ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರೈತರ ಪಹಣಿಯಲ್ಲಿ ವಕ್ಫ್ ನಮೂದಾಗಿರುವ ವಿಷಯವನ್ನು ಮೊಟ್ಟಮೊದಲು ಹೊನವಾಡ ರೈತರು ಧ್ವನಿ ಎತ್ತಿ ಈ ಬಗ್ಗೆ ಆಂತಕ ನಿವಾರಣೆ ಮಾಡುವಂತೆ ಸಂಸದ ತೇಜಸ್ವಿ ಸೂರ್ಯ ಅವರನ್ನು ನಿಯೋಗದೊಂದಿಗೆ ಭೇಟಿ ಮಾಡಿದ ರೈತ ತಂಡವನ್ನು ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಲಾಯಿತು.
ವಕ್ಫ್ ಕಾಯ್ದೆ ರದ್ದುಗೊಳ್ಳಲು ಹೊನವಾಡ ರೈತರ ಈ ನಿಯೋಗವೇ ಮುನ್ನುಡಿ ಬರೆಯಿತು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಸಾವಯವ ಬೀಜ ನಿಗಮದ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ, ಡಾ.ಸುರೇಶ ಬಿರಾದಾರ ಮೊದಲಾದ ಮುಖಂಡರು ರೈತರಿಗೆ ಶಾಲು ಹೊದಿಸಿ, ಸಿಹಿ ತಿನಿಸಿ ಆತ್ಮೀಯವಾಗಿ ಸನ್ಮಾನಿಸಿದರು.
ಕೇಂದ್ರ ಗೃಹ ಸಚಿವ ಅಮೀತ ಷಹಾ ಅವರ ಭಾವಚಿತ್ರದ ಕಟೌಟ್ ಪ್ರದರ್ಶಿಸಿ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದರು.
ನಿಯೋಗದಲ್ಲಿದ್ದ ರೈತರಾದ
ಶಿವಾಜಿ ಜಾಧವ, ಮಾಳಪ್ಪ ಗುಗ್ಗರಿ, ಗೋವಿಂದ ರಜಪೂತ, ಚೆನ್ನಪ್ಪ ಕೋಟಿ, ತುಕಾರಾಮ ನಲವಡೆ, ಲಕ್ಕಪ್ಪ ಕಾತ್ರಾಳ
ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ
ಕರ್ನಾಟಕ ಸಾವಯವ ಬೀಜ ಪ್ರಮಾಣನ ಸಂಸ್ಥೆ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ ಮಾತನಾಡಿ,
ವಕ್ಫ್ ಹೋರಾಟ ಆರಂಭವಾಗಿದ್ದೇ ಹೊನವಾಡದಿಂದ, ಹೊನವಾಡ ರೈತರು ಸಂಸದ ತೇಜಸ್ವಿ ಸೂರ್ಯ ಅವರನ್ನು ಭೇಟಿಯಾದ ಪರಿಣಾಮ ತೇಜಸ್ವಿ ಸೂರ್ಯ ಅವರು ಪಾರ್ಲಿಮೆಂಟಿನಲ್ಲಿ ಧ್ವನಿ ಎತ್ತಿದರು. ಪರಿಣಾಮವಾಗಿ ಕರಾಳ ವಕ್ಫ್ ಕಾಯ್ದೆ ರದ್ದಾಗಿದೆ, ಇದಕ್ಕೆ ಹೊನವಾಡ ಹೋರಾಟವೇ ಕಾರಣ ಎಂದರು.
ವಕ್ಫ್ ವಿರುದ್ದ ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ದ ಬಿಜೆಪಿ ಸಹ ಧ್ವನಿಗೂಡಿಸಿತ್ತು, ವಕ್ಫ್ ಪ್ರಹಸನದಿಂದಾಗಿ ಅನೇಕ ರೈತರು ಆತಂಕ ಪಡುವಂತಾಗಿತ್ತು, ಅನೇಕ ರೈತರು ಸಾಲಕ್ಕಾಗಿ ಅರ್ಜಿ ಹಾಕಲು ಹೋದಾಗ ಅಲ್ಲಿ ಪಹಣಿಯಲ್ಲಿ ವಕ್ಫ್ ನಮೂದಾಗಿದ್ದನ್ನು ನೋಡಿ ಕಣ್ಣೀರು ಸುರಿಸಿದ್ದರು, ಈಗ ಕೇಂದ್ರ ಸರ್ಕಾರ ರೈತರ ಆತಂಕ ದೂರ ಮಾಡಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ,
ಬಡವರ ಜಮೀನು, ಮಠ ಮಾನ್ಯಗಳ ಜಮೀನನ್ನು ವಕ್ಫ್ ಹೆಸರಿನಲ್ಲಿ ಕಸಿದುಕೊಳ್ಳುವ ಕೆಟ್ಟ ಕಾರ್ಯಕ್ಕೆ ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ನಡೆದಿತ್ತು, ಈ ಬಗ್ಗೆ ಕಾಂಗ್ರೆಸ್ ಸರ್ಕಾರ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ತೋರಲಿಲ್ಲ ಎಂದರು. ಆದರೆ ಹೊನವಾಡ ರೈತರ ಅವಿರತ ಹೋರಾಟದಿಂದ ವಕ್ಫ್ ಕಾಯ್ದೆ ರದ್ದಾಗಿದೆ, ಈ ಕಾಯ್ದೆ ರದ್ದತಿಗೆ ಹೊನವಾಡ ರೈತರೇ ಮೂಲ ಕಾರಣ ಎಂದರು. ಕೇಂದ್ರ ಸಚಿವ ಅಮೀತ್ ಷಹಾ ಸಹ ಹೊನವಾಡ ಗ್ರಾಮದ ರೈತರ ಹೋರಾಟವನ್ನು ಉಲ್ಲೇಖಿಸಿದ್ದು ಹೆಮ್ಮೆಯ ಸಂಗತಿ ಎಂದರು.
ಕಾಂಗ್ರೆಸ್ ನೀತಿಯಿಂದ ಆಗುತ್ತಿದ್ದ ರೈತರ ತೊಂದರೆಗೆ ಬಿಜೆಪಿ ಕೇಂದ್ರ ಸರ್ಕಾರ ಇತಿಶ್ರೀ ಹಾಡಿದೆ ಎಂದರು.
ಬಿಜೆಪಿ ಬಬಲೇಶ್ವರ ಮಂಡಳ ಅಧ್ಯಕ್ಷ ಸಂತೋಷ ಕುರದಡ್ಡಿ, ಮಾಧ್ಯಮ ಪ್ರಮುಖ ವಿಜಯ ಜೋಶಿ ಸೇರಿದಂತೆ ಹಲವರು ಇದ್ದರು.

