ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರಿ ಪತ್ತಿನ ಸಂಘ ನಿಯಮಿತ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಶಿಕ್ಷಕ ಐ. ಆರ್. ಹೊಸಮನಿ ಹಾಗೂ ಉಪಾಧ್ಯಕ್ಷರಾಗಿ ಐ. ಎಸ್. ಮುಳ್ಳಾಮಠ ಆಯ್ಕೆ ಯಾಗಿದ್ದಾರೆ.
ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೆಡಶಾಳ ಹಾಗೂ ಖಜಾಂಚಿ ಜುಬೇರ ಕೇರೂರ ಇವರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಐ ಆರ್ ಹೊಸಮನಿ ಹಾಗೂ ಎಸ್ ಎಸ್ ಬೇನೂರ ನಾಮಪತ್ರ ಸಲ್ಲಿಸಿದ್ದರು. ಒಟ್ಟು ೦೯ ಮತಗಳಲ್ಲಿ ೦೮ ಮತಗಳನ್ನು ಪಡೆಯುವ ಮೂಲಕ ಐ ಆರ್ ಹೊಸಮನಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಒಬ್ಬರೆ ನಾಮಪತ್ರ ಸಲ್ಲಿಸಿರುವುದರಿಂದ ಐ ಎಸ್ ಮುಳ್ಳಾಮಠ ಅವಿರೋಧ ಆಯ್ಕೆಯಾದರು. ನಂತರ ಸರ್ಕಾರಿ ನೌಕರರ ಭವನದಲ್ಲಿ ನೌಕರರ ಸಂಘ ಹಾಗೂ ಶಿಕ್ಷಕರ ಸಂಘದ ಪರವಾಗಿ ಸನ್ಮಾನ ಮಾಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೆಡಶ್ಯಾಳ, ಸಹಕಾರಿ ಸಂಘಗಳು ಬೆಳೆಯಬೇಕಾದರೆ ಸಹಕಾರ ಮುಖ್ಯವಾಗಿದ್ದು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ಕಾರ್ಯ ನಿರ್ವಹಿಸಿ ಶತಮಾನದಂಚಿನಲ್ಲಿರುವ ಸಹಕಾರ ಸಂಘವನ್ನು ಪ್ರಗತಿಯತ್ತ ಕೊಂಡೋಯ್ಯಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾ ಖಜಾಂಚಿ ಜುಬೇರ ಕೇರೂರ, ಶಿಕ್ಷಕರ ಸಂಘದ ಅಧ್ಯಕ್ಷ ವೀರಭದ್ರಪ್ಪ, ಶಿಕ್ಷಕ ಸಂಘಟನೆ ಪ್ರಮುಖರಾದ ಎಸ್ ಎನ್ ಪಡಶೆಟ್ಟಿ, ಕಬೂಲ್ ಕೊಕಟನೂರ, ಮಂಜುನಾಥ ಅರೆಶಂಕರ, ಆರ್ ಎನ್ ಸಜ್ಜನ, ಜಿ ಜಿ ಬಾಲಪ್ಪನವರ, ಆರ್ ಎಸ್ ತಿಮ್ಮಾಪೂರ, ಸಿ ಜಿ ಹಾರಿವಾಳ, ಅಶೋಕ ರಾಠೋಡ, ಸಂಜೀವ ಗಾಯಕವಾಡ, ಆರ್ ಜಿಮಠಪತಿ, ಬಿ ಬಿ ಹಿರೊಳ್ಳಿ, ಬಸೀರ ನದಾಫ, ಲತೀಫ ಬಾಗವಾನ, ಪಾಂಡು ಕರಾತ, ಜಾವೀದ್ ಕರ್ನಾಳ ಸೇರಿದಂತೆ ಪದಾಧೀಕಾರಿಗಳು, ಶಿಕ್ಷಕರು ಪಾಲ್ಗೊಂಡಿದ್ದರು.

