ಸುಕ್ಷೇತ್ರ ಯರನಾಳದಲ್ಲಿ ಪಂಪಾಪತಿ ಶಿವಯೋಗಿಗಳ ಜಾತ್ರಾಮಹೋತ್ಸವ & ಧರ್ಮಸಭೆಯಲ್ಲಿ ಸಚಿವ ಶಿವಾನಂದ ಪಾಟೀಲ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ವಿಜಯಪುರ ಜಿಲ್ಲೆಯು ಅಜ್ಞಾನದ ಕತ್ತಲೆಯಲ್ಲಿ ಸಿಕ್ಕಿದಾಗ ಬೆಳಕಾಗಿ ಬಂದವರು ಬಂಥನಾಳದ ಸಂಗನಬಸವ ಶಿವಯೋಗಿಗಳು. ಅವರು ಮನಸ್ಸು ಮಾಡಿದರೆ ೧೦೦ ಮಠಗಳನ್ನು ಕಟ್ಟಬಹುದಿತ್ತು. ಆದರೆ ಅವರು ಜಿಲ್ಲೆಯಲ್ಲಿ ಜ್ಞಾನದ ದೇಗುಲಗಳನ್ನು ಕಟ್ಟುವ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡುವ ಮೂಲಕ ಜಿಲ್ಲೆಗೆ ಬೆಳಕಾಗಿದ್ದಾರೆ ಎಂದು ಕೃಷಿ ಮಾರುಕಟ್ಟೆ, ಸಕ್ಕರೆ, ಜವಳಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ತಾಲೂಕಿನ ಅವಿಮುಕ್ತ ಸುಕ್ಷೇತ್ರ ಯರನಾಳ ಗ್ರಾಮದ ವಿರಕ್ತಮಠದ ಪಂಪಾಪತಿ ಶಿವಯೋಗಿಗಳ ಜಾತ್ರಾಮಹೋತ್ಸವ ಹಾಗೂ ಧರ್ಮಸಭೆಯನ್ನು ಬುಧವಾರ ಸಂಜೆ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬಂಥನಾಳ ಸಂಗನಬಸವ ಶಿವಯೋಗಿಗಳು ಬಾರದೇ ಹೋಗಿದ್ದರೆ ಜಿಲ್ಲೆಯು ಅಂಧಕಾರದಲ್ಲಿ ಇರುತ್ತಿತ್ತೇನೋ. ಅವರು ಜಿಲ್ಲೆಯಲ್ಲಿ ವಿವಿಧೆಡೆಗಳಲ್ಲಿ ಶಾಲಾ-ಕಾಲೇಜುಗಳನ್ನು ಆರಂಭಿಸುವ ಮೂಲಕ ಎಲ್ಲರ ಬದುಕಿಗೆ ದಾರಿ ಕೊಟ್ಟವರು. ಜ್ಞಾನ ದೇಗುಲ ಕಟ್ಟುವದು ಕಷ್ಟದ ಕೆಲಸ. ಇಂತಹ ಮಹತ್ತರ ಕೆಲಸವನ್ನು ದಾನಿಗಳ ನೆರವಿನಿಂದ ಜಿಲ್ಲೆಯಲ್ಲಿ ನೂರಾರು ಶಾಲಾ-ಕಾಲೇಜುಗಳನ್ನು ಕಟ್ಟಿ ಬೆಳೆಸಿದರು. ಈ ಮೂಲಕ ಜನರ ಮನಸ್ಸು ಕಟ್ಟುವ ಕಾರ್ಯ ಮಾಡಿದರು. ನಾನು ಶಾಸಕ, ಸಚಿವನಾಗಿದ್ದರೂ ಕ್ಷೇತ್ರದಲ್ಲಿ ಶಿಕ್ಷಣದಿಂದ ವಂಚಿತ ಗ್ರಾಮದಲ್ಲಿ ಜೂನಿಯರ್ ಕಾಲೇಜು ಆರಂಭಿಸಲು ಸಾಧ್ಯವಾಗಿಲ್ಲ. ಸರ್ಕಾರ ಮಾಡದೇ ಇರುವ ಕಾರ್ಯವನ್ನು ಅಂದಿನ ಕಾಲದಲ್ಲಿಯೇ ಮಾಡಿದ್ದು ಸುತ್ತ್ಯರ್ಹ ಎಂದರು.
ಮತಕ್ಷೇತ್ರದಲ್ಲಿ ನಾನು ರಸ್ತೆ, ಕುಡಿಯುವ ನೀರು ಸೇರಿದಂತೆ ಅನೇಕ ಮೂಲಭೂತ ಸೌಲಭ್ಯಗಳನ್ನು ಮಾಡಿರಬಹುದು. ನಾನು ಮಾಡಿರುವ ಕಾರ್ಯಗಳು ಶಾಶ್ವತವಲ್ಲ. ಬಂಥನಾಳದ ಸಂಗನಬಸವ ಶಿವಯೋಗಿಗಳು ಮಾಡಿದ ಕಾರ್ಯ ಯಾರಿಂದಲೂ ಮಾಡಲು ಸಾಧ್ಯವಿಲ್ಲ. ಅವರ ಶೈಕ್ಷಣಿಕ ಕ್ರಾಂತಿ ಶಾಶ್ವತವಾಗಿ ಜಿಲ್ಲೆಯಲ್ಲಿ ಇರಲಿದೆ. ಶ್ರೀಗಳ ಕನಸು ನನಸು ಮಾಡುವ ಸಂಕಲ್ಪ ಮಾಡಬೇಕಿದೆ ಎಂದ ಅವರು ಶ್ರೀಮಠದ ಪ್ರಸ್ತುತ ಪೀಠಾಧಿಪತಿ ಗುರುಸಂಗನಬಸವ ಸ್ವಾಮೀಜಿಗಳು ಸಹ ಕತೃತ್ವ ಶಕ್ತಿ ಹೊಂದಿದ್ದಾರೆ. ಇವರು ಸರ್ಕಾರದ ಯಾವ ಸಹಾಯ ಪಡೆದುಕೊಳ್ಳದೇ ಮಠದ ಜೀಣೋದ್ಧಾರ ಕಾರ್ಯ, ಧಾರ್ಮಿಕ, ಸಾಮಾಜಿಕ ಕಾರ್ಯ ಪ್ರತಿ ವರ್ಷ ಮಾಡುತ್ತಿದ್ದಾರೆ. ಇದೀಗ ವಿಜಯಪುರದಲ್ಲಿ ಅದ್ಭುತವಾದ ಶಾಲೆಯನ್ನು ಆರಂಭಿಸಿದ್ದಾರೆ. ಶ್ರೀಗಳ ಕನಸು ನನಸಾಲೆಂದು ಆಶಯ ವ್ಯಕ್ತಪಡಿಸಿದರು.
ಮುದ್ದೇಬಿಹಾಳದ ಐ.ಬಿ.ಹಿರೇಮಠ ಮಾತನಾಡಿ, ದೂರದೃಷ್ಟಿ ಹೊಂದಿದ್ದ ಬಂಥನಾಳದ ಸಂಗನಬಸವ ಶಿವಯೋಗಿಗಳ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರವು ಮರಣೋತ್ತರ ಭಾರತ ರತ್ನ ಪ್ರಶಸ್ತಿಗೆ ಶಿಪಾರಸ್ಸು ಮಾಡಬೇಕೆಂದರು.
ಕಾನಿಪ ಸಂಘಧ ರಾಜ್ಯ ಸಮಿತಿ ಸದಸ್ಯ ಡಿ.ಬಿ.ವಡವಡಗಿ, ಸಾನಿಧ್ಯ ವಹಿಸಿದ್ದ ಬಸವನಬಾಗೇವಾಡಿಯ ಸಿದ್ದಲಿಂಗ ಸ್ವಾಮೀಜಿ ಮಾತನಾಡಿದರು.
ಸಾನಿಧ್ಯವನ್ನು ಶ್ರೀಮಠದ ಗುರುಸಂಗನಬಸವ ಸ್ವಾಮೀಜಿ, ಆಳಂದದ ಸಿದ್ದೇಶ್ವರ ಶಿವಾಚಾರ್ಯರು ವಹಿಸಿದ್ದರು. ವೇದಿಕೆಯಲ್ಲಿ ಡಾ.ಹಂಪನಗೌಡ ಪಾಟೀಲ ಇತರರು ಇದ್ದರು.
ಶ್ವೇತಾ ದೇವನಹಳ್ಳಿ ಪ್ರಾರ್ಥಿಸಿದರು. ಶಂಕರಗೌಡ ಪಾಟೀಲ ಸ್ವಾಗತಿಸಿದರು. ಗಿರಿಜಾ ಪಾಟೀಲ, ಶರಣಬಸು ಹಳಮನಿ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಆರಕ್ಷಕರಾದ ಸಿದ್ದು ದಾನಪ್ಪಗೋಳಿ, ಪುಂಡಲೀಕ ಬಿರಾದಾರ, ಆದರ್ಶ ದಂಪತಿಗಳಾದ ನೀಲಕಂಠಪ್ಪ ಹೂಗಾರ, ಅಂಬರೀಷ ಪೂಜಾರಿ, ಸಂತೋಷಕುಮಾರ ತಳಕೇರಿ, ಸುರೇಶ ಜತ್ತಿ, ಗೌರೀಶ ಗಾಂವಕರ ಅವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು.

