ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಮಕ್ಕಳ ವಿದ್ಯಾಭ್ಯಾಸದಲ್ಲಿ ಶಾಲೆಯ ಶಿಕ್ಷಕರದಷ್ಟೇ ಮಹತ್ವದ ಪಾತ್ರವಲ್ಲ. ಪಾಲಕರ ಪಾತ್ರವು ಹಿರಿದಾದದ್ದು ಎಂದು ನಾಗರತ್ನ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಕಿಡ್ಜಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡ ವಾರ್ಷಿಕ ಸಂಸ್ಕಾರ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಅವರ ಚಲನ ವಲನದ ಮೇಲೆ ಪಾಲಕರು ನಿಗಾವಹಿಸಬೇಕು. ಪ್ರಾಥಮಿಕ ಹಂತ ಮಕ್ಕಳ ಬೆಳವಣಿಗೆಗೆ ಭದ್ರ ಬುನಾದಿ ಇದ್ದಂತೆ. ಮಕ್ಕಳು ಎಳ ವಯಸ್ಸಿನಲ್ಲಿಯೇ ಉತ್ತಮ ಸಂಸ್ಕಾರದ ಅಡಿಪಾಯ ಹಾಕುವಲ್ಲಿ ಪಾಲಕ, ಶಿಕ್ಷಕರು ಒಂದೇ ನಾಣ್ಯದ ಎರಡು ಮುಖಗಳಂತೆ ಕಾರ್ಯನಿರ್ವಹಿಸಬೇಕು. ಮಕ್ಕಳ ದೈಹಿಕ, ಮಾನಸಿಕ ಶ್ರೇಯೋಭಿವೃದ್ಧಿಗೆ ಶಾಲೆ ಆವರಣದ ಪರಿಸರವು ಪರಿಣಾಮ ಬೀರುತ್ತದೆ. ಈ ಶಾಲೆಯಲ್ಲಿ ಮಕ್ಕಳ ಪ್ರಗತಿಗೆ ಪೂರಕ ವಾತರಣವಿರುವುದು ತುಂಬಾ ಹರ್ಷ ತಂದಿದೆ. ಕೇವಲ ಎರಡೇ ವರ್ಷದಲ್ಲಿ ಶಾಲೆ ಇಷ್ಟೋಂದು ಎತ್ತರಕ್ಕೆ ಬೆಳೆಯಬೇಕಾದರೆ ಶಾಲಾ ವ್ಯವಸ್ಥಾಪಕ ಮಂಡಳಿಯ ಜೊತೆಗೆ ಸಿಬ್ಬಂದಿಗಳ ಶ್ರಮವೂ ಪ್ರಮುಖವಾಗಿದೆ ಎಂದರು.
ಈ ವೇಳೆ ಅತಿಥಿಯಾಗಿ ಭಾಗವಹಿಸಿದ ಪಿಎಸ್ಐ ಆರೀಫ್ ಮುಷಾಪುರಿ ಅವರು ಮಾತನಾಡಿ, ಮಕ್ಕಳು ತಂದೆ-ತಾಯಿ ಮತ್ತು ಹಿರಿಯರನ್ನು ಪ್ರೀತಿಸಿ ಗೌರವಿಸುವುದರ ಜೊತೆಗೆ ಜ್ಞಾನಾರ್ಜನೆಯ ಬುತ್ತಿಯನ್ನು ಉಣಬಡಿಸಿದ ಶಿಕ್ಷಕರ ಮಾರ್ಗದರ್ಶನದಲ್ಲಿ ನಡೆಯಬೇಕು. ಮಕ್ಕಳು ಕಷ್ಟಪಟ್ಟು ಓದಿ ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಭೀಮಾಶಂಕರ ಮಠದ ದತ್ತಪ್ಪಯ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಆನಂದ ಶಾಬಾದಿ ಮಾತನಾಡಿದರು.
ಶಾಲೆಯ ಮಕ್ಕಳಿಂದ ವಿವಿಧ ನೃತ್ತ, ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ರಾಜು ಬಸಯ್ಯ ಗುತ್ತೇದಾರ, ಜ್ಯೋತಿ ರಾಜು ಗುತ್ತೇದಾರ, ಡಾ.ರಶ್ಮೀ ಸುನೀಲ ಪಾಟೀಲ, ಡಾ.ನೂರೈನ್ ಮೋಗಲಾಯಿ, ವೆಂಕಟೇಶ ಗುತ್ತೇದಾರ, ವಿಪಲಾ ವೆಂಕಟೇಶ ಗುತ್ತೇದಾರ, ಶಿವು ಆಲಮೇಲ, ಜಗದೀಶ ಮದರಿ ಸೇರಿದಂತೆ ಶಾಲೆಯ ಶಿಕ್ಷಕರು, ಸಿಬ್ಬಂದಿಗಳು ಹಾಗೂ ಪಾಲಕ ವರ್ಗ ಇದ್ದರು.

