ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತಾಲೂಕಿನ ನಾಗಠಾಣ ಗ್ರಾಮದಲ್ಲಿ ಶನಿವಾರದಂದು ಜಗದ್ಗುರು ಶ್ರೀ ಮೌನೇಶ್ವರ ಜಾತ್ರಾ ಮಹೋತ್ಸವವು ಸಡಗರ-ಸಂಭ್ರಮದಿಂದ ಜರುಗಿತು.
ಜಾತ್ರಾ ಮಹೋತ್ಸವ ನಿಮಿತ್ತ ಗ್ರಾಮದಲ್ಲಿ ಮೌನೇಶ್ವರರ ಪಲ್ಲಕ್ಕಿ ಮೆರವಣಿಗೆಯು ಸಕಲ ವಾದ್ಯ ಮೇಳದೊಂದಿಗೆ ಭಕ್ತಿ, ಶ್ರದ್ಧೆಯೊಂದಿಗೆ ನಡೆಯಿತು. ಭಕ್ತರ ಮನೆಗಳಿಗೆ ಭೇಟಿ ನೀಡುತ್ತಾ, ಅಲ್ಲಿ ಕಾಯಿ ನೈವೇದ್ಯ ಮಾಡಿಕೊಂಡು, ಮರಳಿ ದೇವಸ್ಥಾನಕ್ಕೆ ಅಪಾರ ಭಕ್ತ ಸಮೂಹ ಹಾಗೂ ಆರತಿ ಹಿಡಿದ ಮಹಿಳೆಯರೊಂದಿಗೆ ದೇವರ ಫಲ್ಲಕ್ಕಿಯು ಆಗಮಿಸಿತು. ನಂತರ ಅಲ್ಲಿ ದೇವರ ಫಲ್ಲಕ್ಕಿಯ ಮುಂದೆ ತಾಂಬಾ, ಹೊನ್ನಳ್ಳಿ, ಜಂಬಗಿ ಮುಂತಾದ ಗ್ರಾಮಗಳಿಂದ ಆಗಮಿಸಿದ ಪುರವಂತರು ತಮ್ಮ ವಿಶೇಷ ಪ್ರದರ್ಶನ ಮಾಡಿದರು. ತದನಂತರ ಮೌನೇಶ್ವರ ಫಲ್ಲಕ್ಕಿ ಹಾಗೂ ಅನೇಕ ಭಕ್ತರು ಅಗ್ನಿ ಪ್ರವೇಶ ಮಾಡಿದರು. ಜಾತ್ರೆಯಲ್ಲಿ ನೆರೆದ ಭಕ್ತರಿಗೆಲ್ಲ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಮಹಾಬಲೇಶ್ವರ ಆಚಾರ್ಯರು ಹಾಗೂ ಶರಣಬಸು ಪೂಜೇರಿ ಅವರು ರಥೋತ್ಸವದ ಸಾನ್ನಿಧ್ಯ ವಹಿಸಿದ್ದರು.
ಸಾವಿರಾರು ಸಂಖ್ಯೆಯ ಭಕ್ತರು ರಥದ ಮೇಲೆ ಹೂ, ಬಾಳೆಹಣ್ಣು, ಉತ್ತತ್ತಿ ಸಮರ್ಪಿಸಿ ಭಕ್ತಿ ಮೆರೆದರು. ಸ್ವತಃ ಭಕ್ತರು ಜಯಘೋಷಗಳೊಂದಿಗೆ ರಥವನ್ನು ಎಳೆಯುವ ದೃಶ್ಯ ಮನಮೋಹಕವಾಗಿತ್ತು. ಭಕ್ತರು ಜೋರಾದ ಧ್ವನಿಯಲ್ಲಿ ‘ಏಕ ಲಾಕ್ ಐಂಸಿ ಹಜಾರ್, ಪಾಚೋಪೀರ ಪೈಗಂಬರ್ ಜೀತಾ, ಪೈಗಂಬರ್ ಮೌನೋದ್ದೀನ್, ಕಾಶೀಪತಿ ಗಂಗಾಧರ, ಹರಹರ ಮಹಾದೇವ’ ಎಂಬ ಜೈಕಾರ ಮೊಳಗಿಸಿದ್ದು ವಿಶೇಷವಾಗಿತ್ತು.
ಶ್ರೀಧರ ಬಡಿಗೇರ, ಕಲ್ಯಾಣಿ ಪತ್ತಾರ, ಸಂತೋಷ ಸಿಂದಗಿ, ಅರುಣ ಬಡಿಗೇರ, ರಾಜು ಪತ್ತಾರ, ಕಿರಣ ಬಡಿಗೇರ, ಶ್ರೀಶೈಲ ಪತ್ತಾರ, ಅಶೋಕ ಬಡಿಗೇರ, ವಿಶ್ವನಾಥ ಬಡಿಗೇರ, ರಮೇಶ ಬಡಿಗೇರ, ಮೌನೇಶ ಬಡಿಗೇರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

