಾನಮಾನವಿದ್ದು, ಎಲ್ಲರನ್ನು ಮನೆ ಮಕ್ಕಳಂತೆ ನೋಡಿಕೊಂಡಿದ್ದಾರೆ. ಅನಿವಾರ್ಯ ಕಾರಣದಿಂದ ಬೇರೆಡೆ ವರ್ಗಾವಣೆಗೊಂಡಿದ್ದೇವೆ. ಇಪ್ಪತ್ತು ವರ್ಷದ ಹಿಂದೆ ನಮ್ಮಿಂದ ಪಾಠ ಕಲಿತ ವಿದ್ಯಾರ್ಥಿಗಳು ಇಂದು ವಿವಿಧ ಕ್ಷೇತ್ರಗಳಲ್ಲಿ ಒಳ್ಳೆಯ ಸ್ಥಾನ ಹೊಂದಿರುವದು ಸಂತೋಷದ ಸಂಗತಿಯಾಗಿದೆ. ಎಲ್ಲರು ಸೇರಿ ನಮ್ಮನ್ನು ನೆನಪಿಸಿಕೊಂಡು ಗುರುವಂಧನೆ ಸಲ್ಲಿಸಿರುವದು ಹೆಮ್ಮೆಯ ಕ್ಷಣವಾಗಿದೆ ಎಂದು ಶ್ಲಾಘಿಸಿದರು.
ಈ ವೇಳೆ ಪಿಎಸ್ಐ ವಿಶ್ವನಾಥ ಮುದರೆಡ್ಡಿ, ಪ್ರಮುಖರಾದ ಸಿದ್ರಾಮಪ್ಪಗೌಡ ಮಾಲಿಪಾಟೀಲ, ಪ್ರಕಾಶ ಬೆಲ್ಲದ, ಅಪ್ಪಾರಾವ ಕುಲಕರ್ಣಿ, ಶಿಕ್ಷಕರಾದ ವೈ.ಜಿ.ಗುಣಕಿ, ಭೀಮರಾಯ ಅರಳಗುಂಡಗಿ, ಮಲ್ಲಣ್ಣ ಯಂಕಂಚಿ, ಸುಭಾಶ, ಶಿವಾನಂದ, ಶಶಿಕಲಾ, ಅನುಸೂಯಾ, ಸಾವಿತ್ರಿ ಪಾಟೀಲ, ನಿವೃತ್ತ ಶಿಕ್ಷಕ ಗಂಗಾದರ ವಿಶ್ವಕರ್ಮ, ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

